ರೊಚ್ಚಿಗೆದ್ದ ನಟಿ ರಚಿತಾ ರಾಮ್; ಇನ್ಸ್ಟಾಗ್ರಾಂ ವಿಡಿಯೋ ಭಾರೀ ವೈರಲ್
Actress Rachita Ram: ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್ ಅವರು ತಮ್ಮ ಮೇಲೆ 'ಸಂಜು ವೆಡ್ಸ್ ಗೀತಾ 2' ಹಾಗೂ 'ಉಪ್ಪಿ ರುಪ್ಪಿ' ತಂಡದವರು ಮಾಡಿದ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ. ಹಾಗಾದ್ರೆ ಅವರು ಏನು ಹೇಳಿದರು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಒಂದು ವಾರದಿಂದ ನಟಿ ರಚಿತಾ ರಾಮ್ ಅವರ ಮೇಲೆ ಎರಡು ಆರೋಪಗಳು ಕೇಳಿಬಂದಿದ್ದವು. ಇದಕ್ಕೆ ಇಂದು (ಜೂನ್ 20) ತಮ್ಮ ಇನ್ಸ್ಟಾಗ್ರಾಂ ಮೂಲಕ ಪ್ರತಿಕ್ರಿಯಿಸಿದ ಅವರು, ಒಂದು ವಾರದಿಂದ ನನ್ನ ಬಗ್ಗೆ ಕೇಳಿಬಂದಂತಹ ಆರೋಪಗಳ ಬಗ್ಗೆ ನಾನು ಈಗ ಮಾತನಾಡುತ್ತೇನೆ. ಮೊದಲು ಸಂಜು ವೆಡ್ಸ್ ಗೀತಾ-2 ಸಿನಿಮಾದಿಂದ ಶುರು ಮಾಡುತ್ತೇನೆ ಎಂದರು.

ನನ್ನ ತಂಡ, ನಿರ್ಮಾಪಕ, ನಿರ್ದೇಶಕರು ಹಾಗೂ ನಟ ಮೂರು ಜನ ಇತ್ತೀಚೆಗೆ ನಡೆಸಿರುವ ಹಲವಾರು ಸುದ್ದಿಗೋಷ್ಠಿಗಳಲ್ಲಿ ಒಂದಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಅವರು ಬಳಕೆ ಮಾಡಿದಂತಹ ಪದಗಳು ಹಾಗೂ ಹೇಳಿಕೆಗಳಿಂದ ನನ್ನ ಮನಸಿಗೆ ತುಂಬಾ ನೋವಾಗಿದೆ. ಅದು ನಾನು ನಂಬಲಿಕ್ಕೆ ಆಗದಿರುವಂತಹ ವಿಚಾರ ಎಂದು ಹೇಳಿದರು.
ಇದೇ ತಂಡದ ಜೊತೆಗೆ ಒಂದು ಮುಕ್ಕಾಲು ವರ್ಷ ಸಿನಿಮಾ ಮಾಡಿರುತ್ತೇನೆ. ನಾಗಶೇಖರ್ ಈಗ ನನ್ನ ವಿರುದ್ಧ ಮಾಡುತ್ತಿರುವ ಎಲ್ಲಾ ಆರೋಪಗಳು ಸುಳ್ಳು. ಜನವರಿ 17ರಂದು ಸಂಜು ವೆಡ್ಸ್ ಗೀತಾ-2 ಮೊದಲ ಬಾರಿ ರಿಲೀಸ್ ಅಗಿದ್ದು, ಆಗ ಎಲ್ಲಾ ಪ್ರಚಾರಕ್ಕೆ ಹೋಗಿದ್ದೇನೆ. ಆ ವೇಳೆ ನಡೆದ ಸುಮಾರು ಸುದ್ದಿಗೋಷ್ಠಿಗಳಲ್ಲಿ ಇಡೀ ಸಿನಿಮಾ ತಂಡ ನನ್ನ ಶ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿತ್ತು. ಆದರೆ ಅದೇ ತಂಡ ಈಗ ನನ್ನ ಬಗ್ಗೆ ತುಂಬಾ ಕೆಟ್ಟದಾಗಿ ಮಾತನಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನನಗೆ ಒಂದು ಗೊಂದಲವಿದೆ. ನಾನು ಇರುವಾಗ ಇದೇ ಮಾಧ್ಯಮದವರ ಮುಂದೆ ಈ ಮಾತನ್ನು ಅವತ್ತೇ ಆಡಬೇಕಿತ್ತು. ಯಾಕೆ ಆಡಲಿಲ್ಲ ಆಗ? ಯಾಕೆ ಅಷ್ಟೊಂದೆಲ್ಲಾ ಹೊಗಳಿದರು? ಈಗ ಯಾಕೆ ಹಿಂಗೆ ಮಾಡನಾಡುತ್ತಿದ್ದಾರೆ? ಈಗ ನನಗ ವಿರುದ್ಧ ಸುಳ್ಳು ನಾಟಕ ಮಾಡುತ್ತಿದ್ದಾರೆ ಅಂತಾ ಹೇಳುತ್ತಿದ್ದಾರೆ. ಇಲ್ಲಿ ನಿಜವಾಗಿಯೂ ಸುಳ್ಳು, ನಾಟಕ ಮಾಡುತ್ತಿರುವವರು ಯಾರು? ಎಂದು ಪ್ರಶ್ನಿಸಿದ್ದಾರೆ.
