ಬಿಜೆಪಿ ಸರ್ಕಾರ ರಚಿಸುವ ಬಗ್ಗೆ ಡೌಟ್ ಇದೆಯೇ?
ಬೆಂಗಳೂರು, ಮೇ 15: 'ಬಿಜೆಪಿ ಸರ್ಕಾರ ರಚನೆ ಮಾಡೋ ಬಗ್ಗೆ ಇನ್ನೂ ಯಾರಿಗಾದ್ರೂ ಡೌಟ್ ಇದೆಯಾ?!'
ಹೀಗೆ ಪ್ರಶ್ನೆ ಮುಂದಿಟ್ಟಿರುವುದು ಬಿಜೆಪಿ ಸಂಸದ ಪ್ರತಾಪ್ ಸಿಂಹ.
ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಿದ್ದು, ಫಲಿತಾಂಶ ಸಂಪೂರ್ಣ ಹೊರಬೀಳುವ ಮುನ್ನವೇ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿಗೆ ಮುಂದಾಗಿವೆ. ಅಲ್ಲದೆ ಸರ್ಕಾರ ರಚನೆಗೆ ಅವಕಾಶ ನೀಡುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿವೆ.

ಈ ಬೆಳವಣಿಗೆಗಳು ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಅದಕ್ಕೆ ಅಧಿಕಾರಕ್ಕೆ ಏರುವ ಅವಕಾಶಗಳನ್ನು ಕ್ಷೀಣಗೊಳಿಸಿವೆ ಎನ್ನಲಾಗಿದೆ.
ಬಿಜೆಪಿ ಸರ್ಕಾರ ರಚನೆ ಮಾಡೋ ಬಗ್ಗೆ ಇನ್ನೂ ಯಾರಿಗಾದ್ರೂ ಡೌಟ್ ಇದೆಯಾ?!
— Pratap Simha (@mepratap) 15 May 2018
ಆದರೆ, ಇಷ್ಟೆಲ್ಲಾ ಪ್ರಕ್ರಿಯೆಗಳು ನಡೆದ ಬಳಿಕವೂ ಪ್ರತಾಪ್ ಸಿಂಹ ಅವರು ಬಿಜೆಪಿ ಸರ್ಕಾರ ರಚಿಸುವ ಬಗ್ಗೆ ನಿಮ್ಮಲ್ಲಿ ಇನ್ನೂ ಅನುಮಾನ ಇದೆಯೇ ಎಂದು ಟ್ವೀಟ್ ಮಾಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಸರ್ಕಾರ ರಚನೆಗೆ ಅಗತ್ಯವಿರುವ ಇನ್ನೂ ಎಂಟು ಸೀಟುಗಳನ್ನು ಪಡೆದುಕೊಳ್ಳಲು ಬಿಜೆಪಿ ರಾಷ್ಟ್ರೀಯ ಮುಖಂಡರು ಯಾವ ತಂತ್ರ ಅನುಸರಿಸಲಿದ್ದಾರೆ ಎಂಬ ಕಾತರ ಮೂಡಿಸಿದೆ. ರಾಷ್ಟ್ರ ರಾಜಕಾರಣದಲ್ಲಿ ಚಾಣಕ್ಯ ಎಂದೇ ಹೆಸರಾಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜ್ಯಕ್ಕೆ ಆಗಮಿಸಲಿದ್ದಾರೆ ಎನ್ನಲಾಗಿದೆ. ಪಕ್ಷದ ನಾಯಕರು ಚರ್ಚೆ ನಡೆಸಲಿದ್ದು, ಮುಂದಿನ ನಡೆ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ನಿರೀಕ್ಷೆ ಇದೆ.
ಪ್ರಕಾಶ್ ರೈ ಎಲ್ಲಿ? ಹುಡುಕುತ್ತೀರಾ?
ಬಿಜೆಪಿ ಅತ್ಯಧಿಕ ಸೀಟುಗಳನ್ನು ಪಡೆದುಕೊಳ್ಳುತ್ತಿದ್ದಂತೆಯೇ, ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ನಟ ಪ್ರಕಾಶ್ ರೈ ಅವರನ್ನು ಲೇವಡಿ ಮಾಡುವ ಟ್ವೀಟ್ ಮತ್ತು ಮೀಮ್ಗಳು ಹರಿದಾಡತೊಡಗಿವೆ.
Dear media, you were giving so much importance to #JustAssKing @prakashraaj, Can u pls find out where is he hiding now n take his reaction?!
— Pratap Simha (@mepratap) 15 May 2018
ರೈ ಅವರ ಮಾತಿನ ಕುಟುಕಿಗೆ ತುತ್ತಾಗಿದ್ದ ಪ್ರತಾಪ್ ಸಿಂಹ, ಈ ಅವಕಾಶವನ್ನು ಬಳಸಿಕೊಂಡು ರೈ ಅವರನ್ನು ಅಣಕಿಸಿದ್ದಾರೆ.
'ಮಾಧ್ಯಮದವರೇ, ಪ್ರಕಾಶ್ ರೈ ಅವರು ಎಲ್ಲಿ ಅಡಗಿದ್ದಾರೋ ಹುಡುಕಿ ಅವರ ಪ್ರತಿಕ್ರಿಯೆ ತೆಗೆದುಕೊಳ್ಳುತ್ತೀರಾ?' ಎಂದು ಪ್ರತಾಪ್ ಸಿಂಹ ಟ್ವಿಟ್ಟರ್ನಲ್ಲಿ ವ್ಯಂಗ್ಯವಾಗಿ ಹೇಳಿದ್ದಾರೆ.
'ಡಿಯರ್ ಮೀಡಿಯಾ, #ಜಸ್ಟ್ ಆಸ್ಕಿಂಗ್ ಪ್ರಕಾಶ್ ರಾಜ್ ಅವರಿಗೆ ತುಂಬಾ ಮಹತ್ವ ನೀಡುತ್ತಿದ್ದಿರಿ. ಈಗ ಅವರು ಎಲ್ಲಿ ಅಡಗಿದ್ದಾರೋ ದಯವಿಟ್ಟು ಹುಡುಕಿ ಅವರ ಪ್ರತಿಕ್ರಿಯೆ ಪಡೆದುಕೊಳ್ಳುತ್ತೀರಾ?' ಎಂದು ಟ್ವೀಟ್ ಮಾಡಿದ್ದಾರೆ.












Click it and Unblock the Notifications