Suhasini Maniratnam: ಖ್ಯಾತ ನಟಿ ಸುಹಾಸಿನಿಗೆ 6ನೇ ವಯಸ್ಸಿನಿಂದಲೇ ಗಂಭೀರ ಕಾಯಿಲೆ
ಕನ್ನಡ ಚಿತ್ರರಂಗದಲ್ಲಿ ದಶಕಗಳ ಕಾಲ ಮಿಂಚಿದ ನಟಿ ಸುಹಾಸಿನಿ. ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು ಚಿತ್ರರಂಗದಲ್ಲೂ ಇವರ ನಟನೆಗೆ ಫಿದಾ ಆಗದವರಿಲ್ಲ. ಬೆಂಕಿಯಲ್ಲಿ ಅರಳಿದ ಹೂವು, ಮುತ್ತಿನ ಹಾರ, ಅಮೃತವರ್ಷಿಣಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಇವರು ಎವರ್ಗ್ರೀನ್ ನಟಿಯಾಗಿದ್ದಾರೆ. ತಮ್ಮ ಪಾತ್ರಗಳ ಮೂಲಕ ಸಿನಿಪ್ರಿಯರಿಗೆ ಇಂದಿಗೂ ಹತ್ತಿರವಾಗಿರುವ ಅವರು ಅಭಿಮಾನಿಗಳು ಬೆಚ್ಚಿಬೀಳುವ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ. ಸದಾ ನಗುಮುಖದೊಂದಿಗೆ ಎಲ್ಲರ ಜೊತೆ ಖುಷಿಯಾಗಿ ಇರುತ್ತಿದ್ದ ಅವರು ತಮ್ಮ ವೈಯಕ್ತಿಕ ವಿಚಾರದ ಗುಟ್ಟನ್ನು ಹೇಳಿಕೊಂಡಿದ್ದಾರೆ.
ವಿಷ್ಣುವರ್ಧನ್ ಅವರ ಬಂಧನ ಹಾಗೂ ಮುತ್ತಿನ ಹಾರ ಸಿನಿಮಾದಲ್ಲಿ ಸುಹಾಸಿನಿ ಅವರ ನಟನೆ ಎಂದಿಗೂ ಮಾಸುವಂತದ್ದಲ್ಲ ಅಂತಾರೆ ಕನ್ನಡ ಸಿನಿ ಪ್ರೇಕ್ಷಕರು. ದಕ್ಷಿಣ ಚಿತ್ರರಂಗದ ಪ್ರಮುಖ ಟಾಪ್ ನಟರೊಂದಿಗೆ ತೆರೆ ಹಂಚಿಕೊಳ್ಳುವ ಮೂಲಕ ಅವರು ಸಖತ್ ಫೇಮಸ್ ಕೂಡ ಹೌದು. ಇಂದಿಗೂ ಅವರು ಪೋಷಕ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಆದರೆ, ಸಂದರ್ಶನವೊಂದರಲ್ಲಿ ಮಾತನಾಡಿರುವ ಸುಹಾಸಿನಿ ಅವರು ತಮ್ಮ ಆರೋಗ್ಯ ಸಮಸ್ಯೆ ಬಗ್ಗೆ ಆಘಾತಕಾರಿ ವಿಚಾರಗಳನ್ನು ಬಹಿರಂಗಡಿಸಿದ್ದಾರೆ. ಇದನ್ನು ಕೇಳಿ ಅವರ ಅಭಿಮಾನಿಗಳು ಕೂಡ ಆತಂಕಕ್ಕೆ ಒಳಗಾಗಿದ್ದಾರೆ.

