ಡಿಬಾಸ್ ಶಿಕ್ಷೆ ಅನುಭವಿಸೋದು ನೋಡೋಕೆ ಆಗ್ತಿಲ್ಲ: ಸಾಕ್ಷಿಗೆ ಬೆದರಿಕೆ ಹಾಕಲು ಶಾಕಿಂಗ್ ಕಾರಣ ಬಿಚ್ಚಿಟ್ಟ ‘ಡಿ ಕಂಪನಿ’ ಅಡ್ಮಿನ್
ಸ್ಯಾಂಡಲ್ವುಡ್ ನಟ ದರ್ಶನ್ ತೂಗುದೀಪ ಸಿಲುಕಿಕೊಂಡಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಕಾನೂನು ಪ್ರಕ್ರಿಯೆಗಳು ಚುರುಕಾಗಿ ನಡೆಯುತ್ತಿರುವಾಗಲೇ, ದರ್ಶನ್ ಅಭಿಮಾನಿಗಳು ಕಾನೂನು ಕೈಗೆತ್ತಿಕೊಂಡಿರುವ ಗಂಭೀರ ಆರೋಪ ಕೇಳಿಬಂದಿದೆ. ಪ್ರಕರಣದ ಪ್ರಮುಖ ಸಾಕ್ಷಿಯೊಬ್ಬರಿಗೆ ಕೋರ್ಟ್ನಲ್ಲಿ ದರ್ಶನ್ ವಿರುದ್ಧ ಸಾಕ್ಷಿ ಹೇಳದಂತೆ ಬೆದರಿಕೆ ಹಾಕಿದ ಆರೋಪದ ಮೇಲೆ ಕಾಮಾಕ್ಷಿಪಾಳ್ಯ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಈ ಹೊಸ ಬೆಳವಣಿಗೆಯಿಂದಾಗಿ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಂತಾಗಿದ್ದು, ನ್ಯಾಯಾಂಗ ಪ್ರಕ್ರಿಯೆಯನ್ನು ಹಳಿ ತಪ್ಪಿಸಲು ಯತ್ನಿಸಲಾಗುತ್ತಿದೆಯೇ ಎಂಬ ಅನುಮಾನ ಮೂಡಿದೆ.
ಏನಿದು ಆರೋಪ?
ಪೊಲೀಸರು ನೀಡಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಂದೀಪ್ ಎಂಬುವವರು 49ನೇ ಸಾಕ್ಷಿಯಾಗಿದ್ದಾರೆ. ದರ್ಶನ್ ವಿರುದ್ಧ ನ್ಯಾಯಾಲಯದಲ್ಲಿ ಈತ ಸಾಕ್ಷಿ ಹೇಳಬಾರದು ಎಂದು ಆರೋಪಿಗಳು ಸ್ಕೆಚ್ ಹಾಕಿದ್ದರು. ಮಾತುಕತೆ ನಡೆಸುವ ನೆಪದಲ್ಲಿ ಸಂದೀಪ್ ಅವರನ್ನು ಒಂದು ಜಾಗಕ್ಕೆ ಕರೆಸಿಕೊಂಡಿದ್ದ ಈ ಕಿರಾತಕರು, ಬಳಿಕ ಅವರನ್ನು ಬಲವಂತವಾಗಿ ಕಾರಿನೊಳಗೆ ಕೂರಿಸಿಕೊಂಡಿದ್ದಾರೆ. ಕಾರಿನಲ್ಲಿ ವಿವಿಧ ರಸ್ತೆಗಳಲ್ಲಿ ಸುತ್ತಾಡಿಸುತ್ತಾ, ದರ್ಶನ್ ವಿರುದ್ಧ ಸಾಕ್ಷಿ ನೀಡದಂತೆ ತೀವ್ರ ಒತ್ತಡ ಹೇರಿದ್ದಾರೆ. ಆದರೆ ಇದಕ್ಕೆ ಸಂದೀಪ್ ಒಪ್ಪದಿದ್ದಾಗ, ಆರೋಪಿಗಳ ಪೈಕಿ ಸುಹಾಸ್ ಎಂಬಾತ ಜೈಲಿನಲ್ಲಿರುವ ನಟ ದರ್ಶನ್ ಹೆಸರೆತ್ತಿ ನೇರವಾಗಿ ಜೀವ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

'ಡಿ ಕಂಪನಿ' ಅಡ್ಮಿನ್ ಅರೆಸ್ಟ್
ಈ ಆಘಾತಕಾರಿ ಘಟನೆಯ ಬೆನ್ನಲ್ಲೇ ಧೈರ್ಯಗೆಡದ ಸಾಕ್ಷಿದಾರ ಸಂದೀಪ್, ತಕ್ಷಣವೇ ನ್ಯಾಯಾಲಯದ ಮುಂದೆ ತನಗಾದ ಅನುಭವ ಮತ್ತು ಬೆದರಿಕೆಯ ಕುರಿತು ಜವಾಬ್ದಾರಿಯುತ ಹೇಳಿಕೆ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಅಲರ್ಟ್ ಆದ ಪೊಲೀಸರು ಆರೋಪಿಗಳ ಪತ್ತೆಗೆ ವಿಶೇಷ ತನಿಖಾ ತಂಡವನ್ನು ರಚಿಸಿ ಕಾರ್ಯಾಚರಣೆ ಆರಂಭಿಸಿದ್ದರು.
