ರಾಮದುರ್ಗ ಕ್ಷೇತ್ರ ಪರಿಚಯ : ಗೊಡಚಿ ವೀರಭದ್ರೇಶ್ವರ ಕೃಪೆ ಯಾರಿಗೆ?
ಬೆಳಗಾವಿ, ಏಪ್ರಿಲ್ 11 : ಬೆಳಗಾವಿ ಜಿಲ್ಲೆಯ ಒಂದು ತಾಲೂಕು ಕೇಂದ್ರ ರಾಮದುರ್ಗ. ಮಲಪ್ರಭಾ ನದಿಯ ದಡದಲ್ಲಿರುವ ಕ್ಷೇತ್ರವಿದು. ತಾಲೂಕಿನ ಗೊಡಚಿ ವೀರಭದ್ರೇಶ್ವರ ದೇವಾಲಯ ತುಂಬಾ ಪ್ರಸಿದ್ಧಿ ಪಡೆದಿದೆ.
2011ರ ಜನಗಣತಿ ಪ್ರಕಾರ ರಾಮದುರ್ಗ ಕ್ಷೇತ್ರದ ಜನಸಂಖ್ಯೆ 31822. ತಾಲೂಕಿನ ಕಿತ್ತೂರ ಗ್ರಾಮದ ಕಂಬಳಿಗಳು ಬಹಳ ಪ್ರಸಿದ್ಧಿ ಪಡೆದಿವೆ. ಪ್ರತಿ ವರ್ಷದ ಡಿಸೆಂಬರ್ನಲ್ಲಿ ಗೊಡಚಿ ವೀರಭದ್ರೇಶ್ವರ ಜಾತ್ರೆ ನಡೆಯುತ್ತದೆ. ಸಾವಿರಾರು ಭಕ್ತರು ಇದರಲ್ಲಿ ಪಾಲ್ಗೊಳ್ಳುತ್ತಾರೆ.
ಕ್ಷೇತ್ರ ಪರಿಚಯ : ಸವದತ್ತಿ ಯಲ್ಲಮ್ಮ ಕೃಪೆಯಿಂದ ಯಾರಿಗೆ ಗೆಲುವು?
ರಾಜ್ಯ ಸರ್ಕಾರ ರಾಮುದುರ್ಗ ಸಂಸ್ಥಾನಿಕರ ಕಾಲದ ಕಾರಾಗೃಹವನ್ನು ಸುಮಾರು 60 ಲಕ್ಷ ವೆಚ್ಚದಲ್ಲಿ ನವೀಕರಣ ಮಾಡಿದೆ. ಆಕರ್ಷಕ ವಸ್ತು ಸಂಗ್ರಹಾಲಯವನ್ನು ನಿರ್ಮಾಣ ಮಾಡಲಾಗಿದೆ. ರಾಮದುರ್ಗ ಅರಸು ಮನೆತನದ ಕುರುಹುಗಳನ್ನು ಇಲ್ಲಿ ಕಾಣಬಹುದಾಗಿದೆ.
ರಾಜಕೀಯವಾಗಿ ಕ್ಷೇತ್ರದ ಶಾಸಕರು ಕಾಂಗ್ರೆಸ್ನ ಅಶೋಕ ಪಟ್ಟಣ. ಸ್ವಾತಂತ್ರ್ಯ ನಂತರದಿಂದ ಇಲ್ಲಿಯ ವರೆಗೆ ಕ್ಷೇತ್ರದಲ್ಲಿ ಲಿಂಗಾಯತ ಮತ್ತು ಲಿಂಗಾಯತ ರೆಡ್ಡಿ ಸಮುದಾಯವರದ್ದೆ ಅಧಿಕಾರವಿದೆ. ಈ ಬಾರಿಯೂ ಅಶೋಕ ಪಟ್ಟಣ ಮತ್ತೊಮ್ಮೆ ಆಯ್ಕೆಯಾಗುವ ಸಾಧ್ಯತೆ ಇದೆ.
ಕ್ಷೇತ್ರ ಪರಿಚಯ: ಎಂಇಎಸ್ ಹಿಡಿತದಿಂದ ಹೊರಬರುತ್ತದೆಯೇ ಖಾನಾಪುರ?
ಕ್ಷೇತ್ರದ ಬಿಜೆಪಿ ನಾಯಕರು ಅಸಮಾಧಾನವನ್ನು ಬದಿಗೊತ್ತಿದರೆ ಅಶೋಕ ಪಟ್ಟಣ ಅವರನ್ನು ಸೋಲಿಸಬಹುದಾಗಿದೆ. ಜೆಡಿಎಸ್ ಪಕ್ಷ ಮುಸ್ಲಿಂ ಸಮುದಾಯಕ್ಕೆ ಸೇರಿದ ಜಾವೇದ್ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿದೆ.
2013ರಲ್ಲಿ ಅಶೋಕ ಪಟ್ಟಣ ಅವರು 42,310 ಮತಗಳನ್ನು ಪಡೆದು ಜಯಗಳಿಸಿದ್ದರು. ಬಿಜೆಪಿಯ ಮಹದೇವಪ್ಪ ಯದವಾಡ ಅವರು 37,326 ಮತ ಪಡೆದಿದ್ದರು. ಜೆಡಿಎಸ್ನಿಂದ ಕಣಕ್ಕಿಳಿದಿದ್ದ ಪಾರಪ್ಪ ಗೌಡ ಪಾಟೀಲ ಅವರು 17,303 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದಿದ್ದರು.