ಬಿರುಗಾಳಿ ಎಬ್ಬಿಸಿದ ʼಫೈರ್ʼ: ಹೊರಬರಲಿದೆಯಾ ಸ್ಯಾಂಡಲ್ವುಡ್ನ ಕರಾಳತೆ?
ಮಲೆಯಾಳಂ ಸಿನಿಮಾರಂಗದಲ್ಲಿ ಸಂಚಲನ ಮೂಡಿಸಿರುವ ಹೇಮಾ ಸಮಿತಿ ವರದಿಯು ಇದೀಗ ಭಾರತೀಯ ಚಿತ್ರರಂಗವನ್ನೇ ಬೆಚ್ಚಿಬೀಳಿಸಿದೆ. ಇದರ ಗಾಳಿ ಸ್ಯಾಂಡಲ್ವುಡ್ ಕಡೆಗೂ ಬೀಸಿದ್ದು, ಇಲ್ಲಿಯೂ ಹೇಮಾ ಮಾದರಿಯ ಕಮಿಟಿಯೊಂದನ್ನು ರಚಿಸಬೇಕು ಎನ್ನುವ ಕೂಗು ಎದ್ದಿದೆ. ಈ ಬಗ್ಗೆ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ (FIRE) ಸಂಘಟನೆಯು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಕೂಡ ಮಾಡಿದೆ.
FIREನ ಈ ಒಂದು ನಡೆಯು ಹೆಸರಿಗೆ ತಕ್ಕಂತೆ ಇಡೀ ಚಿತ್ರರಂಗಕ್ಕೆ ಕಿಚ್ಚು ಹೊತ್ತಿಸಿದೆ. ಏಕೆಂದರೆ, ಸ್ಯಾಂಡಲ್ವುಡ್ ಖ್ಯಾತ ನಟ-ನಟಿಯರೇ ಈ ಕಮಿಟಿ ಬೇಕೆಂದು ಸಹಿ ಮಾಡಿರುವುದು ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತಿದೆ. ಒಟ್ಟಾರೆ ನಟ ನಟಿಯರೂ ಸೇರಿದಂತೆ 153 ಮಂದಿ ಈ ಬೇಡಿಕೆ ಮುಂದಿಟ್ಟಿದ್ದಾರೆ.

ಇದ್ದಕ್ಕಿದ್ದಂತೆ ಇಷ್ಟೂ ಮಂದಿ ಬೇಡಿಕೆ ಇಟ್ಟಿರುವುದು ಹಲವಾರು ಪ್ರಶ್ನೆಗಳನ್ನೂ ತಲೆಗೆ ಬಿಟ್ಟಿದೆ. ಮಲೆಯಾಳಂ ಚಿತ್ರರಂಗದಂತೆ ಕನ್ನಡ ಚಿತ್ರರಂಗದಲ್ಲೂ ನಟಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆಯೇ? ಎಂಬ ಅನುಮಾನ ಒಂದೆಡೆಯಾದರೆ, ಮತ್ತೊಂದೆಡೆ ಒಂದು ವೇಳೆ ಇಂತಹ ಸಮಿತಿ ನಮ್ಮಲ್ಲೂ ರಚನೆಯಾದರೆ ಚಿತ್ರರಂಗದ ಕರಾಳತೆ ಬಯಲಿಗೆ ಬರಲಿದೆಯಾ? ಬಂದರೆ ಅಂತಹ ವಿಕೃತರು ಯಾರಿರಬಹುದು? ಎಂದೆಲ್ಲ ಮಾತುಗಳು ಬಿರುಗಾಳಿಯಂತೆ ಎದ್ದಿದೆ.
ಮೊನ್ನೆಯೆಲ್ಲ ಒಂದಿಬ್ಬರು ನಟಿಯರಷ್ಟೇ ಈ ಬಗ್ಗೆ ಮಾತನಾಡಿದ್ದರು. ಈಗ ದಿಢೀರನೇ ಖ್ಯಾತನಾಮರೇ ಸಮಿತಿ ಬೇಕೆಂದು ಪಟ್ಟುಹಿಡಿದಿರುವುದು ಅನುಮಾನಗಳು ಮೂಡಿಸುವಂತಿದೆ. ಒಂದು ಸ್ಯಾಂಡಲ್ವುಡ್ ನಟಿಯರೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರಾ? ಅಥವಾ ಇಂತಹ ಶೋಷಣೆ ಇರುವುದು ನಟಿಯರಿಗೆ ಗೊತ್ತಿತ್ತಾ? ಎಂದೆಲ್ಲ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವ ಮಹಿಳೆಯರ ಸಮಸ್ಯೆಗಳಿಗಾಗಿ ಈ ಹಿಂದೆ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ (FIRE) ರಚನೆ ಮಾಡಲಾಗಿತ್ತು. ಇದರಲ್ಲಿ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ, ನಿರ್ದೇಶಕ ಕವಿತಾ ಲಂಕೇಶ್ ಅಂತಹ ದಿಗ್ಗಜರು ಇದ್ದರು. ಅದೇ ಫೈರ್ ಈಗ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿಯನ್ನು ರಚಿಸುವಂತೆ ಕರ್ನಾಟಕ ಸರ್ಕಾರಕ್ಕೆ ಫೈರ್ ಕರೆ ನೀಡಿದೆ.