ಪೊಲೀಸರ ಸರಣಿ ದಾಳಿಯ ಬೆನ್ನಲ್ಲೇ ಸಾಕ್ಷಿಗೆ ಬೆದರಿಕೆ ಹಾಕಿದ ಮೂವರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಬಂಧಿತರನ್ನು ವೇಣು, ಸುಹಾಸ್ ಮತ್ತು ಪುನೀತ್ ಎಂದು ಗುರುತಿಸಲಾಗಿದೆ. ಬಂಧಿತರ ಪೈಕಿ ಪುನೀತ್ ಎಂಬಾತ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಜನಪ್ರಿಯವಾಗಿರುವ ದರ್ಶನ್ ಅಭಿಮಾನಿಗಳ 'ಡಿ ಕಂಪನಿ' (D Company) ಫ್ಯಾನ್ ಪೇಜ್ ಅನ್ನು ನಿರ್ವಹಿಸುತ್ತಿದ್ದ ಅಡ್ಮಿನ್ ಎಂದು ತಿಳಿದುಬಂದಿದೆ. ಸಾಮಾಜಿಕ ತಾಣಗಳಲ್ಲಿ ಈತ ಸದಾ ಸಕ್ರಿಯನಾಗಿದ್ದ. ಇನ್ನುಳಿದ ಇಬ್ಬರು ಆರೋಪಿಗಳಾದ ವೇಣು ಮತ್ತು ಸುಹಾಸ್ ತುಮಕೂರು ಮೂಲದ ದರ್ಶನ್ ಅಭಿಮಾನಿ ಸಂಘದ ಸಕ್ರಿಯ ಸದಸ್ಯರು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಆರೋಪಿಗಳು ಬಾಯ್ಬಿಟ್ಟಿದ್ದೇನು?
"ನಮ್ಮ ನೆಚ್ಚಿನ ನಟ ಡಿಬಾಸ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವುದನ್ನು ನಮಗೆ ನೋಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಹೇಗಾದರೂ ಮಾಡಿ ಅವರನ್ನು ಕೇಸ್ನಿಂದ ಹೊರಗೆ ತರಬೇಕೆಂಬ ಉದ್ದೇಶದಿಂದ ಸಾಕ್ಷಿಗೆ ಹೆದರಿಸಿದ್ದೆವು" ಎಂದು ಆರೋಪಿಗಳು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ ಎನ್ನಲಾಗಿದೆ. ಪ್ರಕರಣದ ಪ್ರಮುಖ ಸಾಕ್ಷಿಗೆ ಬೆದರಿಕೆ ಬಂದಿರುವುದರಿಂದ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಬಂಧಿತ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ಸತತ ವಿಚಾರಣೆ ನಡೆಸಲಾಗುತ್ತಿದೆ. ಇವರ ಹಿಂದೆ ಬೇರೆ ಯಾರಾದರೂ ಪ್ರಭಾವಿ ವ್ಯಕ್ತಿಗಳ ಕೈವಾಡವಿದೆಯೇ ಅಥವಾ ಜೈಲಿನಿಂದಲೇ ಏನಾದರೂ ಸೂಚನೆಗಳು ಬಂದಿದ್ದವೇ ಎಂಬ ಕೋನದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದೇ ವೇಳೆ ಮುನ್ನೆಚ್ಚರಿಕೆ ಕ್ರಮವಾಗಿ ಪ್ರಕರಣದ ಪ್ರಮುಖ ಸಾಕ್ಷಿದಾರರ ಸುರಕ್ಷತೆ ಮತ್ತು ಭದ್ರತೆಯನ್ನು ಪೊಲೀಸರು ಮತ್ತಷ್ಟು ಬಿಗಿಗೊಳಿಸಿದ್ದಾರೆ.













Click it and Unblock the Notifications