ಬೆಂಗಳೂರು ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗ್ಗೇಶ್ ಸಂದರ್ಶನ

Recommended Video

      ಬೆಂಗಳೂರು ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗ್ಗೇಶ್ ಸಂದರ್ಶನ | Oneindia Kannada

      2008ರಲ್ಲಿ ತುರುವೇಕೆರೆ ಅಸೆಂಬ್ಲಿ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟಿನಿಂದ ಸ್ಪರ್ಧಿಸಿ ಜಯಭೇರಿ ಬಾರಿಸಿದ್ದ ಜಗ್ಗೇಶ್, ಆನಂತರ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿಯನ್ನು ಸೇರಿದ್ದರು. ಇದಾದ ನಂತರ ವಿಧಾನಪರಿಷತ್ ಸದಸ್ಯರಾಗಿ ಜೊತೆಗೆ, ಬಿಜೆಪಿ ಸರಕಾರದ ಅವಧಿಯಲ್ಲಿ ಕರ್ನಾಟಕ ರಸ್ತೆಸಾರಿಗೆ ಸಂಸ್ಥೆಯ ಉಪಾಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದರು.

      ಸದ್ಯ, ಬೆಂಗಳೂರು ನಗರ ವ್ಯಾಪ್ತಿಯ ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಜಗ್ಗೇಶ್ ಅವರಿಗೆ ಕೊನೇ ಗಳಿಗೆಯಲ್ಲಿ ಟಿಕೆಟ್ ಘೋಷಣೆಯಾಗಿತ್ತು. ಅವರೇ ಹೇಳುವಂತೆ, ಬಿಜೆಪಿ ಟಿಕೆಟ್ ಬಯಸದೇ ಬಂದದ್ದು.

      ಕಾಂಗ್ರೆಸ್ ಅಭ್ಯರ್ಥಿ ಮತ್ತು ಹಾಲೀ ಶಾಸಕ ಎಸ್ ಟಿ ಸೋಮಶೇಖರ್ ಮತ್ತು ಜೆಡಿಎಸ್ ಅಭ್ಯರ್ಥಿ ಜವರಾಯಿ ಗೌಡ ಅವರಿಂದ ತೀವ್ರ ಸ್ಪರ್ಧೆ ಎದುರಿಸುತ್ತಿರುವ ಜಗ್ಗೇಶ್, ಮತದಾರ ಈ ಬಾರಿ ಬಿಜೆಪಿಗೆ ಆಶೀರ್ವಾದ ಮಾಡಲಿದ್ದಾನೆ ಎನ್ನುವ ವಿಶ್ವಾಸದಲ್ಲಿದ್ದಾರೆ.

      ರಾಜ್ಯದ ಅತ್ಯಂತ ದೊಡ್ಡ (ಭೌಗೋಳಿಕವಾಗಿ) ಕ್ಷೇತ್ರಗಳಲ್ಲಿ ಒಂದಾಗಿರುವ ಯಶವಂತಪುರ ಕ್ಷೇತ್ರದಲ್ಲಿ ಪೂರ್ವತಯಾರಿ ನಡೆಸಲು ಜಗ್ಗೇಶ್ ಅವರಿಗೆ ಸಮಾಯಾವಕಾಶ ನೀಡಬೇಕಿತ್ತು ಎನ್ನುವುದು ಕ್ಷೇತ್ರದಲ್ಲಿ ಅಲ್ಲಲ್ಲಿ ಕೇಳಿ ಬರುತ್ತಿರುವ ಮಾತು.

