ಸಾಹಿತ್ಯ - ಮೂಲಕ್ಕಿಂತ ಭಿನ್ನವಾಗೋದು ಹೇಗೆ? ಏಕೆ?
ನೇರವಾಗಿ ವಿಷಯಕ್ಕೆ ಬರ್ತೀನಿ, ಉದಾಹರಣೆಯ ಸಹಿತ... ತಪ್ಪಿದ್ದರೆ ತಿದ್ದಿ.
"ನೀ ಹೀಂಗ ನೋಡಬ್ಯಾಡ ನನ್ನ..." ಬೇಂದ್ರೆ ಅಜ್ಜರ ಒಂದು ಅದ್ಭುತ ಸಾಹಿತ್ಯ... ಅದರಾಗಿನ ಒಂದು ಸಾಲು ಹೀಗಿದೆ...
"ದಾರೀಲೆ ನೆನೆದ ಕೈ ಹಿಡಿದೇ ನೀನು..." ಇದನ್ನು ಮೊದಲ ಬಾರಿಗೆ ನಾನು ಕೇಳಿಸಿಕೊಂಡಾಗ ಗಂಡ ಹೆಂಡಿರು ಮಳೆಯಲ್ಲಿ ದಾರಿಯಲ್ಲಿ ಬರುವಾಗ ಹೆಂಡತಿ ಗಂಡನ ಕೈ ಹಿಡಿದಳು ಅನ್ನೋ ಅರ್ಥ ಕಂಡು ಬಂತು... ಅಂದಿನ ಮಡಿವಂತಿಕೆಯ ದಿನಗಳಲ್ಲಿ ನಾಲ್ಕು ಜನರ ಮುಂದೆ ಗಂಡ ಹೆಂಡಿರು ಮಾತನಾಡುವುದೇ ಒಂದು ದೊಡ್ಡ ವಿಷಯ ಆಗಿದ್ದರಿಂದ ಹೀಗೂ ಇರಬಹುದು ಅಂತ ಎಣಿಸಿದ್ದೆ. ಆದರೆ ಮನಸ್ಸು ಒಪ್ಪಿರಲಿಲ್ಲ... ಆಮೇಲೆ ಅರ್ಥವಾಗಿದ್ದು ಇದು "ಧಾರೀಲೆ ನೆನೆದ ಕೈ ಹಿಡಿದೇ ನೀನು..." ಅಂತ. ಅರ್ಥಾತ್ ಧಾರೆಯ ಸಮಯದಲ್ಲಿ ನವ ದಂಪತಿಗಳು ತೆಂಗಿನಕಾಯನ್ನು ಹಿಡಿದು ಎದುರು ಬದುರು ಕೂತಾಗ, ಬಂದ ಜನ ಹಾಲನ್ನು ಎರೆದಾಗ, ನೆನೆದ ಕೈಯನ್ನು ಪಿಡಿದಿದ್ದೇ ಎನ್ನುವ ಮಾತು... ಆಗ ತಣ್ಣಗಿನವನು ಅಂತ ತಿಳಿದಿದ್ದಿ ಆಮೇಲೆ ನಾನು ಬೂದಿ ಮುಚ್ಚಿದ ಕೆಂಡ ಅಂತ ಅರಿತೂ ನನ್ನ ಕೈಬಿಡದೆಯೇ ಸಾಗಿರುವಿ ಎಂಬರ್ಥದ ಮಾತು... ಸೀಳದಿದ್ರೆ ಏನೆಲ್ಲಾ ಅನರ್ಥಗಳು!
ಎಲ್ಲೋ ತಪ್ಪಾಗಿರುವ ಈ ಸಾಹಿತ್ಯ ಹೀಗೇ ಬಿಟ್ಟರೆ ಮುಂದೊಮ್ಮೆ ಅದು ದಾರೀಲೆ ಅಂತಲೇ ಅರ್ಥ ಮೂಡಿಸುತ್ತದೆ... "ಶಿವಪೂಜೆಗೆ ಕರಡಿ ಬಿಟ್ಟ ಹಾಗೆ" ಎಂಬ ಪ್ರಯೋಗ ಇರುವಂತೆ... "ಶಿವಪೂಜೆಗೆ ಕರಡಿಗೆ ಬಿಟ್ಟ ಹಾಗೆ" ಎಂಬುದು ಗಾದೆ ಮಾತು. ಕರಡಿ ಅನ್ನೋದು ಪ್ರಾಣಿ, ಕರಡಿಗೆ ಎಂದರೆ ಶಿವಲಿಂಗ ಇರಿಸುವ ಪುಟ್ಟ ಪೆಟ್ಟಿಗೆ. ಶಿವನ ಪೂಜೆಗೆ ಅಂತ ಕೂತವರು ಆ ಕರಂಡಿಕೆಯನ್ನೇ ಮರೆತರೆ ಇನ್ನು ಪೂಜೆ ಮಾಡೋದೇನು? ಈ ಅರ್ಥ ಇರುವ ಗಾದೆಯಲ್ಲಿ ಇಂದು 'ಕರಡಿ' ಸೇರಿಕೊಂಡು ಗಾದೆಯೂ ಹಾಳಾಗಿದೆ ಜೊತೆಗೆ ಅದರ ಬಳಕೆಯೂ ಅರ್ಥಹೀನವಾಗಿದೆ.
