ಕನ್ನಡದಲ್ಲಿ ಅವಕಾಶಗಳಿಲ್ಲದೆ ತೆಲುಗಿಗೆ ಹೋದ್ರಾ ವಸಿಷ್ಠ ಸಿಂಹ? ಅಚ್ಚರಿ ವಿಚಾರ ತಿಳಿಸಿದ ನಟ
ವಸಿಷ್ಠ ಸಿಂಹ ಅವರು "ರಾಜಾಹುಲಿ" ಸಿನಿಮಾ ಮೂಲಕ ಖಳನಟನಾಗಿ ಕಾಣಿಸಿಕೊಂಡರು. ಬಳಿಕ "ಟಗರು" ಸಿನಿಮಾದಲ್ಲಿ ಚಿಟ್ಟೆಯಾಗಿ ಮಿಂಚಿದರು. ಕೆಜಿಎಫ್ ಸಿನಿಮಾದಲ್ಲೂ ಖಡಕ್ ವಿಲನ್ ಅಬ್ಬರಿಸಿ, ಕೊನೆಗೆ ಸ್ಯಾಂಡಲ್ವುಡ್ನ ನಾಯಕನಟರಾದರು. ಹಲವು ಸಿನಿಮಾಗಳಲ್ಲಿ ನಟಿಸಿದ ವಸಿಷ್ಠ ಅವರಿಗೆ ತೆಲುಗು ಚಿತ್ರರಂಗದ ಬಾಗಿಲು ತೆರೆಯಿತು. ಕಂಚಿನ ಕಂಠದ ನಟ ಇತ್ತೀಚೆಗೆ ಅಲ್ಲಿಯೂ ಮೋಡಿ ಮಾಡುತ್ತಿದ್ದಾರೆ. ಇದರ ನಡುವೆ ಕನ್ನಡದಲ್ಲಿ ಅವಕಾಶ ಕಡಿಮೆಯಾಗಿದ್ದರಿಂದ ವಸಿಷ್ಠ ಟಾಲಿವುಡ್ಗೆ ಹಾರಿದ್ರು ಎನ್ನುವ ಮಾತು ಕೇಳಿಬಂದಿದೆ. ಈ ಬಗ್ಗೆ ನಟ ವಸಿಷ್ಠ ಅವರೇ ಉತ್ತರ ನೀಡಿದ್ದಾರೆ.
'ನಾವು ಬದುಕಬೇಕಲ್ಲ? ನಾವೇನು ಚಾರಿಟಿ ಕೆಲಸ ಮಾಡುತ್ತಿಲ್ವಲ್ಲಾ? ನಮಗೆ ಇದು ಲೈಫ್ಸ್ಟೈಲ್ ಅಲ್ಲ. ಇದೇ ನಮ್ಮ ಲೈಫ್, ನಮ್ಮ ಹೊಟ್ಟೆ ತುಂಬಿಸುವುದು' ಎಂದಿದ್ದಾರೆ. 'ಹಾಗಾಗಿ ಕಥೆ, ಪಾತ್ರ, ಸಂಭಾವನೆ ಓಕೆ ಆದ್ರೆ ಯಾವ ಊರಿನಲ್ಲಿ ಬೇಕಾದರೂ ಹೋಗಿ ಕೆಲಸ ಮಾಡುತ್ತೇನೆ. ಆ ಪಾತ್ರದ ಮೇಲೆ ನಮಗೆ ಹಠ ಬರಬೇಕು' ಎಂದು ವಸಿಷ್ಠ ಅವರು ʼಬಿಯಾಂಡ್ ಲಿಮಿಟ್ಸ್ʼ ಸಂದರ್ಶನದಲ್ಲಿ ಹೇಳಿದ್ದಾರೆ.

'ನನಗೆ ಯಾವ ಭಾಷೆಯ ಸಿನಿಮಾ ಆದರೂ ಮೊದಲು ಕಥೆ ಇಷ್ಟ ಆಗಬೇಕು. ಪಾತ್ರ ಹಾಗೂ ಸಂಭಾವನೆ ಇಷ್ಟ ಆಗಬೇಕು. ನನಗೆ ಪಾತ್ರ ಇಷ್ಟ ಅಂತ ಫ್ರೀಯಾಗಿ ಮಾಡೋಕಾಗಲ್ಲ. ನಾನೇ ಅಲ್ಲ ಯಾರೂ ಆ ಕೆಲಸ ಮಾಡಲ್ಲ. ಹಾಗಾಗಿ ಇಲ್ಲಿ ಆ ಭಾಷೆ, ಈ ಭಾಷೆ ಅನ್ನೋದೆಲ್ಲ ಇಲ್ಲ' ಎಂದು ಎಂದಿದ್ದಾರೆ ವಸಿಷ್ಠ ಸಿಂಹ.