      ಸಮಯ ಕಡಿಮೆಯಿದ್ದರೂ, ಕಾರ್ಯಕರ್ತರ ಉತ್ಸಾಹ ನೋಡಿದರೆ, ನನ್ನ ರಾಜಕೀಯ ಜೀವನ ಸಾರ್ಥಕವಾಯಿತು ಎನ್ನುವ ಜಗ್ಗೇಶ್ ಅವರನ್ನು, ಬಿರುಸಿನ ಪ್ರಚಾರದ ವೇಳೆ, ಉಳ್ಳಾಲ ಉಪನಗರ ಬಸ್ ನಿಲ್ದಾಣದ ಬಳಿ 'ಕ್ಯಾಚ್' ಹಾಕೊಂಡು ಸಂದರ್ಶನ ನಡೆಸಿದ್ವಿ. ಸಂದರ್ಶನ ಮತ್ತು ಅವರ ಆಡಿರುವ ಪದಪುಂಜಗಳನ್ನು ಯಥಾವತ್ತಾಗಿ ಇಲ್ಲಿ ಪ್ರಕಟಿಸುತ್ತಿದ್ದೇವೆ.

      ಶಿಸ್ತಿನ ಕಾರ್ಯಕರ್ತರೇ ಬಿಜೆಪಿಯ ಆಸ್ತಿ

      ಶಿಸ್ತಿನ ಕಾರ್ಯಕರ್ತರೇ ಬಿಜೆಪಿಯ ಆಸ್ತಿ

      ಪ್ರ: ಯಶವಂತಪುರದ ಟಿಕೆಟ್ ನೀವು ಬಯಸಿದ್ರಾ?
      ಜಗ್ಗೇಶ್: ನಾನು ಬಯಸಿರಲಿಲ್ಲ. ಕಡೇ ಗಳಿಗೆಯವರೆಗೂ ಟಿಕೆಟ್ ನನಗೆ ಸಿಗುತ್ತದೆ ಅಂದು ಅನ್ಕೊಂಡಿರಲಿಲ್ಲ. ಬಿಎಸ್ವೈ ನನ್ನನ್ನು ಕೇಳಿದಾಗಲೂ ಕೂಡಾ ನಾನು ಬೇಡ ಅಂದಿದ್ದೆ. ಯಾಕೆಂದರೆ ನಾನು ಎರಡು ಬಾರಿ ಶಾಸಕನಾಗಿದ್ದವನು, ಇದು ಮೂರನೇ ಚುನಾವಣೆ ನಾನು ಎದುರಿಸುತ್ತಿರುವುದು. ಗ್ರಾಸ್ ರೂಟ್ ನಿಂದ ಪಕ್ಷ ಕಟ್ಟಬೇಕು, ಜೊತೆಗೆ ಬೆರೆಯಬೇಕು ಎನ್ನುವುದು ನನ್ನ ನಿಲುವು.

      ಬೇರೆ ಪಕ್ಷದಲ್ಲಿ ದುಡ್ಡು ಕೊಟ್ಟು ಕಾರ್ಯಕರ್ತರನ್ನು ಕರೆದುಕೊಂಡು ಬರಬೇಕಾಗುತ್ತದೆ, ಆದರೆ ಬಿಜೆಪಿಯಲ್ಲಿ ಹಾಗಿಲ್ಲ. ನಾಯಕರು ಬರುತ್ತಾರೆ ಹೋಗುತ್ತಾರೆ, ಆದರೆ ಶಿಸ್ತಿನ ಕಾರ್ಯಕರ್ತರೇ ಬಿಜೆಪಿಯ ಆಸ್ತಿ. ಅದನ್ನು ಈ ಕ್ಷೇತ್ರದ ಕಾರ್ಯಕರ್ತರು ನಿರೂಪಿಸಿದ್ದಾರೆ.

