ಮತದಾರರ ನೋಟಿನಿಂದ ಗೆದ್ದ ಜೆಡಿಎಸ್ ಅಭ್ಯರ್ಥಿ
ಕಡೂರು, ಮೇ 9: ಜಾತಿ ಲೆಕ್ಕಾಚಾರ ಕಡೂರು ಕ್ಷೇತ್ರದಲ್ಲಿ ಕಂಪ್ಲೀಟ್ ಉಲ್ಟಾಪಲ್ಟಾ ಆಗಿದೆ. ಬ್ರಾಹ್ಮಣ ಸಮುದಾಯದ ಮತ್ತು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ವೈ ಎಸ್ ವಿ ದತ್ತಾ ಕ್ಷೇತ್ರದಲ್ಲಿ ಗೆಲುವಿನ ನಗು ಬೀರಿದ್ದಾರೆ. ಈ ಕ್ಷೇತ್ರದಲ್ಲಿ ಬ್ರಾಹ್ಮಣ ಸಮುದಾಯದ ಮತ 1500 ದಾಟುವುದಿಲ್ಲ.
ದತ್ತಾ ಗಳಿಸಿದ ಮತ 68733, ಗೆದ್ದ ಅಂತರ 42433. ಮತ ಎಣಿಕೆ ಮುಗಿದ ನಂತರ ಮಾಧ್ಯಮದವರೊಂದಿಗೆ ಭಾವೋದ್ವೇಗಕ್ಕೆ ಒಳಗಾಗಿ ದತ್ತಾ ಹೇಳಿಕೆ ನೀಡಿದ್ದು ' ನನ್ನ ಕ್ಷೇತ್ರದ ಮತದಾರ ನನಗೆ ವೋಟು ಕೊಟ್ಟರು ಜೊತೆಗೆ ನೋಟೂ ಕೊಟ್ಟರು'.
ನಾನು ಬ್ರಾಹ್ಮಣ ಸಮುದಾಯದವನು, ಕ್ಷೇತ್ರದಲ್ಲಿ ನನ್ನ ಸಮುದಾಯದ ಜನತೆ ಇರುವುದು ಬೆರಳೆಣಿಕೆಯಷ್ಟು. ಆದರೂ ಕ್ಷೇತ್ರದ ಜನತೆ ನನ್ನ ಕೈಬಿಡಲಿಲ್ಲ. ಇಲ್ಲಿನ ಮತದಾರರು ಬುದ್ದಿವಂತರಿದ್ದಾರೆ. ಜಾತಿ, ಹಣ, ತೋಳ್ಬಲವಿಲ್ಲದೆ ರಾಜಕಾರಣ ಮಾಡಬಹುದು ಎನ್ನುವುದಕ್ಕೆ ನನ್ನ ಗೆಲುವು ಒಂದು ಉದಾಹರಣೆ.
ನನ್ನ ಜನ್ಮ ಜನ್ಮಕ್ಕೂ ಕ್ಷೇತ್ರದ ಜನತೆಯನ್ನು ನಾನು ಮರೆಯುವುದಿಲ್ಲ, ಅವರಿಗೆ ನಾನು ಚಿರಖುಣಿಗಾಗಿರುತ್ತೇನೆ. ನನ್ನನು ಗೆಲ್ಲಿಸುವ ಮೂಲಕ ಮತದಾರರ ಶಕ್ತಿ ಏನು ಎನ್ನುವುದನ್ನು ಜನತೆ ತೋರಿಸಿಕೊಟ್ಟಿದ್ದಾರೆ.
ನಾನು ಸಾಲಗಾರ, ನನ್ನ ಬಳಿ ದುಡ್ಡಿಲ್ಲ ಎಂದು ಮತದಾರ ನೂರು ರೂಪಾಯಿಂದ ಹತ್ತು ಸಾವಿರದ ವರೆಗೆ ಹಣ ಕೊಟ್ಟು ನನ್ನನ್ನು ಗೆಲ್ಲಿಸಿದ್ದಾರೆ. ಅವರು ನನ್ನ ಮೇಲಿಟ್ಟಿರುವ ಪ್ರೀತಿಗೆ ನಾನು ತಲೆಬಾಗುತ್ತೇನೆ. ಪ್ರಾಮಾಣಿಕವಾಗಿ ಕೆಲಸ ಮಾಡಿ ಇಲ್ಲಿನ ಮತದಾರರ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆ ಎಂದು ವೈ ಎಸ್ ವಿ ದತ್ತಾ ಹೇಳಿದ್ದಾರೆ.