Get Updates
Get notified of breaking news, exclusive insights, and must-see stories!

ರಾಜೀನಾಮೆ ಸಲ್ಲಿಸಲು ತೆರಳಿದ ಸಿಎಂ ಶೆಟ್ಟರ್

Karnataka
ಬೆಂಗಳೂರು, ಮೇ 8 : ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲು ಅನುಭವಿಸಿದ ಬೆನ್ನಲ್ಲೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ರಾಜೀನಾಮೆ ನೀಡಲು ರಾಜಭವನಕ್ಕೆ ತೆರಳಿದ್ದಾರೆ.ಚುನಾವಣಾ ಫಲಿತಾಂಶ ಸಂಪೂರ್ಣ ಪ್ರಕಟವಾಗುವ ಮುನ್ನವೇ ಶೆಟ್ಟರ್ ರಾಜೀನಾಮೆ ನೀಡಲು ತೆರಳಿದ್ದಾರೆ.

ಬುಧವಾರ ಮಧ್ಯಾಹ್ನ 1.30ರ ಸುಮಾರಿಗೆ ರಾಜ್ಯಪಾಲ ಹೆಚ್.ಆರ್.ಭಾರದ್ವಾಜ್ ಅವರನ್ನು ಭೇಟಿಯಾಗಿ ಜಗದೀಶ್ ಶೆಟ್ಟರ್ ರಾಜೀನಾಮೆ ನೀಡಲಿದ್ದಾರೆ. ಚುನಾವಣೆಯಲ್ಲಿ ಬಿಜೆಪಿ ಪಕ್ಷ ಹೀನಾಯವಾಗಿ ಸೋಲು ಅನುಭವಿಸಿದೆ. ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆಯುವತ್ತ ಸಾಗುತ್ತಿದ್ದು, ಸರ್ಕಾರ ರಚಿಸುವುದು ಖಚಿತವಾಗಿದೆ.

ತಮ್ಮ ಸ್ವ ಕ್ಷೇತ್ರ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಜಗದೀಶ್ ಶೆಟ್ಟರ್ ಗೆಲುವು ಸಾಧಿಸಿದ್ದಾರೆ. ಆದರೆ, ರಾಜ್ಯದಲ್ಲಿ ಬಿಜೆಪಿ ತೀವ್ರ ಹಿನ್ನಡೆ ಅನುಭವಿಸಿದೆ. ಆದ್ದರಿಂದ ಮುಂದಿನ ಸರ್ಕಾರ ರಚನೆಯ ಪ್ರಕ್ರಿಯೆಗಳಿಗೆ ಅನುವು ಮಾಡಿಕೊಡಲು ಶೆಟ್ಟರ್ ರಾಜೀನಾಮೆ ನೀಡಲಿದ್ದಾರೆ.

ಹಿಂದಿನ ಸುದ್ದಿಗಳು

ಅಭ್ಯರ್ಥಿಗಳ ಮೇಲೆ ಆಯೋಗದ ಕಣ್ಣು : ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳ ವಿಜಯೋತ್ಸವದ ಆಚರಣೆ ಖರ್ಚು ಸಹ ಚುನಾವಣಾ ಲೆಕ್ಕ ಸೇರಲಿದೆ. ಇದಕ್ಕಾಗಿ ಚುನಾವಣಾ ಆಯೋಗ ತಯಾರಿ ನಡೆಸಿದೆ. ವಿಜಯೋತ್ಸವದ ಹೆಸರಿನಲ್ಲಿ ಹಣದ ಹೊಳೆ ಹರಿಸುವವರ ಮೇಲೆ ಕಣ್ಣಿಡಲು ೧೫೦ ಕ್ಕೂ ಹೆಚ್ಚು ವೀಕ್ಷಕರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಚರಿಸುತ್ತಿದ್ದಾರೆ.

ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ : ಸರ್ಕಾರ ರಚಿಸಲು ಕೆಲವು ಸ್ಥಾನಗಳು ಕಡಿಮೆಯಾದರೆ ತತ್ವ ಮತ್ತು ಸಿದ್ಧಾಂತಗಳನ್ನು ಮರೆತು ಜೆಡಿಎಸ್ ಜೊತೆ ಕೈ ಜೋಡಿಸಿ, ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಪಡೆಯುವ ಅವಕಾಶ ತಪ್ಪಿಸಬೇಕು ಎಂದು ಬಿಜೆಪಿ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ. ಇಂತಹ ಲೆಕ್ಕಾಚಾರ ಪ್ರಾರಂಭವಾಗಿದ್ದು, ಪಕ್ಷಗಳ ಬಲಾಬಲದ ಮೇಲೆ ಈ ಕುರಿತು ಅಂತಿಮ ನಿರ್ಧಾರ ಹೊರಬೀಳಲಿದೆ.

ಸರ್ಕಾರ ರಚನೆಗೆ ಮುಹೂರ್ತ ಫಿಕ್ಸ್ : ಜನಾದೇಶ ಪಡೆದ ನೂತನ ಸರ್ಕಾರ ಮೇ 13ರ ಅಕ್ಷಯ ತದಿಗೆ ದಿನ ಅಥವ ಮೇ 17ರಂದು ಅಸ್ತಿತ್ವಕ್ಕೆ ಬರಬಹುದು ಎಂದು ಜ್ಯೋತಿಷಿಗಳು ಸಲಹೆ ನೀಡಿದ್ದಾರೆ. ಎರಡು ದಿನಗಳು ಒಳ್ಳೆಯ ಮುಹೂರ್ತವಿದ್ದು ಅಂದು ಮುಖ್ಯಮಂತ್ರಿ ಮತ್ತು ಸಚಿವರು ಪ್ರಮಾಣ ವಚನ ಸ್ವೀಕರಿಸಬಹುದು ಎಂಬುದು ಜ್ಯೋತಿಷಿಗಳ ಅಭಿಪ್ರಾಯ. ಯಾವ ಪಕ್ಷ ಬಹುಮತ ಪಡೆದು ಸರ್ಕಾರ ರಚನೆ ಮಾಡುತ್ತದೆ ಎಂಬುದು ಕೆಲವೇ ಗಂಟೆಗಳಲ್ಲಿ ತಿಳಿದು ಬರಲಿದೆ.

ಬೆಂಗಳೂರಿ ಕೌಟಿಂಗ್ ಪ್ರಾರಂಭ : ಬೆಂಗಳೂರು ನಗರ ಮತ್ತು ಗ್ರಾಮಾಂತರ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಪ್ರಾರಂಭಗೊಂಡಿದೆ. ಶಾಂತಿನಗರ, ಬ್ಯಾಟರಾಯನಪುರ, ಗಾಂಧಿನಗರ ಕ್ಷೇತ್ರಗಳ ಮತ ಎಣಿಕೆ ಕಾರ್ಯ ನಡೆಯುತ್ತಿದೆ.

ಮತ ಎಣಿಕೆ ಪ್ರಾರಂಭ : ರಾಜ್ಯದ 36 ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ಪ್ರಾರಂಭವಾಗಿದೆ. ಮತಗಟ್ಟೆವೊಳಗೆ ಮೊಬೈಲ್ ಬಳಕೆ ನಿಷೇಧಿಸಲಾಗಿದ್ದು, ಅಧಿಕಾರಿಗಳನ್ನು ತಪಾಸಣೆ ನಡೆಸಿ ಒಳಗೆ ಬಿಡಲಾಗಿದೆ. ವಿವಿಧ ಜಿಲ್ಲೆಗಳಲ್ಲಿ ವಿವಿಧ ಪಕ್ಷಗಳು ಮುನ್ನೆಡೆ ಸಾಧಿಸುತ್ತಿದ್ದು, ಮೊದಲು ಯಾವ ಪಕ್ಷ ಖಾತೆ ತೆರೆಯಲಿದೆ ಎಂದು ಕಾದು ನೋಡಬೇಕು.

ನಿಷೇಧಾಜ್ಞೆ : ಮತ ಎಣಿಕೆ ನಡೆಯುತ್ತಿರುವ ಕಾಲೇಜುಗಳ ಸುತ್ತ ಬಿಗಿ ಭದ್ರತೆ ಒದಗಿಸಿರುವ ಜತೆಗೆ ನಗರಾದ್ಯಂತ ಬುಧವಾರ ಬೆಳಗ್ಗೆಯಿಂದ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮತ ಎಣಿಕೆ ಕೇಂದ್ರದ ಸುತ್ತ ಮುತ್ತ ಪಟಾಕಿ ಹೊಡೆಯದಂತೆ ಆದೇಶ ನೀಡಲಾಗಿದೆ. ನಗರದಾದ್ಯಂತ 15 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ.

