ಹೆಣ್ಣು ನಿಜಕ್ಕೂ ಸಂತಸದಿಂದ ಇದ್ದಿದ್ದರೆ ಇಂಥದೊಂದು ದಿನ ಬೇಕಿತ್ತೇ?
ಹಬ್ಬಗಳ ಸಾಲಿನ ಉದ್ದಕ್ಕೂ ಬಹುಶ: ಆಯಾ ದಿನಗಳ ವಿಶೇಷದ ಬಣ್ಣದ ಸೀರೆಯನ್ನುಟ್ಟು, ಔತಣವಿತ್ತು ಕರೆದವರ ಮನೆಗೆ ಅರಿಶಿನ-ಕುಂಕುಮಕ್ಕೆ ಹೋಗುವುದು, ತಾವು ಜನರನ್ನು ತಮ್ಮ ಮನೆಗೆ ಕರೆದು ಆದರಿಸುವುದು, ಮನೆಮಂದಿಗೆ ಹಬ್ಬದ ಅಡುಗೆ ಮಾಡಿ ಬಡಿಸಿ ಉಣ್ಣುವುದು, ಕಾಸಗಲದ ಕುಂಕುಮ, ಮುಡಿತುಂಬಾ ಹೂವು, ಮುಖದಲ್ಲಿ ಮಂದಸ್ಮಿತ, ದಣಿವೇ ಆಗಿಲ್ಲವೇನೋ ಎಂಬಂತೆ ಓಡಾಟ ಇತ್ಯಾದಿಯಾಗಿ ಹೆಣ್ಣನ್ನು ನೋಡಿದಾಗ..." ಈಕೆ ನಿಜಕ್ಕೂ ಸಂತಸದಿಂದ ಇದ್ದಾಳೆಯೇ?" ಅಂತ!
ಯಾವುದೇ ಹಬ್ಬ ಹರಿದಿನಗಳ ಸಂಭ್ರಮ ಮುಗಿದು ಮಾಮೂಲಿನ ದಿನದ ಸೂರ್ಯ ಹುಟ್ಟಿದ ಎಂದರೆ ಮತ್ತೆ ಗಾಣದೆತ್ತಿನ ಹಾಗೆ ಆಗುವಳು. ಬಸ್ಸು, ಟ್ರೇನು, ಆಫೀಸು, ಮಾಲ್ ಹೀಗೆ ಎಲ್ಲೆಲ್ಲಿ ಹೋದರೂ ಅಲ್ಲಲ್ಲಿ ಒಂದಲ್ಲಾ ಒಂದು ರೀತಿ ಶೋಷಿತಳಾಗಿ, ಬಸವಳಿದು ಮನೆಗೆ ಬಂದ ಮೇಲೆ ಅತ್ತೆ-ಮಾವ-ಗಂಡನಿಂದ ಹಿಂಸೆಗೆ ಒಳಗಾಗುವ ಈಕೆ ಶಕ್ತಿ ಸ್ವರೂಪಿಯಾಗುವುದಾದರೂ ಎಂದು? 'ನಮ್ ದೇಶದಲ್ಲಿ ಆ ದಿನ ಕಾಣೋದೇ ಇಲ್ಲ ಬಿಡಿ' ಎನ್ನುವ ಮಂದಿಯೇ, ತಪ್ಪು. ಇದು ಕೇವಲ ಭಾರತದ ಸಮಸ್ಯೆ ಅಲ್ಲ. ವಿಶ್ವಾದ್ಯಂತ ಇಂದು ಇದೇ ಸಮಸ್ಯೆಯಿಂದ ಬಳಲುತ್ತಿದೆ.
ವಿಶ್ವಾದ್ಯಂತ ಇರುವ ಶೋಷಿತ ಹೆಂಗಳ ಮೊಗದಲ್ಲಿ ಸಂತಸ ಮೂಡಿಸುವ ಯತ್ನಕ್ಕೆ ಗೊತ್ತು ಪಡಿಸಿರುವ ಶುಭದಿನ Women's Global Happiness Day. ಪ್ರತಿ ವರ್ಷ ಅಕ್ಟೋಬರ್ ಹದಿನೆಂಟರಂದು ಈ ದಿನವನ್ನು ಆಚರಿಸಲಾಗುತ್ತದೆ. ಹೆಣ್ಣು ನಿಜಕ್ಕೂ ಸಂತಸದಿಂದ ಇದ್ದಿದ್ದರೆ ಈ ದಿನ ಬೇಕಿತ್ತೇ?
