ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತ್ಯಮಂಗಲ ಕಾಡಿನ ಕುದುರೆ ಮತ್ತು ಕುರುಡು ಕಾಂಚಾಣ!

By Staff
|
Google Oneindia Kannada News


ವೀರಪ್ಪನ್‌ ಜೀವನ ಚರಿತ್ರೆ ಬರೆದು, ಅದನ್ನು ಸಿನಿಮಾ ಮಾಡಿ ನಾಲ್ಕು ಕಾಸು ಮಾಡಿಕೊಳ್ಳುವ ಹಂಬಲ ಮುತ್ತುಲಕ್ಷ್ಮೀ ತಲೆಯಲ್ಲಿರುವಂತಿದೆ. ಇತ್ತ ಯಾಕೋ ರಾಜ್‌ಕುಮಾರ್‌ ಫ್ಯಾಮಿಲಿ, ಸಿನಿಮಾ ರೀಲುಗಳನ್ನು ಪಕ್ಕಕ್ಕಿಟ್ಟು ಹೋಟೆಲ್ಲು-ಲಾಡ್ಜು ಎಂದು ತಲೆಕೆಡಿಸಿಕೊಳ್ಳುತ್ತಿದೆ. ದುಡ್ಡೇ ದೊಡ್ಡಪ್ಪ ಅನ್ನುವಿರಾ?

ನಮ್ಮ ವೆಬ್‌ಸೈಟಿನಲ್ಲಿ ನಿನ್ನೆ ನೋಡ್ದೆ. ಮೀಸೆಮಾವ ವೀರಪ್ಪನ್‌ ಹೆಂಡತಿ ಅವಳ ಗಂಡನ ಜೀವನ ಚರಿತ್ರೆ ಬರೀತಾಳಂತೆ. ಹಾಗಂತ ಒಂದು ಸುದ್ದಿಸಂಸ್ಥೆಯ ವರದಿಯನ್ನು ನಮ್ಮ ಹುಡುಗರು ನೆಟ್ಟಗೆ ಅನುವಾದ ಮಾಡಿ, ನೆಟ್ಟಿಗೆ ಹಾಕಿದ್ದಾರೆ. ಆಕೆ ಬರೆಯಲಿ ಬಿಡಿ. ಅದಕ್ಕೇನಂತೆ. ನಾ ಡಿಸೋಜರ, ಅನಸೂಯ ಸಂಪತ್‌ ಅವರ ಕತೆ ಓದಿ ಓದಿ ಜಡ್ಡುಹಿಡಿಸಿಕೊಂಡವರಿಗೆ ಸತ್ಯಮಂಗಲದ ಕತೆಗಳು ಚೇತೋಹಾರಿಯಾಗಿರಬಹುದು.

Brigand Veerapans Wife Muttulakshmiಅಷ್ಟಕ್ಕೂ ಅವಳು ಬರೆಯುವ ಜೀವನ ಚರಿತ್ರೆಯಲ್ಲಿ ಬರೀ ಕಾಡುಮೇಡು, ಉಪವಾಸ ವನವಾಸದ ಪ್ರವರಗಳೇ ತುಂಬಿರುವುದಿಲ್ಲ. ದೇವರಾಣೆಯಾಗಲೂ ಆ ಕಥೆಯನ್ನು ನಮ್ಮ ಕಾಸರವಳ್ಳಿ ಮೂಸಿಕೂಡ ನೋಡುವುದಿಲ್ಲ. ಯಾಕಂದರೆ, ಸತ್ಯಮಂಗಲ ಅರಣ್ಯ ಪ್ರದೇಶದಲ್ಲಿ ವೀರಪ್ಪನ್‌ ಮತ್ತು ತಾನು ನಿರ್ಭಯವಾಗಿ ಮರಸುತ್ತುತ್ತ ‘ ಪ್ರೇಮಾಂಜಲೀ... ನನ್ನ ಕಣ್ಣಿಗೆ ಬಾರೆ ಕಣ್ಣಿಗೆ ’ ