'ಲಿಂಗಾಯತ' ಕಾರ್ಡ್ ಕಾಂಗ್ರೆಸ್ಸಿಗೆ ಹಿನ್ನಡೆಯಾಯಿತೆ?
ಬೆಂಗಳೂರು, ಮೇ 15 : ಲಿಂಗಾಯತ ಮತ್ತು ವೀರಶೈವರನ್ನು ವಿಭಜಿಸಿ, ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಿದ್ದು ಕಾಂಗ್ರೆಸ್ಸಿಗೆ ಮುಳುವಾಗಿದೆಯೆ? ಮತಎಣಿಕೆಯ ಬೆಳಗಿನ ಟ್ರೆಂಡ್ ನೋಡಿದರೆ ಅನುಮಾನ ಇಲ್ಲವೇ ಇಲ್ಲ.
ಲಿಂಗಾಯತಕ್ಕೆ ಅಲ್ಪಸಂಖ್ಯಾತ ಪಟ್ಟ ನೀಡಿದ್ದು ಕಾಂಗ್ರೆಸ್ಸಿಗೆ ಬ್ಯಾಕ್ ಫೈರ್ ಆಗಿದೆ. ಇದರ ಬಗ್ಗೆ ತಲೆ ಕೆಡಿಸಿಕೊಳ್ಳದ ಲಿಂಗಾಯತರು, ಕಾಂಗ್ರೆಸ್ ನಿರ್ಣಯದ ಬಗ್ಗೆ ಸಿಟ್ಟಿಗೆದ್ದಿದ್ದ ಲಿಂಗಾಯತರು ಮತ್ತು ಯಡಿಯೂರಪ್ಪನವರ ನಾಯಕತ್ವದಲ್ಲಿ ನಂಬಿಕೆ ಇಟ್ಟಿದ್ದ ಲಿಂಗಾಯತರು ಬಿಜೆಪಿಗೆ ಮತ ಹಾಕಿರುವುದು ಸ್ಪಷ್ಟವಾಗಿದೆ.
LIVE: ಕರ್ನಾಟಕ ಚುನಾವಣೆ 2018, ಮತಎಣಿಕೆ ಅಪ್ಡೇಟ್ಸ್
ಲಿಂಗಾಯರರು ಹೆಚ್ಚಿನ ಸಂಖ್ಯೆಯಲ್ಲಿರುವ ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಕೇಂದ್ರ ಕರ್ನಾಟಕ ಪ್ರಾಂತ್ಯದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ ಹಿಂದೆ ಬಿದ್ದಿದೆ. ಬೆಂಗಳೂರು ಮತ್ತು ಮೈಸೂರು ಪ್ರಾಂತ್ಯದಲ್ಲಿ ಮಾತ್ರ ಜೆಡಿಎಸ್ ಮುನ್ನಡೆ ಸಾಧಿಸಿದೆ.
ಮುಂಬೈ ಕರ್ನಾಟಕದಲ್ಲಿ 29 ಕ್ಷೇತ್ರಗಳಲ್ಲಿ ಬಿಜೆಪಿ ಮುಂದಿದ್ದರೆ, ಕಾಂಗ್ರೆಸ್ ಅದರ ಅರ್ಧದಷ್ಟು ಕ್ಷೇತ್ರಗಳಲ್ಲಿ ಮಾತ್ರ ಮುಂದಿದೆ. ಇನ್ನು ಹೈದರಾಬಾದ್ ಕರ್ನಾಟಕದಲ್ಲಿ ಬಿಜೆಪಿ 17ರಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ ಕೇವಲ 7ರಲ್ಲಿ ಮುನ್ನಡೆ ಕಂಡಿದೆ.
ಲಿಂಗಾಯತ ಪ್ರತ್ಯೇಕ ಧರ್ಮ ಚಳವಳಿಯ ನೇತೃತ್ವ ವಹಿಸಿದ್ದ ಎಂಬಿ ಪಾಟೀಲ (ಬಬಲೇಶ್ವರ) ಅವರು ಮುನ್ನಡೆ ಸಾಧಿಸಿದ್ದರೆ, ಕರ್ನಾಟಕದಾದ್ಯಂತ ಭಾರೀ ಹವಾ ಎಬ್ಬಿಸಿದ್ದ ವಿನಯ ಕುಲಕರ್ಣಿ ಅವರು ಧಾರವಾಡ ಕ್ಷೇತ್ರದಲ್ಲಿ ಭಾರೀ ಹಿನ್ನಡೆ ಸಾಧಿಸಿದ್ದಾರೆ. ಆದರೆ, ಈ ಕುರಿತಂತೆ ತಟಸ್ಥರಾಗಿದ್ದ ಯಡಿಯೂರಪ್ಪನವರು ಶಿಕಾರಿಪುರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಈ ಟರ್ನ್ ಅರೌಂಡ್ ಗೆ ಕಾರಣವಾದರೂ ಏನು? ಲಿಂಗಾಯತ ಮತಗಳನ್ನು ಉಳಿಸಿಕೊಳ್ಳುವಲ್ಲಿ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ ಮತ್ತು ಅಮಿತ್ ಶಾ ಅವರು ಲಿಂಗಾಯತ ಮಠಗಳಿಗೆ ಭೇಟಿ ನೀಡಿ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿರುವದು ಸ್ಪಷ್ಟವಾಗಿ ಕಾಣಿಸುತ್ತಿದೆ.