"ನೀ ಹೀಂಗೆ ನೋಡಬ್ಯಾಡ ನನ್ನ..." ಸಾಹಿತ್ಯದಲ್ಲೇ ಇನ್ನೊಂದು ಪದ ಮುಂದೊಂದು ದಿನ ಅಪಭ್ರಂಶವಾಗುವ ಸೂಚನೆ ಇದೆ... "ಅತ್ತಾರ ಅತ್ತು ಬಿಡು, ಹೊನಲು ಬರಲಿ ನಾಕ್ಯಾಕ ಮರಸತೀ ದುಃಖ" ಅಂತಂದ ಮೇಲೆ "ಎದೆಬಡಿಸಿ ಕೆಡವು, ಬಿರಿಗಣ್ಣು ಬ್ಯಾಡ..." ಅಂತ ಒಂದೆಡೆ ಓದಿದೆ... ತಕ್ಷಣ ಅರಿವಾಯ್ತು "ಎವೆ" ಅನ್ನೋದನ್ನ "ಎದೆ" ಅಂತಾಗಿದೆ ಅಂತ...

ಸಾಮಾನ್ಯವಾಗಿ ಹೆಣ್ಣು ಅತ್ತು ಹಗುರಾಗ್ತಾಳೆ. ಆದರೆ ಇಲ್ಲಿನ ಸನ್ನಿವೇಶದಲ್ಲಿ ಮಗುವನ್ನು ಕಳೆದುಕೊಂಡ ತಾಯಿ ಗಟ್ಟಿಮನಸ್ಸು ಮಾಡಿಕೊಂಡು ಕಣ್ಗಳಿ೦ದಾಚೆಗೆ ನೀರನ್ನು ಹಾಕೆನೆಂದು ಕಣ್ಣೀರು ತುಂಬಿಕೊಂಡೇ ಇರುತ್ತಾಳೆ. ಒಮ್ಮೆ ಆ ಬಿರಿದ ಕಣ್ಣುಗಳ ಎವೆ ಬಡಿದರೆ ಸಾಕು ದಳದಳ ಅಂತ ನೀರು ಸುರಿಯೋದು ಖರೆ. "ಎವೆ"ಗೂ "ಎದೆ"ಗೂ ವ್ಯತ್ಯಾಸವಿದೆ.
ಇನ್ನು "ಇಳಿದು ಬಾ ತಾಯಿ ಇಳಿದು ಬಾ..." ಸಾಹಿತ್ಯ ಎಷ್ಟು ಜನಕ್ಕೆ ಗೊತ್ತೋ ಇಲ್ಲವೋ ಗೊತ್ತಿಲ್ಲ. ಆದರೆ 'ಅರಿಶಿನ ಕುಂಕುಮ'ದಲ್ಲಿನ ಪಿಬಿಎಸ್ ದನಿಯಲ್ಲಿನ ಈ ಹಾಡನ್ನು ಕೇಳದವರಿಲ್ಲ... ಸಾಹಿತ್ಯದ ಕೊನೆಯ ಸಾಲುಗಳು ಇಂತಿವೆ...
ದತ್ತ ನರಹರಿಯ ಮುತ್ತೆ ಬಾ
ಅoಬಿಕಾತನಯನತ್ತೆ ಬಾ
ಇಳಿದು ಬಾ ತಾಯಿ ಇಳಿದು ಬಾ
"ಅoಬಿಕಾತನಯನತ್ತೆ ಬಾ"... ನಾನು ಬಹಳ ದಿನಗಳವರೆಗೂ "ಅoಬಿಕಾತನಯನತ್ತ ಬಾ" ಎಂದೇ ಅರ್ಥೈಸಿಕೊಂಡಿದ್ದೆ... ಒಮ್ಮೆ ಒಂದು ಚರ್ಚೆಯನ್ನು ಓದಿದ್ದೆ. ಅಲ್ಲಿ ಅರ್ಥವಾಯ್ತು ಅದು ನಿಜಕ್ಕೂ "ಅoಬಿಕಾತನಯನತ್ತೆ" ಹೇಗೆಂದರೆ "ಕವಿಗಳ ಸೋದರತ್ತೆಯ ಹೆಸರು ಗಂಗಮ್ಮ" ಅಂತ. ಸಾಹಿತ್ಯವು ಗಂಗೆಯ ಕುರಿತಾದ್ದರಿಂದ ಗಂಗೆ ಎನ್ನುವ ಬದಲು ತಮ್ಮ ಅತ್ತೆ ಎಂಬಂತೆ ಕವನದಲ್ಲಿ ಚಿತ್ರಿಸಿದ್ದಾರೆ. ಎಂದೋ ಒಂದು ದಿನ "ಅoಬಿಕಾತನಯನತ್ತ ಬಾ" ಎಂದಾಗಿಬಿಡುತ್ತದೋ ಏನೋ ಎಂಬ ಅಳುಕು. ಹಾಗಾಗಿಬಿಟ್ಟರೆ ಅಲ್ಲೆಲ್ಲೋ ಆ ಕವಿ ಹೃದಯ ಮೂಕವಾಗಿ ರೋಧಿಸುತ್ತಿರುತ್ತದೆ.
