ಕ್ಷೇತ್ರ ಪರಿಚಯ : ತುಂಡು ಭೂಮಿಗಿಲ್ಲಿ ಬಂಗಾರದ ಬೆಲೆ!
ವಿಮಾನದ ನೆರಳು ಬೀಳುವ ಭೂಮಿಗೆಲ್ಲ ಬಂಗಾರದ ಬೆಲೆ ಇರುವ ಕ್ಷೇತ್ರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ. ಇಲ್ಲಿನ ರೈತರ ಭೂಮಿ ಮೇಲೆ ಉದ್ಯಮಿಗಳಿಗೆ ಸದಾ ಕಣ್ಣಿದೆ. ವಿಮಾನ ನಿಲ್ದಾಣವನ್ನು ತನ್ನ ಒಡಲಲ್ಲಿ ಹೊಂದಿರುವ ಕ್ಷೇತ್ರವಿದು.
ಕ್ಷೇತ್ರ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರಿದ್ದರೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇರುವ ಕಾರಣಕ್ಕೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗಳ ಬಸ್ಸುಗಳು ಇಲ್ಲಿಯ ತನಕ ಸಂಚಾರ ನಡೆಸುತ್ತವೆ. ಪ್ರತಿನಿತ್ಯ ಲಕ್ಷಾಂತರ ಜನರು ಕ್ಷೇತ್ರದ ಮೂಲಕ ಸಂಚಾರ ನಡೆಸುತ್ತಾರೆ.
ದೇವನಹಳ್ಳಿಗೆ ನಮ್ಮ ಮೆಟ್ರೋ ಸಂಪರ್ಕ ಕಲ್ಪಿಸುವ ಯೋಜನೆ ಸಿದ್ಧವಾಗಿದೆ. ಬೆಂಗಳೂರು ನಗರದ ಯಾವ ಬಡಾವಣೆಯಿಂದ ಹೊರಟರೂ ಒಂದು ಗಂಟೆಯಲ್ಲಿ ವಿಮಾನ ನಿಲ್ದಾಣ ತಲುಪಬೇಕು ಎಂಬುದು ಯೋಜನೆಯ ಉದ್ದೇಶ.
ರಾಜಕೀಯವಾಗಿ ಮೂರು ಬಾರಿ ಕಾಂಗ್ರೆಸ್ ಇಲ್ಲಿ ಜಯಗಳಿಸಿದೆ. ಸದ್ಯ, ಜೆಡಿಎಸ್ ಪಕ್ಷದ ಪಿಳ್ಳ ಮುನಿಸ್ವಾಮಪ್ಪ ಕ್ಷೇತ್ರದ ಶಾಸಕರು. ಕಳೆದ ಚುನಾವಣೆಯಲ್ಲಿ 70,323 ಮತಗಳನ್ನು ಪಡೆದು ಅವರು ಗೆಲುವು ಸಾಧಿಸಿದ್ದಾರೆ.

ಒಕ್ಕಲಿಗರು ಈ ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ನ ವೆಂಕಟಸ್ವಾಮಿ ಅವರು ಕೇವಲ 1,942 ಮತಗಳಿಂದ ಸೋತಿದ್ದರು. ಆದ್ದರಿಂದ, ಕ್ಷೇತ್ರದಲ್ಲಿ ಕಾಂಗ್ರೆಸ್ ಸಹ ಪ್ರಭಾವ ಹೊಂದಿದೆ.
ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರ ಚಿಕ್ಕಬಳ್ಳಾಪುರ ವ್ಯಾಪ್ತಿಗೆ ಒಳಪಡುತ್ತದೆ. ಎಚ್.ಡಿ.ಕುಮಾರಸ್ವಾಮಿ, ಎಂ.ವೀರಪ್ಪ ಮೊಯ್ಲಿ, ಬಿ.ಎನ್.ಬಚ್ಚೇಗೌಡ ಅವರ ಸ್ಪರ್ಧೆಯಿಂದಾಗಿ 2014ರ ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರ ಭಾರೀ ಗಮನ ಸೆಳೆದಿತ್ತು.
2013ರ ಚುನಾವಣೆಯಲ್ಲಿ ಪಿಳ್ಳ ಮುನಿಶ್ಯಾಮಪ್ಪ ಅವರು 70,323, ಕಾಂಗ್ರೆಸ್ನ ವೆಂಕಟಸ್ವಾಮಿ 68,381, ಬಿಜೆಪಿಯ ಜಿ.ಚಂದ್ರಣ್ಣ 9,418 ಮತಗಳನ್ನು ಪಡೆದಿದ್ದರು.












Click it and Unblock the Notifications