ಎಚ್ಡಿಕೆ ತೆಕ್ಕೆಯಲ್ಲೇ ಇಂಧನ ಖಾತೆ! ಡಿಕೆಶಿ ಮೌನಕ್ಕೆ ಏನರ್ಥ?!
Recommended Video
ಒಂದೆಡೆ ಕರ್ನಾಟಕದಲ್ಲಿ ಖಾತೆ ಹಂಚಿಕೆಯ ಭರಾಟೆ ಜೋರಾಗಿದ್ದರೆ, ಕನ್ನಡಿಕರು ಕಣ್ಣು ನೆಟ್ಟಿದ್ದಿದು ಎಲ್ಲಕ್ಕಿಂತ ಮುಖ್ಯವಾಗಿ 'ಇಂಧನ' ಖಾತೆ ಮೇಲೆ! ಅದಕ್ಕೆ ಕಾರಣವೂ ಇಲ್ಲದಿಲ್ಲ. ಕಾಂಗ್ರೆಸ್ಸಿನ ಪಾಲಿಗೆ ಯಾವತ್ತಿಗೂ ಅನಿವಾರ್ಯ ನಾಯಕ ಎಂಬ ಹೆಗ್ಗಳಿಕೆ ಗಳಿಸಿದ ಡಿ ಕೆ ಶಿವಕುಮಾರ್ ಅವರು ಹಿಂದಿನ ಸರ್ಕಾರದ ಅವಧಿಯಲ್ಲಿ ನಿಭಾಯಿಸುತ್ತಿದ್ದ ಈ ಖಾತೆಯ ಮೇಲೆ ಈ ಬಾರಿ ಜೆಡಿಎಸ್ ಮುಖಂಡ ಎಚ್ ಡಿ ರೇವಣ್ಣ ಸಹ ಕಣ್ಣಿಟ್ಟಿದ್ದು ಗುಟ್ಟಿನ ವಿಷಯವಾಗಿ ಉಳಿದಿರಲಿಲ್ಲ.
ಈ ಹಿನ್ನೆಲೆಯಲ್ಲಿ ಈ ಮಹತ್ವದ ಖಾತೆ ಯಾರಿಗೊಲಿಯಲಿದೆ ಎಂಬುದು ಕುತೂಹಲದ ವಿಷಯವಾಗಿತ್ತು. ಆದರೆ ಬೆಣ್ಣೆಯಲ್ಲಿನ ಕೂದಲು ತೆಗೆದಷ್ಟೇ ನಾಜೂಕಾಗಿ ಈ ಗೊಂದಲವನ್ನು ಗೊಂದಲವಾಗುವ ಮೊದಲೇ ಬಗೆಹರಿಸಿದರು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ.
ಭುಗಿಲೆದ್ದ ಆಕ್ರೋಶ: ಸಂಕಷ್ಟದಲ್ಲಿರುವ ಕಾಂಗ್ರೆಸ್ ಅನ್ನು ದಡ ಸೇರಿಸುವವರಾರು?
ಇಂಧನ ಖಾತೆಯನ್ನು ಯಾರಿಗೂ ಕೊಡದೆ, ತಮ್ಮ ತೆಕ್ಕೆಯಲ್ಲೇ ಉಳಿಸಿಕೊಂಡರು ಎಚ್ ಡಿಕೆ. ಹಣಕಾಸು, ಡಿಪಿಎಆರ್, ಇಂಧನ, ಅಬಕಾರಿ, ಜವಳಿ, ವಾರ್ತಾ ಮತ್ತು ಪ್ರಸಾರ, ಯೋಜನೆ ಮತ್ತು ಸಾಂಖ್ಯಿಕ, ಮೂಲ ಸೌಕರ್ಯ ಅಭಿವೃದ್ಧಿ, ಸಾರ್ವಜನಿಕ ಉದ್ದಿಮೆ ಹಾಗೂ ಈಗಾಗಲೇ ಹಂಚಿದ ಖಾತೆಗಳನ್ನು ಬಿಟ್ಟು ಬಾಕಿ ಉಳಿದ ಎಲ್ಲಾ ಖಾತೆಗಳನ್ನು ಕುಮಾರಸ್ವಾಮಿ ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ.
ಕುಮಾರಸ್ವಾಮಿ ಲೆಕ್ಕಾಚಾರವೇನು?