      ಈ ಕ್ಷೇತ್ರದಲ್ಲಿ ಐದು ಜಿಲ್ಲಾ ಪಂಚಾಯತು, ಐದು ಬಿಬಿಎಂಪಿ ವಾರ್ಡ್

      ಈ ಕ್ಷೇತ್ರದಲ್ಲಿ ಐದು ಜಿಲ್ಲಾ ಪಂಚಾಯತು, ಐದು ಬಿಬಿಎಂಪಿ ವಾರ್ಡ್

      ಪ್ರ: ಕ್ಷೇತ್ರದ ಎಲ್ಲಾ ಮತದಾರರನ್ನು ತಲುಪಲು ಆಗುತ್ತಿದೆಯಾ?
      ಜಗ್ಗೇಶ್: ಖಂಡಿತ ಎಲ್ಲಾ ಪ್ರದೇಶ ಮತ್ತು ಮತದಾರರನ್ನು ಭೇಟಿ ಮಾಡಲು ಸಾಧ್ಯವಾಗುತ್ತಿದೆ. ನಾವು, ಸದಾನಂದ ಗೌಡರು, ಶಕ್ತಿಕೇಂದ್ರದ ಅಧ್ಯಕ್ಷರು ನಾವೆಲ್ಲಾ ಕೂತು ರೂಪುರೇಷೆ ಸಿದ್ದಪಡಿಸಿಕೊಂಡೆವು. ಎಷ್ಟು ಬೇಗ ಅಭ್ಯರ್ಥಿಯ ಪರಿಚಯವನ್ನು ನಮ್ಮ ಕಾರ್ಯಕರ್ತರಿಗೆ ಹೇಗೆ ಮುಟ್ಟಿಸಬಹುದು ಎನ್ನುವುದರ ಬಗ್ಗೆ ಪ್ಲ್ಯಾನ್ ರೂಪಿಸಿದೆವು.

      ದಿನವೊಂದಕ್ಕೆ ಐದೈದು ಶಕ್ತಿಕೇಂದ್ರಗಳನ್ನು ಭೇಟಿ ಮಾಡಲು ನಿರ್ಧರಿಸಿದೆವು. ಮೊದಲು ಕಾರ್ಯಕರ್ತರನ್ನು ಭೇಟಿ ಮಾಡುವಂತಹ ಕೆಲಸವನ್ನು ಮುಗಿಸಿದೆವು. ಶಕ್ತಿಕೇಂದ್ರದ ಅಧ್ಯಕ್ಷರು ಮೈಕ್ರೋಸಿಸ್ಟಂ ನಲ್ಲಿ ಕೆಲಸ ಮಾಡಿ, ಜಗ್ಗೇಶ್ ಅವರನ್ನು ಯಾವರೀತಿಯಲ್ಲಿ ಗೆಲ್ಲಿಸಬೇಕು ಎನ್ನುವುದರ ಬಗ್ಗೆ ಮೆಸೇಜ್ ಅನ್ನು ಕಳುಹಿಸಿದರು. ಅದುವೇ ನೋಡಿ ಬಿಜೆಪಿಯ ಶಕ್ತಿ. ಈ ಕ್ಷೇತ್ರದಲ್ಲಿ ಐದುವರೆ ಲಕ್ಷ ಮತದಾರರಿದ್ದಾರೆ.

      ಐದು ಜಿಲ್ಲಾ ಪಂಚಾಯತು, ಐದು ಬಿಬಿಎಂಪಿ ವಾರ್ಡ್ ಈ ಕ್ಷೇತ್ರದಲ್ಲಿ ಬರುತ್ತದೆ. ಕೈಮುಗಿದು ಜನರ ಬಳಿ ಹೋಗುವುದು ನನ್ನ ಕೆಲಸ, ಮಿಕ್ಕೆಲ್ಲಾ ಕೆಲಸಗಳನ್ನು ನಮ್ಮ ಕಾರ್ಯಕರ್ತರು ಮಾಡುತ್ತಿದ್ದಾರೆ. ಅವರೇ ನನಗೆ ಮೋದಿ, ಬಿಎಸ್ವೈ, ಬಿಜೆಪಿ ಎಲ್ಲಾ..

