BBK 12: ಇದೆಲ್ಲ ನನ್ನತ್ರ ಬೇಡ ಮಗಾ, ಸರಿ ಇರಲ್ಲ: ಗಿಲ್ಲಿಗೆ ರಜತ್ ವಾರ್ನಿಂಗ್ ಕೊಟ್ಟಿದ್ದೇಕೆ?
ಬಿಗ್ಬಾಸ್ ಕನ್ನಡ ಸೀಸನ್-12ರ ಮನೆಗೆ ಇದೀಗ ಹೊಸ ಕಳೆ ಬಂದಿದೆ. ಕಳೆದ ಸೀಸನ್ನ ಪ್ರಮುಖ ಸ್ಪರ್ಧಿಗಳು ಬಿಗ್ಬಾಸ್ ಮನೆಗೆ ಅತಿಥಿಗಳಾಗಿ ಎಂಟ್ರಿ ಕೊಟ್ಟಿದ್ದಾರೆ. ಉಗ್ರಂ ಮಂಜು, ರಜತ್, ಮೋಕ್ಷಿತಾ ಪೈ, ಚೈತ್ರಾ ಕುಂದಾಪುರ ಬಿಗ್ಬಾಸ್ ಸ್ಪರ್ಧಿಗಳಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ಆದರೆ ಸಂಭ್ರಮದಿಂದ ಇದ್ದ ಮನೆಯು ಗಿಲ್ಲಿ ವಿಚಾರವಾಗಿ ರಣರಂಗವಾಗಿದೆ. ರಜತ್ ಹಾಗೂ ಗಿಲ್ಲಿ ನಡುವೆ ಮಾತಿಗೆ ಮಾತು ಬೆಳೆದು, ಕಿರಿಕ್ ಆಗಿದೆ. ಈ ವೇಳೆ ರಜತ್, ಇದೆಲ್ಲ ನನ್ನತ್ರ ಬೇಡ ಮಗಾ ಎಂದು ಎಲ್ಲರೆದುರೇ ವಾರ್ನಿಂಗ್ ಕೂಡ ಕೊಟ್ಟಿದ್ದಾರೆ.
ಅತಿಥಿಗಳಾಗಿ ಬಂದಿರುವ ಉಗ್ರಂ ಮಂಜು ಅವರಿಗೆ ಇತ್ತೀಚೆಗೆ ಮದುವೆ ನಿಶ್ಚಯವಾಗಿದೆ. ಹೀಗಾಗಿ ಬಿಗ್ಬಾಸ್ ಮಂಜು ಅವರಿಗೆ ಕಂಕಣಭಾಗ್ಯ ಕೂಡಿ ಬಂದಿದೆ, ಶುಭವಾಗಲಿ ಎಂದು ವಿಶ್ ಮಾಡಿದರು. ಇದಕ್ಕೆ ಎಲ್ಲರೂ ಖುಷಿಪಟ್ಟರು. ಆದರೆ ಈ ವೇಳೆ ತಮಾಷೆ ಮಾಡಲು ಬಂದ ಗಿಲ್ಲಿ, 'ಮದುವೆ ಎರಡನೇದಾ, ಮೂರನೇಯದ್ದಾ? ಎಂದಿದ್ದಾರೆ. ಇದಕ್ಕೆ ಉಗ್ರಂ ಮಂಜು ಅಲ್ಲೇ ಗರಂ ಆಗಿ ಕಣ್ಣುಕೆಂಪಾಗಿಸಿದ್ದಾರೆ. ಕೆಲವೊಂದು ಪರ್ಸನಲ್ ಅಂತ ತಗೊಂಡ್ರೆ ನೀನು ಇಲ್ಲಿ ಸಪ್ಲೈಯರ್ ಅಲ್ಲ, ನಾನು ಅತಿಥಿನೂ ಅಲ್ಲ, ಬೇರೆಯೇ ಆಗಿರುತ್ತೆ' ಎಂದು ಗಿಲ್ಲಿಗೆ ಮಂಜು ಎಚ್ಚರಿಕೆ ಕೊಟ್ಟಿದ್ದಾರೆ.