ಅಷ್ಟಕ್ಕೂ ಕುಮಾರಸ್ವಾಮಿಯವರ ಲೆಕ್ಕಾಚಾರವೇನು? ಇಂಧನ ಖಾತೆಯ ಮೇಲೆ ಕಣ್ಣಿಟ್ಟಿರುವುದು ಸಹೋದರ ಎಚ್ ಡಿ ರೇವಣ್ಣ. ಇತ್ತ ಕಾಂಗ್ರೆಸ್ಸಿನ ಆಪದ್ಬಾಂಧವ ಡಿ ಕೆ ಶಿವಕುಮಾರ್ ಅವರು ಸಹ ಇಂಧನ ಖಾತೆಯ ಆಕಾಂಕ್ಷಿ. ರೇವಣ್ಣ ಅವರ ವಿರೋಧ ಕಟ್ಟಿಕೊಂಡರೆ ಸರ್ಕಾರ ನಡೆಸುವುದು ಸುಲಭವಲ್ಲ ಎಂಬುದು ಕುಮಾರಸ್ವಾಮಿಯವರಿಗೆ ಗೊತ್ತಿಲ್ಲದ್ದೇನಲ್ಲ. ಇತ್ತ ಡಿ ಕೆ ಶಿವಕುಮಾರ್ ಅವರು ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದವರು. ಅವರೊಂದಿಗೂ ನಿಷ್ಠುರ ಕಟ್ಟಿಕೊಳ್ಳುವಂತಿಲ್ಲ. ಆದ್ದರಿಂದಲೇ ಯಾರ ತಕರಾರೂ ಬೇಡ ಎಂದು ಆ ಖಾತೆಯನ್ನು ಸದ್ಯಕ್ಕೆ ತಮ್ಮೊಂದಿಗೇ ಇಟ್ಟುಕೊಳ್ಳುವ ಉಪಾಯ ಮಾಡಿದ್ದಾರೆ ಕುಮಾರಸ್ವಾಮಿ.
ಕುಮಾರಸ್ವಾಮಿ ಸಂಪುಟದ ಖಾತೆ ಹಂಚಿಕೆ: ದೇವೇಗೌಡ್ರ ಮಾಸ್ಟರ್ ಮೈಂಡ್
ಇಂಧನ ಖಾತೆ ಸಿಕ್ಕದ ಬಗ್ಗೆ ಡಿಕೆಶಿ ಅಸಮಾಧಾನ?
ಈ ಕುರಿತು ಡಿಕೆಶಿ ಅವರಿಗೆ ಅಸಮಾಧಾನವಾಗಿದೆಯಾ ಎಂಬ ಪ್ರಶ್ನೆಯನ್ನು ಕೇಳುವಂತೆಯೇ ಇಲ್ಲ. ಹೈಕಮಾಂಡ್ ನನ್ನ ಸಾಮರ್ಥ್ಯಕ್ಕೆ ತಕ್ಕಂಥ ಹುದ್ದೆ, ಸ್ಥಾನಮಾನ ನೀಡುತ್ತದೆ ಎಂದು ನಂಬಿದ್ದೇನೆ ಎಂದು ಪುನರುಚ್ಛರಿಸಿದ್ದರೂ, ಪಕ್ಷ ಮತ್ತು ಹೊಸ ಮೈತ್ರಿ ಸರ್ಕಾರ ತಮ್ಮನ್ನು ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ಡಿ ಕೆ ಶಿವಕುಮಾರ್ ಅವರಲ್ಲಿ ಒಳಗೊಳಗೇ ಬೇಸರ ಇರುವುದು ಗುಟ್ಟಾಗಿ ಉಳಿದಿಲ್ಲ. ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಖಾತೆಯನ್ನು ಡಿ ಕೆ ಶಿ ಅವರಿಗೆ ನೀಡಲಾಗಿದ್ದು, ಈ ಎರಡೂ ಮಹತ್ವದ ಖಾತೆಗಳೇ. ಆದರೆ ಉಪಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದ, ಆ ಸ್ಥಾನ ತುಂಬುವ ಅರ್ಹತೆಯನ್ನೂ ಹೊಂದಿದ್ದ ಡಿಕೆಶಿ ಅವರಿಗೆ ಈ ಯಾವ ಖಾತೆಗಳೂ ತೃಪ್ತಿ ನೀಡಿದಂತಿಲ್ಲ.
ಡಿಕೆಶಿ ಮೌನದ ಅರ್ಥವೇನು?