      ಯಾರನ್ನು ಆರಿಸಿ ಕಳುಹಿಸಿದ್ದೇವೋ, ಆತ ದೊಡ್ಡ ಭ್ರಷ್ಟ

      ಯಾರನ್ನು ಆರಿಸಿ ಕಳುಹಿಸಿದ್ದೇವೋ, ಆತ ದೊಡ್ಡ ಭ್ರಷ್ಟ

      ಪ್ರ: ಕ್ಷೇತ್ರದಲ್ಲೆಲ್ಲಾ ಸುತ್ತಾಡಿದ್ದೀರಾ, ಜನರ ನಾಡಿಮಿಡಿತ ಯಾವರೀತಿ ಇದೆ?
      ಜಗ್ಗೇಶ್: 30-35ವರ್ಷದಿಂದ ಬಿಜೆಪಿ ಭದ್ರಕೋಟೆ ಇದು. ಕಳೆದ ಬಾರಿ ನಮ್ಮ ಪಕ್ಷದಲ್ಲಾದ ಆಂತರಿಕೆ ಬೆಳವಣಿಗೆಯಿಂದಾಗಿ ನಮಗೆ ಹಿನ್ನಡೆಯಾಯಿತು. ಹಾಗಾಗಿ ಎರಡು ಬಾರಿ ಸೋತಿದ್ದ ಸೋಮಶೇಖರ್ ಗೆದ್ದಿದ್ದರು. ಇದರರ್ಥ ಜನರು ಅವರ ಪರವಾಗಿ ಇದ್ದಾರೆಂದಲ್ಲ.

      ಆದರೆ, ನಾವು ಯಾರನ್ನು ಆರಿಸಿ ಕಳುಹಿಸಿದ್ದೇವೋ, ಆತ ದೊಡ್ಡ ಭ್ರಷ್ಟ ಎನ್ನುವ ಮಾತು ಜನರಲ್ಲಿದೆ. ಸ್ವಯಂ ತಾನೇನು ಉದ್ದಾರ ಆಗಬೇಕು ಎನ್ನುವುದು ಸೋಮಶೇಖರ್ ಅವರ ಗುರಿ. ತಾಜ್ಯ ವಿಲೇವಾರಿಯ ಐದು ಘಟಕಗಳನ್ನು ಸ್ಥಾಪಿಸಿ ದೊಡ್ಡ ದುರಂತವನ್ನು ಕ್ಷೇತ್ರಕ್ಕೆ ಕಾಂಗ್ರೆಸ್ ಶಾಸಕ ತಂದೊಡ್ಡಿದ್ದಾರೆ. ಆರೋಗ್ಯ ಕೆಡಿಸುವ ಕೆಲಸವನ್ನು ಸೋಮಶೇಖರ್ ಮಾಡಿದ್ದಾರೆ ಎನ್ನುವ ನೋವು ಜನರಲ್ಲಿದೆ.

      ನನ್ನನ್ನು ಕ್ಷೇತ್ರದ ಜನತೆ ಆರಿಸಿದ್ದೇ ಆದಲ್ಲಿ ನನ್ನ ಪ್ರಥಮ ಆದ್ಯತೆ, ಕೋರ್ಟ್ ಆದೇಶದ ಪ್ರಕಾರ ಒಂದು ತಾಜ್ಯ ಘಟಕವನ್ನು ಉಳಿಸಿಕೊಂಡು, ಮಿಕ್ಕ ನಾಲ್ಕು ಘಟಕಗಳನ್ನು ಇಲ್ಲಿಂದ ಎತ್ತಂಗಡಿ ಮಾಡಿಸಿಯೇ ಮಾಡಿಸುತ್ತೇನೆ. ರಸ್ತೆ ಅಗಲೀಕರಣ, ರಸ್ತೆಯ ಡಾಂಬರೀಕರಣದಲ್ಲಿ ಸೋಮಶೇಖರ್ ಮಾಡಿದ ಭ್ರಷ್ಟಾಚಾರವನ್ನು ಹೊರಗೆಳೆಯುತ್ತೇನೆ.

