ಖ್ಯಾತ ಕಿರುತೆರೆ ನಟನ ವಿರುದ್ಧ ದಾಖಲಾಯ್ತು ಎಫ್ಐಆರ್
ರಿಯಾಲಿಟಿ ಶೋಗಳ ಮೂಲಕ ಸಖತ್ ಫೇಮಸ್ ಆಗಿದ್ದ ಹುಲಿ ಕಾರ್ತಿಕ್ ಅವರಿಗೆ ಇದೀಗ ಸಂಕಷ್ಟ ಎದುರಾಗಿದೆ. ಹುಲಿ ಕಾರ್ತಿಕ್ ಅವರ ವಿರುದ್ಧ ಜಾತಿ ನಿಂದನೆ ಆರೋಪ ಕೇಳಿಬಂದಿದ್ದು, ಈ ಕಾರಣಕ್ಕೆ ಅವರ ವಿರುದ್ಧ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ವರದಿಯಾಗಿದೆ.
ಕನ್ನಡದ ಹೆಸರಾಂತ ರಿಯಾಲಿಟಿ ಶೋ ʼಗಿಚ್ಚಿ ಗಿಲಿಗಿಲಿʼಯಲ್ಲಿ ಹುಲಿ ಕಾರ್ತಿಕ್ ಹೆಸರು ಮಾಡಿದ್ದಲ್ಲದೆ, ಈ ಶೋನ ವಿನ್ನರ್ ಆಗಿಯೂ ಇತ್ತೀಚೆಗೆ ಹೊರಹೊಮ್ಮಿದ್ದರು. ಈ ಸಾಧನೆಯಿಂದ ಮಿಂಚುತ್ತಿರುವ ಹೊತ್ತಲ್ಲೇ ಕಾರ್ತಿಕ್ ಅವರಿಗೆ ಕೇಸ್ ಸುತ್ತಿಕೊಂಡಿದೆ. ಸದ್ಯ ಕಾರ್ತಿಕ್ ಅವರಿಗೆ ಪೊಲೀಸ್ ಠಾಣೆ ಮೆಟ್ಟಿಲೇರುವ ಸ್ಥಿತಿ ಬಂದಿದೆ.

ಕಾರ್ತಿಕ್ ಅವರು ಜಾತಿ ನಿಂದನೆ ಮಾಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ. ಅವರು ಒಂದು ಸಮುದಾಯದ ಬಗ್ಗೆ ಹೀಯಾಳಿಸುವ ಕೆಲಸ ಮಾಡಿದ್ದಾರೆ ಎನ್ನುವ ಆರೋಪ ಮಾಡಲಾಗಿದೆ. ಇತ್ತೀಚೆಗೆ ಕಿರುತೆರೆ ರಿಯಾಲಿಟಿ ಶೋನಲ್ಲಿ ವಿಜಯಶಾಲಿಯಾಗಿದ್ದ ಕಾರ್ತಿಕ್, ಹಿರಿತೆರೆಯಲ್ಲೂ ತಮ್ಮ ಅಭಿನಯದ ಮೂಲಕ ಮೋಡಿ ಮಾಡುತ್ತಿದ್ದಾರೆ. ಇದೇ ವೇಳೆ ಅವರಿಗೆ ಜಾತಿ ನಿಂದನೆ ಕೇಸ್ ಸುತ್ತಿಕೊಂಡಿದೆ.
ರಿಯಾಲಿಟಿ ಶೋ ವೇದಿಕೆಯಲ್ಲಿ ಪಾತ್ರ ನಿರ್ವಹಿಸುತ್ತಿದ್ದ ಕಾರ್ತಿಕ್, ಯಾವುದೋ ರೋಡ್ನಲ್ಲಿ ಬಿದ್ದಿರೋ ವಡ್ಡನ ತರ ಇದ್ದೀಯʼ ಎಂದು ಹೇಳಿದ್ದರು ಎನ್ನಲಾಗಿದೆ. ಖಾಸಗಿ ವಾಹಿನಿಯ ಅವಾರ್ಡ್ ಕಾರ್ಯಕ್ರಮದಲ್ಲಿ ಕಾರ್ತಿಕ್ ಈ ರೀತಿ ಹೇಳಿದ್ದು, ಇದರ ವಿರುದ್ಧ ಬೋವಿ ಜನಾಂಗ ಸಿಡಿದೆದ್ದಿದೆ. ನಮ್ಮ ಸಮುದಾಯದ ಬಗ್ಗೆ ಕಾರ್ತಿಕ್ ವೇದಿಕೆಯಲ್ಲೇ ಸಾರ್ವಜನಿಕವಾಗಿ ಹೀಯಾಳಿಸಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಜೋಶ್ನಲ್ಲಿ ಹೇಳಿದ ಒಂದು ಡೈಲಾಗ್ ಈಗ ಕಾರ್ತಿಕ್ಗೆ ಮುಳುವಾಗಿದೆ. ಈ ಕೇಸ್ನಲ್ಲಿ ಹುಲಿ ಕಾರ್ತಿಕ್ ಮಾತ್ರವಲ್ಲದೆ, ಈ ಕಾರ್ಯಕ್ರಮಕ್ಕೆ ಸಂಭಾಷಣೆ ಬರೆದ್ದಿದ್ದವರು, ಅದರ ನಿರ್ಮಾಪಕರು ಹಾಗೂ ನಿರ್ದೇಶಕರ ಮೇಲೂ ಸಹ ಕೇಸ್ ದಾಖಲಾಗಿದೆ ಎಂದು ಹೇಳಲಾಗಿದೆ.
ಈ ಕೇಸ್ನಲ್ಲಿ ಕಾರ್ತಿಕ್ ಮೊದಲ ಆರೋಪಿಯಾಗಿದ್ದು, ಲೋಕೇಶ್ ಎನ್ನುವವರು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಹುಲಿ ಕಾರ್ತಿಕ್ಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಈ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಕಾರ್ತಿಕ್ಗೆ ಪೊಲೀಸರು ವಿಚಾರಣೆಗೆ ಕರೆದಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಿಲ್ಲ..
ಹುಲಿ ಕಾರ್ತಿಕ್ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಹಾಸ್ಯ ಕಲಾವಿದ. ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಚಿಕ್ಕಳ್ಳಿಯವರು. ಇತ್ತೀಚೆಗೆ ಬಿಡುಗಡೆಯಾದ ಪೌಡರ್ ಸಿನಿಮಾದಲ್ಲಿ ಹುಲಿ ಕಾರ್ತಿಕ್ ನಟಿಸಿದ್ದಾರೆ. ಇನ್ನೂ ಹಲವು ಸಿನಿಮಾಗಳಲ್ಲಿ ಕಾರ್ತಿಕ್ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಶುರುವಾದ ಬಿಗ್ಬಾಸ್ ಸೀಸನ್ಗೂ ಕಾರ್ತಿಕ್ ಹೋಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ವಿಧಿ ಅವರನ್ನು ಪೊಲೀಸ್ ಠಾಣೆಯತ್ತ ಕರೆದೊಯ್ಯುತ್ತಿದೆ..












Click it and Unblock the Notifications