ಐತಿಹಾಸಿಕ ಗೆಲುವ ಸನಿಹದಲ್ಲಿ ಬಿಜೆಪಿ, ಕರ್ನಾಟಕದಾದ್ಯಂತ ಕೇಸರಿ ರಂಗೋರಂಗು
ಬೆಂಗಳೂರು, ಮೇ 15 : ಮತ್ತೆ ಅಧಿಕಾರ ಸ್ಥಾಪಿಸುವ ಆತ್ಮವಿಶ್ವಾಸದಿಂದ ಭಾರೀ ಮೆರೆದಾಡುತ್ತಿದ್ದ ಕಾಂಗ್ರೆಸ್ಸಿಗೆ ಭಾರತೀಯ ಜನತಾ ಪಕ್ಷ ಮುಟ್ಟಿ ನೋಡಿಕೊಳ್ಳುವಂಥ ಹೊಡೆತ ನೀಡಿದ್ದು, ಬೆಳಿಗ್ಗೆ 11 ಗಂಟೆಯ ಟ್ರೆಂಡ್ ಪ್ರಕಾರ ಬಿಜೆಪಿ ದಿಗ್ವಿಜಯದ ಹಾದಿಯಲ್ಲಿದೆ.
ಇದೇ ಟ್ರೆಂಡ್ ಮುಂದುವರಿದರೆ ಶಿಕಾರಿಪುರದಲ್ಲಿಯೂ ಗೆಲುವಿನ ಸನಿಹದಲ್ಲಿರುವ 75 ವರ್ಷದ ಯಡಿಯೂರಪ್ಪನವರು ಮೂರನೇ ಬಾರಿ ಮುಖ್ಯಮಂತ್ರಿಯಾಗುವುದು ಹೆಚ್ಚೂಕಡಿಮೆ ಗ್ಯಾರಂಟಿ. ಚಾಮುಂಡೇಶ್ವರಿಯಲ್ಲಿ ಹೀನಾಯ ಸೋಲು ಕಾಣುತ್ತಿರುವ ಸಿದ್ದರಾಮಯ್ಯನವರು ವಿರೋಧ ಪಕ್ಷದ ನಾಯಕರಾಗುವುದು ಕೂಡ ಗ್ಯಾರಂಟಿ.
222 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಹುಮತಕ್ಕೆ ಬೇಕಿರುವುದು 112 ಸ್ಥಾನಗಳು. ಖಾಸಗಿ ವಾಹಿನಿಗಳ ಪ್ರಕಾರ ಬಿಜೆಪಿಗೆ 118 ಕ್ಷೇತ್ರಗಳಲ್ಲಿ ಮುನ್ನಡೆಯಿದೆ. 9 ಗಂಟೆಯ ಸುಮಾರಿಗೆ ಬಿಜೆಪಿಗೆ ನೆಕ್ ಟು ನೆಕ್ ಫೈಟ್ ನೀಡುತ್ತಿದ್ದ ಕಾಂಗ್ರೆಸ್ 60 ಸ್ಥಾನಗಳಲ್ಲಿ ಮುಂದಿದೆ. ಜೆಡಿಎಸ್ ಅಚ್ಚರಿ ಮೂಡಿಸಿದ್ದು, 42 ಕ್ಷೇತ್ರಗಳಲ್ಲಿ ಮುಂದಿದೆ.

ಬಿಜೆಪಿಯ ಈ ಮುನ್ನಡೆಯನ್ನು ನೋಡಿದರೆ ಯಡಿಯೂರಪ್ಪನವರ ಪರಿವರ್ತನೆ ಯಾತ್ರೆ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಲಿಂಗಾಯತ ಮಠಗಳಿಗೆ ಎಡತಾಕಿದ್ದು, ಎಲ್ಲಕ್ಕಿಂತ ಹೆಚ್ಚಾಗಿ ಪ್ರಧಾನಿ ನರೇಂದ್ರ ಮೋದಿಯವರು ಕಡೆಯ 5 ದಿನಗಳಲ್ಲಿ 17 ಸಮಾವೇಶಗಳಲ್ಲಿ ಸುನಾಮಿಯಂತೆ ಭಾಷಣ ಮಾಡಿದ್ದು, ಕಾಂಗ್ರೆಸ್ಸನ್ನು ಧೂಳಿಪಟವಾಗುವಂತೆ ಮಾಡಿದೆ.












Click it and Unblock the Notifications