ನನ್ನೊಂದಿಗೆ ನನ್ನಾಕೆ ಹಂಚಿಕೊಂಡ ಈ ವಿಷಯ, ಆಕೆ ತನ್ನ Women’s network ಟ್ರೇನಿಂಗ್'ನಲ್ಲಿ ಆಲಿಸಿದ್ದು. ಅವಳು ಬರೀ ಕೇಳಿಸಿಕೊಂಡಿದ್ದರೆ ಈ ಬರಹಕ್ಕೆ ಕಾರಣವಾಗುತ್ತಿರಲಿಲ್ಲ. ಕೇಳುವುದಕ್ಕೂ ಆಲಿಸುವುದಕ್ಕೂ ದೊಡ್ಡ ವ್ಯತ್ಯಾಸವಿದೆ.

ಯಾವುದರಿಂದ ಮನಸ್ಸಿಗೆ ಸಂತಸ ಮೂಡುತ್ತದೆ?
ಈಗ ಒಂದು ಮೂಲ ಪ್ರಶ್ನೆ... ಸಂತಸ ಎಂದರೇನು? ನಿಮಗೆ ಯಾವುದರಿಂದ ಮನಸ್ಸಿಗೆ ಸಂತಸ ಮೂಡುತ್ತದೆ? ಯಾವುದರಿಂದ ಮನಸ್ಸು ಪ್ರಫುಲ್ಲವಾಗುತ್ತದೆ? ನಿಮಗೆ ನೀವೇ ಈ ಪ್ರಶ್ನೆ ಹಾಕಿಕೊಳ್ಳಿ. ಒಂದಂತೂ ನಿಜ ನಿಮಗೆ ಯಾವುದು ಸಂತಸ ನೀಡುತ್ತದೋ ಅದರಿಂದಲೇ ಮತ್ತೊಬ್ಬರಿಗೂ ಸಂತಸ ನೀಡುತ್ತದೆ ಅಂತೇನಿಲ್ಲ. ಕೆಲವರಿಗೆ ಹಾಡು ಕೇಳೋದ್ರಲ್ಲಿ ಸಂತಸ ಇರುತ್ತೆ. ಕೆಲವರಿಗೆ ಹಾಡು ಹೇಳೋದ್ರಲ್ಲಿ ಸಂತಸ ಇರುತ್ತೆ. ಕೆಲವರಿಗೆ ಅಡುಗೆ ಮಾಡೋದ್ರಲ್ಲಿ ಸಂತಸ ಸಿಗಬಹುದು. ಹೀಗೇ ಪ್ರತಿಯೊಬ್ಬರೂ ತಮ್ಮ ಸಂತಸ ಎಲ್ಲೋ ಕಾಣುತ್ತಾರೆ. ಆದರೆ ಯಾವುದೇ ಸಂತಸದ ರಸ ಅತೀ ಆದರೂ ಅದು ಅತಿರಸವಾಗದೆ ರಸಹೀನವಾಗುತ್ತದೆ. ವೈವಿಧ್ಯತೆ ಇರಲಿ. ಇಲ್ಲಿ ಒಂದು ಆಲೋಚಿಸತಕ್ಕದ್ದು. ತಾತ್ಕಾಲಿಕ ತೃಪ್ತಿ ಯಾವುದು? ದೀರ್ಘಕಾಲದಲ್ಲಿ ಸಂತಸ ಉಳಿಸೋದು ಯಾವುದು ಅಂತ.

ಮಾಡಬೇಕು ಅಂತಿದ್ದ ಕೆಲಸ ಯಾವುದಾದರೂ ಇದೆಯೆ?
ಒಮ್ಮೆ ಕೂತು ಆಲೋಚಿಸಿ, ನಿಮ್ಮ ಜೀವನದಲ್ಲಿ 'ಈ ಕೆಲಸ ಮಾಡಬೇಕು ಅಂತಿದ್ದೆ ಆದರೆ ಆಗಲೇ ಇಲ್ಲ' ಅಂತ ಇಂದಿಗೂ ನಿಮ್ಮನ್ನು ಬಾಧಿಸೋ ಆ ಕೆಲಸ ಯಾವುದು? ಉದಾಹರಣೆಗೆ ನಿಮಗೆ ಪೇಂಟಿಂಗ್ ಮಾಡೋ ಆಸೆ ಇತ್ತು, ಆದರೆ ಅಪ್ಪ ಇಂಜಿನಿಯರಿಂಗ್ ಸೇರಿಸಿದರು. ಅಂದಿನ ಆಸೆ ಹಾಗೆ ಉಳಿಯಿತು ಅಂತ ಅನ್ನಿಸಿದರೆ ಈಗ ಆ ಕೆಲಸಕ್ಕೆ ಯಾಕೆ ಕೈಹಾಕಿ ಪ್ರಯತ್ನ ಮಾಡಬಾರದು? ಬಕೆಟ್ list ಹಾಕಿಕೊಂಡು ಆದದ್ದೆಲ್ಲಾ ಒಂದೊಂದೇ tick ಮಾಡ್ತಾ ಹೋಗಿ. ಪ್ರಯತ್ನವೇ ಮಾಡಲಿಲ್ಲ ಅನ್ನೋ ಕೊರಗು ಇರೋದಿಲ್ಲ ಅಲ್ವೇ? Don't regret for what you did but regret for you didn't do ಅಂತಾರೆ ದೊಡ್ಡವರು.