ಸಾಹಿತ್ಯದ ಆಳ ಅಥವಾ ಸನ್ನಿವೇಶ ಗೊತ್ತಿರದೇ ಹೋದಾಗ ಅಪಭ್ರಂಶವಾಗುವ ಸಂಭವನೀಯತೆ ಹೆಚ್ಚು.
ಈಗ ಭಕ್ತಿಪಂಥಕ್ಕೆ ಹಾರೋಣ...
ದಾಸರೆಂದರೆ ದಾಸರಯ್ಯ ಪುರಂದರದಾಸರು
ದಾಸರ 'ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ" ಪದದಲ್ಲಿ ಒಂದೆಡೆ ಹೀಗಿದೆ:
"ಮಾತಾಪಿತರನು ಸೇವಿಪರಾಗಿ ಪಾಪಕರ್ಮವ ಬಿಟ್ಟವರಾಗಿ
ರೀತಿಯ ಬಾಳನು ಬಾಳುವರಾಗಿ ನೀತಿಮಾರ್ಗದಲಿ ಖ್ಯಾತರಾಗಿ"
ಕೆಲವೆಡೆ ಅದು ಹೀಗೂ ಇದೆ :
"ಮಾತಾಪಿತರನು ಸೇವಿಪರಾಗಿ ಪಾಪಕರ್ಮವ ಬಿಟ್ಟವರಾಗಿ
ನೀತಿಯ ಬಾಳನು ಬಾಳುವರಾಗಿ ನೀತಿಮಾರ್ಗದಲಿ ಖ್ಯಾತರಾಗಿ"
ಅದು ಸರಿ ಎಂದರೆ, ಅಂಕಿತ ಮೂಡುವ ಸಾಲುಗಳು ಕೆಲವೆಡೆ ಹೀಗಿವೆ:
(1) "ಸಿರಿರಮಣನ ದಿನ ನೆನೆಯುವರಾಗಿ ಗುರುತಿಗೆ ಬಾಹೋರಂಥವರಾಗಿ
ಕರೆದರೆ ಭವವನು ನೀಗುವರಾಗಿ ಪುರಂದರ ವಿಠಲನ ಸೇವಿಪರಾಗಿ"
(2) "ಸಿರಿರಮಣನ ದಿನ ನೆನೆಯುವರಾಗಿ ಗುರುತಿಗೆ ಬಾಹೋರಂಥವರಾಗಿ
ರಾಮನಾಮವ ಜಪಿಸುವರಾಗಿ ಪುರಂದರ ವಿಠಲನ ಸೇವಿಪರಾಗಿ"
(3) "ಸಿರಿರಮಣನ ದಿನ ನೆನೆಯುವರಾಗಿ ಗುರುತಿಗೆ ಬಾಹೋರಂಥವರಾಗಿ
ಕರೆದರೆ ಸಂಸಾರವ ನೀಗುವರಾಗಿ ಪುರಂದರ ವಿಠಲನ ಸೇವಿಪರಾಗಿ"
(4) "ಸಿರಿರಮಣನ ದಿನ ನೆನೆಯುವರಾಗಿ ಗುರುತಿಗೆ ಬಾಹೋರಂಥವರಾಗಿ
ಕರೆದರೆ ಸಂಸಾರವ ನೀಗುವರಾಗಿ ಪುರಂದರ ವಿಠಲನ ಭಜಿಸುವರಾಗಿ"
ಅಬ್ಬಬ್ಬಾ ! ಈ ಮೇಲಿನ ಎಲ್ಲಾ ಸಾಹಿತ್ಯವೂ ತಾಳಕ್ಕೆ ಹೊಂದುತ್ತೆ ಅನ್ನೋದು ಸರಿ. ಆದರೆ ಇದರಲ್ಲಿ ಮೂಲ ಯಾವುದು ಎಂದು ಹೇಗೆ ಹೇಳೋದು? ಇಂಥದ್ದು ಅಂತ ಹೇಳಿದರೆ ಪುರಾವೆ ಏನು ಎಂಬ ಪ್ರಶ್ನೆ ಏಳುತ್ತೆ. ಇವುಗಳಲ್ಲಿ ಒಂದನ್ನು ಮೂಲ ಎಂದೇ ಹೇಳಿದರೆ ಮಿಕ್ಕ ಸಾಹಿತ್ಯವನ್ನು ತಮಗಿಷ್ಟ ಬಂದಂತೆ ಮಾಡಿದವರಾರು? copyrights ಇಲ್ಲ ಎಂದು ನಮಗಿಷ್ಟ ಬಂದಂತೆ ಬದಲಿಸಬಹುದೇ?
