ನಟ ದರ್ಶನ್ ಕೇಸ್ನ ರಿಯಾಲಿಟಿ ಮಾತನಾಡಿದ ರಿಯಲ್ ಸ್ಟಾರ್
ಇಂದು ರಿಯಲ್ ಸ್ಟಾರ್ ಉಪೇಂದ್ರ ಅವರ ಹುಟ್ಟುಹಬ್ಬ. ಎಲ್ಲೆಡೆ ಅವರ ಅಭಿಮಾನಿಗಳು ಈ ದಿನವನ್ನು ಸಂಭ್ರಮದಿಂದ ಕಳೆದಿದ್ದಾರೆ. ಇದೇ ಸಂದರ್ಭದಲ್ಲಿ ನಟ ಉಪೇಂದ್ರ ಅವರು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರ ಬಗ್ಗೆ ಮಾತನಾಡಿದ್ದಾರೆ.
ಉಪೇಂದ್ರ ಅವರು ಚಾನೆಲ್ಗಳಿಗೆ ನೀಡಿರುವ ಸಂದರ್ಶನದಲ್ಲಿ ದರ್ಶನ್ ಅವರನ್ನು ನೆನೆದಿದ್ದಾರೆ. ದರ್ಶನ್ ಅವರ ಘಟನೆಯಿಂದಾಗಿ ಎಲ್ಲರಿಗೂ ನೋವಾಗಿರುವುದು ಸತ್ಯ. ಈ ಪ್ರಕರಣದಲ್ಲಿ ಶೀಘ್ರದಲ್ಲೇ ತೀರ್ಪು ಬರಲಿದ್ದು, ಅದನ್ನು ಕಾದುನೋಡಬೇಕಷ್ಟೇ ಎಂದು ಹೇಳಿದ್ದಾರೆ.

ಕನ್ನಡ ಚಿತ್ರರಂಗದಲ್ಲಿರುವ ಎಲ್ಲರಿಗೂ ಈ ಘಟನೆಯಿಂದ ತುಂಬಾ ನೋವಾಗಿದೆ. ನಾವೆಲ್ಲ ಒಂದು ಕುಟುಂಬ ಇದ್ದಂತೆ ಇದ್ದೆವು. ಇಲ್ಲಿ ಸರಿ ತಪ್ಪು ಏನೇ ನಡೆದಿರಲಿ. ಎಲ್ಲರಿಗೂ ನೋವಂತೂ ಆಗಿದೆ. ಜನರಿಗೂ ಇದೇ ರೀತಿ ಆಗಿದೆ ಎಂದಿದ್ದಾರೆ.
ಈ ಘಟನೆ ಆಗಬಾರದಿತ್ತು ಎನ್ನುವುದು ಎಲ್ಲರಿಗೂ ಇದೆ. ಮಾಧ್ಯಮಗಳಲ್ಲಿ ಏನು ಬರುತ್ತಿದ್ದೆಯೋ ನಮಗೂ ಅಷ್ಟೇ ಗೊತ್ತಿರುವುದು. ಸದ್ಯ ಈ ಪ್ರಕರಣದ ತನಿಖೆ ನಡೆಯುತ್ತಿದೆ. ಈ ವಿಚಾರದಲ್ಲಿ ನಾವು ತೀರ್ಪು ಕೊಡಲು ಸಾಧ್ಯವಿಲ್ಲ. ಇದರಲ್ಲಿ ಅವರು ಸರಿ, ಇವರು ತಪ್ಪು ಎಂದು ಬೊಟ್ಟು ಮಾಡುವುದಕ್ಕೂ ಆಗಲ್ಲ. ಶೀಘ್ರದಲ್ಲೇ ತೀರ್ಪು ಬರಲಿದ್ದು, ಅದನ್ನು ನಾವೆಲ್ಲ ಒಪ್ಪಿಕೊಳ್ಳಲೇಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಮಗೆಲ್ಲ ಒಂದು ಕಾನೂನಿನ ವ್ಯವಸ್ಥೆ ಇದೆ. ನ್ಯಾಯಾಲಯಕ್ಕೆ ನಾವೆಲ್ಲ ಗೌರವ ನೀಡಲೇಬೇಕು. ಈ ಕೇಸ್ನಲ್ಲಿ ಒಂದು ಫಲಿತಾಂಶವಂತೂ ಬಂದೇ ಬರುತ್ತದೆ. ನಾವು ಅದನ್ನು ಕಾಯಲೇಬೇಕು. ನಾನು ಅದೇ ಕೆಲಸ ಮಾಡುತ್ತಿದ್ದೇನೆ ಎಂದು ಉಪೇಂದ್ರ ಮಾತನಾಡಿದ್ದಾರೆ.
ನಟ ಉಪೇಂದ್ರ ಹಾಗೂ ನಟ ದರ್ಶನ್ ಇಬ್ಬರೂ ಅನಾಥರು ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರ ಸಖತ್ ಮೋಡಿ ಕೂಡ ಮಾಡಿತ್ತು. ಬಳಿಕ ಇವರಿಬ್ಬರ ನಡುವೆ ಉತ್ತಮ ಒಡನಾಟವೂ ಇತ್ತು. ಆದರೆ, ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಅವರನ್ನು ಪೊಲೀಸರು ಬಂಧಿಸಿದ್ದ ವಿಚಾರ ಎಲ್ಲರಿಗೂ ಶಾಕ್ ನೀಡಿತ್ತು.

