'ಚಂದನ್ ಶೆಟ್ಟಿ- ನಿವೇದಿತಾ ಗೌಡ ಡಿವೋರ್ಸ್ಗೆ ನಾನು ಕಾರಣ ಅಂತಾ ಆಯ್ತು'
ಕನ್ನಡ ಕಿರುತೆರೆಯಲ್ಲಿ ಕ್ಯೂಟ್ ಜೋಡಿ ಎನಿಸಿಕೊಂಡಿದ್ದ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಕಳೆದ ವರ್ಷ ಜೂನ್ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿ ವಿಚ್ಛೇದನ ಪಡೆದುಕೊಂಡರು. ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ನಾಲ್ಕು ವರ್ಷಗಳ ಬಳಿಕ ದೂರಾಗುವ ನಿರ್ಧಾರ ಮಾಡಿ ಇಬ್ಬರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಪಡೆದುಕೊಂಡರು.
ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಡಿವೋರ್ಸ್ ವಿಚಾರದಲ್ಲಿ ಅನೇಕ ಗಾಸಿಪ್ಗಳು ಕೇಳಿ ಬಂದಿದ್ದವು. ಆದರೆ ವಿಚ್ಛೇದನ ಪಡೆದುಕೊಂಡು ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ದೂರಾದ ಬಳಿಕ ನಟಿಯೊಬ್ಬರ ಜೊತೆ ಚಂದನ್ ಶೆಟ್ಟಿ ಹೆಸರು ತಳುಕು ಹಾಕಿಕೊಂಡಿತ್ತು. ಅಲ್ಲದೇ ಈ ನಟಿಯ ಜೊತೆಗೆ ಚಂದನ್ ಶೆಟ್ಟಿ ಮದುವೆಯಾಗಲು ಸಿದ್ಧರಾಗಿದ್ದಾರೆ ಎನ್ನುವ ಕೆಲವು ಪೋಸ್ಟ್ಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.

ಈ ಗಾಳಿ ಸುದ್ದಿಯಲ್ಲಿ ಸಿಲುಕಿಹಾಕಿಕೊಂಡ ಹೆಸರು ಮತ್ಯಾರದೂ ಅಲ್ಲ ಸಲಗ ಸಿನಿಮಾ ಖ್ಯಾತಿಯ ನಟಿ ಸಂಜನಾ ಆನಂದ್ ಅವರದು. ತಾವಾಯಿತು ತಮ್ಮ ಸಿನಿಮಾಗಳ ಕೆಲಸವಾಯಿತು ಎಂದುಕೊಂಡಿದ್ದ ಸಂಜನಾ ಆನಂದ್ ಹೆಸರು ಈ ವಿಚಾರದಲ್ಲಿ ಯಾಕೆ ಬಂತು? ಎನ್ನುವ ಪ್ರಶ್ನೆಗೆ ಈವರೆಗೂ ಉತ್ತರ ಇಲ್ಲ. ಹೀಗಾಗಿ ಇದೀಗ ಈ ಬಗ್ಗೆ ಸ್ವತಃ ಸಂಜನಾ ಆನಂದ್ ಫಿಲ್ಮಿಬೀಟ್ ಕನ್ನಡದ ಜೊತೆ ಮಾತನಾಡಿದ್ದು, ಈ ಗಾಸಿಪ್ಗೆ ಸ್ಪಷ್ಟನೆ ನೀಡಿದ್ದಾರೆ.
ತಮ್ಮ ಬಗ್ಗೆ ಕೇಳಿ ಬಂದ ಗಾಸಿಪ್ಗಳ ಬಗ್ಗೆ ಮಾತನಾಡಿದ ಅವರು, 'ಇತ್ತೀಚಿಗೆ ನನಗೆ ಮತ್ತು ಚಂದನ್ ಶೆಟ್ಟಿ ಅವರಿಗೆ ಮದುವೆಯಾಗಿತ್ತು ಎನ್ನುವ ಗಾಸಿಪ್ ಆಗಿತ್ತು. ಅವರ ಡಿವೋರ್ಸ್ಗೆ ನಾನು ಕಾರಣ ಅಂತಾ ಆಯ್ತು. ಅದು ಎಷ್ಟು ದೊಡ್ಡ ಮಟ್ಟಿಗೆ ಆಯ್ತು ಅಂದರೆ ನನ್ನ ಸಂಬಂಧಿಕರು ಕಾಲ್ ಮಾಡಿ ಕೇಳೋಕೆ ಶುರು ಮಾಡಿದರು. ಚಂದನ್ ಶೆಟ್ಟಿ ಅವರ ಜೊತೆ ಮದುವೆ ಆಗ್ತಿದ್ದೀಯಾ ಅಂತೆ. ಕರೆಯಲೇ ಇಲ್ಲ ನಮ್ಮನ್ನೆಲ್ಲಾ ಅಂತಾ ಹೇಳುತ್ತಿದ್ದರು'.

'ನನಗೆ ಆ ಸುದ್ದಿ ಗೊತ್ತೇ ಇರಲಿಲ್ಲ. ಇದೆಲ್ಲಾ ಇಷ್ಟು ದೊಡ್ಡದಾಗಿ ಯಾವಾಗ ಆಯ್ತು ಅಂತಾ ಅನಿಸಿಬಿಡ್ತು. ಸಂಬಂಧಿಕರು, ಪ್ರೋಡ್ಯೂಸರ್ಗಳು ಕಾಲ್ ಮಾಡಿ ಕೇಳಿದ ಮೇಲೆನೇ ಗೊತ್ತಾಗಿದ್ದು. ಸ್ವಲ್ಪ ದಿನ ಹೋದರೆ ನಿಲ್ಲುತ್ತದೆ ಅಂತಾ ಸುಮ್ಮನಾಗಿದ್ದೆವು. ಆದರೆ ನಿಲ್ಲಲೇ ಇಲ್ಲ. ಎಲ್ಲಿಯವರೆಗೂ ಅಂದರೆ ಎಐನಲ್ಲಿ ನಮ್ಮಿಬ್ಬರಿಗೂ ಮದುವೆ ಡ್ರೆಸ್ ಹಾಕಿಸಿದ್ದರು. ಮಂಗಳೂರಿನಲ್ಲಿ ಮದುವೆ ಅಂತೆಲ್ಲಾ ಹಾಕಿದರು. ಆಗ ಸ್ವಲ್ಪ ಗಂಭೀರವಾಗಿ ತೆಗೆದುಕೊಂಡು ಇದೆಲ್ಲಾ ಸುಳ್ಳು ಅಂತಾ ಸ್ಪಷ್ಟನೆ ಕೊಟ್ಟೆ' ಎಂದು ಸಂಜನಾ ಆನಂದ್ ವಿವರಿಸಿದರು.












Click it and Unblock the Notifications