ನಮ್ಮ ಜ್ಞಾನದಾಹ ತೀರಿಸಿ - ಪ್ರಕಾಶ್ ರಾಜಾರಾವ್
[59ನೇ ಕನ್ನಡ ರಾಜ್ಯೋತ್ಸವ ನಿಮಿತ್ತ 'ಒನ್ಇಂಡಿಯಾ ಡಾಟ್ ಕಾಂ' ನಡೆಸಿದ ಈಮೇಲ್ ಸಮೀಕ್ಷೆಯಲ್ಲಿ ತಮ್ಮ ಅಭಿಪ್ರಾಯ ಮಂಡಿಸುತ್ತಿರುವವರು ಪ್ರಕಾಶ್ ರಾಜಾರಾವ್, ಆಕ್ಲೆಂಡ್, ನ್ಯೂಜಿಲೆಂಡ್. ಸಮೀಕ್ಷೆಯ ವಿಷಯ : ಕನ್ನಡ ಅಂತರ್ ಜಾಲ ತಾಣಗಳಿಂದ ನಾನೇನು ಬಯಸುತ್ತೇನೆ.]
ನಾನು ಕರ್ನಾಟಕ ಬಿಟ್ಟು ನ್ಯೂಜಿಲೆಂಡ್ ಸೇರಿದ್ದು ಹದಿಮೂರು ವರ್ಷಗಳ ಹಿಂದೆ. ಕನ್ನಡ ವಾರ್ತಾ ಪತ್ರಿಕೆಗಳನ್ನೋದುವ ಹುಚ್ಚು ಶಾಲಾ ದಿನಗಳಿಂದಲೇ ಇತ್ತು. ಭಾನುವಾರ ಬಂತೆಂದರೆ "ಕನ್ನಡ ಪ್ರಭ", "ಪ್ರಜಾವಾಣಿ", "ಉದಯವಾಣಿ" ಮುಂತಾದ ದಿನಪತ್ರಿಕೆಗಳನ್ನು ಓದುವುದೆಂದರೆ ಸಂತೋಷ. ನ್ಯೂಜಿಲೆಂಡಿಗೆ ಬಂದ ಹೊಸತರಲ್ಲಿ ಏನನ್ನೋ ಕಳೆದುಕೊಂಡ ಹಾಗೆ ಭಾಸವಾಗುತ್ತಿತ್ತು.
ಇಲ್ಲಿ ನಮ್ಮ ಕನ್ನಡಕೂಟದ ಗೃಂಥಾಲಯದಲ್ಲಿ ಅನೇಕ ಪುಸ್ತಕ, ನಿಯತಕಾಲಿಕಗಳು ಇದ್ದರೂ ದಿನ ಪತ್ರಿಕೆಗಳಿರಲಿಲ್ಲ. ಆಗ ಅಂತರ್ಜಾಲದಲ್ಲಿ ಸಿಗುತ್ತಿದ್ದ ಕನ್ನಡ ಪತ್ರಿಕೆಗಳು ನನ್ನನ್ನು ಕರ್ನಾಟಕದೊಡನೆ ಮತ್ತೆ ಬೆಸುಗೆ ಹಾಕಿದವು. ಆಗ ಮತ್ತು ಈಗ, ನಾನು ಕಂಪ್ಯೂಟರ್ ತೆಗೆದರೆ ಮೊದಲು ಓದುವುದೇ ಕನ್ನಡ ವಾರ್ತೆಗಳು. ಬಹುಶಃ ಇಲ್ಲಿ ದಿನವಿಡೀ ಎಲ್ಲವೂ ಇಂಗ್ಲಿಷ್ ಮಯವಾಗಿರುವುದೇ ಕಾರಣ.