ಈಗ ನಾನು ಬೇರೊಂದು ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಅವರಿಗೆ ಡೇಟ್ ನೀಡಿದ್ದೇನೆ. ಈ ವೇಳೆ ಎರಡನೇ ಬಾರಿ ಸಿನಿಮಾ ಬಿಡುಗಡೆ ಆಗುತ್ತಿದ್ದು, ಈಗ ಪ್ರಚಾರಕ್ಕೆ ಬರಬೇಕೆಂದು ಹೇಳಿದರೆ ಹೇಗೆ? ಇದೇ ಸಂಜು ವೆಡ್ಸ್ ಗೀತಾ-2 ತಂಡ ಶೂಟಿಂಗ್ ನೆಪವೊಡ್ಡಿ ಬೇರೊಂದು ಸಿನಿಮಾ ಪ್ರಚಾರಕ್ಕೆ ಅವಕಾಶ ಮಾಡಿಕೊಡಲಿಲ್ಲ. ಆ ಸಿನಿಮಾವನ್ನು ಮಹಿಳಾ ನಿರ್ಮಾಪಕಿ ನಿರ್ಮಾಣ ಮಾಡಿದ್ದರು. ಅವರು ದುಡ್ಡು ಹಾಕಿರಲಿಲ್ಲವಾ? ಅಗ ಆ ನಿರ್ಮಾಪಕರಿಗೆ ಕಷ್ಟ ಆಗಿಲ್ವಾ? ಅಂತಲೂ ಪ್ರಶ್ನಿಸಿದರು.
ನಾನು ಪ್ರಚಾರಕ್ಕೆ ಹೋಗದೇ ಇದ್ದರೂ ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಬಗ್ಗೆ ಪೋಸ್ಟ್, ಸ್ಟೋರಿ ಹಾಕಿದ್ದೇನೆ. ಈ ಹಿಂದೆ ಪ್ರಚಾರದ ಸಮಯದಲ್ಲಿ ಸರಿಯಾದ ಯೋಜನೆ ಮಾಡಿರಲಿಲ್ಲ. ಒಂದೊಂದು ದಿನ ಒಂದೊಂದು ಶೆಡ್ಯೂಲ್ ಹೇಳುತ್ತಿದ್ದರು. ಇಂದು ಕಾರ್ಯಕ್ರಮ ಎಂದು ಹೇಳಿ ಮುಂದೂಡಿಕೆ ಮಾಡಿತ್ತಿದ್ದರು. ಆದ್ದರಿಂದ ಎರಡನೇ ಬಾರಿ ಪ್ರಚಾರದಲ್ಲಿ ಭಾಗಿಯಾಗಲು ಸಾಧ್ಯವಾಗಿಲ್ಲ. ಇದೆಲ್ಲಾ ನನ್ನ ಮೇಲೆ ಉದ್ದೇಶಪೂರ್ವಕವಾಗಿಯೇ ಮಾಡಿರುವ ಆರೋಪ ಎಂದು ಸ್ಪಷ್ಟನೆ ನೀಡಿದರು.
ಮತ್ತೊಂದು ಸಿನಿಮಾದ ಅಡ್ವಾನ್ಸ್ ಪಡೆದು ವಾಪಸ್ ಮಾಡಿಲ್ಲ ಎಂಬ ಮತ್ತೊಂದು ಆರೋಪ ನನ್ನ ಮೇಲೆ ಬಂದಿದೆ. ಈ ಆರೋಪದ ಬಗ್ಗೆ ಸಾರಾ ಗೋವಿಂದು ಅವರ ನೇತೃತ್ವದಲ್ಲಿ ಮಾತುಕತೆ ನಡೆಯುತ್ತಿದೆ. ಅವರು ನನ್ನ ಬಳಿ ಈ ಬಗ್ಗೆ ಏನು ಮಾತನಾಡಬೇಡ ಎಂದು ಹೇಳಿದ್ದಾರೆ. ಆದ್ದರಿಂದ ನಾನು ಈ ಆರೋಪದ ಬಗ್ಗೆ ಈಗ ಮಾತನಾಡುತ್ತಿಲ್ಲ ಎಂದರು.
ಒಟ್ಟಿನಲ್ಲಿ ನಾನು ಸಂಜು ವೆಡ್ಸ್ ಗೀತಾ 2 ಚಿತ್ರತಂಡದ ಜೊತೆ ಯಾವುದೇ ತಪ್ಪು ಮಾಡಿಲ್ಲ. ಯಾಕೆ ಕ್ಷಮೆ ಕೇಳಬೇಕು? ಈಗಾಗಲೇ ನಾನು ಈ ವಿಚಾರದ ಬಗ್ಗೆ ಅಭಿಮಾನಿಗಳಿಗೆ ಸ್ಪಷ್ಟನೆ ನೀಡಿದ್ದೇನೆ. ಈ ಎಲ್ಲಾ ವಿಚಾರ ತಿಳಿದುಕೊಂಡು ನಾನು ತಪ್ಪು ಮಾಡಿದ್ದೇನೆಂದು ಅಭಿಮಾನಿಗಳು ಭಾವಿಸಿದರೆ ಅವರಿಗೆ ಮಾತ್ರ ಕ್ಷಮೆ ಕೇಳುತ್ತೇನೆ ಎಂದು ಇನ್ಸ್ಟಾದಲ್ಲಿ ಮಾಡಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ.












Click it and Unblock the Notifications