'ನಿಖಿಲ್ ಎಲ್ಲಿದ್ದಿಯಪ್ಪಾ ಅಂತಾ ಸರ್ಗೆ ಹೇಳಿಕೊಟ್ಟಿದ್ದು ನಾನೇ': ಆ ದಿನ ವೇದಿಕೆ ಮೇಲೆ ಏನಾಯ್ತು?
ಕಳೆದ ಲೋಕಸಭಾ ಚುನಾವಣೆ ಸಮಯದಲ್ಲಿ ನಿಖಿಲ್ ಎಲ್ಲಿದ್ದಿಯಪ್ಪಾ ಎನ್ನುವ ಡೈಲಾಗ್ ಸಖತ್ ಫೇಮಸ್ ಆಗಿತ್ತು. ಕಳೆದ ಐದಾರು ವರ್ಷಗಳಿಂದ ಟ್ರೆಂಡ್ನಲ್ಲಿರುವ ನಿಖಿಲ್ ಎಲ್ಲಿದ್ದಿಯಪ್ಪಾ ಇಂದಿಗೂ ಟ್ರೋಲಿಗರ ಮೋಸ್ಟ್ ಫೇವರೇಟ್ ಡೈಲಾಗ್.
ಜಾಗ್ವಾರ್ ಸಿನಿಮಾದ ಆಡಿಯೋ ಬಿಡುಗಡೆ ವೇಳೆ ನಡೆದ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್ ಕುಮಾರಸ್ವಾಮಿ ನಡುವೆ ನಡೆದ ಸಂಭಾಷಣೆಯ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು.

ಕುಮಾರಸ್ವಾಮಿ ಅವರು ನಿಖಿಲ್ ಎಲ್ಲಿದ್ದೀಯಪ್ಪಾ ಎಂದು ಕೇಳುತ್ತಾರೆ. ಅದಕ್ಕೆ ನಿಖಿಲ್ ಕುಮಾರಸ್ವಾಮಿ, ಜನರ ಮಧ್ಯೆ, ನಿಮ್ಮನ್ನು, ತಾತನನ್ನು ಪ್ರೀತಿಸೋ ಜನರ ಮಧ್ಯೆ ಇದ್ದೇನೆ ಅಪ್ಪಾ ಎಂದು ಉತ್ತರಿಸಿರುವ ವೀಡಿಯೋ ಜಾಲತಾಣಗಳಲ್ಲಿ ಸದ್ದು ಮಾಡಿತ್ತು. ಜೊತೆಗೆ ಸಖತ್ ಟ್ರೋಲ್ ಕೂಡ ಆಗಿತ್ತು.
ಆದರೆ ಈ ನಿಖಿಲ್ ಎಲ್ಲಿದ್ದಿಯಪ್ಪಾ ಡೈಲಾಗ್ ಹುಟ್ಟು ಹಾಕಿದವರು ಯಾರು ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿತ್ತು. ಇದೀಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಈ ಸಂಭಾಷಣೆಯ ಸೃಷ್ಟಿಕರ್ತರು ಯಾರು ಎಂದರೆ ಮತ್ಯಾರು ಅಲ್ಲಾ.. ನಿರೂಪಕಿ ಶಾಲಿನಿ. ಸದ್ಯ ಸುವರ್ಣ ಸೂಪರ್ ಸ್ಟಾರ್ ಶೋನಲ್ಲಿ ಮಿಂಚುತ್ತಿರುವ ನಿರೂಪಕಿ ಶಾಲಿನಿ ಇತ್ತೀಚಿನ ತಮ್ಮ ಸಂದರ್ಶನದಲ್ಲಿ ನಿಖಿಲ್ ಎಲ್ಲಿದ್ದಿಯಪ್ಪಾ ಡೈಲಾಗ್ ಹೇಗೆ ಬಂತು ಎನ್ನುವುದರ ಬಗ್ಗೆ ಮಾತನಾಡಿದ್ದಾರೆ.

ಕಿರಿಕ್ ಕೀರ್ತಿ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಶಾಲಿನಿ, 'ನಿಖಿಲ್ ಎಲ್ಲಿದ್ದಿಯಪ್ಪಾ ಎನ್ನುವುದನ್ನು ನಾನೇ ಸರ್ಗೆ ಹೇಳಿಕೊಟ್ಟಿದ್ದು, ನನಗೆ ಗೊತ್ತೇ ಇರಲಿಲ್ಲ ಅದು ಅಷ್ಟು ಫೇಮಸ್ ಆಗಿದೆ ಅಂತಾ. ನನ್ನ ಫ್ರೆಂಡ್ ಆ ವಿಡಿಯೋ ಕಳಿಸಿ ಇದ್ಯಾವಗಮ್ಮ ಮಾಡದೇ ನೀನು ಅಂದರು. ನಿಖಿಲ್ ಎಲ್ಲಿದ್ದಿಯಪ್ಪಾ ಹೇಳಿಕೊಟ್ಟಿದ್ದು ನಾನೇ' ಎಂದು ಶಾಲಿನಿ ಜೋರಾಗಿ ನಕ್ಕಿದ್ದಾರೆ.
ಮಾತು ಮುಂದುವರಿಸಿದ ಅವರು 'ಅದನ್ನು ಯಾಕೆ ಮಾಡಿದೆ ಅಂದರೆ, ಪ್ಲಾನ್ ಮಾಡಿ ಆಗಿದಲ್ಲ ಅದು. ನಿಖಿಲ್ ಅವರು ಜನರ ಮಧ್ಯದಲ್ಲಿ ಇರುತ್ತಾರೆ. ಅವರ ತಂದೆ ಅವರನ್ನು ಕರೆಯಬೇಕು, ಆಗ ಅವರು ವೇದಿಕೆ ಮೇಲೆ ಬರುತ್ತಾರೆ ಎಂದಿದ್ದರು. ಆ ಸಮಯಲ್ಲಿ ವೇದಿಕೆ ಮೇಲೆ ಒಂದು ರಾಶಿ ಜನ ಇದ್ದರು. ಆಗ ತುಂಬಾ ಗೊಂದಲ ಆಗುತ್ತಿತ್ತು.. ಸರ್ ನಿಖಿಲ್ ಅವರನ್ನು ಕರೆಯಲು ಕ್ಯೂ ಕೊಡಲೇ ಇಲ್ಲ. ಕೊನೆಗೆ ನಾನೇ ಸರ್ಗೆ ನಿಖಿಲ್ ಎಲ್ಲಿದ್ದಿಯಪ್ಪಾ ಅನ್ನಿ ಸರ್ ಅಂದೆ ಅವರು ಹಾಗೆಯೇ ಕರೆದು ಬಿಟ್ಟರು. ನಾಲ್ಕು ಗಂಟೆ ಶೋ ಅದು. ನಾಲ್ಕು ಗಂಟೆ ಶೋನಲ್ಲಿ ಆ ಒಂದು ತುಣುಕನ್ನು ತೆಗೆದು ಟ್ರೆಂಡ್ ಮಾಡಿದವರನ್ನು ನಾನು ಒಮ್ಮೆ ಭೇಟಿ ಮಾಡಬೇಕು' ಎಂದು ಶಾಲಿನಿ ಹೇಳಿದ್ದಾರೆ.












Click it and Unblock the Notifications