ಕಾಯಿಲೆ ಇಲ್ಲ ಎಂದ ಮೇಲೆ ಆರೋಗ್ಯವಾಗಿದ್ದೇವೆ ಅಂತಲ್ಲಾ ಅಂತ ಒಂದು ಮಾತಿದೆ. ಇದಕ್ಕೆ ಅರ್ಥವಾದರೂ ಏನು? ಯಾರ ಮೇಲೂ ಯುದ್ಧವನ್ನೇ ಮಾಡದ ರಾಜ ನನ್ನನ್ನು ಗೆದ್ದವರು / ಗೆಲ್ಲೋವ್ರು ಯಾರೂ ಇಲ್ಲ ಅಂತ ಮೀಸೆ ಮೇಲೆ ಕೈಹಾಕಿಕೊಂಡ್ರೆ ಹೇಗಿರುತ್ತೆ? ಅದರಂತೆಯೇ ಪ್ರಯತ್ನವನ್ನೇ ಮಾಡದೆ ನನಗೆ ಸೋಲೇ ಇಲ್ಲ ಅನ್ನೋದು ಎಷ್ಟು ಸರಿ? ಕೆಲವೊಮ್ಮೆ ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳಲೇಬೇಕಾಗುತ್ತದೆ. ಸೋಲಬಹುದು ಎಂಬ ಹಿಂಜರಿಕೆಯಿಂದ ಮುಂದೆ ಹೆಜ್ಜೆ ಇಡದೇ ಹೋದರೆ ನಷ್ಟ ನಿಮಗೇ. ವಿವೇಚನೆಯಿಂದ ಮುಂದೆ ಹೆಜ್ಜೆ ಇಡಿ ಅಷ್ಟೇ!

ಸಂತಸ ತರುವ ಕೆಲಸಕ್ಕೆ ಮೊದಲ ಆದ್ಯತೆ
ಯಾವುದೇ ಕೆಲಸವಾಗಲಿ 'ಸಂತಸ' ಎಂಬುದು ನಿಮ್ಮ ಮೊದಲ ಆದ್ಯತೆ ಆಗಿರಲಿ. ಯಾವುದರಿಂದ ನಿಮಗೆ ಸಂತಸ ಬರುತ್ತದೋ ಅಂಥಾ ಕೆಲಸಕ್ಕೆ ಮೊದಲ ಆದ್ಯತೆ ಇರಲಿ. 'ಬಂದದ್ದೆಲ್ಲಾ ಬರಲಿ' ಅನ್ನೋ ಹಾಗೆ ಏನೇ ಬರಲಿ ಅದನ್ನು ಧನಾತ್ಮಕ ಯೋಚಿಸತಕ್ಕದ್ದು. ಏನೋ ಒಂದು ಅಡ್ಡಿ ಆತಂಕ ಬಂದಾಗ ಉತ್ಸಾಹ ಕುಗ್ಗೋದು ಮಾನವ ಸಹಜ. ಬೀಳು ಆಗಿದೆ ನಿಜ ಆದರೆ ಜೀವನವೇ ಅಂತ್ಯವಾಗಿಲ್ಲ ಅಂದುಕೊಂಡು ಮುಂದೆ ಸಾಗಲೇಬೇಕು. ಹಗಲು ಒಂದು ಲೋಟ ಬಿಸಿ ಕಾಫಿ ಕುಡಿಯೋದ್ರಲ್ಲಿ ನಿಮಗೆ ಸಂತಸ ಇದೆ ಎಂದರೆ ಅರ್ಧ ಘಂಟೆ ಮುಂಚೆ ಏಳಿ, ನಿಮ್ಮ ಸಮಯ ಆನಂದಿಸಿ.
