ಕರ್ನಾಟಕ ವಿಧಾನಸಭೆ ಚುನಾವಣೆ: ಒವೈಸಿ ಎಂಟ್ರಿ, ಕಾಂಗ್ರೆಸ್ಸಿಗೆ ನಡುಕ!
ಬೆಂಗಳೂರು, ಜನವರಿ 6: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತಯೇ ರಾಜ್ಯದಲ್ಲಿ ರಾಜಕೀಯ ಚಟುವಟಿಗಳು ಗರಿಗೆದರಿವೆ. ಆಡಳಿತ ರೂಢ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲು ನಾನಾ ಕಸರತ್ತು ನಡೆಸುತ್ತಿರುವ ಬೆನ್ನಲ್ಲಿಯೇ ಆರಂಭದಲ್ಲಿ ವಿಘ್ನವೊಂದು ಎದುರಾಗಿದೆ.
ಈ ಬಾರಿಯ ವಿಧಾಸನಭೆ ಚುನಾವಣೆಯಲ್ಲಿ ಮುಸ್ಲಿಂ ಮತಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ ನೇತೃತ್ವದ ಅಖಿಲ ಭಾರತ ಮಜ್ಲೀಸ್ ಎ ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಚಿಂತನೆ ನಡೆಸಿರುವುದು ಕಾಂಗ್ರೆಸ್ನಲ್ಲಿ ತಲ್ಲಣ ಉಂಟು ಮಾಡಿದೆ.
ಕರ್ನಾಟಕದ ರಾಜಕೀಯದಲ್ಲಿ ತೊಡಗಿಸಿಕೊಳ್ಳುವುದಾಗಿ ಈ ಹಿಂದೆ ಅಸಾದುದ್ದೀನ್ ಒವೈಸಿ ಹೇಳಿದ್ದರು. ಅದರಂತೆ ಎಐಎಂಐಎಂ ಈಗಾಗಲೇ ಕ್ಷೇತ್ರ ಈಗ ಅಭ್ಯರ್ಥಿಗಳನ್ನು ಗುರುತಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಇದರಿಂದ ಕಾಂಗ್ರೆಸ್ ಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.
ಮುಸ್ಲಿಂ ಮತಗಳನ್ನು ಒಡೆಯುವ ಸಾಮರ್ಥ್ಯ ಹೊಂದಿರುವ ಎಸ್ಡಿಪಿಐನಂಥ ಸಣ್ಣ ಪಕ್ಷ ಚುನಾವಣೆಯಲ್ಲಿ ಮುಳುವಾಗಬಹುದು ಎನ್ನುವುದು ಕಾಂಗ್ರೆಸ್ ನಾಯಕರ ಆತಂಕವಾಗಿದೆ.
ಉತ್ತರ ಕರ್ನಾಟಕದಲ್ಲಿ 28 ಕ್ಷೇತ್ರಗಳ ಪಟ್ಟಿ ಸಿದ್ಧ
ನಮ್ಮ ಅಭ್ಯರ್ಥಿಗಳು ಸ್ಪರ್ಧಿಸಲಿರುವ ಉತ್ತರ ಕರ್ನಾಟಕದ 28 ಕ್ಷೇತ್ರಗಳನ್ನು ಈಗಾಗಲೇ ಗುರುತಿಸಿದ್ದು, ಇನ್ನು ದಕ್ಷಿಣ ಕರ್ನಾಟಕದಲ್ಲಿ ಕ್ಷೇತ್ರಗಳನ್ನು ಗುರುತಿಸುವ ಕಾರ್ಯ ಪ್ರಕ್ರಿಯೆಯಲ್ಲಿದೆ. ಒಟ್ಟು 60 ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಸಲು ತೀರ್ಮಾನಿಸಲಾಗಿದ್ದು, ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲಾಗಿದೆ. ಶೀಘ್ರದಲ್ಲಿಯೇ ಪಟ್ಟಿಯನ್ನು ಪ್ರಕಟಿಸುತ್ತೇವೆ ಎಂದು ಕರ್ನಾಟಕದ ಎಐಎಂಐಎಂನ ಮುಖ್ಯಸ್ಥ ಉಸ್ಮಾನ್ ಘನಿ ತಿಳಿಸಿದ್ದಾರೆ.
ಹೆಚ್ಚು ಮುಸ್ಲಿಂ ಹೊಂದಿರುವ ಕ್ಷೇತ್ರಗಳಲ್ಲಿ AIMIM ಸ್ಪರ್ಧೆ
ಎಐಎಂಐಎಂ ಹೆಚ್ಚು ಮುಸ್ಲಿಂ ಹೊಂದಿರುವ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು, ಕಾಂಗ್ರೆಸ್ ಮತ ತಿನ್ನುವುದಂತೂ ಗ್ಯಾರಂಟಿ. ಇದರಿಂದ ಮುಸ್ಲಿಮರ ಮೇಲೆ ಹೆಚ್ಚು ಅವಲಂಬಿತವಾಗಿರುವ ಕಾಂಗ್ರೆಸ್ ಗೆ ಹೊಡೆತ ಅಂತೂ ಪಕ್ಕಾ.
