ಬಂಡಾಯದ ಬೆಂಕಿಗೆ ತತ್ತರಿಸಿದ ಪ್ರಮುಖ ಪಕ್ಷಗಳು
ಬೆಂಗಳೂರು, ಏ 18: ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಬುಧವಾರಕ್ಕೆ (ಏ 17) ಪೂರ್ಣಗೊಂಡಿದೆ. ರಾಜ್ಯದ 224 ಕ್ಷೇತ್ರಗಳಿಗೆ 966 ನಾಮಪತ್ರಗಳು ಕೊನೆಯ ದಿನದಂದು ಸಲ್ಲಿಕೆಯಾಗಿವೆ.
ಪ್ರಮುಖ ಮೂರು ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿಯಲ್ಲಿ ಬಂಡಾಯ ಭುಗಿಲೆದ್ದಿದ್ದು, ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಹಲವು ಕಡೆ ಬಂಡಾಯ ಅಭ್ಯರ್ಥಿಗಳು ಕಣಕ್ಕಿಳಿದಿದ್ದು ಮೂರೂ ಪಕ್ಷಗಳಿಗೆ ದೊಡ್ದ ತಲೆನೋವಾಗಿ ಪರಿಣಮಿಸಿದೆ.
ಬಂಡಾಯ ಅಭ್ಯರ್ಥಿಗಳ ಸಿಟ್ಟನ್ನು ಶಮನಗೊಳಿಸಲು ಪ್ರಯತ್ನಗಳು ನಡೆಯುತ್ತಿದ್ದರೂ ಸದ್ಯದ ಮಟ್ಟಿಗೆ ಅವರು ಜಪ್ಪಯ್ಯ ಅನ್ನುತ್ತಿಲ್ಲ. ನಾಮಪತ್ರ ವಾಪಾಸ್ ಪಡೆಯಲು ಶನಿವಾರ (ಏ 20) ಕೊನೆಯ ದಿನವಾಗಿದ್ದು ಅಷ್ಟೊರೊಳಗೆ ಬಂಡಾಯ ಅಭ್ಯರ್ಥಿಗಳ ಮನವೊಲಿಸದಿದ್ದಲ್ಲಿ ಚುನಾವಣೆಯಲ್ಲಿ ತೀವ್ರ ಹಿನ್ನಡೆ ಅನುಭವಿಸ ಬೇಕಾಗಿರುವುದರಿಂದ ಪ್ರಯತ್ನಗಳು, ಆಮಿಷಗಳು ಜೋರಾಗಿಯೇ ನಡೆಯುತ್ತಿದೆ.
ಪ್ರಮುಖವಾಗಿ ಬಂಡಾಯದ ಬಿಸಿ ತಟ್ಟಿರುವುದು ಕಾಂಗ್ರೆಸ್ ಪಕ್ಷಕ್ಕೆ. ಸುಮಾರು ಇಪ್ಪತ್ತು ಮಂದಿ ಅಧಿಕೃತ ಅಭ್ಯರ್ಥಿಗಳ ವಿರುದ್ದ ಸ್ಪರ್ಧೆಗೆ ನಿಂತಿದ್ದಾರೆ. ನಾಮಪತ್ರ ಸಲ್ಲಿಕೆಯ ಕೊನೆಯ ದಿನದ ನಂತರ ಕಣದಲ್ಲಿರುವ ಪ್ರಮುಖ ಬಂಡಾಯ ಅಭ್ಯರ್ಥಿಗಳ ಪಟ್ಟಿ ಇಂತಿದೆ.
ಕಾಪು (ಉಡುಪಿ ಜಿಲ್ಲೆ)
ಕಳೆದ ಬಾರಿ ಚುನಾವಣೆಯಲ್ಲಿ ಬಿಜೆಪಿಯ ಲಾಲಾಜಿ ಮೆಂಡನ್ ವಿರುದ್ದ ಪರಾಭವಗೊಂಡಿದ್ದ ವಸಂತ್ ಸಾಲ್ಯಾನ್ ಅವರಿಗೆ ಕಾಂಗ್ರೆಸ್ ಈ ಬಾರಿ ಟಿಕೆಟ್ ನಿರಾಕರಿಸಿತ್ತು. ಸ್ಥಳೀಯರಲ್ಲದ ವಿನಯ್ ಕುಮಾರ್ ಸೊರಕೆಗೆ (ಮಾಜಿ ಉಡುಪಿ ಸಂಸದ) ಕಾಂಗ್ರೆಸ್ ಟಿಕೆಟ್ ಲಭಿಸಿದೆ. ವಸಂತ್ ಸಾಲ್ಯಾನ್ ಕಾಂಗ್ರೆಸ್ ವಿರುದ್ದ ಬಂಡಾಯ ಎದ್ದು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದ್ದಾರೆ.
