ಕುಷ್ಟಗಿ : ಈ ಬಾರಿ ಕೂಡ ಹೊಸಬರಿಗೆ ಅವಕಾಶ?
ಭತ್ತದ ಕಣಜ ಎಂದು ಹೆಸರಾಗಿರುವ ಕೊಪ್ಪಳ ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಬಿಸಿಲು ಎಷ್ಟು ಸ್ಥಿರವಾಗಿರುತ್ತದೆಯೋ ವಿಧಾನಸಭೆ ಕ್ಷೇತ್ರದಲ್ಲಿ ರಾಜಕೀಯ ಲೆಕ್ಕಾಚಾರಗಳು ಅಷ್ಟೇ ಅಸ್ಥಿರವಾಗಿರುತ್ತವೆ. ಇಲ್ಲಿ ಇಂಥೋರೇ ಗೆಲ್ತಾರೆ ಎಂದು ಖಚಿತವಾಗಿ ಹೇಳುವುದು ಅಸಾಧ್ಯ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ಗಳಿಗೆ ಇದ್ದಷ್ಟೇ ಸಮಪ್ರಮಾಣದ ಅವಕಾಶಗಳು ಹೊಸದಾಗಿ ಹುಟ್ಟಿರುವ ಕೆಜೆಪಿ ಮತ್ತು ಬಿಎಸ್ಆರ್ ಕಾಂಗ್ರೆಸ್ಸಿಗೂ ಇವೆ. ಪಕ್ಷಕ್ಕೆ ದ್ರೋಹ ಬಗೆದು 'ಆಪರೇಷನ್'ಗೊಳಗಾದವರಿಗೆ, ಅಭ್ಯರ್ಥಿಯನ್ನೇ ಮರೆತ ಪಕ್ಷಕ್ಕೆ ಮತದಾರರು ಪಾಠ ಕಲಿಸುವರೆ? ಕುಷ್ಟಗಿಯಲ್ಲಿ ಯಾವ ಜಾತಿಯ ಬೆಂಬಲ ಯಾರಿಗಿದೆ ಎಂಬುದರ ನೋಟ ಇಲ್ಲಿದೆ.
ಪ್ರತಿ ಬಾರಿಯೂ ಹೊಸ ಮುಖಗಳಿಗೆ ಅವಕಾಶ ಮಾಡಿಕೊಟ್ಟಿರುವ ಕುಷ್ಟಗಿ ಕ್ಷೇತ್ರದ ಮತದಾರರು, ಪುಂಡಲೀಕಪ್ಪ ಜ್ಞಾನಮೋಠೆಯವರನ್ನ ಬಿಟ್ರೆ ಬೇರೆ ಯಾರನ್ನೂ ಎರಡು ಬಾರಿ ಗೆಲ್ಲಿಸಿಲ್ಲ. ಈ ಬಾರಿಯ ಹೊಸ ಮುಖಗಳು ಯಾವುವು ಅಂತ ನೋಡ್ತಾ ಹೋದ್ರೆ, ಮೊದಲಿಗೆ ಕಣ್ಣಿಗೆ ಬೀಳೋದು ವಲಸಿಗರು. ವಿಪಕ್ಷ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್ನಿಂದ ಕಣಕ್ಕೆ ಇಳೀತಾರೆ ಅನ್ನೋ ಮಾತಿದೆ. ಸಿದ್ದು ಆಣತಿಯ ಮೇರೆಗೆ ಅಮರೇಗೌಡ ಅವರು ಕ್ಷೇತ್ರ ಬಿಟ್ಟುಕೊಡುತ್ತಾರೆ ಅಂತಾ ಹೇಳಲಾಗ್ತಿದೆ.
2004ರಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿಯ ದೊಡ್ಡನಗೌಡ ಪಾಟೀಲ್, ಈ ಬಾರಿಯೂ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲಿದ್ದಾರೆ. ಬಳ್ಳಾರಿಯ ರಾಜಶೇಖರಗೌಡ ಗೋನಾಳ, ಬಿಎಸ್ಆರ್ ಪಕ್ಷದ ಚಿಹ್ನೆಯಡಿ ಕಣಕ್ಕಿಳಿಯಲಿದ್ದಾರೆ. ಅಮರೇಗೌಡ ಪಾಟೀಲ್ ಭಯ್ಯಾಪುರ ಹಾಗೂ ರಾಜಶೇಖರಗೌಡ ಗೋನಾಳ ಅವರು ಲಿಂಗಾಯತ ರಡ್ಡಿ ಸಮುದಾಯಕ್ಕೆ ಸೇರಿದ್ದರೆ, ಅತ್ತ ಕಾಂಗ್ರೆಸ್ನಿಂದ ಸ್ಪರ್ಧಿಸುತ್ತಾರೆ ಎಂಬ ವದಂತಿ ಇರುವ ಸಿದ್ದರಾಮಯ್ಯ ಮತ್ತು ಬಿಜೆಪಿ ದೊಡ್ಡನಗೌಡ ಪಾಟೀಲ್ ಕುರುಬ ಸಮದಾಯದವರು.
