ಮತ್ತೊಂದು ಲೋಕಸಭೆ ಚುನಾವಣೆ ಬಂದಿದೆ

ಮತ್ತೆ ಚುನಾವಣೆ ಬರುತ್ತಿದೆ. ಎಪ್ರಿಲ್ ಹದಿನಾರರಿಂದ ಮೇ ಹದಿಮೂರರವರೆಗೆ ಲೋಕಸಭಾ ಚುನಾವಣೆಗಳು ನಡೆಯಲಿವೆ ಎಂದು ಚುನಾವಣಾ ಅಯೋಗ ನಿನ್ನೆ ಘೋಷಣೆ ಮಾಡಿದೆ. ಇನ್ನೇನು, ನಿಧಾನವಾಗಿ ಚುನಾವಣಾ ಕಾವು ದೇಶದಾದ್ಯಂತ ಹಬ್ಬುತ್ತದೆ. ಹಳ್ಳಿಗಳ ಅರಳಿಕಟ್ಟೆಯ ಮಧ್ಯಾಹ್ನದ ಉರಿಬಿಸಿಲು, ನಗರಗಳ ಚಾದುಕಾನಿನ ಸಂಜೆಗಳು, ಚುನಾವಣೆಗಳನ್ನೇ ಜಪಿಸಲು ತೊಡಗುತ್ತವೆ. ಕೂಲಿ ಕಾರ್ಮಿಕರಿಂದ ಹಿಡಿದು, ಬ್ಯಾಂಕ್ ಮ್ಯಾನೇಜರುಗಳವರೆಗೂ ಬರೀ ಇದೇ ಚರ್ಚೆ.
ಇಷ್ಟು ದಿನ, ಅದೆಲ್ಲಿ ಹೋಗಿದ್ದರೋ? ನೋಡಿ, ಇನ್ನು ಮಿರಮಿರ ಮಿರುಗುವ ಬಿಳಿಬಿಳಿ ಧೋತರ ಉಟ್ಟ ರಾಜಕಾರಣಿಗಳು ತಮ್ಮ ತಮ್ಮ ಊರುಗಳ ಗಲ್ಲಿಗಲ್ಲಿಗಳಲ್ಲಿ ತಿರುಗಲಾರಂಭಿಸುತ್ತಾರೆ. ನೀವು ಹೋಗಿ ಮದುವೆಗೋ ಮುಂಜಿಗೂ ಕರೆದು ಬನ್ನಿ ಬಂದುಬಿಡುತ್ತಾರೆ. ತಾವು ಕಳೆದ ಐದು ವರುಷಗಳಿಂದ ಏನಂದರೆ ಏನೂ ಮಾಡಿರದಿದ್ದರೂ, ಮತ್ತೆ ನಮ್ಮನಿಮ್ಮೆದುರು ಅತ್ಮವಿಶ್ವಾಸದಿಂದ ನಿಂತು ಹೊಸ ಕಥೆಗಳನ್ನು ನಂಬುವಂತೆ ಹೇಳತೊಡಗುತ್ತಾರೆ.
ಜನರೂ ಹೊಸ ಉಮೇದಿನಿಂದ ತಮ್ಮೂರ ಹಳೆಯ ಕ್ಯಾಂಡಿಡೇಟು ಅದೇನು ಕಡಿದು ಕಟ್ಟೆ ಹಾಕಿದ್ದ ಎಂಬುದನ್ನು ಚರ್ಚೆ ಮಾಡೀ ಮಾಡೀ..ಒಬ್ಬೊಬ್ಬರು ಒಂದೊಂದು ತರಾ ನಿರ್ಧಾರಕ್ಕೆ ಬರುತ್ತಾರೆ. ಕೆಲ ಊರುಗಳ ಜನ, ತಮ್ಮೂರಲ್ಲಿ ಇಲ್ಲಿಯತನಕ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ, ಹಾಗಾಗಿ ನಾವ್ಯಾರೂ ಮತ ಹಾಕುವುದಿಲ್ಲ ಅಂತ ಬೋರ್ಡು ಬರೆಸಿ, ಊರ ಹೊರಗೆ ಜೋತಾಡಿಸಿ ರಾಜಕಾರಣಿಗಳಿಗೆ ಬಹಿಷ್ಕಾರವನ್ನೂ ಹಾಕುತ್ತಾರೆ.
