ಕುಮಾರಸ್ವಾಮಿ ಯಾವ ದಿಕ್ಕಿನಲ್ಲಿ ಬಾಣ ಬಿಡುತ್ತಾರೋ, ಬಲ್ಲವರಾರು?

ಈ ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಶಸ್ತ್ರಾಸ್ತ್ರಗಳನ್ನಿಟ್ಟುಕೊಂಡೂ ಭಾರೀ ಹೋರಾಟದ ಯುದ್ಧ ಮಾಡಿದವರೆಂದರೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ. ಈ ಚುನಾವಣೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳಿಗಿಂತ ಮೊದಲೇ ಸಿದ್ಧತೆಯನ್ನು ಆರಂಭಿಸಿದವರೂ ಕುಮಾರಸ್ವಾಮಿಯವರು.

ಚುನಾವಣಾಪೂರ್ವ ಸಮೀಕ್ಷೆಯಾಗಲಿ, ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶ ಬಂದ ನಂತರ ಒಂದು ಸಂಗತಿ ಅತ್ಯಂತ ಸ್ಪಷ್ಟವಾಗಿದ್ದೇನೆಂದರೆ, ಈ ಚುನಾವಣೆಯಲ್ಲಿ ಮತ್ತು ಸರಕಾರ ಸ್ಥಾಪನೆಯಲ್ಲಿ ಜೆಡಿಎಸ್ ಪ್ರಮುಖ ಪಾತ್ರ ವಹಿಸಲಿದೆ ಎಂಬುದು. ಇದನ್ನು ಎರಡೂ ರಾಷ್ಟ್ರೀಯ ಪಕ್ಷಗಳು ಅಲ್ಲಗಳೆಯುತ್ತವಾದರೂ, ನಿರ್ಲಕ್ಷಿಸುವಂತಿಲ್ಲ.

ಈಗ ಮಾತ್ರವಲ್ಲ ಚುನಾವಣೆ ಪ್ರಕ್ರಿಯೆ ಆರಂಭಕ್ಕೂ ಮುಂಚಿನಿಂದಲೇ, ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ಸ್ಪಷ್ಟ ಬಹುಮತ ಗಳಿಸಲು ಪರದಾಡುತ್ತವೆ ಎಂಬುದು ಸ್ಪಷ್ಟವಾಗಿತ್ತು. ಆಗಿನ ಪರಿಸ್ಥಿತಿ, ಎರಡೂ ಪಕ್ಷಗಳಲ್ಲಿನ ಸಾಮರ್ಥ್ಯಗಳನ್ನು ಲೆಕ್ಕ ಹಾಕಿ ನೋಡಿದರೆ, ಎರಡಕ್ಕೂ ಸ್ಪಷ್ಟ ಬಹುಮತ ಸಿಗುವಂತೆಯೇ ಇರಲಿಲ್ಲ.

ಇದನ್ನು ಮನಗಂಡೇ ರಾಜಕೀಯ ಪಂಡಿತರು ಕುಮಾರಸ್ವಾಮಿಯವರು ಈ ಚುನಾವಣೆಯಲ್ಲಿ ಕಿಂಗ್ ಮೇಕರ್ ಆಗೇ ಆಗುತ್ತಾರೆ ಎಂದು ಹೇಳಿದ್ದು. ಇದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲದ ಕುಮಾರಸ್ವಾಮಿಯವರು ನಾನು ಕಿಂಗ್ ಮೇಕರ್ ಅಲ್ಲ, ನಾನೇ ಕಿಂಗ್ ಆಗುತ್ತೇನೆ ನೋಡುತ್ತಿರಿ ಎಂದು ಎದೆತಟ್ಟಿಕೊಂಡು ಹೇಳಿದ್ದರು.

ಘಟಾನುಘಟಿ ನಾಯಕರುಗಳಿಲ್ಲದಿದ್ದರೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಬಲದಿಂದಲೇ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳಿಗೆ ಸೆಡ್ಡುಹೊಡೆದಿರುವುದು ಸಣ್ಣ ಮಾತಲ್ಲ. ಫಲಿತಾಂಶ ಪ್ರಕಟವಾಗಲು ಕೆಲವೇ ಗಂಟೆಗಳು ಬಾಕಿಯಿರುವಾಗ ಕುಮಾರಸ್ವಾಮಿಯವರು ಏನು ಪಾತ್ರ ವಹಿಸುತ್ತಾರೆ ಎಂಬುದು ಎಲ್ಲರಲ್ಲೂ ಕುತೂಹಲದ ಸಂಗತಿಯಾಗಿದೆ.