"ಭಾಗ್ಯಾದ ಲಕ್ಷ್ಮಿ ಬಾರಮ್ಮ" ಇಂದಿಗೂ ಶುಕ್ರವಾರಗಳಂದು ಸಂಜೆಯ ದೀಪ ಹಚ್ಚುವ ವೇಳೆಗೆ ಈ ಹಾಡನ್ನು ಹಾಡದವರಿಲ್ಲ. ಈ ಸಾಹಿತ್ಯದ ಎರಡು ಸಾಲುಗಳು ಗುಂಪಿನಲ್ಲಿ ಹಾಡುವಾಗ ಎಡವೋದು ಗ್ಯಾರಂಟಿ. ಏಕೆಂದರೆ ಒಬ್ಬೊಬ್ಬರೂ ಒಂದೊಂದು ಸಾಹಿತ್ಯ ಹಾಡ್ತಾರೆ.
"ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ ಗೆಜ್ಜೆ ಕಾಲ್ಗಳ ಧ್ವನಿಯನ್ನು ಮಾಡುತ"
"ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ ಗೆಜ್ಜೆಯ ಕಾಲ್ಗಳ ದನಿಯನ್ನು ಮಾಡುತ"
"ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ ಗೆಜ್ಜೆ ಕಾಲ್ಗಳ ಧ್ವನಿಯನ್ನು ತೋರುತ"
"ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ ಗೆಜ್ಜೆಯ ಕಾಲ್ಗಳ ದನಿಯನ್ನು ತೋರುತ"
ಆಯ್ತಾ? ಈ ಮುಂದೆ ನೋಡಿ :
"ಕನಕ ವೃಷ್ಟಿಯ ಕರೆಯುತ ಬಾರೆ, ಮನಕೆ ಮಾನವ ಸಿದ್ದಿಯ ತೋರೆ"
"ಕನಕ ವೃಷ್ಟಿಯ ಕರೆಯುತ ಬಾರೆ, ಮನಕಾಮನೆಯ ಸಿದ್ದಿಯ ತೋರೆ"
ಯಾವುದು ಸರಿ ? ಯಾವುದು ತಪ್ಪು ಎಂದು ಕೇಳಲಾರೆ, ಏಕೆಂದರೆ ಆಗಲೇ ಹೇಳಿದಂತೆ ಅನರ್ಥವಾಗಿಲ್ಲ ಜೊತೆಗೆ ತಾಳಕ್ಕೆ ಕೂಡುತ್ತೆ. ಬಹುಶಃ ಗೀತೆಗೆ ಬೇಕಿರುವ ಮಿಕ್ಕೆಲ್ಲಾ ವ್ಯಾಕರಣ ರಚನೆಕ್ರಮಗಳೂ ಒಪ್ಪುತ್ತೆ ಎಂದೇ ಅಂದುಕೊಳ್ಳುವಾ. ಆದರೂ ಮೂಲ ಸಾಹಿತ್ಯವನ್ನು ಹೀಗೆ ಬದಲಿಸಬಹುದಾ?
ಇಂದು ಈ ವಿಷಯವನ್ನು ಕೈಗೆತ್ತಿಕೊಂಡರೆ ಅದನ್ನು ವಾದಿಸುವ ಮತ್ತು ಪ್ರತಿವಾದಿಸುವ ಮಂದಿ ಇರಬಹುದು. ಆದರೆ ಮುಂದಿನ ಐವತ್ತೋ ನೂರೋ ವರುಷಗಳ ನಂತರ ಇವುಗಳ ಬಗ್ಗೆ ಮುಂದಿನ ಪೀಳಿಗೆ ಮಾತನಾಡಬಹುದೇ? ವಾದಿಸುವ ತಾಕತ್ ಹೊಂದಿರುವರೇ ಅಥವಾ ಇರಾದೆ ತೋರಿಸಿಯಾರೇ?
ನನ್ನ ಪ್ರಶ್ನೆಗಳಿಗೆ ಏನಾದರೂ ಅರ್ಥವಿದೆಯೇ?












Click it and Unblock the Notifications