ರಜನಿಕಾಂತ್ ಫೇವರಿಟ್ ವಾಟಾಳ್ ಸ್ಥಿತಿ ಗತಿ
ಬೆಂಗಳೂರು, ಏ.2: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕನ್ನಡ ಚಳವಳಿಗಾರ ಮತ್ತು ಹಿರಿಯ ರಾಜಕಾರಣಿ ವಾಟಾಳ್ ನಾಗರಾಜ್ ಅವರನ್ನು ನಂಬಿಸಿ ಸರಿಯಾಗಿ ಕೈಕೊಟ್ಟಿದ್ದಾರೆ ಎಂಬ ವರದಿ ಹೊರ ಬಿದ್ದಿದೆ. ಅಂದ ಹಾಗೆ, ವಾಟಾಳ್ ಅವರಿಗೆ ಈ ರೀತಿ ಅಪಮಾನವಾಗುತ್ತಿರುವುದು ಇದು ಎರಡನೇ ಸಲ ಎಂಬುದನ್ನು ಮರೆಯಬಾರದು. ಸೂಪರ್ ಸ್ಟಾರ್ ರಜನಿಕಾಂತ್ ಅವರ ಫೇವರಿಟ್ ಭಾಷಣಗಾರ ಅಪ್ಪಟ ಕನ್ನಡ ಪರ ಹೋರಾಟಗಾರ ವಾಟಾಳ್ ಸ್ಥಿತಿ ಗತಿ ಏನಾಗಿದೆ?
ಕನ್ನಡ ಚಳವಳಿ ವಾಟಾಳ್ ಪಕ್ಷ ಎಂಬ ಕನ್ನಡ ಪರ ಪಕ್ಷ ಇದೆ ಎಂಬುದು ಹಲವು ಜನಕ್ಕೆ ನೆನಪಿದೆಯಾದರೂ ಅದರಲ್ಲಿ ವಾಟಾಳ್ ನಾಗರಾಜ್ ಅವರನ್ನು ಬಿಟ್ಟರೆ ಉಳಿದ ಯಾವೊಬ್ಬ ನಾಯಕರ ಹೆಸರು ನೆನಪಿಗೆ ಬರುವುದಿಲ್ಲ. ಈ ಹಿಂದೆ ಎಂಎಲ್ ಸಿ ಸೀಟು ಕೊಡಿಸಿ ನನಗೆ ಬೆಂಬಲ ನೀಡಿ ಎಂದು ಮಲ್ಲೇಶ್ವರಂ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಕೈ ಹಿಡಿದು ಕೊಂಡು ನಕ್ಕಿದ್ದ ವಾಟಾಳ್ ಈಗ ಬರಿಗೈ ದಾಸನಾಗಿದ್ದಾರೆ.
ಎಂಎಲ್ ಸಿ ಟಿಕೆಟ್ ಕಥೆ ಮುಗಿದ ಮೇಲೆ ಅಸೆಂಬ್ಲಿ ಟಿಕೆಟ್ ಕಥೆ ಆರಂಭವಾಯಿತು. ಮತ್ತೊಮ್ಮೆ ಯಡಿಯೂರಪ್ಪ ಅವರು ಹೀಗೆಂದರು 'ಚಾಮರಾಜನಗರ ಕ್ಷೇತ್ರದಿಂದ ನೀವು ಚುನಾವಣೆ ನಿಂತುಕೊಳ್ಳಿ. ನಮ್ಮ ಹೊಸ ಪಕ್ಷದಿಂದಲಾದರೂ ಸರಿ. ಇಲ್ಲದಿದ್ದರೆ ನಿಮ್ಮ ಪಕ್ಷದಿಂದಲೇ ಕಣಕ್ಕಿಳಿಯಿರಿ. ಆಗ ನಮ್ಮ ಹೊಸ ಪಕ್ಷದಿಂದ ಅಭ್ಯರ್ಥಿಯನ್ನು ಹಾಕುವುದಿಲ್ಲ.'
ಆದರೆ, ಈಗ ಯಡಿಯೂರಪ್ಪ ಅವರು ವಿಧಾನಪರಿಷತ್ ಸದಸ್ಯರಾಗಿದ್ದ ಕೆ.ಆರ್.ಮಲ್ಲಿಕಾರ್ಜುನ ಅವರ ಮನೆಗೆ ಹೋಗಿ ಕೆಜೆಪಿಗೆ ಆಹ್ವಾನಿಸಿ, ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡುವ ಭರವಸೆ ನೀಡಿದ್ದಾರೆ. ವಾಟಾಳ್ ಅವರಿಗೆ ಈಗ ಏನು ಮಾಡುವುದು ಎಂದು ತೋಚದೆ ಕಣಕ್ಕಿಳಿಯುವುದು ಹೇಗೆ ಎಂದು ಚಿಂತಿಸತೊಡಗಿದ್ದಾರೆ. ವಯಸ್ಸೇ ಆಗದ ಕನ್ನಡಪರ ನಾಯಕನ ಸ್ಥಿತಿ ಗತಿ ಚಿತ್ರಣ ನಿಮ್ಮ ಮುಂದೆ ಇಂದಿನ ಚಿತ್ರಸರಣಿಯಲ್ಲಿ...