ಸಿಂಗಪುರದಲ್ಲಿ ಕುಮಾರಸ್ವಾಮಿಗೆ 'ಚಿಕಿತ್ಸೆ'

ಸಿಂಗಪುರದಲ್ಲಿ ಕುಮಾರಸ್ವಾಮಿಗೆ 'ಚಿಕಿತ್ಸೆ'

ಸದ್ಯಕ್ಕಂತೂ 'ಚಿಕಿತ್ಸೆ' ಪಡೆಯುವ ಸಲುವಾಗಿ ತಮ್ಮ ಮಗ ನಿಖಿಲ್ ಗೌಡ ಜೊತೆ ಸಿಂಗಪುರಕ್ಕೆ ನೆಗೆದಿರುವ ಕುಮಾರಸ್ವಾಮಿಯವರು ಏನು ಮಾಡಲಿದ್ದಾರೆ, ಅವರ ಮನದಲ್ಲೇನಿದೆ, ಏನೇನು ಲೆಕ್ಕಾಚಾರ ಹಾಕಿದ್ದಾರೆ ಎಂಬುದು ನಿಗೂಢವಾಗಿದೆ. ಬಲ್ಲ ಮಾಹಿತಿಯ ಪ್ರಕಾರ, ಸಿಂಗಪುರದಲ್ಲಿಯೇ ಅವರ ಜೊತೆ ಬಿಜೆಪಿಯ ಕೆಲ ನಾಯಕರು ಭರ್ಜರಿ 'ಮಾತುಕತೆ' ನಡೆಸಿದ್ದಾರೆ. ಅಲ್ಲಿ ಏನೇನು 'ಚಿಕಿತ್ಸೆ' ನಡೆದಿದೆ ಎಂಬುದು ಮೇ 15ರಂದು ಫಲಿತಾಂಶ ಪ್ರಕಟವಾದ ನಂತರವೇ ದೃಗ್ಗೋಚರವಾಗಲಿದೆ.

ಕುಮಾರಣ್ಣ ಮುಖ್ಯಮಂತ್ರಿಯಾಗುವುದು ಗೌಡರ 'ಆಸೆ'

ಕುಮಾರಣ್ಣ ಮುಖ್ಯಮಂತ್ರಿಯಾಗುವುದು ಗೌಡರ 'ಆಸೆ'

ಮುಖ್ಯಮಂತ್ರಿಯಾಗಲು ಎಚ್ ಡಿ ಕುಮಾರಸ್ವಾಮಿಯವರಿಗೆ ಇದು ಬಹುಶಃ ಸಿಕ್ಕಂತಹ ಮತ್ತೊಂದು ಅದ್ಭುತ ಮತ್ತು ಕಟ್ಟಕಡೆಯ ಅವಕಾಶ. ಜೊತೆಗೆ ಅವರ ತಂದೆಯವರಾದ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಕುಮಾರಸ್ವಾಮಿಯವರನ್ನು ಜನರೇ ಆಶೀರ್ವದಿಸಿ ಮುಖ್ಯಮಂತ್ರಿ ಸ್ಥಾನದಲ್ಲಿ ಕೂಡಿಸಬೇಕು ಎಂದು ರಾಜ್ಯದ ಜನರೆದುರಿಗೆ ತಮ್ಮ 'ಆಸೆ'ಯನ್ನು ವ್ಯಕ್ತಪಡಿಸಿದ್ದಾರೆ. ಹೀಗೇ ಆಗುತ್ತದೆಂದು ದಂಡುದಂಡು ಜ್ಯೋತಿಷಿಗಳಿರಲಿ ಆ ಭಗವಂತ ಕೂಡ ಊಹಿಸಲಾರದ ಪರಿಸ್ಥಿತಿ ನಿರ್ಮಾಣವಾಗಿದೆ.