ಎಲ್ಲರಿಗೂ ಗೊತ್ತಿರುವ ಹಾಗೆ- ಹಣ-ಹೆಂಡ-ಪಂಚೆ-ಸೀರೆ ಅಕ್ಕಿಮೂಟೆಗಳ ಸಂಗ್ರಹ ಭರದಿಂದ ಸಾಗುತ್ತದೆ. ನಗರಗಳ ಹೊರವಲಯದ ಖಾಲಿ ಬಿಲ್ಡಿಂಗುಗಳು ಇವುಗಳಿಗೆ ಅಶ್ರಯ ನೀಡುತ್ತವೆ. ಯಾರ್ಯಾರೋ ಹೆಂಡ ಹಂಚುವಾಗ ದುಡ್ಡು ಸಾಗಿಸಬೇಕಿದ್ದರೆ ಸಿಕ್ಕಿ ಬೀಳುತ್ತಾರೆ. ಅರಳಿ ಕಟ್ಟೆಗಳಲ್ಲಿ ಅವೂ ಚರ್ಚೆಯಾಗುತ್ತವೆ- ಛೇ, ತಮಗೆ ಸಿಗಲಿಲ್ಲವಲ್ಲ ಎಂಬ ಬೇಜಾರಿನೊಂದಿಗೆ.
ಊರೊಳಗೆ ಯಾವ ಕಾರು ಸ್ಕಾರ್ಪಿಯೋಗಳು ಬಂದರೂ, ನಿರುದ್ಯೋಗಿ ಜನ ಯಾವುದೋ ರಾಜಕೀಯ ಪಕ್ಷದವರೇ ಬಂದಿರಬೇಕು ಎಂದು ಉದ್ದ ಕತ್ತು ಚಾಚುತ್ತಾರೆ. ಬಂದವರು ಪಕ್ಷಗಳವರೇ ಆದರೆ, ಒಂದಿಷ್ಟು ದಿನಗಳ ಉದ್ಯೋಗ ದೊರಕುತ್ತದೆ. ಇಲ್ಲವಾದರೆ ಹಿಡಿಶಾಪ ಇದ್ದೇ ಇದೆ. ಇನ್ನು ಯಾವನಿಗಾದರೂ, ಜನ ಒಟ್ಟು ಮಾಡುವ ತಾಕತ್ತಿದ್ದರೆ, ತನ್ನ ಬಳಿ ಇರುವ ಯುವಶಕ್ತಿಯನ್ನು ಪ್ರದರ್ಶಿಸಿ, ನಿಮಗೇ ನಮ್ಮೇರಿಯಾದ ಓಟು ಎಂದು ಅಭ್ಯರ್ಥಿಗಳನ್ನು ನಂಬಿಸಿ ದುಡ್ಡು ಮಾಡಿಕೊಳ್ಳುವ ಹೋಲ್ಸೇಲ್ ದಂಧೆಯೂ ನಡೆಯುತ್ತದೆ.
ಯಾವುದೇ ದಿನಪತ್ರಿಕೆಗಳನ್ನು ತೆಗೆದು ನೋಡಿದರೂ, ಪೇಜುಪೇಜುಗಟ್ಟಲೇ ಜಾಹೀರಾತುಗಳು ಕಾಣುತ್ತವೆ ತಮ್ಮ ಪಕ್ಷದ್ದು ಮಾತ್ರ ಸಾಧನೆ ಎಂಬಹಾಗೆ. ಟೀವೀ ಚಾನಲುಗಳಿಗಂತೂ ಇನ್ನು ಹಬ್ಬ. ರಾಜಕೀಯ ಪಕ್ಷಗಳು, ಚುನಾವಣಾ ಆಯೋಗದ ನಿಯಮಗಳಲ್ಲಿ ಎಲ್ಲೆಲ್ಲಿ ಕುಂದು-ಕೊರತೆಗಳಿವೆ, ಹೇಗೆ ಅಯೋಗದ ಮೂಗಿನಡಿಯಲ್ಲಿ ಅಕ್ರಮಗಳನ್ನು ಮಾಡಿಯೂ ಸಿಕ್ಕಿಹಾಕದೇ ಉಳಿಯಬಹುದು ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುತ್ತವೆ.