ಒಂದು ವೇಳೆ ಸಿದ್ದರಾಮಯ್ಯ ಇಲ್ಲಿ ಸ್ಪರ್ಧೆ ಮಾಡಿದ್ರೆ, ಲಿಂಗಾಯತ ಮತಗಳು ಬಿಎಸ್ಆರ್ ಪಕ್ಷದ ಗೋನಾಳ ರಾಜಶೇಖರಗೌಡ ಅವರ ಕೈ ಹಿಡಿಯುವ ಸಾಧ್ಯತೆ ಇದೆ. ಕಾಂಗ್ರೆಸ್ನಿಂದ ಅಮರೇಗೌಡ ಪಾಟೀಲ್ ಸ್ಪರ್ಧಿಸಿದ್ರೆ, ತಮ್ಮದೆ ಸಮುದಾಯದ ಲಿಂಗಾಯತರ 62 ಸಾವಿರ ಮತಗಳ ಜೊತೆಗೆ ಸಿದ್ದರಾಮಯ್ಯ ವರ್ಚಸ್ಸಿನಿಂದಾಗಿ ಕುರುಬ ಸಮುದಾಯದ ಒಂದಿಷ್ಟು ಮತಗಳನ್ನು ಬಾಚಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ. ಇನ್ನು ದೊಡ್ಡನಗೌಡ ಪಾಟೀಲ್ ತಮ್ಮ ಕುರುಬ ಸಮುದಾಯದ 35 ಸಾವಿರ ಜೊತೆಗೆ ಬೇರೆ ಸಮುದಾಯದ ಹಾಗೂ ಯುವಕರ ಮತ ನೆಚ್ಚಿಕೊಂಡಿದ್ದಾರೆ. ಬಿಜೆಪಿ ಆಡಳಿತವನ್ನು ಮುಂದಿಟ್ಟುಕೊಂಡು ಹೋದ್ರೂ ಒಂದಿಷ್ಟು ಮತಗಳು ಬರ್ತವೆ ಎಂಬ ಲೆಕ್ಕಾಚಾರದಲ್ಲಿದ್ದಾರೆ.
ಇನ್ನು ಈಗಾಗಲೇ ಒಂದು ಬಾರಿ ಎಂಎಲ್ಎ ಆಗಿರುವ ಲಿಂಗಾಯತ ಪಂಚಮಸಾಲಿ ಸಮುದಾಯದ ಕೆ. ಶರಣಪ್ಪ ವಕೀಲರು ಕಣಕ್ಕೆ ಇಳಿದ್ರೆ ಲಿಂಗಾಯರ ಮತಗಳು ಮತ್ತಷ್ಟು ಡಿವೈಡ್ ಆಗಿ ಜಾತಿ ಲೆಕ್ಕಾಚಾರ ತಿರುಗಿ ಬೀಳುತ್ತೆ. ಒಂದು ವೇಳೆ ಅಮರೇಗೌಡ ಪಾಟೀಲ್ ಭಯ್ಯಾಪುರ ಸೇರಿದಂತೆ ಮೂರೂ ಜನ ಲಿಂಗಾಯತ ಅಭ್ಯರ್ಥಿಗಳು ಸ್ಪರ್ಧಿಸಿದ್ರೆ ಲಿಂಗಾಯತ ಮತಗಳು ಒಡೆದು ದೊಡ್ಡನಗೌಡ ಪಾಟೀಲ್ಗೆ ಪ್ಲಸ್ ಪಾಯಿಂಟ್ ಆಗ್ತವೆ. ಆದ್ರೆ, ಕ್ಷೇತ್ರದ ರಾಜಕೀಯ ಇತಿಹಾಸ ನೋಡಿದ್ರೆ ಕ್ಷೇತ್ರದ ಮತದಾರರು ಹೊಸ ಮುಖವಾಗಿರುವ ಗೋನಾಳ ರಾಜಶೇಖಗೌಡ ಅವರ ಹಿಡಿದ್ರೂ ಅಚ್ಚರಿ ಇಲ್ಲ.