ರಾಕೇಶ್ ಜತೆಯಲ್ಲಿದ್ದಾಗಲೇ ನನ್ನ ಜೀವನದಲ್ಲಿ ಅದು ನಡೆದಿದ್ದು: ಅಚ್ಚರಿ ವಿಚಾರ ಬಿಚ್ಚಿಟ್ಟ ಅರ್ಜುನ್ ಜನ್ಯ
ಇತ್ತೀಚೆಗೆ ಅಕಾಲಿಕ ನಿಧನರಾದ ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್ ಪೂಜಾರಿ ನೆನಪು ಇನ್ನೂ ಮಾಸಿಲ್ಲ. ಚಿತ್ರರಂಗದಲ್ಲಿ ಇತ್ತೀಚೆಗಷ್ಟೇ ಅಂಬೆಗಾಲಿಟ್ಟು ಮುಂದೆ ದೊಡ್ಡ ಸಾಧನೆ ಮಾಡಬೇಕು ರಾಕೇಶ್ ಕನಸನ್ನು ವಿಧಿ ಕಸಿದಿದೆ. ಹೃದಯಾಘಾತದಿಂದ ದಿಢೀರ್ ಇಹಲೋಕ ತ್ಯಜಿಸಿದ ರಾಕೇಶ್ ರಿಯಾಲಿಟಿ ಶೋಗಳಲ್ಲಿ ತಮ್ಮ ನಗುವಿನ ಹೆಜ್ಜೆ ಗುರುತನ್ನು ಬಿಟ್ಟು ಹೋಗಿದ್ದಾರೆ. ಇದನ್ನು ಅದೇ ವೇದಿಕೆಯಲ್ಲಿದ್ದವರು ಒಗ್ಗೂಡಿ ನೆನೆದಿದ್ದಾರೆ. ಆಂಕರ್ ಅಕುಲ್ ಬಾಲಾಜಿ, ನವರಸನಾಯಕ ಜಗ್ಗೇಶ್ ಅವರು ರಾಕೇಶ್ ಜೊತೆಗಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಇನ್ನು ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ ಅವರು ರಾಕೇಶ್ ಬಗ್ಗೆ ಅಚ್ಚರಿ ವಿಚಾರವೊಂದನ್ನು ರಿವೀಲ್ ಮಾಡಿದ್ದಾರೆ.
ಹೌದು ಇತ್ತೀಚೆಗೆ ಭರ್ಜರಿ ಬ್ಯಾಚುಲರ್ಸ್ ವೇದಿಕೆಯಲ್ಲಿ ರಾಕೇಶ್ ಪೂಜಾರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಆಗ ರಾಕೇಶ್ ಅವರ ನೆನಪು ಒಂದೊಂದಾಗಿ ಹೊರಬಂದಿದೆ. ಈ ವೇಳೆ ಅರ್ಜುನ್ ಜನ್ಯ ಕೂಡ ರಾಕೇಶ್ ಅವರನ್ನ ನೆನೆದಿದ್ದಾರೆ. 'ಕಲೆಗಾಗಿ ಹುಟ್ಟಿದ ಒಂದು ಅದ್ಭುತವಾದ ವ್ಯಕ್ತಿ ಹಾಗೂ ವ್ಯಕ್ತಿತ್ವ ಅಂದ್ರೆ ಅದು ರಾಕೇಶ್. ಆವತ್ತು ರಾಕೇಶ್ ಸಾವಿನ ವಿಚಾರ ಕೇಳಿ ನನ್ನ ದೇಹದ ಒಂದು ಭಾಗವೇ ಇಲ್ಲವಾಯ್ತು ಎನ್ನುವಷ್ಟು ನೋವಾಯ್ತು. ಆದರೆ ಇದೇ ವೇದಿಕೆಯಲ್ಲಿ, ಯಾವುದೋ ಒಂದು ರೂಪದಲ್ಲಿ ರಾಕೇಶ್ ಮತ್ತೆ ಬರ್ತಾರೆ ಎನ್ನುವ ನಂಬಿಕೆ ನನಗಿದೆ ಎಂದು ಅರ್ಜುನ್ ಜನ್ಯ ಭಾವುಕರಾಗಿದ್ದಾರೆ. ನನ್ನ ಜೀವನದಲ್ಲಿ ತುಂಬಾ ಮನಸು ಬಿಚ್ಚಿ ನಕ್ಕಿದ್ದು ಅಂದ್ರೆ ಅದು ರಾಕೇಶ್ ಪೂಜಾರಿ ಜೊತೆಯಲ್ಲಿ ಇದ್ದಾಗ ಮಾತ್ರ' ಎಂದು ಅರ್ಜುನ್ ಜನ್ಯ ನೆನೆದಿದ್ದಾರೆ.