ಇವಿಷ್ಟರ ಮಧ್ಯೆ, ದೇಶ ಹಾಳಾಗುತ್ತಿದೆ, ಎಕ್ಕುಟ್ಟೋಗುತ್ತಿದೆ ಎಂದೆಲ್ಲ ಮಾತನಾಡುವ ಮಂದಿ ಮತದಾನ ಮಾಡುವುದೋ ಬಿಡುವುದೋ ಎಂಬ ಗೊಂದಲದಲ್ಲೇ ಕಾಲ ಕಳೆಯುತ್ತಾರೆ. ಇಲ್ಲಿಯ ತನಕ ಒಂದು ಬಾರಿ ಕೂಡ ಮತದಾನ ಮಾಡದೇ ಹೋದರೂ ದೇಶದ ಪರಿಸ್ಥಿತಿ ರಾಜಕಾರಣಿಗಳ ಭ್ರಷ್ಟಾಚಾರ ಇತ್ಯಾದಿ ವಿಚಾರಗಳ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುತ್ತಾರೆ. ಮನೆ ಬಾಗಿಲಿಗೇ ಜನಗಣತಿಯವರು ಬಂದಿದ್ದರೂ, ಮತ್ತೆ ಮತ್ತೆ ಮಂಡಲ ಪಂಚಾಯತಿಗಳಿಂದ ಹಿಡಿದು ಮಹಾನಗರ ಪಾಲಿಕೆಗಳವರೆಗೆ- ಮತದಾರರ ಗುರುತು ಪತ್ರ ಮಾಡಿಸಿಕೊಳ್ಳುವ ಮಾಹಿತಿಗಳನ್ನು ನೋಡಿದ್ದರೂ, ಅರಾಮಾಗಿ ಕೂತು ಕಾಲ ಕಳೆದ ಕಾರಣ ಇನ್ನೂ ವೋಟರ್ ಐಡಿ ಬಂದಿಲ್ಲ. ಮತದಾನ ಮಾಡಲು ವೋಟರ್ ಐಡಿ ಇಲ್ಲದಿದ್ದರೂ ಪರವಾಗಿಲ್ಲ ಉಳಿದ ಕೆಲ ಅವಶ್ಯಕ ದಾಖಲೆಗಳಿದ್ದರೆ ಎಂಬ ಮಾಹಿತಿಯೂ ಇವರಿಗೆ ತಿಳಿದಿದೆಯೋ ಇಲ್ಲವೋ- ಗೊತ್ತಿಲ್ಲ.
ಮನೆಯೆದುರಿನ ಶಾಲೆಯಲ್ಲಿ ಸರತಿ ಸಾಲಲ್ಲಿ ನಿಂತು, ಮತದಾನ ಮಾಡುವ ಗೋಳು ಯಾರಿಗೆ ಬೇಕು ಅನ್ನುವ ಕಾರಣಕ್ಕೆ, ನಾಳೆಯ ದಿನ ವೋಟ್ ಮಾಡುವುದೂ ಸಂಶಯವೇ. ಯಾಕೆ ನಮ್ಮ ದೇಶದಲ್ಲಿ ನಾವು ಅಂರ್ತಜಾಲದ ಮೂಲಕ ಮತದಾನ ಮಾಡಬಾರದು ಮೊಬೈಲ್ ಗಳ ಮೂಲಕವೂ ಅದ್ಯಾವುದೋ ದೇಶದಲ್ಲಿ ಮತದಾನ ಮಾಡುವ ಸೌಲಭ್ಯ ಇದೆಯಂತೆ ಎಂದೆಲ್ಲ ಮಾತಾಡುತ್ತಾರೆಯೇ ಹೊರತು ತಮ್ಮಲ್ಲಿ ಇರುವ ಸೌಲಭ್ಯಗಳ ಬಳಕೆ ಮಾಡಿಕೊಂಡು ಮತದಾನ ಮಾಡುವುದಿಲ್ಲ.
ಮೇ ಕೊನೆಯ ಹೊತ್ತಿಗೆ ಯಾವುದಾದರೂ ಅಲಯನ್ಸು ಸರಕಾರ ನಿರ್ಮಿಸುತ್ತದೆ. ಭಾರತದ ಅಮೂಲ್ಯ ಯುವಪಡೆಯ ಅರ್ಧದಷ್ಟು ಮಂದಿ ಕೂಡ ಮತದಾನ ಮಾಡದೇ, ಮಾಡದೇ ಇರುವುದಕ್ಕೆ ತಮಗೆ ತಾವೇ ಕಾರಣಗಳನ್ನು ಕೊಟ್ಟು ಕೊಳ್ಳುತ್ತ ಸಮಾಧಾನ ಪಟ್ಟುಕೊಳ್ಳುತ್ತಾರೆ. ಮತ್ತೆ ಇನ್ನೈದು ವರುಷಗಳ ಬಳಿಕ - ಇವೇ ಸೀನುಗಳು ಮರುಕಳಿಸುತ್ತವೆ.












Click it and Unblock the Notifications