ಕನ್ನಡ ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ಕಿರುಕುಳ ಸೇರಿದಂತೆ ಸಮಸ್ಯೆಗಳನ್ನು ಅಧ್ಯಯನ ಮಾಡಿ ವರದಿ ಮಾಡಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಬೇಕು ಎಂದು ಹೇಳಿದೆ. ಲಿಂಗ ನ್ಯಾಯವನ್ನು ಪ್ರತಿಪಾದಿಸುವ ಕನ್ನಡ ಚಲನಚಿತ್ರೋದ್ಯಮದ ಮತ್ತು ವಿವಿಧ ಕ್ಷೇತ್ರಗಳ 153 ವ್ಯಕ್ತಿಗಳು ಈ ಅರ್ಜಿಗೆ ಸಹಿ ಹಾಕಿದ್ದಾರೆ. ನಾವು ಈ ಸಂದೇಶದೊಂದಿಗೆ ಕನ್ನಡ ಮತ್ತು ಇಂಗ್ಲಿಷ್ ಎರಡೂ ಅರ್ಜಿಗಳನ್ನು ಒದಗಿಸಿದ್ದೇವೆ ಮತ್ತು ಈ ಉದ್ದೇಶಕ್ಕಾಗಿ ಮಾಧ್ಯಮದ ಸದಸ್ಯರು ನಮ್ಮನ್ನು ಬೆಂಬಲಿಸಬೇಕೆಂದು ಕೇಳಿಕೊಳ್ಳುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಸ್ಯಾಂಡಲ್ವುಡ್ನಲ್ಲಿ ಸಮಿತಿ ರಚಿಸುವಂತೆ ಸ್ಯಾಂಡಲ್ವುಡ್ನ ಖ್ಯಾತ ನಟ ನಟಿಯರು ಸಿಎಂಗೆ ಮನವಿ ಪತ್ರ ಸಲ್ಲಿಕೆ ಮಾಡಿದ್ದಾರೆ. ಈ ಮನವಿ ಪತ್ರದಲ್ಲಿ ಸ್ಯಾಂಡಲ್ವುಡ್, ವಿವಿಧ ಕ್ಷೇತ್ರಗಳ ಗಣ್ಯರಿಂದ 153 ಸಹಿ ಹಾಕಲಾಗಿದೆ. ಸಿಎಂಗೆ ಸಲ್ಲಿಸಿದ ಮನವಿ ಪತ್ರಕ್ಕೆ 153 ಜನ ಸಹಿ ಹಾಕಿದ್ದು ಮಾತ್ರವಲ್ಲದೆ ಸಮಿತಿಯಲ್ಲಿ ನಿವೃತ್ತ ನ್ಯಾಯಾಧೀಶರನ್ನು ನೇಮಿಸುವಂತೆ ಬೇಡಿಕೆ ಇಡಲಾಗಿದ್ದು, ಲೈಂಗಿಕ ದೌರ್ಜನ್ಯ ತನಿಖೆಗೆ ಆಗ್ರಹಿಸಲಾಗಿದೆ.
ನಟಿ ರಮ್ಯಾ, ನಿರ್ದೇಶಕಿ ಕವಿತಾ ಲಂಕೇಶ್, ನಟ ಸುದೀಪ್, ನಟ ಚೇತನ್, ನಟ ಕಿಶೋರ್, ಮೇಘನಾ, ಪೂಜಾ ಗಾಂಧಿ, ನಿರ್ದೇಶಕ ಸುನಿ, ಲೇಖಕಿ ಉಷಾ, ಶ್ರುತಿ ಹರಿಹರನ್, ಐಂದ್ರಿತಾ ರೈ, ಶಾನ್ವಿ ಶ್ರೀವಾಸ್ತವ, ಆಶಿಕಾ ರಂಗನಾಥ್ ಹೀಗೆ 153 ಜನ ಮನವಿ ಪತ್ರದಲ್ಲಿ ಸಹಿ ಹಾಕಿದ್ದಾರೆ.












Click it and Unblock the Notifications