ಪುನೀತ್ ಸಾವಷ್ಟೇ ನೋವಾಯ್ತು!
'ರಾಕೇಶ್ ಇಡೀ ತಂಡವನ್ನು ಗೆಲ್ಲಿಸುತ್ತಿದ್ದ ವ್ಯಕ್ತಿ. ಅವನ ನಟನೆಯನ್ನು ನೋಡುವುದೇ ಒಂದು ಆನಂದ ಎಂದು ನವರಸನಾಯಕ ಜಗ್ಗೇಶ್ ನೆನೆದಿದ್ದಾರೆ. ಆ ಹುಡುಗನನ್ನ ನೋಡಿದಾಗ ಇವನು ತುಂಬಾ ವರ್ಷಗಳ ಕಾಲ ಕನ್ನಡ ಚಿತ್ರರಂಗಕ್ಕೆ ಬಾಳಿಕೆ ಬರ್ತಾನೆ ಅನಿಸಿತ್ತು, ಅದು ನಿಜ ಕೂಡ ಆಯ್ತು' ಎಂದು ಜಗ್ಗೇಶ್ ಹೇಳಿದ್ದಾರೆ. 'ನನಗೆ ರಾಕೇಶ್ ಇಲ್ಲ ಅನ್ನೋ ಸುದ್ದಿ ಕೇಳಿದಾಗ ಪುನೀತ್ ರಾಜ್ಕುಮಾರ್ ಸಾವಿನ ವಿಚಾರ ಕೇಳಿ ಎಷ್ಟು ಶಾಕ್ಗೆ ಒಳಗಾಗಿದ್ದೆನೋ ಅಷ್ಟೇ ದಿಗ್ಭ್ರಾಂತನಾದೆ. ಇನ್ನು ತುಂಬಾ ದೊಡ್ಡ ಕನಸು ಅಂದ್ರೆ ತಾನೂ ಬೆಳೀಬೇಕು, ಬದುಕಬೇಕು, ತಂಗಿ ಮದುವೆ ಮಾಡಬೇಕು ಅನ್ನೋದು. ಒಬ್ಬ ಅಣ್ಣನಾಗಿ ರಾಕೇಶ್ ತುಂಬಾ ದೊಡ್ಡ ಆಲೋಚನೆಗಳನ್ನು ಹೊಂದಿದ್ದ' ಎಂದು ಜಗ್ಗೇಶ್ ಹೇಳಿದ್ದಾರೆ.
'ಒಬ್ಬ ವ್ಯಕ್ತಿ ಸಾಯುವುದು ಯಾವಾಗ ಅಂದ್ರೆ ಅದು ಈ ಭೂಮಿಯಿಂದ ಹೋದಾಗ ಅಲ್ಲ, ಮನಸ್ಸಿನಿಂದ ಹೋದಾಗ. ಹಾಗಾಗಿ ರಾಕೇಶ್ ಯಾವಾಗಲೂ ನಮ್ಮೊಳಗೆ ಇರ್ತಾನೆ, ಅವನ ನೆನೆಪುಗಳು ಅಜರಾಮರ, ಅವನು ಎಲ್ಲೇ ಇದ್ರೂ ಅಲ್ಲೂ ಕೂಡ ಖುಷಿ ಹಂಚುತ್ತಿರುತ್ತಾನೆ' ಎಂದು ನಿರೂಪಕ ಅಕುಲ್ ಬಾಲಾಜಿ ಹೇಳಿದ್ದಾರೆ. 'ರಾಕೇಶ್ ಒಬ್ಬ ಬ್ಲೆಸ್ಡ್ ಕಿಡ್ ಆಗಿದ್ದ, ಎಲ್ಲವನ್ನೂ ಕೊಟ್ಟಿದ್ದ ಭಗವಂತ ರಾಕೇಶ್ಗೆ ಆಯಸ್ಸನ್ನು ಯಾಕೆ ಕೊಡಲಿಲ್ಲ ಅನ್ನೋದೆ ಬೇಜಾರು ಹಾಗೂ ಯೋಚನೆ' ಎಂದು ಮಾಸ್ಟರ್ ಆನಂದ್ ಕೂಡ ಸ್ಮರಿಸಿದ್ದಾರೆ.












Click it and Unblock the Notifications