ರಾಜರಾಜೇಶ್ವರಿ ನಗರ (ಬೆಂಗಳೂರು ನಗರ)
ನಿರ್ಮಾಪಕ ಮುನಿರತ್ನಂ ನಾಯ್ಡು ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದನ್ನು ವಿರೋಧಿಸಿ ಪಿ ಎಂ ಕೃಷ್ಣಮೂರ್ತಿ ಮತ್ತು ಹನುಮಂತರಾಯಪ್ಪ ಕಣಕ್ಕಿಳಿದಿದ್ದಾರೆ.
ಮಂಡ್ಯ
ಮಾಜಿ ಸಚಿವ ದಿ| ಎಸ್ ಡಿ ಜಯರಾಂ ಪುತ್ರ ಅಶೋಕ್ ಜಯರಾಂ ಜೆಡಿಎಸ್ ಟಿಕೆಟ್ಟಿಗಾಗಿ ಭಾರೀ ಪ್ರಯತ್ನ ನಡೆಸುತ್ತಿದ್ದರು. ನಾಮಪತ್ರ ಸಲ್ಲಿಕೆಯ ಕೊನೆಯ ದಿನ ಹಾಲಿ ಶಾಸಕ ಎಂ ಶ್ರೀನಿವಾಸಿಗೆ ಟಿಕೆಟ್ ನೀಡಿದ್ದರಿಂದ ಜೆಡಿಎಸ್ ವಿರುದ್ದ ಬಂಡೆದ್ದು ಪಕ್ಷೇತರರಾಗಿ ಕಣಕ್ಕೆ ಧುಮುಕಿದ್ದಾರೆ.
ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ)
ಮೊದಲು ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ರವೀಂದ್ರ ಶ್ರೀಕಂಠಯ್ಯ (ಮಾಜಿ ಶಾಸಕಿ ಪಾರ್ವತಮ್ಮ ಶ್ರೀಕಂಠಯ್ಯ ಪುತ್ರ) ಅವರಿಗೆ ಕಾಂಗ್ರೆಸ್ ಟಿಕೆಟ್ ಪ್ರಕಟಿಸಿತ್ತು. ನಂತರ ಎಸ್ ಎಲ್ ಲಿಂಗರಾಜು ಅವರಿಗೆ ಬಿ ಫಾರಂ ನೀಡಿತ್ತು. ಹಾಗಾಗಿ ರವೀಂದ್ರ ಶ್ರೀಕಂಠಯ್ಯ ಬಂಡೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಅಲ್ಲದೇ, ತಮಗೆ ಟಿಕೆಟ್ ತಪ್ಪಲು ಅಂಬರೀಶ್ ಕಾರಣವೆಂದು ಮಂಡ್ಯದಲ್ಲಿ ಅವರ ವಿರುದ್ಧವೂ ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ.
ಕಾರವಾರ (ಉತ್ತರ ಕನ್ನಡ ಜಿಲ್ಲೆ)
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಕೆಪಿಸಿಸಿ ಸದಸ್ಯ ಸತೀಶ್ ಸೈಲ್ ಬದಲು ಕಾರವಾರದಲ್ಲಿ ರಮಾನಂದ ನಾಯ್ಕಗೆ ಟಿಕೆಟ್ ಸಿಕ್ಕಿದೆ. ಇದರಿಂದ ಸಿಟ್ಟಾಗಿರುವ ಸತೀಶ್ ಸೈಲ್ ಪಕ್ಷಕ್ಕೆ ಸಡ್ಡು ಹೊಡೆದು, ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದಾರೆ.
ಬಸವನಗುಡಿ (ಬೆಂಗಳೂರು ನಗರ)
ಮಾಜಿ ಮೇಯರ್ ಮತ್ತು ಶಾಸಕ ಕೆ ಚಂದ್ರಶೇಖರ್ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಪ್ರೊ. ಬಿ ಕೆ ಚಂದ್ರಶೇಖರ್ ವಿರುದ್ದ ಬಂಡಾಯವೆದ್ದು ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ.