ರಾಜ್ಯದಲ್ಲಿ ಶೇ. 12ರಷ್ಟು, ಮುಸ್ಲಿಂ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಹಿಂದ (ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರು) ಮತಗಳನ್ನು ಸೆಳೆಯಲು ಅವರಿಗಾಗಿಯೇ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಜಾತಿ ಜನಗಣತಿಯ ಪ್ರಕಾರ, ಕರ್ನಾಟಕದ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರು ಶೇ. 12 ರಷ್ಟಿದ್ದಾರೆ. ದಲಿತರು ಎರಡನೇ ಸ್ಥಾನದ್ದು, ಅವರು ಜನಸಂಖ್ಯೆಯಲ್ಲಿ ಸುಮಾರು 24 ಪ್ರತಿಶತ ಹೊಂದಿದ್ದಾರೆ. ಎಐಎಂಐಎಂ ಸ್ಪರ್ಧೆಯಿಂದಾಗಿ ಶೇ. 12ರಷ್ಟು ಮುಸ್ಲಿಂ ಮತಗಳಲ್ಲಿ ಒಡಕು ಆಗುವುದಂತೂ ಗ್ಯಾರಂಟಿ.
ಕಾಂಗ್ರೆಸ್ ವೋಟ್ ಬ್ಯಾಂಕ್ ಗೆ ಎಐಎಂಐಎಂ ಕನ್ನ
ರಾಜ್ಯದಲ್ಲಿ ಶೇ. 12ರಷ್ಟು, ಮುಸ್ಲಿಂ ಹೊಂದಿದ್ದು, ಕಾಂಗ್ರೆಸ್ ಮುಸ್ಲಿಂ ಮತಗಳ ಮೇಲೆ ಅವಲಂಬಿತವಾಗಿದೆ. ಆದರೆ, ಎಐಎಂಐಎಂ ಕಣಕ್ಕಿಳಿಯುವುದರಿಂದ ಕಾಂಗ್ರೆಸ್ ಮತ ಬ್ಯಾಂಕ್ ಗೆ ಕನ್ನ ಬೀಳಲಿದೆ. ಮತ್ತೊಂದೆಡೆ ಯಾವುದೇ ಕಾರಣಕ್ಕೂ ಮತಗಳನ್ನು ವಿಂಗಡಿಣೆಯಾಗದಂತೆ ಎಐಎಂಐಎಂ ಕಾರ್ಯಸೂಚಿಯನ್ನು ಹೆಣೆದಿದ್ದಾರೆ.
ಮುಸ್ಲಿಮರು ಕಾಂಗ್ರೆಸ್ ಆಸ್ತಿನಾ?
ಅಲ್ಪಸಂಖ್ಯಾತ ಮತ್ತು ದಲಿತರಿಗೆ ಬಿಜೆಪಿ ಅಥವಾ ಕಾಂಗ್ರೆಸ್ ಯಾವುದೇ ಅನುಕೂಲವಾಗಿಲ್ಲ. ನಾವು ಸ್ಪರ್ಧಿಸುವ ಸೀಟುಗಳನ್ನು ಗೆಲ್ಲುವುದು ನಮ್ಮ ಗುರಿ. ಯಾರು ಸೋಲುತ್ತಾರೆ ಯಾರು ಗೆಲ್ಲುತ್ತಾರೆ ಎಂಬುವುದು ಮುಖ್ಯವಲ್ಲ. ಮುಸ್ಲಿಮರು ಕಾಂಗ್ರೆಸ್ ಸ್ವತ್ತಾಗಿದ್ದಾರೆಯೇ ಎಂದು ಘನಿ ಕಾಂಗ್ರೆಸ್ ಪ್ರಶ್ನಿಸಿದ್ದಾರೆ. ಲೋಕಸಭೆಯಲ್ಲಿ ಕಾಂಗ್ರೆಸ್ ತ್ರಿಬಲ್ ತಲಾಖ್ ಮಸೂದೆಗೆ ಬೆಂಬಲ ನೀಡಿದೆ. ನಿಜವಾಗಿಯೂ ಅಲ್ಪಸಂಖ್ಯಾತರ ಬಗ್ಗೆ ಕಾಳಜಿಯಿಲ್ಲ. ನಮ್ಮ ಯುವಕರು, ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕಾಗಿ ನಾವು ಹೆಜ್ಜೆ ಹಾಕುತ್ತೇವೆ ಎಂದರು.