ಬಿಎಸ್ ವೈ ಆಫರ್ ಏನಾಯ್ತು?
ಚಾಮರಾಜನಗರ ನನ್ನ ಕ್ಷೇತ್ರ ನಾನು ಗೆದ್ದರೂ ಸೋತರೂ ಅಲ್ಲೇ ಸ್ಪರ್ಧೆಗೆ ನಿಲ್ಲುತ್ತೇನೆ. ಬೆಂಗಳೂರಿನಲ್ಲಿ ಸ್ಪರ್ಧಿಸಲಾರೆ ಎಂದು ಸಾವಿರ ಸಲ ವಾಟಾಳ್ ಅವರು ಘೋಷಿಸಿದ್ದರೂ ಕೆಜೆಪಿ ಕಡೆಯಿಂದ ಮತ್ತೊಮ್ಮೆ ಬೆಂಗಳೂರು ಕ್ಷೇತ್ರಗಳ ಟಿಕೆಟ್ ಆಫರ್ ಬಂದಿದೆ. ಅಫ್ ಕೋರ್ಸ್ ವಾಟಾಳ್ ತಕ್ಷಣವೇ ತಿರಸ್ಕರಿಸಿದ್ದಾರೆ.

ಸಂಕಷ್ಟದಲ್ಲಿ ವಾಟಾಳ್
ಹೌದು ಚುನಾವಣೆ ವೆಚ್ಚ ಭರಿಸಲು ಸಾಧ್ಯವಾಗದೆ ವಾಟಾಳ್ ಅವರು ಒದ್ದಾಡುತ್ತಿದ್ದಾರೆ. ವಾಟಾಳ್ ಹೆಸರು ರಾಜ್ಯದ ಎಲ್ಲಾ ಜನತೆಗೆ ಗೊತ್ತಿದ್ದರೂ ಚುನಾವಣಾ ಪ್ರಚಾರದ ಖರ್ಚು ವೆಚ್ಚ ಭರಿಸಲು ಸಾಧ್ಯವಾಗುತ್ತಿಲ್ಲ. ಎನ್ ಜಿಒ ಗಳು, ಕೆಲವು ದಾನಿಗಳ ನೆರವಿನಿಂದ ಒಂದಿಷ್ಟು ಲಕ್ಷಗಳನ್ನು ಸಂಗ್ರಹಿಸಿ ಮತ್ತೆ ಕನ್ನಡಪರ ಹೋರಾಟಕ್ಕೆ ಧುಮುಕುತ್ತಿದ್ದಾರೆ.

ಕೈ ಹಿಡಿಯದ ಪಕ್ಷಗಳು
ವಾಟಾಳ್ ಅವರು ಇಲ್ಲದೆ ವಿಧಾನಮಂಡಲದಲ್ಲಿ ಕನ್ನಡ ಪರ ದನಿಯೇ ಸತ್ತಿರುವುದು ಎಲ್ಲಾ ಪಕ್ಷಕ್ಕೂ ಗೊತ್ತಿದೆ. ಕನ್ನಡ ಪರ ಹೋರಾಟಗಾರ ವಾಟಾಳ್ ಅವರನ್ನು ಪಕ್ಷಾತೀತವಾಗಿ ಎಂಎಲ್ ಸಿ ಮಾಡುವುದಿರಲಿ, ಅಸೆಂಬ್ಲಿ ಚುನಾವಣೆ ಸ್ಪರ್ಧಿಸುವಂತೆ ಯಾವ ಪಕ್ಷವೂ ಆಫರ್ ನೀಡಿಲ್ಲದಿರುವುದು ದುರಂತ. (ಚಿತ್ರ: ಗುಜ್ಜಾರಪ್ಪ)

ಕೆಜೆಪಿ ನೀಡಿದ್ದ ಆಫರ್
ಬೆಂಗಳೂರಿನ ಯಾವುದಾದರೊಂದು ಕ್ಷೇತ್ರದಿಂದ ಚುನಾವಣೆಗೆ ಸ್ವತಂತ್ರವಾಗಿಯೇ ಸ್ಪರ್ಧಿಸಿ, ಅಥವಾ ಕೆಜೆಪಿ ಟಿಕೆಟ್ ಪಡೆಯಿರಿ, ನಿಮ್ಮ ಚುನಾವಣೆಯ ಎಲ್ಲ ಖರ್ಚು ವೆಚ್ಚದ ಜವಾಬ್ದಾರಿ ವಹಿಸಿಕೊಳ್ಳುತ್ತೇವೆ ಎಂದು ಬಿಎಸ್ ವೈ ಆಫರ್ ನೀಡಿದ್ದರು. ವಾಟಾಳ್ ಕೆಜೆಪಿ ಸೇರದ ಕಾರಣ ಕೆಜೆಪಿ ಕೂಡಾ ವಾಟಾಳ್ ಪರ ನಿಂತಿಲ್ಲ. ವಾಟಾಳ್ ಕೂಡಾ ಆಫರ್ ಒಪ್ಪಿಕೊಂಡಿಲ್ಲ

