ಈ ಅಂಧ ಮಕ್ಕಳಿಗೆ ನಿಮ್ಮ ಕಾಸು ಬೇಡ, ನೀವು ಬೇಕು!
ಮತ್ತೆ ಎಸ್ಸೆಸ್ಸೆಲ್ಸಿ, ಪಿಯೂಸಿ ಪರೀಕ್ಷೆ ಬರೆಯುವ ಅನಿರ್ವಚನೀಯ ಆನಂದ ಯಾರಿಗುಂಟು ಯಾರಿಗಿಲ್ಲ! ನಿಮಗಿದೆ. ಸಮರ್ಥನಂ ಟ್ರಸ್ಟ್ನ ವಿದ್ಯಾರ್ಥಿಗಳಿಗೆ ನೆರವಾಗಲು ಇಂದೇ ಫೋನು ಮಾಡಿ, ನಿಮ್ಮ ಹೆಸರನ್ನು ನೊಂದಾಯಿಸಿಕೊಳ್ಳಿ. ಪರೀಕ್ಷೆ ಬರೆಯಿರಿ, ನೀವು ಮತ್ತು ಅಂಗವಿಕಲ ವಿದ್ಯಾರ್ಥಿಗಳಿಬ್ಬರೂ ಪಾಸಾಗಿರಿ!
ಸ್ಲೇಟು ಬಳಪ ತುಂಬಿದ ಚೀಲವನ್ನು ಹೆಗಲಿಗೆ ಹಾಕಿಕೊಂಡು ಸ್ಕೂಲಿಗೆ ಓಡಿಹೋಗುವುದಕ್ಕೆ ಅವಳಿಗೂ ಆಸೆ. ಆದರೆ ಅಲ್ಲೆಲ್ಲೂ ಶಾಲೆಯೇ ಕಾಣುತ್ತಿಲ್ಲ. ಅಷ್ಟು ದೂರ ಹೋದರೆ ಸಿಕ್ಕತ್ತೆ ಂತ ಅವರಪ್ಪ ಅಮ್ಮಂಗೆ ಗೊತ್ತಿದೆ. ಗೊತ್ತಿಲ್ಲದಂತೆ ಇದ್ದುಬಿಡುವ ಜೀವನ ಅವರ ಪಾಲಿಗೆ ಬಂದದ್ದು. ಅವಳನ್ನು ಅಲ್ಲಿಯವರೆಗೆ ಕಳುಹಿಸಬೇಕೆಂದು ಅವರ ತಂದೆಗೆ ಅನ್ನಿಸಿದ್ದೂ ಇದೆ. ಆದರೆ ಸಾಧ್ಯವಾಗುತ್ತಿಲ್ಲ. ಯಾಕೆ ಹಾಗೆ ಆಗತ್ತೆ ಅಂತ ಅವನಿಗೆ ಯಾರೂ ಬಿಡಿಸಿ ಹೇಳುತ್ತಿಲ್ಲ. ಯಾಕೆ ಹೇಳಬೇಕು?
ಕೊಳೆ ಲಂಗ ಹಾಕಿಕೊಂಡು ನಾಲಕ್ಕು ಹಂಚಿನಚೂರು ಇಟ್ಟುಕೊಂಡು ಆಡುತ್ತಿರುವ ಅವನ ಮಗಳು ಮೈನೆರೆಯುವ ತನಕ ಮಣ್ಣಲ್ಲಿ ಮೈಮರೆತು ಆಡುವುದರಲ್ಲೇ ಹೊತ್ತು ಕಳೆಯುತ್ತಾಳೆ. ಅವಳ ಅಣ್ಣ , ಭಟ್ಟರ ಹೋಟೆಲಿನಲ್ಲಿ ಗ್ಲಾಸಿನ ಲೋಟ ತೊಳೆಯುತ್ತಿದ್ದಾನೆ. ಅಣ್ಣ ತಂಗಿಯ ಓರಗೆಯ ಕೋಟಿಕೋಟಿ ಮಕ್ಕಳು ಭಾರತದಲ್ಲಿ ಹೀಗೆ ಆಡುತ್ತಾದುಡಿಯುತ್ತಾರೆ. ನಿಮ್ಮನೆ ಕಿಟಕಿಯಿಂದ ಆಚೆ ಸ್ವಲ್ಪ ಬಗ್ಗಿನೋಡಿ. ಅವರು ನಿಮ್ಮ ಕಣ್ಣಿಗೆ ಬಿದ್ದರೆ ಸಾಕು. ಉಳಿದದ್ದನ್ನು ನಮ್ಮ ಚಿದಂಬರಂ ಸಾಹೇಬರು ವಿಚಾರಿಸಿಕೊಳ್ಳುತ್ತಾರೆ.