ಮೈತ್ರಿಯ ಬಗ್ಗೆ ಅಜೀಬಾತ್ ಮಾತು ಎತ್ತಿಲ್ಲ

ಮೈತ್ರಿಯ ಬಗ್ಗೆ ಅಜೀಬಾತ್ ಮಾತು ಎತ್ತಿಲ್ಲ

ಚುನಾವಣಾ ಪ್ರಚಾರದುದ್ದಕ್ಕೂ ಕುಮಾರಸ್ವಾಮಿಯವರು ಮೈತ್ರಿಯ ಬಗ್ಗೆ ಅಜೀಬಾತ್ ಮಾತು ಎತ್ತಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ಸನ್ನು ಸರಿಸಮಾನವಾಗಿ ಬಾರಿಸುತ್ತಲೇ ಬಂದಿರುವ ಅವರು, ಜೆಡಿಎಸ್ ಎಂದೂ ಕಿಂಗ್ ಮೇಕರ್ ಆಗಲ್ಲ, ಕಿಂಗ್ ಆಗುತ್ತದೆ ಎಂದೇ ಹೇಳಿದ್ದಾರೆ. ಈ ರಾಜ್ಯದ ಜನತೆ ಪ್ರಾದೇಶಿಕ ಪಕ್ಷಕ್ಕೆ ಬಹುಮತ ನೀಡಿಯೇ ನೀಡುತ್ತಾರೆ ಎಂದು ವಿಶ್ವಾಸದಿಂದ ಮತ್ತು ಭಾವುಕತೆಯಿಂದ ಹೇಳಿದ್ದಾರೆ. ಮತದಾರರು ಕುಮಾರಸ್ವಾಮಿಯವರು ಸುರಿಸಿದ ಕಣ್ಣೀರಿಗೆ ಸ್ಪಂದಿಸಿದ್ದಾರಾ?

ಕಡೆ ಘಳಿಗೆಯಲ್ಲಿ ಸಣ್ಣ ಟ್ವಿಸ್ಟ್ ಕೊಟ್ಟಿರುವ ಕುಮಾರಣ್ಣ

ಕಡೆ ಘಳಿಗೆಯಲ್ಲಿ ಸಣ್ಣ ಟ್ವಿಸ್ಟ್ ಕೊಟ್ಟಿರುವ ಕುಮಾರಣ್ಣ

ಆದರೆ, ಕಡೆ ಘಳಿಗೆಯಲ್ಲಿ ತಮ್ಮ ತತ್ತ್ವವನ್ನು ಯಾರು ಒಪ್ಪುತ್ತಾರೋ ಮತ್ತು ಪ್ರಣಾಳಿಕೆಯನ್ನು ಯಾರು ಅನುಮೋದಿಸುತ್ತಾರೋ ಅವರು ತಮ್ಮ ಜೊತೆ ಬರಬಹುದು ಎಂದು ಸಣ್ಣ ಟ್ವಿಸ್ಟ್ ಕೊಟ್ಟಿದ್ದಾರೆ, ಮುಂದಾಗಬಹುದಾಗ ಬೆಳವಣಿಗೆಗಳಿಗೆ ಹಿಂಟ್ ನೀಡಿದ್ದಾರೆ. ಆದರೆ, ತಾವು ಇಂಥವರೊಂದಿಗೆ ಕೈಜೋಡಿಸುವುದಾಗಿ ಎಲ್ಲಿಯೂ ಹೇಳಿಲ್ಲ. ದೇವೇಗೌಡರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಕುಮಾರಸ್ವಾಮಿಯೇನಾದರೂ ಬಿಜೆಪಿ ಜೊತೆ ಕೈಜೋಡಿಸಿದರೆ ಅವರನ್ನು ಪಕ್ಷದಿಂದಲೇ ಹೊರಹಾಕುವುದಾಗಿ ಧಮ್ಕಿ ನೀಡಿದ್ದರು. ಆದರೆ, ಇದೆಲ್ಲ ಆಗುವ ಮಾತೆ?

ಮಣ್ಣಿನ ಮಗನಿಗೆ ಒಂದು ಅವಕಾಶ ಕೊಟ್ಟು ನೋಡಿ

ಮಣ್ಣಿನ ಮಗನಿಗೆ ಒಂದು ಅವಕಾಶ ಕೊಟ್ಟು ನೋಡಿ

ಪ್ರಜ್ವಲ್ ರೇವಣ್ಣನಂಥ ಬಿಸಿರಕ್ತದ ಯುವಕರ ಹತೋಟಿಗೆ ಪಕ್ಷವನ್ನು ಸದ್ಯಕ್ಕೆ ಬಿಟ್ಟುಕೊಡಲು ಒಪ್ಪದ ಕುಮಾರಸ್ವಾಮಿ ಅವರು, ಚನ್ನಪಟ್ಟಣದಿಂದಲೂ ಸ್ಪರ್ಧಿಸಿ ಪಕ್ಷದ ಕಾರ್ಯಕರ್ತರಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ. ಈ ಮಣ್ಣಿನ ಮಗನಿಗೆ ಒಂದು ಅವಕಾಶ ಕೊಟ್ಟು ನೋಡಿ ಎಂದು ಭಾವನಾತ್ಮಕವಾಗಿ ಮತದಾರರನ್ನು ಸೆಳೆಯಲು ಕುಮಾರಸ್ವಾಮಿ ಯತ್ನಿಸಿದ್ದಾರೆ. ಇದು ಎಷ್ಟು ಪ್ರಭಾವ ಬೀರಿದೆ, ಮತಗಳಾಗಿ ಎಷ್ಟು ಪರಿವರ್ತಿತವಾಗಿದೆ ಎಂಬುದು ಮೇ 15ರಂದು ಮಂಗಳವಾರ ತಿಳಿದುಬರಲಿದೆ.