ಈ ಬಗ್ಗೆ ಉಪೇಂದ್ರ ಕೂಡ ಪ್ರತಿಕ್ರಿಯಿಸಿ, ಈ ಕೇಸ್ನಲ್ಲಿ ಪಾರದರ್ಶಕ ವಿಚಾರಣೆಗೆ ಒತ್ತಾಯ ಮಾಡಿದ್ದರು. ದರ್ಶನ್ - ರೇಣುಕಾಸ್ವಾಮಿ ಪ್ರಕರಣದಲ್ಲಿ ಪಾರದರ್ಶಕ ವಿಚಾರಣೆ ನಡೆಯಬೇಕು. ಪೊಲೀಸರು ಸಂಬಂಧಪಟ್ಟ ವ್ಯಕ್ತಿಗಳ ಕುಟುಂಬದವರ ಜೊತೆ ವಿಡಿಯೋ ದಾಖಲೆ, ಸಾಕ್ಷಿಗಳನ್ನು ಹಂಚಿಕೊಳ್ಳಬೇಕು. ಅದೊಂದು ಕಾನೂನಾಗಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದರು.
ಈ ಹಿಂದೆ ಪೊಲೀಸರು ವಿಚಾರಣೆಯ ವಿವರ ಬರೆದು ದಾಖಲಿಸಬೇಕಾಗಿತ್ತು. ಆದರೆ ಈಗ ತಂತ್ರಜ್ಞಾನ ಬಹಳ ಮುಂದುವರೆದಿದ್ದು, ಎಲ್ಲವನ್ನೂ ವೀಡಿಯೋ ರೆಕಾರ್ಡ್ ಮತ್ತು ಲೈವ್ ಸ್ಟ್ರೀಮಿಂಗ್ ಮಾಡಬಹುದು. ಅದೇ ರೀತಿ ಒಬ್ಬ ಸಾರ್ವಜನಿಕ ವ್ಯಕ್ತಿಯ ಬಗ್ಗೆ ಕೇಸ್ ಆಗಿದ್ದರೆ, ಆ ಕೇಸ್ನ ವಿಚಾರಣೆಯ ವೀಡಿಯೋ ದಾಖಲೆಗಳನ್ನು ಮತ್ತು ಸಾಕ್ಷಿಗಳ ಎಲ್ಲಾ ವಿವರಗಳನ್ನು ಪೋಲೀಸರು ಆಗಾಗ ಸಾರ್ವಜನಿಕವಾಗಿ ತೆರೆದಿಡಬೇಕು ಎಂದು ಒತ್ತಾಯಿಸಿದ್ದರು.
ಒಬ್ಬ ಸಾರ್ವಜನಿಕ ವ್ಯಕ್ತಿಯ ವಿಚಾರಣೆ ಸಾರ್ವಜನಿಕವಾಗಿಯೇ ಸಂಪೂರ್ಣ ಪಾರದರ್ಶಕತೆಯಿಂದ ಆಗಬೇಕು. ಸಾಕ್ಷಿ ನಾಶ, ಪ್ರಭಾವಿಗಳ ಹಸ್ತಕ್ಷೇಪ, ಭ್ರಷ್ಟಾಚಾರ ಈ ಎಲ್ಲದಕ್ಕೂ ತೆರೆ ಎಳೆದಂತಾಗುತ್ತದೆ. ಆಗಲೇ ರೇಣುಕಾಸ್ವಾಮಿ ಕುಟುಂಬಕ್ಕೆ, ಜನರಿಗೆ, ಟಿವಿ ಮಾಧ್ಯಮಗಳಿಗೆ ಮತ್ತು ದರ್ಶನ್ ಅಭಿಮಾನಿಗಳಿಗೆ ಮನಸಿನಲ್ಲಿ ಗೊಂದಲಗಳಿರುವುದಿಲ್ಲ. ಇದರಿಂದ ಪೋಲೀಸ್ ವ್ಯವಸ್ಥೆ ಹಾಗೂ ಮಾಧ್ಯಮಗಳ ಬಗ್ಗೆಯೂ ಗೌರವ ಹೆಚ್ಚಾಗುತ್ತದೆ. ಜನರಿಗೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಬರುತ್ತದೆ ಎಂದು ವಿವರಿಸಿದ್ದರು.












Click it and Unblock the Notifications