'ಕಲೆಗಿಂತ ಬಿಸಿನೆಸ್ ಹೆಚ್ಚಾಗಿದೆ'
'ಮೊದಲು ಸಿನಿಮಾ ಅಂದ್ರೆ ಮುಖ್ಯವಾಗಿ ಕಲೆಗೆ ಒತ್ತು ನೀಡುತ್ತಿದ್ದರು. ಈಗೆಲ್ಲ ಕಲೆಗಿಂತ ವ್ಯಾಪಾರವೇ ಮುಖ್ಯವಾಗಿದೆ. ಇದೇ ಕಾರಣಕ್ಕೆ ನಾವು ಸೋಲುಗಳನ್ನೂ ಕಾಣುತ್ತಿದ್ದೀವಿ. ಉದಾಹರಣೆಗೆ ಈಗ ಒಂದು ಕಥೆ ಮಾಡಿಕೊಂಡು ಬಂದು, ವಸಿಷ್ಠನ ಕೈಯಲ್ಲಿ ಮಾಡಿಸೋಣ ಎಂದು ಹಣ ಹಾಕುವವರಿಗೆ ಕೇಳಿದ್ರೆ, ಅವನಿಗೆ ಮಾರ್ಕೆಟ್ ಎಷ್ಟಿದೆ? ಅಂತ ಮೊದಲು ಕೇಳ್ತಾರೆ. ಈಗ ನಾವು ಸಾವಿರ ರೂಪಾಯಿ ಗಳಿಸುವ ನಿಟ್ಟಿನಲ್ಲಿ ಪ್ರತಿದಿನ ಹತ್ತು ರೂಪಾಯಿ ಕಳೆದುಕೊಳ್ಳುತ್ತಿದ್ದೀವಿ' ಎಂದು ಚಿತ್ರರಂಗದ ಬಗ್ಗೆ ಪರೋಕ್ಷವಾಗಿ ಬೇಸರ ಹೊರಹಾಕಿದ್ದಾರೆ.
'ಒಂದು ಇಂಡಸ್ಟ್ರಿ ಅಂದಾಗ ಕೇವಲ ನಾಲ್ಕೈದು ದೊಡ್ಡ ಸ್ಟಾರ್ಗಳ ಮೇಲೆ ಹೊರೆ ಹಾಕಿ, ನೀವೇ ವರ್ಷಕ್ಕೆ ಮೂರ್ನಾಲ್ಕು ಸಿನಿಮಾ ಮಾಡಬೇಕು. ನಿಮ್ಮಿಂದ ಸಿನಿಮಾರಂಗ ಉಳಿಬೇಕು ಅಂತ ಹೇರಿ ಸಿನಿಮಾ ಮಾಡೋಕಾಗಲ್ಲ. ಇರುವವರಲ್ಲಿ ಪ್ರತಿಭಾವಂತರು ಯಾರೆಂದು ಗುರುತಿಸಬೇಕು. ಮೊದಲು ನಮ್ಮವರನ್ನ ಗುರುತಿಸುವ ಕೆಲಸ ಆಗಬೇಕು. ಸಿನಿಮಾಗೂ ಮೊದಲೇ ವ್ಯವಹಾರ ಮಾಡುವ ಬದಲು, ಅವನ ಮಾರ್ಕೆಟ್ ಎಷ್ಟು? ಇವನ ಮಾರ್ಕೆಟ್ ಎಷ್ಟು ಎನ್ನುವ ಬದಲು, ಈ ಸಿನಿಮಾ ಒಂದು ಪ್ರಾಡಕ್ಟ್, ಇದನ್ನ ಮಾರ್ಕೆಟಿಂಗ್ ಮಾಡಿ ನಾನು ಏನು ಪಡೆಯಬೇಕು ಎಂಬ ನಿಟ್ಟಿನಲ್ಲಿ ಯೋಚಿಸಬೇಕು' ಎಂದಿದ್ದಾರೆ.
'ಎಲ್ಲ ಸಿನಿಮಾ ಕೆಜಿಎಫ್, ಪುಷ್ಪ ಆಗಲ್ಲ'
'ಎಲ್ಲರೂ ಕೆಜಿಎಫ್, ಪುಷ್ಪ, ಬಾಹುಬಲಿ ಸಿನಿಮಾ ತೆಗೆಯಲು ಆಗಲ್ಲ. ಅದಕ್ಕೆ ಬೇಕಾದ ಶ್ರದ್ಧೆ, ಸೌಕರ್ಯಗಳು, ಬಂಡವಾಳ ಬೇರೆಯೇ ಆಗಿರುತ್ತೆ. ಹಾಗಂತ ಬರುವ ಎಲ್ಲ ಸಿನಿಮಾವನ್ನೂ ಕೆಜಿಎಫ್, ಕಾಂತಾರ ರೀತಿ ಬಂಡವಾಳ ಹಾಕಿ ತೆಗೆಯಲು ಆಗಲ್ಲ. ಸಿನಿಮಾಗೆ ಜನ ಬರಲ್ಲ ಅಂತಾರೆ, ಜನಕ್ಕೆ ಇಷ್ಟ ಆಗುವ ಸಿನಿಮಾ ಕೊಡಲಿಲ್ಲ ಅಂದರೆ ಯಾರೂ ಬರಲ್ಲ. ಇಲ್ಲಿ ಪ್ರೇಕ್ಷಕರೇ ಬಾಸ್ಗಳು, ಅವರ ಅಭಿರುಚಿಗೆ ತಕ್ಕ ಸಿನಿಮಾ ಮಾಡಬೇಕು' ಎಂದು ಸಲಹೆ ನೀಡಿದ್ದಾರೆ.












Click it and Unblock the Notifications