ಅಂದು ಹಾಗೂ ಇಂದು ನನ್ನ ಮೆಚ್ಚಿನ ತಾಣ "ದಟ್ಸ್ ಕನ್ನಡ.ಕಾಂ ". ಮೊದಲು ಪ್ರಕಟವಾಗುತ್ತಿದ್ದ ಶೈಲಿ ನನಗೆ ಬಹಳ ಇಷ್ಟವಾಗಿತ್ತು. ಅಂದಿನ ಹಲವಾರು ಅಂಕಣಗಳು ನನ್ನನ್ನು ಕಾಯುವಂತೆ ಮಾಡುತ್ತಿದ್ದವು. ಉದಾಹರಣೆಗೆ, ಶ್ರೀವತ್ಸ ಜೋಶಿಯವರ 'ವಿಚಿತ್ರಾನ್ನ'. ಎಂತಹ ಸುಂದರ, ಅರ್ಥಪೂರ್ಣವಾದ ಅಂಕಣ, ಒಂದೂ ಬಿಡದೆ ಪ್ರತೀವಾರ ಓದಿದೆ. ಈ ಅಂಕಣ ನನ್ನನ್ನು ಮತ್ತೆ ಕರ್ನಾಟಕ ವಾಪಸ್ ಕರೆದುಕೊಂಡು ಹೋಯಿತು ಎಂದರೆ ಅತಿಶಯೋಕ್ತಿಯಲ್ಲ.
ಕನ್ನಡ ಅಂತರ್ಜಾಲದಿಂದ ನಾನು ನಿರೀಕ್ಷಿಸುವುದು
1. ನನ್ನ ಕನ್ನಡ ಭಾಷಾ ಜ್ಞಾನವನ್ನು ವಿಸ್ತರಿಸುವುದು.
2. ಕರ್ನಾಟಕದ ಎಲ್ಲಾ ಸುದ್ದಿಗಳನ್ನು ಸ್ವಚ್ಛ, ಸುಂದರ ಕನ್ನಡದಲ್ಲಿ ಓದಲು ಸಾಧ್ಯವಾಗುವುದು.
3. ಕರ್ನಾಟಕದ ಆಚೆ ಇರುವ ಕನ್ನಡಿಗರಿಗೆ ಒಂದು ವೇದಿಕೆ ಕಲ್ಪಿಸುವುದು.
4. ಹೊರನಾಡು ಕನ್ನಡಿಗರು ತಮ್ಮ ಮಕ್ಕಳಿಗೆ ಕನ್ನಡ ಕಲಿಸಲು ಉಪಯುಕ್ತವಾಗುವುದು.
5. ನಾವು ಹೊರನಾಡು ಕನ್ನಡಿಗರು ಕನ್ನಡಕ್ಕಾಗಿ ಏನು ಮಾಡಬಹುದು ಎಂದು ತಿಳಿಸುವುದು.
6. ಸಾಧ್ಯವಾದಷ್ಟು ಹೊಸ ಅಂಕಣಗಳನ್ನು ದಯವಿಟ್ಟು ಪ್ರಾರಂಭಿಸಿ. ಮೊದಲಿನಂತೆ ನಾವು ಓದುಗರು ಕಾತುರದಿಂದ ಕಾಯುವಂತೆ ಮಾಡುವಂತಹ ಅಂಕಣಗಳನ್ನು ನಮ್ಮ ನೆಚ್ಚಿನ ಬರಹಗಾರರಿಂದ ಬರೆಸಿ.
ಶ್ರೀವತ್ಸ ಜೋಶಿ, ಅಣಕು ರಾಮನಾಥ್, ಸಹನಾ ವಿಜಯ್ ಕುಮಾರ್, ಶಕುಂತಲಾ ಐಯ್ಯರ್, ದಟ್ಸ್ ಕನ್ನಡ ಬಳಗದ ಪ್ರಸಾದ ನಾಯಿಕ, ಸ್ವಯಂ ನೀವು (ಎಸ್ಕೆ ಶಾಮ ಸುಂದರ), ನಮ್ಮ ಜ್ಞಾನದಾಹ ತೀರಿಸಿ. ಹೀಗೆ ಈ ಪಟ್ಟಿಯನ್ನು ಬೆಳೆಸಬಹುದು. ಆದರೆ ನನಗೆ ಇಷ್ಟು ಸಾಕು. ನನಗೆ ಇಷ್ಟವಾಗದ ವಿಷಯ ಎಂದರೆ ಅದೇಕೊ ನಮ್ಮ ಕನ್ನಡ ಅಂತರ್ಜಾಲ ಪತ್ರಿಕೆಗಳಲ್ಲಿ ಕರ್ನಾಟಕಕ್ಕಿಂತ ಹೊರಗಿನ ಸುದ್ದಿಗಳಿಗೆ ಹೆಚ್ಚು ಪ್ರಾಶಸ್ತ್ಯ ಸಿಗುತ್ತಿರುವುದು. ಇದು ಕೊಂಚ ಕಡಿಮೆಯಾದರೆ ಒಳ್ಳೆಯದು.