AI ಫೋಟೋ ವೈರಲ್: ನಟ ಪ್ರಕಾಶ್ ರಾಜ್ ಕಳ್ಳ-ಸುಳ್ಳ ಅಂದಿದ್ದು ಯಾರಿಗೆ?
ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿ ನಡೆಯುತ್ತಿರುವ ಜಾಗತೀಕ ಮಟ್ಟದ ಉತ್ಸವ ಮಹಾ ಕುಂಭಮೇಳದಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ಪುಣ್ಯ ಸ್ನಾನ ಮಾಡುತ್ತಿದ್ದ ನಕಲಿ ಫೋಟೋ ಕೂಡ ವೈರಲ್ ಆಗಿತ್ತು. ಪ್ರಕಾಶ್ ರಾಜ್ ಕುಂಭ ಮೇಳದಲ್ಲಿ ಸ್ನಾನ ಮಾಡುತ್ತಿರುವಂತೆ AI ತಂತ್ರಜ್ಞಾನವನ್ನು ಬಳಸಿ ನಕಲಿ ಫೋಟೋ ಸೃಷ್ಟಿಸಲಾಗಿತ್ತು. ಎಲ್ಲೆಡೆ ವೈರಲ್ ಆದ ಈ ಫೋಟೋ ನಟ ಪ್ರಕಾಶ್ ರಾಜ್ಗೆ ಕೂಡ ತಲುಪಿದ್ದು, ಈ ಫೋಟೋ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ನಟ ಪ್ರಕಾಶ್ ರಾಜ್ ಅವರ ನಕಲಿ ಫೋಟೋವನ್ನು ಪ್ರಶಾಂತ್ ಸಂಬರಗಿ ವೈರಲ್ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕಾಶ್ ರಾಜ್ ಪ್ರಶಾಂತ್ ಸಂಬರಗಿ ವಿರುದ್ಧ ದೂರು ದಾಖಲಿಸಿದ್ದು, ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಕುಂಭ ಮೇಳದಲ್ಲಿ ಸ್ನಾನ ಮಾಡುತ್ತಿರುವಂತೆ ಫೋಟೋ ವೈರಲ್ ಆದ ಬಗ್ಗೆ ಇದೀಗ ನಟ ಪ್ರಕಾಶ್ ರಾಜ್ ಮಾತನಾಡಿದ್ದು, ಇದೊಂದು ಅಕ್ಷಮ್ಯ ಅಪರಾಧ ಎಂದಿದ್ದಾರೆ. ಧಾರಾವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೋಟೊ ಎಡಿಟ್ ಮಾಡಿ ಹರಿ ಬಿಟ್ಟಿರುವುದು ಅಕ್ಷಮ್ಯ ಅಪರಾಧ. ಸುಳ್ಳು ಸುದ್ದಿ ಹಬ್ಬಿಸಬಾರದು. ಈ ವಿಚಾರವಾಗಿ ಪ್ರಕರಣ ದಾಖಲಾಗಿದೆ. ಅದಕ್ಕೆ ಸಂಬಂಧಿಸಿದವರು ಉತ್ತರ ಕೊಡಬೇಕಾಗುತ್ತದೆ. ಕಳ್ಳರು, ಸುಳ್ಳರ ಬಗ್ಗೆ ಈಗ ಮಾತು ಬೇಡ. ನಾನು ನಿರ್ದಿಗಂತ ಉತ್ಸವದ ಬಗ್ಗೆ ಮಾತನಾಡಲು ಬಂದಿದ್ದೇನೆ ಎಂದರು.
ಮಾತು ಮುಂದುವರಿಸಿದ ಅವರು, ರಂಗಾಯಣಗಳಿಗೆ ಸರ್ಕಾರ ಅನುದಾನ ನೀಡದಿರುವುದು ಬೇಸರದ ಸಂಗತಿ. ರಂಗಭೂಮಿಯವರು ಕಲೆಯಲ್ಲಿ ಶ್ರೀಮಂತರು. ಆ ಶ್ರೀಮಂತಿಕೆಯನ್ನು ಹಣದಿಂದ ಅಳೆಯವುದು ಅಸಾಧ್ಯ. ಸರ್ಕಾರಗಳ ಎದುರು ಎಷ್ಟು ಅಂತಾ ಕೈ ಚಾಚಿ ನಿಲ್ಲಬೇಕು? ರಂಗ ಉತ್ಸವಗಳನ್ನಾದರೂ ನೋಡಿ ಸರ್ಕಾರಗಳು ಬುದ್ಧಿ ಕಲಿಯಲಿ ಎಂದು ನಟ ಪ್ರಕಾಶ ರಾಜ್ ಬೇಸರ ವ್ಯಕ್ತಪಡಿಸಿದರು.
ಉತ್ಸವಗಳನ್ನು ನಡೆಸುವ ಮೂಲಕ ಪ್ರಗತಿಶೀಲರು, ನಾಟಕಕಾರರು, ಬರಹಗಾರರು ಒಂದಾಗಬೇಕು. ಅಂದಾಗ ಸರ್ಕಾರ ನಮ್ಮತ್ತ ಗಮನಹರಿಸಿ ಅನುದಾನ ನೀಡುವ ಬಗ್ಗೆ ಯೋಚಿಸಲಿದೆ. ನಮ್ಮ ನಿರ್ದಿಗಂತದ ರಂಗ ಚಟುವಟಿಕೆಗಳಿಗೆ ಸರ್ಕಾರದ ಸಹಾಯ ಬೇಡ. ಯಾವುದೇ ಸರ್ಕಾರ ಬಂದರೂ ತಮ್ಮ ಆಲೋಚನೆಗಳನ್ನು ಮಾತ್ರ ಹೇಳುತ್ತಾರೆ. ಹೀಗಾಗಿ ನಮ್ಮ ನಿರ್ದಿಗಂತದ ರಂಗ ಚಟುವಟಿಕೆಗಳಿಗೆ ಸರ್ಕಾರದ ಅನುದಾನ ಬೇಡ ಎಂದು ಹೇಳಿದರು.












Click it and Unblock the Notifications