ವಾಟಾಳ್ ಓದಿರುವುದು ಕನ್ನಡ ಮಾತ್ರ
ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಅವರು ಕನ್ನಡ ಸಂಸ್ಕೃತಿ, ಭಾಷೆ ಉಳಿವಿಗಾಗಿ ಹೋರಾಡುತ್ತಾ ಬಂದಿರುವ ಗಡಿನಾಡಿನ ಬಂಟ. ಚಾಮರಾಜನಗರ ಜಿಲ್ಲೆ ಮಾಜಿ ಶಾಸಕ ವಾಟಾಳ್ 10ನೇ ಕ್ಲಾಸ್ ಮೇಲೆ ಓದಿಲ್ಲ. ಆದರೂ ಕನ್ನಡ ಪರ ಹೋರಾಟ ನಿಲ್ಲಿಸಿಲ್ಲ. ಆವರಂತೆ ಭಾಷಣ ಬಿಗಿಯುವ ನಾಯಕರು ವಿರಳ

ರಜನಿಕಾಂತ್ ಗೂ ವಾಟಾಳ್ ಫೇವರೀಟ್
ವಿದ್ಯುತ್ ಸಮಸ್ಯೆ ಇದ್ದಾಗ ಚಿಮಣಿ ದೀಪ ಚಳುವಳಿ, ತೈಲಬೆಲೆ ಏರಿಕೆಯಾದಾಗ ಕತ್ತೆ, ಕೋಣದ ಮೇಲೆ ಕೂತು ಮೆರವಣಿಗೆ ನಡೆಸಿ ಚಳುವಳಿ, ತಮಟೆ ಚಳುವಳಿ, ಉರುಳು ಸೇವೆ ಹೀಗೆ ಹಲವಾರು ವೈವಿದ್ಯತೆಯ ಚಳುವಳಿಯನ್ನು ಹುಟ್ಟು ಹಾಕಿದ ವಾಟಾಳ್ ನಾಗರಾಜ್ ಭಾಷಣಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಕೂಡಾ ಫ್ಯಾನ್.

ಚಳವಳಿಗೆ ಧುಮುಕಿದ್ದು
1968-69ರಲ್ಲಿ ಕಬ್ಬನ್ ಪೇಟೆಯಿಂದ ನಗರ ಸಭೆಗೆ ಸ್ಪರ್ಧಿಸಿದರು. ಕನ್ನಡ ಅಭಿಮಾನಿಗಳ ಮೂಲಕವೇ ಬೆಂಗಳೂರಿನ ನಗರ ಪಾಲಿಕೆಗೆ ಮತ್ತು ವಿಧಾನ ಸಭೆಗೆ ಐದು ಬಾರಿ ಶಾಸಕರಾಗಿ ಅವರು ಚುನಾಯಿತರಾಗಲು ಸಾಧ್ಯವಾಯಿತು.

ವಯಸ್ಸೇ ಆಗದ ನಾಯಕ
ಅವರು ಟೊಪ್ಪಿ ಮತ್ತು ರೇಬಾನ್ ಕಪ್ಪು ಕನ್ನಡಕವನ್ನು ತೆಗೆದದ್ದು ಕಂಡವರೇ ವಿರಳ. ಪ್ರತಿಯೊಬ್ಬರ ಕಣ್ಣಿನ ಮೂಲಕ ಮತ್ತು ಅದರ ಸುತ್ತಲೂ ಆವರಿಸಿರುವ ಮುಖದ ಚರ್ಮದ ಮೂಲಕ ಪ್ರತಿಯೊಬ್ಬರ ವಯಸ್ಸನ್ನು ಸಾಮಾನ್ಯವಾಗಿ ಅರಿಯಲು ಸಾಧ್ಯವಿದೆ. ನಮ್ಮ ಎಣಿಕೆ ಪ್ರಕಾರ 75 ರ ಚಿರಯುವಕ.
* ರೈಲ್ವೆ ನೇಮಕಾತಿಯಲ್ಲಿ ಕನ್ನಡಿಗರಿಗೆ ವಂಚನೆ, ಚಾಮರಾಜಪೇಟೆ ಶ್ರೀರಾಮ ಸೇವಾಮಂಡಳಿ ತಮಿಳು ಸಂಗೀತಗಾರರನ್ನು ಕರೆಸಿದ ಪ್ರತಿಭಟಿಸಿದ್ದು, ಕನ್ನಡ ನಾಮಫಲಕಕ್ಕಾಗಿ ಹೋರಾಟ, ಬಿಐಎಎಲ್ ನಲ್ಲಿ ಹೋರಾಟ, ಚಿಲ್ಲರೆ ಲೆಕ್ಕದಲ್ಲಿ ದವಸ ದಾನ್ಯ ತರಕಾರಿ ಮಾರಾಟ, ಸೇರಿದಂತೆ ಜನ ಜಾಗೃತಿಯಲ್ಲಿ ಎತ್ತಿದ ಕೈ











Click it and Unblock the Notifications