ದೇವರೇ ದಯಪಾಲಿಸಿದ ಭಾರತಾಂಬೆಯ ಕೋಟ್ಯಂತರ ಮಕ್ಕಳ ನಾಳೆ ಗತಿಯೇನು ಸ್ವಾಮಿ? ಹುಟ್ಟಿಸಿದ ದೇವರು ಹುಲ್ಲು ಮೇಯಿಸದೆ ಬಿಡುವುದಿಲ್ಲ ಎಂದು ನಂಬಿರುವ ತನಕ ಚಿಂತೆಯಿಲ್ಲ. ಆದರೆ, ಹೆತ್ತವರಿಗೆ ಮಕ್ಕಳ ವಿದ್ಯಾಭ್ಯಾಸ ಮುಖ್ಯವೆನಿಸುವ ಆ ಕ್ಷಣ ಮುಖ್ಯ. ಅದೆ ಆರಂಭ. ಉಳಿದದ್ದೆಲ್ಲ ಹೇಗೂ ನಡೆಯತ್ತೆ. ಹಾಗೇ ತಾನೇ ನೀವು ಸಮವಸ್ತ್ರ ಧರಿಸಿಕೊಂಡು ಅಲ್ಲೀತನಕ ಹೋಗಿ, ಓದಿ ಬೆಳೆದು ದೊಡ್ಡವರಾಗಿ ಇಲ್ಲಿಯತನಕ ಬಂದಿದ್ದು?
ನಿಮ್ಮ ಕತೆ ಮುಗಿಯಿತು. ಆಸಕ್ತಿಯಿದ್ದರೆ ನಿಮ್ಮ ಮಕ್ಕಳು ಮಾತ್ರವಲ್ಲ, ಬಡವರಲ್ಲ, ಕುರುಡರು ಕಿವುಡರು ಮೂಗರೂ ಶಾಲೆಗೆ ಹೋಗುತ್ತಾರೆ. ಅವರೂ ಪದವಿಗಳಿಸುತ್ತಾರೆ, ಸಂಗೀತದಲ್ಲಿ, ಕಾನೂನಿನಲ್ಲಿ, ಮಾನವಿಕಗಳಲ್ಲಿ ವಿಜ್ಞಾನದಲ್ಲಿ! ತಲೆಎತ್ತಿ ನಿಲ್ಲುತ್ತಾರೆ, ಸ್ವಾವಲಂಬನೆ ಅಲ್ಲೆ ಇದೆ.
ದೇವಿಗೆ ಅರ್ಚನೆ ಮಾಡಿಸಿ ವರ್ಷಕ್ಕೊಮ್ಮೆ ಬಡವರಿಗೆ ಅನ್ನದಾನ ಮಾಡುವವರು ನಮ್ಮಲ್ಲಿ ಬಹಳೇ ಮಂದಿ ಇದ್ದಾರೆ. ಪರಂತು, ಹುಟ್ಟಿದಾರಭ್ಯ ಅಂಗವಿಕಲರಾದವರಿಗೆ ವಿದ್ಯಾಭ್ಯಾಸ ಸೌಕರ್ಯ ಒದಗಿಸುವ ಪ್ರಯತ್ನಗಳನ್ನು ಪುಣ್ಯಾತ್ಮರು ಅಲ್ಲಲ್ಲಿ ಮಾಡುತ್ತಾರೆ. ನಿಮಗೆ ಗೊತ್ತಿಲ್ಲ. ಉದಾಹರಣೆಗೆ ಇಲ್ಲೆ ಜಯನಗರದಲ್ಲೇ ಅಂಥದೊಂದು ಶಾಲೆಯಿದೆ. ಅಲ್ಲಿ ಕಲಿಯುವ ಮಕ್ಕಳು ಮೂರು ನಾಕು ಐದು ಆರನೆ ತರಗತಿಗಳನ್ನು ದಾಟಿದ್ದಾರೆ. ಎಸ್ಸೆಸ್ಸೆಲ್ಸಿ , ಪಿಯೂಸಿ ತನಕ ತಲುಪಿ ಮುಂದಿನ ಓದಿನ ಓಟಕ್ಕೆ ಆಗಲೇ ಸಿದ್ಧರಾಗಿದ್ದಾರೆ.