ಕುಮಾರಣ್ಣದ ಬತ್ತಳಿಕೆಯಲ್ಲಿ ವಿಭಿನ್ನ ಅಸ್ತ್ರ

ಕುಮಾರಣ್ಣದ ಬತ್ತಳಿಕೆಯಲ್ಲಿ ವಿಭಿನ್ನ ಅಸ್ತ್ರ

ಒಂದು ವೇಳೆ ಜೆಡಿಎಸ್ಸಿಗೆ ಮಾತ್ರವಲ್ಲ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದಿದ್ದರೆ ಹೆಚ್ಚು ಆಯ್ಕೆಗಳಿರುವುದು, ಭಿನ್ನವಿಭಿನ್ನ ಅಸ್ತ್ರಗಳಿರುವುದು ಜೆಡಿಎಸ್ ಬತ್ತಳಿಕೆಯಲ್ಲಿಯೇ. ಕುಮಾರಸ್ವಾಮಿಯವರು ಯಾವ ಅಸ್ತ್ರವನ್ನು, ಯಾವ ಸಮಯದಲ್ಲಿ, ಯಾವ ದಿಕ್ಕಿನಲ್ಲಿ ಪ್ರಯೋಗಿಸುತ್ತಾರೋ ಬಲ್ಲವರಾರು? ಆದರೆ, ಬಿಜೆಪಿ ಅಥವಾ ಕಾಂಗ್ರೆಸ್ಸಿಗೆ ಸ್ಪಷ್ಟ ಬಹುಮತ ಸಿಕ್ಕರೆ ಅಥವಾ ಹತ್ತಿರ ಬಂದರೆ ಆ ಅಸ್ತ್ರಗಳು ಬತ್ತಳಿಕೆಯಲ್ಲಿಯೇ ಉಳಿಯಬೇಕಾಗುತ್ತದೆ. ಆ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.

ಸಂಕೋಲೆ ಬಿಡಿಸಲು ಅಮಿತ್ ಶಾ ತಂತ್ರ

ಸಂಕೋಲೆ ಬಿಡಿಸಲು ಅಮಿತ್ ಶಾ ತಂತ್ರ

ಇದೆಲ್ಲದರ ನಡುವೆ ಮತ್ತೊಂದು ಕೊಕ್ಕೆಯಿದೆ. ಅದೇನೆಂದರೆ, ಬಹುಜನ ಸಮಾಜವಾದಿ ಪಕ್ಷ. ಬಿಎಸ್ಪಿ ಹೆಚ್ಚು ಸ್ಥಾನ ಗೆಲ್ಲುತ್ತವೆಂಬ ನಿರೀಕ್ಷೆ ಇಲ್ಲವಾದರೂ, ಮುಂಬರುವ ಲೋಕಸಭೆ ಚುನಾವಣೆ ದೃಷ್ಟಿಯಿಂದ ಬಿಎಸ್ಪಿ ಜೊತೆ ಜೆಡಿಎಸ್ ಮಾಡಿಕೊಂಡಿರುವ ಮೈತ್ರಿ ಇಲ್ಲೂ ತೊಡಕಾಗಬಹುದು. ದೇವೇಗೌಡರು ಮಾಯಾವತಿಯೂ ಇರುವ ತೃತೀಯ ರಂಗದೊಡನೆ ಗುರುತಿಸಿಕೊಂಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮಟ್ಟಹಾಕಲು ತೃತೀಯ ರಂಗ ಭಾರೀ ಪ್ರಯತ್ನ ನಡೆಸಿದೆ. ಈ ಸಂಕೋಲೆಯನ್ನು ಬಿಡಿಸಲು ಅಮಿತ್ ಶಾ ಅವರ ಬಳಿ ತಂತ್ರಗಾರಿಕೆ ಇಲ್ಲ ಅಂತೀರಾ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+