ಕ್ಷೇತ್ರ ಪರಿಚಯ : ‘ಭತ್ತದ ಕಣಜ'ದಲ್ಲಿ ಗೆಲುವು ಯಾರಿಗೆ?
ರಾಯಚೂರು ಜಿಲ್ಲೆಯ ಮುಖ್ಯ ತಾಲೂಕು ಕೇಂದ್ರ ಸಿಂಧನೂರು. ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಿದಾಗಿದೆ. ತಾಲೂಕು ತುಂಗಭದ್ರಾ ಎಡದಂಡೆ ಕಾಲುವೆಯ ನೀರಾವರಿ ಪ್ರದೇಶದ ವ್ಯಾಪ್ತಿಗೆ ಒಳಪಡುತ್ತದೆ.
ಕ್ಷೇತ್ರದ ವ್ಯಾಪ್ತಿಯ ಬಹುತೇಕ ಭೂಮಿಯು ಕೃಷಿ ಯೋಗ್ಯವಾದ ಕಪ್ಪು ಮಣ್ಣಿನಿಂದ ಕೂಡಿದೆ. ತುಂಗಭದ್ರಾ ನದಿ ನೀರನ್ನು ಉಪಯೋಗಿಸಿಕೊಂಡು ಭತ್ತ ಬೆಳೆಯಲಾಗುತ್ತದೆ.
ಸಿಂಧನೂರನ್ನು 'ರಾಯಚೂರಿನ ಭತ್ತದ ಕಣಜ' ಎಂದು ಕರೆಯಲಾಗುತ್ತದೆ. ತುಂಗಭದ್ರಾ ನದಿ ನೀರಿನ ಲಭ್ಯತೆ ಇರುವುದದಿಂದ ವರ್ಷದಲ್ಲಿ ಎರಡು ಬಾರಿ ಭತ್ತವನ್ನು ಬೆಳೆಯುತ್ತಾರೆ.

ಕೃಷಿ ಚಟುವಟಿಕೆಗಳು ವರ್ಷಪೂರ್ತಿ ನಡೆಯುವುದರಿಂದ ಅತೀ ಹೆಚ್ಚು ಟ್ರಾಕ್ಟರ್ ಮಾರಾಟ ಇಲ್ಲಿ ನಡೆಯುತ್ತದೆ. ವಿದೇಶಗಳಿಗೆ ರಫ್ತಾಗುವ ಸೋನಾ ಮಸೂರಿ ಮತ್ತು ಬಾಸುವತಿ ಅಕ್ಕಿಯನ್ನು ಸಿಂಧನೂರಿನಲ್ಲಿ ಬೆಳೆಯಲಾಗುತ್ತಿದೆ.
ಕನ್ನಡ, ತಮಿಳು, ಬೆಂಗಾಲಿ, ರಾಜಸ್ಥಾನಿ, ಉರ್ದು ಹೀಗೆ ವಿವಿಧ ಭಾಷಗಳನ್ನು ಮಾತನಾಡುವ ಜನರು ಇಲ್ಲಿ ಸಿಗುತ್ತಾರೆ. ಸಿಂಧನೂರಿನಲ್ಲಿರುವ ಅಂಬಾದೇವಿಯ ಜಾತ್ರೆ ಪ್ರಸಿದ್ಧಿ ಪಡೆದಿದೆ. ಸಂಜೆ ತೇರು ಎಳೆಯುವುದು ಇಲ್ಲಿನ ಜಾತ್ರೆಯ ವಿಶೇಷವಾಗಿದೆ.
ರಾಜಕೀಯವಾಗಿ ಬಿಜೆಪಿ ನಾಯಕ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಅವರ ಕ್ಷೇತ್ರ ಸಿಂಧನೂರು. ಆದರೆ, ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಜೊತೆ ಅವರು ಗುರುತಿಸಿಕೊಂಡಿದ್ದಾರೆ. ಇದು ಚುನಾವಣೆ ಮೇಲೆಯೂ ಪ್ರಭಾವ ಬೀರಲಿದೆಯೇ? ಕಾದು ನೋಡಬೇಕು.
ಕ್ಷೇತ್ರದ ಹಾಲಿ ಶಾಸಕರು ಕಾಂಗ್ರೆಸ್ನ ಬಾದರ್ಲಿ ಹಂಪನಗೌಡರು. ಜೆಡಿಎಸ್ ಪಕ್ಷದ ವೆಂಕಟರಾವ್ ನಾಡಗೌಡರು ಹಂಪನಗೌಡರಿಗೆ ಪ್ರಬಲ ಪೈಪೋಟಿ ನೀಡುತ್ತಾರೆ. ವೆಂಕಟರಾವ್ ಜೆಡಿಎಸ್ ವರಿಷ್ಠ ನಾಯಕರಿಗೆ ಆಪ್ತರು. ಆದ್ದರಿಂದ, ಈ ಬಾರಿಯು ಟಿಕೆಟ್ ಖಚಿತ.
ಬಿಜೆಪಿಗೆ ಸಿಂಧನೂರು ಕ್ಷೇತ್ರದಲ್ಲಿ ಅಭ್ಯರ್ಥಿ ಯಾರು? ಎಂಬುದು ಖಚಿತವಾಗಿಲ್ಲ. 2013ರ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿದ್ದ ರಾಜಶೇಖರ ಗೌಡರೂ ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ. ಆದರೆ, ವಿರೂಪಾಕ್ಷಪ್ಪ ಅವರಿಗೆ ಬೆಂಬಲ ನೀಡುತ್ತಾರೆಯೇ?.
2013ರ ಚುನಾವಣೆಯಲ್ಲಿ ಬಾದರ್ಲಿ ಹಂಪನಗೌಡರು 49,213 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್ನ ವೆಂಕಟರಾವ್ ನಾಡಗೌಡ 30,895 ಮತ, ಬಿಜೆಪಿಯ ಕೊಲ್ಲಾ ಶೇಷಗಿರಿ ರಾವ್ 10,557 ಮತಗಳನ್ನು ಪಡೆದಿದ್ದಾರೆ.












Click it and Unblock the Notifications