ಭಾವನೆಗಳು ಸಾಂಕ್ರಾಮಿಕ. ಅಂದರೆ ಹಸನ್ಮುಖಿಯಾಗಿರುವವರು ನಿಮ್ಮ ಸುತ್ತ ಇದ್ದರೆ ನಿಮಗೂ ಅವರಂತೆ ಇರಬೇಕು ಎನಿಸುತ್ತದೆ. 'ಯಾಕ್ ಹುಟ್ಟಿಸಿದೆಯೋ ಭಗವಂತಾ' ಅಂತ ಗೋಳಾಡುವವರು ಇದ್ದರೆ ನಿಮಗೂ ಅವರಂತೆಯೇ ಆಡಬೇಕು ಎನಿಸುತ್ತದೆ.

ಸಿಕ್ಕಾಪಟ್ಟೆ ಟೆನ್ಷನ್ ನಿಂದ ಅನಾರೋಗ್ಯ ಗ್ಯಾರಂಟಿ
ಮನಸ್ಸಿನ ಒತ್ತಡ ಎನ್ನುವುದು ಕೆಟ್ಟದ್ದು ಎಂದುಕೊಂಡರೆ ಕೆಟ್ಟದ್ದು, ಒಳ್ಳೆಯದು ಎಂದುಕೊಂಡರೆ ಒಳ್ಳೆಯದೇ. ಸಿಕ್ಕಾಪಟ್ಟೆ ಟೆನ್ಶನ್ ಅಂತ ಘಂಟೆಗೆ ನಾಲ್ಕು ಸಾರಿ ಕಾಫಿ ಕುಡಿಯೋದು, ದಿನಕ್ಕೆ ಹತ್ತು ಸಿಗರೇಟ್ ಸೇದೋದು ಇತ್ಯಾದಿ ಮಾಡಿದಾಗ ಒತ್ತಡದಿಂದ ಅನಾರೋಗ್ಯವೇ ಆಗೋದು. ಕೆಲವರ ನುಡಿಗಳಲ್ಲಿ ಕೇಳಿರಬಹುದು. "I work great under pressure". ಈ ಒತ್ತಡ ಅನ್ನೋದು ಒಬ್ಬರ ಬೆಳವಣಿಗೆಗೆ ಸಹಾಯವಾಗುತ್ತದೆ. ಹೇಗೆ?
ಉದಾಹರಣೆಗೆ ಇನ್ನೊಂದು ವಾರದಲ್ಲಿ ಈ ಹತ್ತು ಕೆಲಸಗಳನ್ನು ಮಾಡಿ ಮುಗಿಸಲೇಬೇಕು ಅಂದಾಗ ಒತ್ತಡ ಬೀಳುತ್ತದೆ ನಿಜ. ಅಯ್ಯೋ ಮುಗಿಸಬೇಕು ಅಂತ ಒದ್ದಾಡಿಕೊಂಡು ಒಂದು ಕೆಲಸ ಮಾಡುವಾಗ ಮತ್ತೊಂದರ ಕಡೆಗೆ ಗಮನ ಹರಿಸಿದಾಗ ಯಾವ ಕೆಲಸವೂ ಮುಗಿಯದು. ಬದಲಿಗೆ ಒಂದು 'to do list' ಹಾಕಿಕೊಂಡು, ಯಾವುದಕ್ಕೆ ಎಷ್ಟು ಸಮಯ ತಗಲಬಹುದು ಅಂತ ಅಂದಾಜು ಮಾಡಿ, ಯಾವ ಯಾವ ಕೆಲಸಗಳು ಮತ್ತೊಂದರ ಮೇಲೆ ಅವಲಂಬಿತ ಎಲ್ಲ ಎಂದು ಗುರುತಿಸಿಕೊಂಡು ಕೆಲಸಗಳನ್ನು ಮುಗಿಸುತ್ತಾ ಆ ಲಿಸ್ಟ್'ಅನ್ನು update ಮಾಡುತ್ತಾ ಸಾಗಿದರೆ, ಕೆಲವೊಮ್ಮೆ ಇನ್ನೂ ಸಮಯವಿರುವಂತೆ ಎಲ್ಲಾ ಕೆಲಸಗಳೂ ಮುಗಿದಿರುತ್ತದೆ.