ಭದ್ರಾವತಿ (ಶಿವಮೊಗ್ಗ ಜಿಲ್ಲೆ)
ಟಿಕೆಟ್ ತಪ್ಪಿಸಿಕೊಂಡ ಕಾಂಗ್ರೆಸ್ನ ಏಕೈಕ ಹಾಲಿ ಶಾಸಕ ಬಿ.ಕೆ. ಸಂಗಮೇಶ್, ಪಕ್ಷದ ಅಧಿಕೃತ ಅಭ್ಯರ್ಥಿ ಸಿ.ಎಂ. ಇಬ್ರಾಹಿಂ ವಿರುದ್ಧ ಬಂಡೆದ್ದಿದ್ದಾರೆ. ಪಕ್ಷೇತರರಾಗಿ ಭದ್ರಾವತಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.
ಕೆ.ಆರ್. ಪೇಟೆ (ಮಂಡ್ಯ ಜಿಲ್ಲೆ)
ಎಚ್ ಡಿ ದೇವೇಗೌಡರ ಜತೆ ಗುರುತಿಸಿಕೊಂಡಿದ್ದ ಮಾಜಿ ಸ್ಪೀಕರ್ ಕೃಷ್ಣ ಅವರಿಗೆ ಕೆ ಆರ್ ಪೇಟೆ ಕ್ಷೇತ್ರದ ಟಿಕೆಟ್ ತಪ್ಪಿದ್ದರಿಂದ, ಜೆಡಿಎಸ್ ಅಭ್ಯರ್ಥಿ ಕೆ ಸಿ ನಾರಾಯಣಗೌಡ ವಿರುದ್ದ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಚನ್ನಪಟ್ಟಣ (ರಾಮನಗರ ಜಿಲ್ಲೆ)
ಬಿಜೆಪಿ, ಕಾಂಗ್ರೆಸ್ಸಿನಿಂದ ಟಿಕೆಟ್ ಸಿಗದ ಹಿನ್ನಲೆಯಲ್ಲಿ ಸಿ ಪಿ ಯೋಗೀಶ್ವರ್ ಕೊನೇ ಗಳಿಗೆಯಲ್ಲಿ ಮುಲಾಯಂ ಸಿಂಗ್ ಯಾದವರ ಸಮಾಜವಾದಿ ಪಕ್ಷ ಸೇರಿ, ನಾಮಪತ್ರ ಸಲ್ಲಿಸಿದ್ದಾರೆ.
ಮಾಲೂರು (ಕೋಲಾರ ಜಿಲ್ಲೆ)
ಚುನಾವಣೆ ನಡೆಯುವ ಮುನ್ನವೇ ಬಿಜೆಪಿ ಕ್ಷೇತ್ರದಲ್ಲಿ ಸೋತಿದೆ. ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರ ಕಟ್ಟಾ ಶಿಷ್ಯ ವೆಂಕಟೇಶಗೌಡ ಕೊನೇ ಗಳಿಗೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸದೇ ಬಿಜೆಪಿಗೆ ತೀವ್ರ ಮುಜುಗರ ಉಂಟು ಮಾಡಿದ್ದಾರೆ. ಕೃಷ್ಣಯ್ಯ ಶೆಟ್ಟಿ ಬಿಜೆಪಿಗೆ ಸಡ್ಡು ಹೊಡೆದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಕಾಂಗ್ರೆಸ್ ಬಂಡಾಯದ ಇತರ ಕ್ಷೇತ್ರಗಳು
ರಾಜಾಜಿನಗರದಲ್ಲಿ (ಬೆಂಗಳೂರು) ಪದ್ಮಾವತಿ, ಮಹದೇವಪುರದಿಂದ (ಬೆಂಗಳೂರು) ನಲ್ಲೂರು ನಾಗೇಶ್, ಶಿರಸಿಯಿಂದ (ಉತ್ತರ ಕನ್ನಡ) ಭೀಮಣ್ಣ ನಾಯಕ್, ದಾವಣಗೆರೆ ಉತ್ತರ ಕ್ಷೇತ್ರದಿಂದ ಸೈಫುಲ್ಲಾ ಕಣಕ್ಕಿಳಿದಿದ್ದಾರೆ.