ಸುಹಾಸಿನಿ ಅವರು ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದ ವಿಚಾರವನ್ನು ಅವರು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಸುಹಾಸಿನಿ ಅವರಿಗೆ 6ನೇ ವಯಸ್ಸಿನಲ್ಲೇ ಮೊದಲ ಬಾರಿಗೆ ಕ್ಷಯರೋಗ (ಟಿಬಿ) ಪತ್ತೆಯಾಗಿತ್ತು. ಬಳಿಕ 36ನೇ ವಯಸ್ಸಿನಲ್ಲಿ ಮತ್ತೊಮ್ಮೆ ಕ್ಷಯರೋಗ ಕಾಣಿಸಿಕೊಂಡಿತ್ತು ಎಂದು ವರದಿಯಾಗಿದೆ. ಕ್ಷಯರೋಗ ಇರುವ ವಿಚಾರ ತಿಳಿದು ಭಯದಿಂದ ಹಾಗೂ ಸ್ವಯಂ ಕಳಂಕದ ಕಾರಣ ಅದನ್ನು ಗುಟ್ಟಾಗಿ ಇರಿಸಿದ್ದೆ. ನನ್ನ ಘನತೆಯನ್ನು ಕಳೆದುಕೊಳ್ಳುವ ಭಯ ಕೂಡ ಇತ್ತು. ಹಾಗಾಗಿ ಯಾರಿಗೂ ತಿಳಿಯದಂತೆ ಸುಮಾರು ಆರು ತಿಂಗಳು ಇದಕ್ಕೆ ಚಿಕಿತ್ಸೆ ಪಡೆದೆ. ಈ ವೇಳೆ ತೀವ್ರ ತೂಕ ನಷ್ಟಕ್ಕೂ ಕಾರಣವಾಯಿತು, ಶ್ರವಣ ಸಮಸ್ಯೆಯೂ ಎದುರಾಗಿತ್ತು. ಕೊನೆಗೆ ಚಿಕಿತ್ಸೆ ಪಡೆದ ನಂತರ ಆರೋಗ್ಯ ಸ್ಥಿರವಾಗಿತ್ತು ಎಂದು ಸುಹಾಸಿನಿ ಹೇಳಿದ್ದಾರೆ.
ನಾನು ಸ್ವಯಂ ಕಳಂಕದಿಂದಾಗಿ ನನ್ನ ಆರೋಗ್ಯ ಸಮಸ್ಯೆಯನ್ನು ರಹಸ್ಯವಾಗಿಟ್ಟಿದ್ದೆ. ಈ ಕಳಂಕವೇ ನನ್ನನ್ನು ಸಮುದಾಯಕ್ಕಾಗಿ ಕೆಲಸ ಮಾಡಲು ಮತ್ತು ಕ್ಷಯರೋಗದ ಬಗ್ಗೆ ಜಾಗೃತಿ ಮೂಡಿಸಲು ಪ್ರೇರೇಪಿಸಿತು ಎಂದು ಸುಹಾಸಿನಿ ಹೇಳಿಕೊಂಡಿದ್ದಾರೆ. 2020ರಲ್ಲಿ ಸುಹಾಸಿನಿ ಅವರು ಕ್ಷಯರೋಗದಿಂದ ಬಳಲುತ್ತಿರುವ ಜನರಿಗೆ ಸಹಾಯ ಮಾಡಲು ಮೀಸಲಾಗಿರುವ ರೀಚ್ ಇಂಡಿಯಾ ಸಂಸ್ಥೆಯನ್ನು ಸಹ ಸೇರಿದರು. ತಮಿಳುನಾಡಿನ ಏಳು ಜಿಲ್ಲೆಗಳಲ್ಲಿ ಇದು ತನ್ನ ವ್ಯಾಪ್ತಿ ವಿಸ್ತರಿಸಿಕೊಂಡಿತು. ಈ ಮೂಲಕ ಅವರು ಕ್ಷಯರೋಗ ಪೀಡಿತರ ನೋವನ್ನು ನಿವಾರಿಸಲು ಮತ್ತು ರೋಗದ ಬಗ್ಗೆ ಜಾಗೃತಿ ಮೂಡಿಸಲು ಪಣ ತೊಟ್ಟಿದ್ದಾರೆ.

ಸುಹಾನಿಸಿ ಅವರು ಖ್ಯಾತ ನಿರ್ದೇಶಕ ಮಣಿರತ್ನಂ ಅವರನ್ನು 1988ರಲ್ಲಿ ವಿವಾಹವಾದರು. ಈ ದಂಪತಿಗೆ ನಂದನ್ ಎಂಬ ಮಗನಿದ್ದಾನೆ. ದಂಪತಿಗಳು 1997ರಿಂದ ತಮ್ಮ ನಿರ್ಮಾಣ ಕಂಪನಿ ಮದ್ರಾಸ್ ಟಾಕೀಸ್ ಅನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಸುಹಾಸಿನಿ ಅವರು 2015ರಿಂದ 2020ರವರೆಗೆ ಲಕ್ಸೆಂಬರ್ಗ್ನ ಗ್ರ್ಯಾಂಡ್ ಡಚಿಯ ಗೌರವ ಕಾನ್ಸುಲ್ ಆಗಿ ನೇಮಕಗೊಂಡಿದ್ದರು. ಅಲ್ಲದೆ ಒಂಟಿ ಮಹಿಳೆಯರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ಅವರು 2010ರಲ್ಲಿ ನಾಮ್ ಫೌಂಡೇಶನ್ ಕೂಡ ಸ್ಥಾಪಿಸಿದ್ದರು.












Click it and Unblock the Notifications