ವಿಡಿಯೋ ಮಾಡುತ್ತಲೇ ಗೋಳೋ ಅಂತ ಅತ್ತ ನಟಿ ಆಶಿತಾ: ಆಗಿದ್ದೇನು?
ತವರಿನ ಸಿರಿ, ಬಾ ಬಾರೋ ರಸಿಕ, ಆಕಾಶ್ ಸೇರಿದಂತೆ ಕನ್ನಡದ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದ ನಟಿ ಆಶಿತಾ ಏಕಾಏಕಿ ತೆರೆಮರೆಗೆ ಸರಿದರು. ಸುಮಾರು ವರ್ಷಗಳು ಕಳೆದ ಬಳಿಕ ಮತ್ತೆ ಈಗ ಅವರು ಕ್ಯಾಮರಾ ಮುಂದೆ ಬಂದಿದ್ದು, ತಮ್ಮದೇ ಆದ ಯೂಟ್ಯೂಬ್ ಚಾನೆಲ್ ತೆರೆದಿದ್ದಾರೆ. ಯೂಟ್ಯೂಬ್ ವಿಡಿಯೋ ಮೂಲಕ ಮತ್ತೆ ತಮ್ಮ ಅಭಿಮಾನಿಗಳ ಜೊತೆ ಸಂಪರ್ಕ ಬೆಳೆಸಿಕೊಂಡಿರುವ ಅವರು, ತಮ್ಮ ಜೀವನದ ಆಗು ಹೋಗುಗಳ ಬಗ್ಗೆ ಅಪ್ಡೇಟ್ ನೀಡುತ್ತಿರುತ್ತಾರೆ. ಇದೀಗ ವಿಡಿಯೋವೊಂದರಲ್ಲಿ ಮಾತನಾಡುತ್ತಲೇ ಜೋರಾಗಿ ಅತ್ತಿದ್ದಾರೆ.
ತಮ್ಮ ಜೀವನದಲ್ಲಿ ದೇವರ ಮೇಲೆ ನಂಬಿಕೆ ಹೇಗಿದೆ ಎನ್ನುವುದನ್ನು ಮಾತನಾಡುತ್ತಾ ನಟಿ ಆಶಿತಾ ಕಣ್ಣೀರು ಹಾಕಿದ್ದಾರೆ. ವಿಡಿಯೋದಲ್ಲಿ ಮಾತನಾಡಿದ ಅವರು, ಒಂದು ಒಂದು ಸಲ ಜೀವನದಲ್ಲಿ ನಾವು ಎಲ್ಲವನ್ನೂ ನೋಡಿಕೊಳ್ಳುತ್ತೇವೆ ಎನ್ನುವ ನಂಬಿಕೆಯಲ್ಲಿ ಇರುತ್ತೇವೆ. ಅದು ಸರಿಯೇ ತಪ್ಪಲ್ಲ. ಆದರೆ ದೇವರಲ್ಲಿ ನಂಬಿಕೆ ಇಟ್ಟುಕೊಂಡಿಲ್ಲ ಅಂದರೆ ಜೀವನದಲ್ಲಿ ಏನು ಮಾಡಲು ಆಗುವುದಿಲ್ಲ. ನಾನೀಗ ಕಣ್ಣೀರು ಹಾಕುತ್ತಿರುವುದು ದುಃಖಕಲ್ಲ. ದೇವರು ನನ್ನ ಕೈ ಬಿಟ್ಟಿಲ್ಲ ಎನ್ನುವ ಖುಷಿಗೆ. ನನ್ನ ಜೀವನದಲ್ಲಿ ಒಂದು ನಂಬಿಕೆಯನ್ನು ದೇವರೇ ಮೂಡಿಸಿರುವುದು' ಎಂದರು.

'ಕೆಲವು ದಿನಗಳ ಹಿಂದೆ ನನಗೆ ಆರೋಗ್ಯ ಕೆಟ್ಟಿತ್ತು. ತುಂಬಾ ಕಷ್ಟವಾಯ್ತು. ಕ್ಲಿನಿಕ್ ಅಲ್ಲೇ ಇದ್ದೆ. ಮನೆಗೆ ಬಂದ ಮೇಲೆ ಜಾಸ್ತಿಯಾಯ್ತು. ಆ ಸಮಯದಲ್ಲಿ ನಾನು ಒಬ್ಬಳೇ ಇದ್ದೇ ಬೇರೆ. ಆ ಸಮಯದಲ್ಲಿ ನನ್ನ ಸಹಾಯಕ್ಕೆ ಬಂದಿದ್ದು ನನ್ನ ಫ್ರೆಂಡ್. ಡಾಕ್ಟರ್ ಒಂದು ಮೆಡಿಸನ್ ಹೇಳಿದ್ದರು. ಅವರೇ ಆ ಮಾತ್ರೆ ತಂದು ನನಗೆ ಕೊಟ್ಟು ನನ್ನ ಜೊತೆ ನಿಂತುಕೊಂಡರು. ಆ ಮಾತ್ರೆ ತೆಗೆದುಕೊಳ್ಳುತ್ತಿದ್ದಂತೆ ನನಗೆ ವಾಂತಿ ಆಯ್ತು. ಆ ಸಮಯದಲ್ಲಿ ಬಂದ ನೋವು ನನಗೆ ತಡೆದುಕೊಳ್ಳಲು ಆಗಲಿಲ್ಲ. ಯಾವಾಗ ನನ್ನ ಕಣ್ಣಿಗೆ ನಿದ್ದೆ ಬಂತೋ ಗೊತ್ತಿಲ್ಲ. ತುಂಬಾ ಹೊತ್ತು ಮಲಗೇ ಇದ್ದೆ. ಅಲ್ಲಿಯವರೆಗೂ ನನ್ನ ಫ್ರೆಂಡ್ ನನ್ನ ಜೊತೆಯಲ್ಲೇ ಇದ್ದರು. ಅವರ ಕೆಲಸಗಳಿದ್ದರೂ ನನ್ನ ಜೊತೆಗೆ ಇದ್ದು ನನ್ನನ್ನು ನೋಡಿಕೊಂಡರು. ಅವರಿಗೆ ಧನ್ಯವಾದ ಹೇಳಿದರೆ ಸಾಲುವುದಿಲ್ಲ' ಎಂದು ಹೇಳುತ್ತಾ ನಟಿ ಆಶಿತಾ ಭಾವುಕರಾಗಿದ್ದಾರೆ.
ಮಾತು ಮುಂದುವರಿಸಿದ ಅವರು, 'ನಾನು ನನ್ನ ಜೀವನದಲ್ಲಿ ನಂಬಿರುವುದು ಏನು ಅಂದರೆ ಜೀವನದಲ್ಲಿ ನೀವು ಒಬ್ಬರೇ ಇದ್ದಾಗ ದೇವರು ಒಂದಲ್ಲಾ ಒಂದು ರೂಪದಲ್ಲಿ ಒಬ್ಬರನ್ನು ಕಳುಹಿಸುತ್ತಾರೆ ಅಂತಾ. ಯಾವುದೇ ಪರಿಸ್ಥಿತಿ ಇರಬಹುದು, ಯಾವುದೇ ದುಃಖ ಇರಬಹುದು, ಯಾವುದೇ ತುರ್ತು ಸಂದರ್ಭ ಇರಬಹುದು. ದೇವರು ನನ್ನ ಕೈ ಬಿಡಲ್ಲ ಎನ್ನುವ ನಂಬಿಕೆ ನನಗೆ ತುಂಬಾ ಇದೆ' ಎಂದು ಹೇಳಿದರು.












Click it and Unblock the Notifications