      22-23 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ

      22-23 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ

      ಪ್ರ: ಯಶವಂತಪುರದಲ್ಲಿ ತ್ರಿಕೋಣ ಸ್ಪರ್ಧೆ ನಡೆಯುತ್ತಾ?
      ಜಗ್ಗೇಶ್: ನಾನು ಇಲ್ಲಿ ನಿಂತುಕೊಂಡು ಅವರು ಗೆಲ್ಲುತ್ತಾರೆ, ಇವರು ಗೆಲ್ಲುತ್ತಾರೆ ಎಂದು ಮಾತನಾಡಲು ಹೋಗುವುದಿಲ್ಲ. ನನ್ನ ಕೆಲಸವನ್ನು ಕಾಯಾವಾಚಾ ನನ್ನ ಮನಸ್ಸಿನಲ್ಲಿ ಏನಿದೆ ಅದನ್ನು ಜನರಿಗೆ ಹೇಳುತ್ತೇನೆ. ಜನ ಏನು ನಿರ್ಧಾರ ಮಾಡುತ್ತಾರೋ, ಅದೇ ರಿಸಲ್ಟ್.

      ಪ್ರ: ಈ ಬಾರಿ ಬಿಜೆಪಿಗೆ ಅಧಿಕಾರಕ್ಕೆ ಬರುತ್ತಾ?
      ಜಗ್ಗೇಶ್: 22-23 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ನಂಬಿಕೆಯಿಂದ ಅಲ್ಲಿನ ಜನ ಮೋದಿಯವರ ಕೈಗೆ ಕೊಟ್ಟಿದ್ದಾರೆ. ಜನರು ಪ್ರಜ್ಞಾವಂತರಿದ್ದಾರೆ, ದುಡ್ಡು, ಸಾರಾಯಿ ಕೊಟ್ಟು ವೋಟ್ ಹಾಕಿಸಿಕೊಳ್ಳುವ ಕಾಲ ಹೋಗಿದೆ. ನಾವು ಅಧಿಕಾರಕ್ಕೆ ಬರುತ್ತೇವೆ ಎನ್ನುವ ನಂಬಿಕೆಯಲ್ಲಿದ್ದೇವೆ.

      ಪ್ರಕಾಶ್ ರೈ ಅನ್ನೋ ಕುನ್ನಿಯ ಮೇಲೆ ಅನುಕಂಪವಿದೆ

      ಪ್ರಕಾಶ್ ರೈ ಅನ್ನೋ ಕುನ್ನಿಯ ಮೇಲೆ ಅನುಕಂಪವಿದೆ

      ಪ್ರ: ಪ್ರಕಾಶ್ ರೈ ಬಗ್ಗೆ ನಿಮ್ಮ ಕಾಮೆಂಟ್ ಏನು?
      ಜಗ್ಗೇಶ್: ಪ್ರಕಾಶ್ ರೈ ಅತ್ಯುತ್ತಮ ನಟ, ನಾನೂ ಆತನ ಫ್ಯಾನ್. ಒಬ್ಬಬ್ಬರ ಚಿಂತನೆ, ಆದರ್ಶಗಳು ಬೇರೆ ಬೇರೆ ಇರುತ್ತದೆ. ನನಗೆ ಕಂಡು ಬಂದಿದ್ದು ಏನಂದರೆ, ಆತ ಮಾನಸಿಕ ಅಸ್ವಸ್ಥ. ಆತನಿಗೆ ಸೈಕಲಾಜಿಕಲ್ ಪ್ರಾಬ್ಲಂ ಇದ್ದಂತಿದೆ.

      ನಾನು ಈ ಹಿಂದೆ ಅವರಿಗೆ ಮಾತೊಂದನ್ನು ಹೇಳಿದ್ದೆ, ರಸ್ತೆಗಿಳಿದು ಮಾತನಾಡಬೇಕೆಂದು ಆಗ ಅದಕ್ಕೊಂದು ತೂಕವಿರುತ್ತದೆ. ಮೋದಿಯವರ ವಿರುದ್ದ ಮಾತನಾಡಿದ ಕೂಡಲೇ ರಾಷ್ಟ್ರಮಟ್ಟದಲ್ಲಿ ವೇದಿಕೆ ಸಿಗುತ್ತದೆ ಎಂದು ಏನೇನೋ ಹೇಳೋದಲ್ಲ. ಪ್ರಚಾರದ ತೆವಲಿಗೆ ಯಾರು ಮಾತನಾಡುತ್ತಾರೋ, ಅವರು ಈ ಸೊಸೈಟಿಗೆ ನಗಣ್ಯ ಎನ್ನುವುದು ನನ್ನ ನಂಬಿಕೆ.

