Bigg Boss Kannada: ಜಗಳ ಅಂದ್ರೆ ಬರ್ತಾನೇ ಇರ್ಲಿಲ್ಲ: ಬಿಗ್ ಬಾಸ್ ಮನೆಯಲ್ಲಿ ಹಳ್ಳಿ ಹನುಮಂತನ ಪರದಾಟ
ಬಿಗ್ಬಾಸ್ ಕನ್ನಡ ಸೀಸನ್ 11 ಆರಂಭವಾಗಿ ಮೂರು ವಾರಗಳು ಕಳೆದಿದ್ದು, ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಈ ಬಾರಿಯ ಬಿಗ್ ಬಾಸ್ನಲ್ಲಿ ಹೊಸ ಹೊಸ ಬೆಳವಣಿಗೆಗಳು ಆಗುತ್ತಿದ್ದು, ಮಿತಿ ಮೀರಿದ ವರ್ತನೆಯಿಂದ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರ ಹೋಗಿದ್ದಾರೆ. ಅದರ ಬೆನ್ನಲ್ಲೇ ಶಾಕಿಂಗ್ ಎನ್ನುವಂತೆ ಮತ್ತೊಬ್ಬ ಸ್ಪರ್ಧಿಯ ಎಂಟ್ರಿಯಾಗಿದೆ.
ವಾರದ ಮಧ್ಯೆಯೇ ಜಗದೀಶ್ ಮತ್ತು ರಂಜಿತ್ ಮನೆಯಿಂದ ಹೊರ ಬಂದ ಕಾರಣ ಬಿಗ್ಬಾಸ್ ಮನೆಯಲ್ಲಿ ಕೇವಲ ಮೂರು ವಾರಗಳಲ್ಲೇ 14 ಸ್ಪರ್ಧಿಗಳು ಉಳಿದುಕೊಂಡಿದ್ದರು. ಹೀಗಾಗಿ ಮತ್ತೊಬ್ಬ ಸ್ಪರ್ಧಿಯನ್ನು ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬಿಗ್ ಬಾಸ್ ಮನೆಗೆ ಕಳುಹಿಸಲಾಗಿತ್ತು. ಅದು ಮತ್ಯಾರು ಅಲ್ಲ ಜನರಿಗೆ ಚಿರಪರಿಚಿತರಾದ ಗಾಯಕ ಹನುಮಂತ ಲಮಾಣಿ.

ಕುರಿಗಾಹಿಯಾಗಿದ್ದ ಹನುಮಂತ ಸರಿಗಮಪ ಸ್ಪರ್ಧೆಯ ಮೂಲಕ ಜನಪ್ರಿಯತೆ ಪಡೆದವರು. ಮುಗ್ಧತೆ ಹಾಗೂ ಕಲೆಯಿಂದ ತಮ್ಮದೇ ಆದ ಅಭಿಮಾನಿಗಳನ್ನು ಹೊಂದಿರುವ ಹನುಮಂತ ಬಿಗ್ ಬಾಸ್ ಮೂಲಕ ಹೊಸ ಜರ್ನಿ ಆರಂಭಿಸಿದ್ದಾರೆ. ಈ ಹೊಸ ಜರ್ನಿಯಲ್ಲಿ ಲಕ್ ಎನ್ನುವಂತೆ ವೈಲ್ಡ್ ಕಾರ್ಡ್ ಆಗಿ ಬಂದ ಹನುಮಂತನನ್ನೇ ಬಿಗ್ಬಾಸ್ ಕ್ಯಾಪ್ಟನ್ ಎಂದು ಘೋಷಣೆ ಮಾಡಲಾಗಿತ್ತು. ಇದರಿಂದ ಉಳಿದ ಸ್ಪರ್ಧಿಗಳಿಗೆ ಶಾಕ್ ಆಗಿದೆ.
ಇದೀಗ ಬಿಗ್ಬಾಸ್ ಮನೆಯಲ್ಲಿ ಆಟ ಆರಂಭಿಸಿರುವ ಹನುಮಂತ ಮೊದಲ ದಿನ ಫುಲ್ ಆ್ಯಕ್ಟೀವ್. ಆದರೆ ಎರಡನೇ ದಿನ ಸುಸ್ತು ಹೊಡೆದಿದ್ದಾರೆ. ಈಗಾಗಲೇ ಮನೆಯಲಿದ್ದ ಸ್ಪರ್ಧಿಗಳಿಗೆ ಯಾರಿಗೆ ಯಾವ ಸ್ಥಾನ ಎನ್ನುವುದನ್ನು ಕ್ಯಾಪ್ಟನ್ ಹನುಮಂತ ನೀಡಬೇಕಿತ್ತು. ಅದರಂತೆ ಹನುಮಂತ 1ರಿಂದ 14ರವರೆಗೆ ಸ್ಥಾನಗಳನ್ನು ನೀಡಿದ್ದು, ಇದರಿಂದ ಸ್ಪರ್ಧಿಗಳು ಫುಲ್ ಗರಂ ಆಗಿದ್ದಾರೆ.

ಹನುಮಂತ ಕೊಟ್ಟ ಸ್ಥಾನವನ್ನು ಸ್ಪರ್ಧಿಗಳು ಖಂಡಿಸಿದ್ದು, ಅವರೊಂದಿಗೆ ಜಗಳ ಆರಂಭಿಸಿದ್ದಾರೆ. ನನಗೆ ಯಾಕೆ ಈ ಸ್ಥಾನ ಕೊಟ್ರಿ ಅಂತಾ ಕಿರುಚಾಡಿದ್ದಾರೆ. ಇದರಿಂದ ಹನುಮಂತ ಫುಲ್ ಕಂಫ್ಯೂಸ್ ಆಗಿದ್ದು, ಬಿಗ್ ಬಾಸ್ ಬಳಿ ಬಂದು ತಮ್ಮ ನೋವು ತೋಡಿಕೊಂಡಿದ್ದಾರೆ. 'ಏ ಹುಲಿ ಜಗಳ ಆಗ್ತಿದೆ ಬನ್ನಿ ಇಲ್ಲಿಗೆ. ಈ ರೀತಿ ಜಗಳ ಅಂದ್ರೆ ನಾನು ಬರ್ತಾನೇ ಇರ್ಲಿಲ್ಲ, ನಾನು ಕ್ಯಾಪ್ಟನ್ ಕ್ಯಾನ್ಸಲ್' ಎಂದು ಹನುಮಂತ ಬಿಗ್ ಬಾಸ್ ಬಳಿ ಕೇಳಿರುವ ಪ್ರೋಮೋ ವಿಡಿಯೋ ವೈರಲ್ ಆಗಿದೆ.












Click it and Unblock the Notifications