ಅಷ್ಟಕ್ಕೇ ಸುಮ್ಮನಾಗದ ಗಿಲ್ಲಿ, ಮತ್ತೆ ಅತಿಥಿಗಳ ಬಗ್ಗೆ ತಮಾಷೆ ಮಾಡಲು ಹೋಗಿ ಪೇಚಿಗೆ ಸಿಲುಕಿದ್ದಾರೆ. 'ನೀವೆಲ್ಲ ಬಿಟ್ಟಿ ಊಟ ತಿನ್ನೋಕೆ ಬಂದಿದ್ದೀರ?' ಎಂದು ಅತಿಥಿಗಳಿಗೆ ಗಿಲ್ಲಿ ಕೇಳಿದ್ದಾರೆ. ಇದಕ್ಕೆ ರೊಚ್ಚಿಗೆದ್ದ ರಜತ್, 'ಬಿಟ್ಟಿ ಊಟ ನೀನು ಕೊಡ್ತಾ ಇದ್ದೀಯೇನಪ್ಪ? ಎಂದು ಕೋಪಗೊಂಡಿದ್ದಾರೆ. ಮಾತುಗಳು ಕರೆಕ್ಟಾಗಿ ಬರಲಿ, ಮಗಾ ಎಲ್ಲರ ಹತ್ರ ಮಾತನಾಡಿದಂತೆ ನನ್ನತ್ರ ಮಾತನಾಡಬೇಡ, ಎಷ್ಟರಲ್ಲಿ ಇರ್ಬೇಕೋ ಅಷ್ಟರಲ್ಲಿ ಇರು ಮಗಾ?' ಎಂದು ಸೀರಿಯಸ್ ಆಗಿ ವಾರ್ನಿಂಗ್ ಕೊಟ್ಟಿದ್ದಾರೆ.
ಅತಿಥಿಗಳು ವಾವ್ ಅಲ್ಲ, ವ್ಯಾ..
ಅತಿಥಿಗಳನ್ನು ಮನರಂಜಿಸಲು ಸ್ಪರ್ಧಿಗಳಿಗೆ ಟಾಸ್ಕ್ ನೀಡಲಾಗಿದ್ದು, ಈ ವೇಳೆಯೂ ಗಿಲ್ಲಿ ಅತಿಥಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 'ನಾನೆಲ್ಲೋ ಯಾರೋ ವಾವ್ ಎನ್ನುವಂತವರು ಅತಿಥಿಗಳಾಗಿ ಬರ್ತಾರೆ ಅನ್ಕೊಂಡಿದ್ದೆ. ಆದರೆ ಇವರನ್ನ ನೋಡಿದ್ರೆ ವಾಕರಿಕೆ ಬರುವಂತಿದೆ, ಥೂ' ಎಂದು ಗಿಲ್ಲಿ ಮತ್ತೆ ತಮಾಷೆ ಮಾಡಲು ಹೋಗಿ ಉರಿಯುವ ತುಪ್ಪಕ್ಕೆ ಬೆಂಕಿ ಸುರಿಯುವ ಕೆಲಸ ಮಾಡಿದ್ದಾರೆ.
'ಐದು ಜನ ನೆಂಟರು ಬಂದ್ರು, ಚೆನ್ನಾಗಿ ತಿಂದ್ರು, ತಿಂದ ಮೇಲೂ ದೌಲತ್ತು, ತಿಂದವರಿಗೆ ಅಷ್ಟು ಇರಬೇಕಾದ್ರೆ ತಂದು ಹಾಕುವ ನಮಗೆ ಎಷ್ಟಿರಬೇಕು' ಎಂದು ಗಿಲ್ಲಿ ತಮ್ಮ ಸ್ಟೈಲಲ್ಲಿ ಪಂಚಿಂಗ್ ಲೈನ್ ಬಿಟ್ಟಿದ್ದಾರೆ. ಆಗ ರಜತ್ ಮತ್ತೆ ಗಿಲ್ಲಿ ಮೇಲೆ ಗುರ್... ಎಂದಿದ್ದಾರೆ.
'ಏನ್ ಗಿಲ್ಲಿ ಮಾತಾಡಬೇಕು ಅಂತ ಹೀಗೆಲ್ಲ ಮಾತಾಡ್ತೀಯ ನೀನು? ಒಳ್ಳೆಯ ಮೂವ್ಮೆಂಟ್ ಯಾಕೆ ಹಾಳು ಮಾಡ್ತಿದ್ದೀಯ? ಎಂದು ರಜತ್ ಗರಂ ಆಗಿದ್ದಾರೆ. ಎಲ್ಲದಕ್ಕೂ ಒಂದು ತಾಳ್ಮೆ ಇದೆ. ಆದರೆ ನೀನು ಸಿಕ್ಕಾಪಟ್ಟೆ ಇರಿಟೇಟ್ ಮಾಡ್ತಿದ್ದೀಯ. ಮನುಷ್ಯರ ಜಾತಿಗೆ ಸೇರಿದವರು ಒಂದು ಸಲ ಹೇಳಿದ್ರೆ ಅರ್ಥ ಮಾಡಿಕೊಳ್ಳಬೇಕು' ಎಂದು ರಜತ್ ವಾರ್ನಿಂಗ್ ಕೊಟ್ಟಿದ್ದಾರೆ. ಯಾವ ವಿಚಾರಕ್ಕೆ ಗಿಲ್ಲಿ-ರಜತ್ ನಡುವೆ ಕಿರಿಕ್ ಶುರುವಾಯಿತು ಎಂದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.












Click it and Unblock the Notifications