      ಕೇರಳದವರು ಅವರನ್ನು ಉಗಿದು ಓಡಿಸಿದ್ರು, ಆಂಧ್ರ, ತಮಿಳುನಾಡಿನಲ್ಲೂ ಅದೇ ಪರಿಸ್ಥಿತಿ. ಸಲ್ಮಾನ್ ಖಾನ್ ಅವರು ವಾರ್ನ್ ಮಾಡಿದ್ದಾರೆ, ಈತನನ್ನು ಇಲ್ಲಿ ಸೇರಿಸಬಾರದು ಎಂದು. ಕುನ್ನಿಗಳ ರೀತಿಯಲ್ಲಿ ಮಾತನಾಡುವ ಪ್ರಕಾಶ್ ರೈ ಮೇಲೆ ನನಗೆ ಅನುಕಂಪವಿದೆ, ಆತನ ಮಾತುಗಳು ಕಸದ ಬುಟ್ಟಿಗೆ ಹೋಗುತ್ತದೆ.

      ಟಿಕೆಟ್ ಮಂತ್ರಾಲಯದ ಪ್ರಭುಗಳಾದ ರಾಯರು ನೀಡಿದ್ದಾರೆ

      ಟಿಕೆಟ್ ಮಂತ್ರಾಲಯದ ಪ್ರಭುಗಳಾದ ರಾಯರು ನೀಡಿದ್ದಾರೆ

      ಪ್ರ: ಕ್ಷೇತ್ರದ ಜನತೆಯಲ್ಲಿ ನಿಮ್ಮ ಮನವಿ?
      ಜಗ್ಗೇಶ್: ಒತ್ತಡದ ಬದುಕಿನಲ್ಲಿ ಯಾರೂ ನನ್ನನ್ನು ಅಪಾರ್ಥ ಮಾಡಿಕೊಳ್ಳಬೇಡಿ. ಎಷ್ಟು ಸಾಧ್ಯವೋ, ಅಷ್ಟು ನನ್ನ ಚಿಂತನೆಯನ್ನು ಜನರಿಗೆ ತಿಳಿಸುವ ಕೆಲಸವನ್ನು ಮಾಧ್ಯಮದವರು ಮಾಡಬೇಕು ಎನ್ನುವುದು ಕಳಕಳಿಯ ಮನವಿ. ಅಲ್ಪ ಅವಧಿಯಲ್ಲಿ ನಾನು ಅಭಿವೃದ್ದಿ ಕೆಲಸವನ್ನು ಮಾಡಿ ತೋರಿಸುತ್ತೇನೆ.

      ಈ ಟಿಕೆಟ್ ಮತ್ತು ಕೆಲಸವನ್ನು ಮಂತ್ರಾಲಯದ ನನ್ನ ಪ್ರಭುಗಳಾದ ರಾಘವೇಂದ್ರ ಸ್ವಾಮಿಗಳು ನೀಡಿದ್ದಾರೆಂದು ನಂಬಿದ್ದೇನೆ. ಅವರು ಯಾವ ರೂಪದಲ್ಲಿ ಬಂದು, ನನ್ನನ್ನು ಹರಸುತ್ತಾರೆ ಎಂದು ಗೊತ್ತಿಲ್ಲ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಮೋದಿಯವರು ನನ್ನ ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡಿಹೋಗಿದ್ದು. ನನ್ನೆಲ್ಲಾ ಸ್ನೇಹಿತರಿಗೂ, ಮಾಧ್ಯಮದವರಿಗೂ ನಾನು ದಡ ಸೇರಲು ಸಹಕರಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದೇನೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+