ಗಂಡಿಗಿಂತ ಹೆಣ್ಣು ಹೆಚ್ಚು ಭಾವನಾತ್ಮಕ ಜೀವಿ
ಗಂಡಿಗಿಂತ ಹೆಣ್ಣು ಹೆಚ್ಚು ಭಾವನಾತ್ಮಕ ಜೀವಿ. ಒಬ್ಬ ಹೆಣ್ಣಿನ ಶಕ್ತಿಯೇ ಆಕೆಯ ಮುನ್ನೆಡೆಗೆ ಅಡ್ಡಿಯೂ ಆಗಬಹುದು. ಅದು ಸಹನಾ ಶಕ್ತಿಯಾಗಿರಬಹುದು, ಅನುಕಂಪ ತೋರುವ ಶಕ್ತಿಯಾಗಿರಬಹುದು. ಹೀಗೇ ಯಾವುದಾದರೂ ಆಗಬಹುದು. ತನ್ನ ಸುತ್ತಲಿನವರು ಹೇಗೆ ಎಂದು ಸರಿಯಾಗಿ ತುಲನೆ ಮಾಡದೇ ಹೋದಾಗ ಅವರಿಂದಲೇ ನೋವು ಅನುಭವಿಸೋ ಪರಿಸ್ಥಿತಿ ಉಂಟಾಗಬಹುದು. ನಿಮ್ಮಲ್ಲಿ ಇಂಥಾ ಸೂಕ್ಷ್ಮ ಗುಣವಿದ್ದಲ್ಲಿ ಸ್ನೇಹಿತರನ್ನು ಆಯ್ಕೆ ಮಾಡಿಕೊಳ್ಳುವಾಗ ಎಚ್ಚರವಹಿಸಬೇಕು. ಯಾರೋ ಒಬ್ಬರು ಮನಸ್ಸಿಗೆ ಸ್ವಲ್ಪ ಹತ್ತಿರವಾದರು ಅಂತ ನಿಮ್ಮೆಲ್ಲ ಸ್ವಂತ ವಿಚಾರಗಳನ್ನು ಅವರ ಮುಂದೆ ಕಕ್ಕಿಬಿಡಬಾರದು.

ನಿಂದನೆಯನ್ನು ಸೋಲು ಎಂದುಕೊಳ್ಳಬೇಡಿ
Pain / ನೋವು ಅನ್ನೋದು ಜೀವನದಲ್ಲಿ ಒಂದು ಅನಿವಾರ್ಯ ಅಂಗ. ನಮ್ಮಲ್ಲಿ ಕುಂದುಕೊರತೆ ಇಲ್ಲದಾಗಿಯೂ ಏನೋ ಒಂದು ಟೀಕೆಗೆ ಗುರಿಯಾಗೋದು ಸರ್ವೇಸಾಧಾರಣ ವಿಷಯ. ಇನ್ನು ಕುಂದಿದ್ದರಂತೂ ಬಿಡಿ. ಉದಾಹರಣೆಗೆ 'ನೀನು ತುಂಬಾ ಸಣ್ಣ', 'ನೀನು ತುಂಬಾ ದಪ್ಪ', 'ನೀನು ತುಂಬಾ ಕುಳ್ಳು' ಒಂದೇ ಎರಡೇ? ಇವೆಲ್ಲ ಕೆಲಸಕ್ಕೆ ಬಾರದ ನಿಂದನೆಗಳು. ಇದನ್ನು ಸೋಲು ಎಂದುಕೊಳ್ಳದೆ ನಗುನಗುತ್ತಾ ಸ್ವೀಕರಿಸಿ. ನಿಂದನೆಗೆ ನೀವು ಪ್ರತಿಕ್ರಯಿಸಿದರೆ ಆ ಕಡೆಯವರಿಗೆ ಉತ್ತೇಜನ ನೀಡಿದಂತೆ. ಉದಾಸೀನ ಮಾಡಿದರೆ ಅವರೂ ಬಾಯಿ ಮುಚ್ಚುತ್ತಾರೆ, ನಿಮಗೂ ನೆಮ್ಮದಿ. ನೀವು ನೀವೇ ಆಗಿ ಸಾಧಿಸಿ.
ಪ್ರತಿಯೊಬ್ಬರಲ್ಲೂ ಒಂದೊಂದು ವಿಶೇಷ ಮತ್ತು ವಿಭಿನ್ನ ಗುಣ ಇದ್ದೇ ಇರುತ್ತದೆ. ಮೊದಲು ನಮ್ಮನ್ನು ನಾವು ಅರಿಯಬೇಕು. ನಂತರ ಮತ್ತೊಬ್ಬರಿಗೆ ಅರಿವು ಮೂಡಿಸಬೇಕು. ಪ್ರತಿ ಸೋಲನ್ನೂ ಮುಂದಿನ ಗೆಲುವಿನ ಹೆಜ್ಜೆಯಾಗಿಸಿಕೊಳ್ಳಬೇಕು. ಒಬ್ಬೊಬ್ಬ ಹೆಣ್ಣಿನ ಮೊಗದಲ್ಲೂ ಸಂತಸ ಅರಳಿದರೆ ಜಗವೇ ಅರಳುತ್ತದೆ.
{document1}
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications