ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹನಿ ಮುಂಗಾರು ಅಲ್ಲ ; ಮಾತುಗಳ ಮಾನ್ಸೂನ್‌!

By Staff
|
Google Oneindia Kannada News


ಅದು ನಮ್ಗೂ ಗೊತ್ತೈತ್ರೀಯಪ್ಪ. ನೀವು ಹೃದಯದಾಗ ಒಂದಿಟ್ಟ್ಕೊಂಡು ಮಾತ್ನಾಗಾ ಒಂದ್ತರ್ತೀರೀಯಂತ. ನಮ್ಮ ಪಕ್ಕ್ದಾಗಾ ಕುಂತು ಯಾವ್ದಾ ಪೋಸ್ಟರ್‌ ನೋಡಿ ಮನಸ್ನಾಗ ಮಂಡ್ಗಿ ಮುಕ್ಕ್ತ್ತಿರ್ತೀರೀ ಅಂತ. ಅದ್ರ ಏನ್ಮಾಡ್ಲೀಕಾಕ್ತೈತಿ ಹೇಳ್ರೀ? ನಿಮ್ಮ ಒಂದ್ಮಾತಿಗಾ ಮಳ್ಳಾಗೋ ಹೆಣ್ಜಲ್ಮಾರೀ ನಮ್ದು!

Has she lost him? Gagana is still optimisticಅವನು ನಿಮಗೇನಾದ್ರು ಸಿಕ್ಕಿದ್ನಾ? ಎಲ್ಲಿ ಹೋದಾ? ನಾವೆಲ್ಲಾ ಎಷ್ಟ್‌ಹೊತ್ತ್ನಿಂದ ಹುಡ್ಕ್ತಾನೇ ಇದ್ದೀವಲ್ಲಾ? ಎಲ್ಲಿ ಹೋದ? ನಮ್ಮ ಕಣ್ಣ್ತಪ್ಪಿಸಿ ಹೋಗಿದ್ದಾನಾ? ಕಳೆದುಹೋಗಿದ್ದಾನಾ? ಅವನು ಯಾರು ಅಂದ್ರಾ? ಏನ್ರೀ ಇದು, ಹೀಗ್ಕೇಳ್ತೀರಾ? ನೀವೂ ಅವನನ್ನೇ ತಾನೆ ಹುಡ್ಕ್ತಿರೋದು? ಅವನನ್ನು ಹುಡಕ್ತಾ ಹುಡಕ್ತಾ ತುಂಬಾ ಗೊಂದಲಕ್ಕೆ ಬಿದ್ದಿರೋಹಾಗಿದೆ. ತಡೀರಿ, ನಾನು ಅವನ ವಿವರಣೆ ಕೊಡ್ತಾಹೋಗ್ತೀನಿ ಎಲ್ಲಾದ್ರು ಸಿಕ್ಕ್ತಾನಾ ನೋಡೋಣ!

ಅವಳು ತಾನು ಉಪನ್ಯಾಸಕಿಯಾಗಿ ಬಡ್ತಿ ಪಡೆದು ನೀಡಬೇಕಿದ್ದ ಮೊದಲ ಉಪನ್ಯಾಸದ ದಿನ, ಅವನು ತನ್ನನ್ನು ವಿಮಾ ಏಜೆಂಟ್‌ ಪರೀಕ್ಷೆ ತೊಗೋಳೋಹಾಗೆ ಮಾಡಿದ್ದೇ ಅವಳು ಅನ್ನುವುದನ್ನು ಮರೆತು, ‘ಹೆದ್ರಬೇಡ ನಾನಿದ್ದೇನೆ’ ಅಂದಿದ್ದ. ರಾತ್ರೀ ಕುಕ್ಕರ್‌ನ ಎರಡು ಸೀಟಿ ಕೇಳಿಸಿಕೋಂಡೇ ಇಲ್ಲ ಅನ್ನುವ ಹಾಗೆ ‘ಅನ್ನಕ್ಕಿಟ್ಬಿಟ್ಯಾ? ಹೊರ್ಗಡೆ ಊಟಕ್ಕೆ ಕರ್ಕೊಂಡ್ಹೋಗೋಣಾ ಅಂದ್ಕೊಂಡಿದ್ದೆ’ ಎನ್ನುತ್ತಿದ್ದ.