ಅವರಿಗೆ ನಿಮ್ಮಿಂದ ಒಂಚೂರು ಸಹಾಯ ಆಗಬೇಕಾಗಿದೆ. ಎಸ್ಸೆಸ್ಸೆಲ್ಸಿ , ಪಿಯೂಸಿ ಫೈನಲ್ ಪ್ರಿಫೈನಲ್ ಪರೀಕ್ಷೆ ಗಳು ಇನ್ನೇನು ಹತ್ತಿರ ಬರುತ್ತಿವೆ. ಕನ್ನಡ ಮತ್ತು ಇಂಗ್ಲಿಷ್ ಚೆನ್ನಾಗಿ ಬಲ್ಲವರು ಅಂಗವಿಕಲರ ಪರವಾಗಿ ಎಕ್ಸಾಂ ಬರೆಯಬೇಕು. ಅಲ್ಲಿನ ಮೇಡಂ ಕೇಳಿಕೊಂಡಿದ್ದಾರೆ. ನಿಮಗೆ ಆಗತ್ತಾ? ಪರೀಕ್ಷಾದಿನಗಳಂದು ನೀವು ಬಿಡುಮಾಡಿಕೊಂಡು ದಿನಕ್ಕೆ 3-4 ಗಂಟೆ ಕಾಲ ಕನ್ನಡ, ಇಂಗ್ಲಿಷ್, ಸಮಾಜ ಶಾಸ್ತ್ರ, ರಸಾಯನಶಾಸ್ತ್ರ ಏನೇನಿದೆಯೋ ಅದೆಲ್ಲ ಸಬ್ಜೆಕ್ಟ್ಸ್ಗಳನ್ನು ನೀಟಾಗಿ ಬರೆದು ಅಂಗವಿಕಲರಿಗೆ ಫಸ್ಟ್ ಕ್ಲಾಸ್ ಕೊಡಿಸಬೇಕು.
ಮತ್ತೆ ಎಸ್ಸೆಸ್ಸೆಲ್ಸಿ , ಪಿಯೂಸಿ ಪರೀಕ್ಷೆ ಬರೆಯುವ ಅನಿರ್ವಚನೀಯ ಆನಂದ ಯಾರಿಗುಂಟು ಯಾರಿಗಿಲ್ಲ! ನಿಮಗಿದೆ. ಸಮರ್ಥನಂ ಟ್ರಸ್ಟ್ನ ವಿದ್ಯಾರ್ಥಿಗಳಿಗೆ ನೆರವಾಗಲು ಇಂದೇ ಫೋನು ಮಾಡಿ ನಿಮ್ಮ ಹೆಸರನ್ನು ನೊಂದಾಯಿಸಿಕೊಳ್ಳಿ. ಪರೀಕ್ಷೆ ಬರೆಯಿರಿ, ನೀವು ಮತ್ತು ಅಂಗವಿಕಲ ವಿದ್ಯಾರ್ಥಿಗಳಿಬ್ಬರೂ ಪಾಸಾಗಿರಿ.
ನೋಡಿ : http://www.samarthanam.org
ಮಾತಾಡಿ ವಿಚಾರಿಸಿ : Vijaya Madam - +91-80- 26592999 / 26591488 / 25907463












Click it and Unblock the Notifications