ಹಿಂದಿನ ಸುದ್ದಿಗಳು

ಕನಕಪುರ : ಮತದಾನ ಮಾಡುವಾಗ ಗೌಪ್ಯತೆ ಕಾಪಾಡಿಕೊಳ್ಳದ ಹಿನ್ನಲೆಯಲ್ಲಿ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರು ಪಡೆದ ಎರಡು ಮತಗಳನ್ನು ಅಸಿಂಧು ಎಂದು ಪರಿಗಣಿಸುವಂತೆ ಕೇಂದ್ರ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಶಿವಕುಮಾರ್ ಪತ್ನಿ ಉಷಾ ಸಮೇತರಾಗಿ ಬಂದು ಒಟ್ಟಿಗೆ ಮತ ಚಲಾಯಿಸಿದ್ದರು.

ಕೋಲಾರ : ಚುನಾವಣೆ ಫಲಿತಾಂಶ ಪ್ರಕಟಗೊಳ್ಳುವ ಮುಂಚೆಯೇ ಕೋಲಾರದಲ್ಲಿ ನೆತ್ತರು ಹರಿದಿದೆ. ಜೆಡಿಎಸ್ ಮುಖಂಡ ವೇಣುಗೋಪಾಲ ರೆಡ್ಡಿ ಅವರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಕಾಂಗ್ರೆಸ್ ಮುಖಂಡ ಹರೀಶ್ ರೆಡ್ಡಿ ಅವರ ಕೈವಾಡ ಎಂದು ಆರೋಪಿಸಿರುವ ಮೃತನ ಸಂಬಂಧಿಕರು ಅವರ ಮೆನೆಗೆ ಬೆಂಕಿ ಹಚ್ಚಿದ್ದಾರೆ.

ಮತಎಣಿಕೆ : ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಮತ ಎಣಿಕೆ ಬೆಂಗಳೂರಿನ ಮೂರು ಕಾಲೇಜುಗಳಲ್ಲಿ ನಡೆಯಲಿದೆ. ಮಹಾರಾಣಿ ಕಾಲೇಜು, ಮೌಂಟ್ ಕಾರ್ಮಲ್ ಕಾಲೇಜು, ಆರ್ ಸಿ ಕಾಲೇಜು ಮತ್ತು ಗೃಹ ವಿಜ್ಞಾನ ಕಾಲೇಜುಗಳಲ್ಲಿ ಮತ ಎಣಿಕೆ ಕಾರ್ಯ ಪ್ರಾರಂಭವಾಗಿದೆ. ಮತ ಎಣಿಕೆ ಕೇಂದ್ರಕ್ಕೆ ಭಾರೀ ಭದ್ರತೆ ಒದಗಿಸಲಾಗಿದೆ.

ಬೆಂಬಲಿಗರಿಗೆ ನಿರಾಸೆ : ತಮ್ಮ ಅಭ್ಯರ್ಥಿ ಗೆಲುವು ಸಾಧಿಸಿದ್ದಾನೆ ಎಂದು ಬೆಂಬಲಿಗರು ಪಟಾಕಿ ಹೊಡದು ಸಂಭ್ರಮಿಸುವಂತಿಲ್ಲ. ಬೆಂಬಲಿಗರ ವಿಜಯೋತ್ಸವ, ಪಟಾಕಿ ಹೊಡೆಯುವುದು ಮುಂತಾದವುಗಳನ್ನು ನಿಷೇಧಿಸಿ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಪಕ್ಷಗಳ ಕಚೇರಿಗೆ ಬಿಗಿ ಭದ್ರತೆ : ಇಂದು ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳುವುದರಿಂದ ವಿವಿಧ ರಾಜಕೀಯ ಪಕ್ಷಗಳ ಕಚೇರಿಗಳಿಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಕಾರ್ಯಕರ್ತರು, ಮುಖಂಡರು ಪಕ್ಷದ ಕಚೇರಿಗೆ ಆಗಮಿಸುತ್ತಾರೆ. ಆದ್ದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತೆ ಕೈಗೊಳ್ಳಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+