ಅವಳು ಆಫೀಸಿನಿಂದ ಬಂದು ಸೆರಗಿಗೆ ಹಾಕಿಕೊಂಡಿದ್ದ ಪಿನ್ನ್‌ ಕೂಡ ಬಿಚ್ಚದೆ ಟೀ ಕುದಿಸಿದ್ದನ್ನು ಕಂಣ್ಣಂಚಿನಿಂದಲೇ ನೋಡಿ ಅಡುಗೆ ಮನೆಗೆ ಬಂದು ‘ಅಯ್ಯೋ, ನೀನ್ಯಾಕ್ಮಾಡ್ದೆ ಇವತ್ತು ನಾನೇ ಮಾಡೋಣಾ ಅಂತಿದ್ದೆ’ ಅಂತ್ಹೇಳಿ ಅವಳ ಭುಜ ಸವರಿ ಹೊರಗ್ಹೋಗ್ತಿದ್ದ.

ಎಲ್ಲರಿಗೂ ಬಡಿಸಿ ಆದ್ಮೇಲೆ ತಟ್ಟೆಗೆ ಒಟ್ಟಿಗೆ ಎಲ್ಲಾ ಹಾಕಿಕೊಂಡು ನೀರನ್ನು ಇಟ್ಟುಕೊಂಡು, ಅವಳು ಊಟಕ್ಕೆ ಕೂತಿದ್ದನ್ನು ಟೀವಿ ನೋಡುತ್ತಾ ಓರೆಗಣ್ಣಿನಿಂದ ಗಮನಿಸಿ ‘ನಿಧಾನಕ್ಕೆ ಮಾಡು ನೀರು ತಂದ್ಕೊಡ್ತೀನಿ’ ಅಂತಿದ್ದ. ಹೆಪ್ಪಿಗೆ ಮೊಸರು ಮುಗಿದ್ಹೋಗಿರೋದನ್ನ ಅವಳ ಬಾಯಿಂದಾನೇ ಕೇಳಿಯೂ ದಿವ್ಯ ಮೌನಧಾರಿಯಾಗಿ, ಅವಳು ಹೋಗಿ ಮೊಸರು ತಂದ್ಮೇಲೆ ‘ಐದ್ನಿಮಿಷ ಕಾದಿದ್ದ್ರೆ ನಾನೇ ಹೋಗ್ತರ್ತಿದ್ದ್ನಲ್ಲ’ ಅಂತಿದ್ದ.

ಆ ದಿನ ಅವಳಿಗೆ ಆಫೀಸಿನಲ್ಲಿ ಉಸಿರಾಡಲೂ ಪುರುಸೊತ್ತಿಲ್ಲದ ಕೆಲಸ ಅಂತ ಖಾತರಿಯಾದ್ಮೇಲೆ, ಅವಳಿಗೆ ಫೋನ್‌ ಮಾಡಿ ‘ನಾನಿವತ್ತು ಫ್ರೀ. ಸಿನೆಮಾಗ್ಹೋಗೋಣಾ ಬರ್ತೀಯಾ?’ ಅಂತ ಕೇಳ್ತಿದ್ದ. ತರಕಾರಿ ಬ್ಯಾಗ್‌ಅನ್ನು ಆಟೋದಿಂದಿಳಿಸಿ ಅವಳು ಮಹಡಿಗೆ ತಂದ ಮೇಲೆ, ಬೆವರಿನಲ್ಲಿ ತೋಯ್ದ ಅವಳ ಕಂಕುಳನ್ನು ಎಂದೂ ನೋಡಿಯೇ ಇಲ್ಲದವನ ಹಾಗೆ ‘ಕೆಳಗೇ ಇಟ್ಟು ಕರ್ದಿದ್ದ್ರೆ ಬಂದು ತೊಗೊಂಡ್ಬರ್ತಿದ್ದೆ’ ಅಂತಿದ್ದ.

ಈ ದಿನ ಇವನ ಪಕ್ಕಕ್ಕೆ ಬರಲು ಅವಳು ಬೇಡ ಅನ್ನುವುದೇ ಇಲ್ಲ ಅನ್ನೋ ವಾತಾವರಣ ಸೃಷ್ಟಿಯಾದ್ಮೆಲೆ ‘ಪಾಪ ನಿನಗೆ ಕೆಲಸ ಮಾಡಿ ಸುಸ್ತಾಗಿದೆ ಮಲಗ್ಕೊ. ನಾನು ಹೊರಗಡೆ ಮಲಗ್ತೀನಿ’ ಅಂತಿದ್ದ. ಅಪ್ಪ ಅಮ್ಮ, ಅತ್ತಿಗೆ ನಾದಿನಿ, ಭಾವ ವಾರೆಗಿತ್ತಿ, ಮಕ್ಕಳು ಮರಿಗಳಿಗೆ ಸಲ್ಲಬೇಕಿದ್ದನೆಲ್ಲ ಅವಳು ತೂಗಿಸಿದ ಮೇಲೆ ಎಲ್ಲ್ರೊಂದಿಗೆ ತುಂಬು ಮಾತಿನಿಂದ, ನಗುವಿನಿಂದ ಬೆರೀತಿದ್ದ. ರಾತ್ರಿ ಅವಳ ಸಣ್ಣ ನರಳಾಟ ತನ್ನ ನಿದ್ದೆಗಿವಿಗೆ ಬಿದ್ದಿದ್ದರೂ, ಬೆಳಿಗ್ಗೆ ಅವಳ ಧುಮುಗುಡುವ ಮುಖ ನೋಡಿ ‘ಏನಾಯ್ತು? ಮಾತ್ರೆ ತೊಗೊ’ ಅಂತಿದ್ದ.

ಓಹೋ, ನಾನು ಹೀಗೆ ಅವನ ವಿವರಣೆ ಕೊಡ್ತಾನೇ ಕೂತಿದ್ರೆ ಅಲ್ಲಿ.. . . ಹಾಂ ಅಲ್ಲಿ ಹೋಗ್ತಿದ್ದಾನಲ್ಲ ಅವನೂ ಕಣ್ಮರೆಯಾಗ್ಬಿಡ್ತಾನೆ! ನನ್ನ ಜಾತಕ ಆಮೇಲೆ ಓದೋವ್ರಂತೆ ಅಲ್ಲಿ ಹೋಗ್ತಿದ್ದಾನಲ್ಲ ಅವನೇ ಇರಬೇಕು ಕೈ ಎಳೆದು, ಭುಜ ತಟ್ಟಿ ನಿಲ್ಲಿಸ್ರೀ ಅವನನ್ನು! ಓ, ಇವನು ಅವನಲ್ಲ ಬಿಡಿ. . . .ಇವನಿಗೆ ವಿಪರೀತ ಅಹಂ ಅನ್ನಿಸುತ್ತೆ. ಹೆಂಡತಿ ಜೊತೆ ಸಲಿಗೆಯಿಂದ, ಬಾಯ್ತುಂಬಾ ಮಾತಾಡಿದ್ರೆ ಏನೋ ಅನಾಹುತ ಆಗುತ್ತೆ ಅಂತ ತಿಳಿದ್ಕೊಂಡಿದ್ದಾನೆ ಇವನು. . . . . ಜಗತ್ತನ್ನೇ ಆಳಿ ಬಂದರೂ ತನ್ನನ್ನು ಅಸಹಾಯಕ ಮಗು ಅಂತ ಅಂದ್ಕೊಂಡು ಕಾಪಾಡೊ ಗಂಡಿನ ದಾಸಿಯಾಗಿಬಿಡ್ತಾಳೆ ಆ ಹೆಣ್ಣು ಅನ್ನುವ ಸರಳ ಸತ್ಯಾನೂ ಗೊತ್ತಿಲ್ಲ ಇವನಿಗೆ. . . . .

ಅದಕ್ಕೆ ನಾನು ಹೇಳಿದ್ದು, ಇವನು ಅವನಲ್ಲ ಅಂತ. . . . . ಹಾಗಾದ್ರೆ ಅವನೆಲ್ಲಿ ಹೋದ? ಕಳೇದೇ ಹೋದನಾ? ಅವನು ಇದ್ದ ತಾನೆ? ಯಾಕೋ, ಈಗ ನನಗೆ ಆ ಅನುಮಾನಾನೂ ಬರ್ತಿದೆ. ನನಗೆಲ್ಲೋ ಭ್ರಾಂತಿ ಅನ್ನಿಸುತ್ತಿದೆ.

ಏನೇ ಇರಲಿ ಬಿಡಿ, ಒಮ್ಮೊಮ್ಮೆ ವಾಸ್ತವದ ಬೆನ್ನು ಹತ್ತಿ ಹೋಗೋದಕ್ಕಿಂತ ಹುಚ್ಚು ಕಲ್ಪನೆಗಳೂ ಹಿತಾನುಭವ ಕೊಡುತ್ತೆ. ನಮ್ಮನ್ನು ನಾಳೆಗಳಿಗಾಗಿ ಕಾಯುವ ಹಾಗೆ ಮಾಡುತ್ತವೆ. ಆಹಾ, ಎಂಥ ಮಧುರ ಯಾತನೆ. . . . ಅಂತ ಹಾಡಿಕೊಳ್ಳುವ ಹಾಗೆ ಮಾಡುತ್ತವೆ! ನಮ್ಮ energy level ನ intactಆಗಿಡತ್ವೆ! ಅಲ್ಲ್ವಾ? ನಿಮಗೇನನ್ನಿಸುತ್ತೆ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X