ಡಿಕೆಶಿ ಅವರಿಗೆ ಸೂಕ್ತ ಸ್ಥಾನಮಾನ ಸಿಕ್ಕುತ್ತಿಲ್ಲ ಎಂದು ಅವರು ಸದ್ಯಕ್ಕೆ ಸುಮ್ಮನಿದ್ದರೂ, ಅವರ ಸಹನೆಗೂ ಮಿತಿ ಎಂಬುದು ಇದ್ದೇ ಇದೆ. ಈ ವಿಷಯದಲ್ಲಿ ಡಿ ಕೆ ಶಿವಕುಮಾರ್ ಸುಮ್ಮನಿದ್ದರೂ, ಅವರ ಸಹೋದರ ಸಂಸದ ಡಿ ಕೆ ಸುರೇಶ್ ಸುಮ್ಮನಿರುವ ಜಾಯಮಾನದವರಲ್ಲ. ಈಗಾಗಲೇ 'ಗೇಟು ಕಾದು, ಶಾಸಕರನ್ನು ಉಳಿಸಿಕೊಳ್ಳುವವರು ನಾವು. ಅಧಿಕಾರ ಮಾತ್ರ ಬೇರೆಯವರಿಗೆ' ಎಂದು ಬಾಂಬ್ ಸಿಡಿಸಿದ್ದಾರೆ ಡಿ ಕೆ ಸುರೇಶ್. ಜಿ ಪರಮೇಶ್ವರ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿದ್ದರ ಕುರಿತು ಅಸಮಾಧಾನವನ್ನು ಡಿಕೆಶಿ ಬಹಿರಂಗವಾಗಿ ವ್ಯಕ್ತಪಡಿಸದಿದ್ದರೂ, ಅವರ ಹಲವು ನಡೆಗಳು ಅದನ್ನು ತೋರಿಸಿಕೊಟ್ಟಿವೆ. ಡಿಕೆಶಿ ಮಾತನಾಡುವುದಕ್ಕಿಂತ ಮೌನವಾಗಿದ್ದರೇನೇ ಕಾಂಗ್ರೆಸ್ಸಿಗೆ ಹೆಚ್ಚು ಕಷ್ಟ! ಆದ್ದರಿಂದ ಇಷ್ಟೆಲ್ಲ ಆದರೂ ,'ಹೈಕಮಾಂಡ್ ನೋಡಿಕೊಳ್ಳುತ್ತೆ' ಎಂದು ಸುಮ್ಮನಿರುವ ಡಿಕೆಶಿ ನಡೆಯನ್ನು ಅರ್ಥಮಾಡಿಕೊಳ್ಳುವುದೇ ಕಷ್ಟವೆನ್ನಿಸಿದೆ!
ಹೈಕಮಾಂಡ್ ತಲೆಹಾಕದಿರುವುದೇಕೆ?
ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನ ಪದೇ ಪದೇ ರಾಜ್ಯಕ್ಕೆ ಎಡತಾಕುತ್ತಲೇ ಇದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಯಾಕೋ ಮೌನವಾಗಿದ್ದಾರೆ. ರಾಜ್ಯದ ನಾಯಕರು ಸಚಿವ ಸ್ಥಾನಕ್ಕಾಗಿ, ನಿರ್ದಿಷ್ಟ ಖಾತೆಗಾಗಿ ಬೇಡಿಕೆ ಇಟ್ಟು ದೆಹಲಿಗೆ ಎಡತಾಕುತ್ತಿದ್ದರೆ, ಹೈಕಮಾಂಡ್ ಮಾತ್ರ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ನೀಡಿದ್ದು ಬೇಷರತ್ ಬೆಂಬಲ! ಅದೂ ಅಲ್ಲದೆ, ಅನಿರೀಕ್ಷಿತ ರೀತಿಯಲ್ಲಿ ಹೀನಾಯ ಪ್ರದರ್ಶನ ತೋರಿ ಸೋತ ಕಾಂಗ್ರೆಸ್ ಕರ್ನಾಟಕದಲ್ಲಿ ಹಾಗೂ, ಹೀಗೂ ಕಷ್ಟಪಟ್ಟು ಮೈತ್ರಿ ಸರ್ಕಾರ ಮಾಡಿದೆ. ಹೀಗಿರುವಾಗ ಹೈಕಮಾಂಡ್ ಮುಂದೆ ಬಂದು ನಿಂತ ಬಂಡಾಯ ನಾಯಕರ ಅಹವಾಲಿಗೆ ಸ್ಪಂದಿಸಿದ್ದೇ ಆದಲ್ಲಿ ಈ ಸರ್ಕಾರವೂ ಹಳ್ಳ ಹಿಡಿಯುವುದು ಖಂಡಿತ ಎಂಬ ಭಯ ಹೈಕಮಾಂಡ್ ನಾಯಕರಲ್ಲೂ ಇದೆ. ಆ ಕಾರಣದಿಂದಲೇ ಬೀಸೋ ದೊಡ್ಡೆ ಇಂದ ಪಾರಾದ್ರೆ ನೂರು ವರ್ಷ ಆಯಸ್ಸು ಎಂದು ಬಂದು ಹೋಗುವ ಬಂಡಾಯ ನಾಯಕರಿಗೆಲ್ಲ ಸಮಾಧಾನ ಮಾಡಿ ಕಳಿಸುತ್ತಿದೆ ಹೈಕಮಾಂಡ್!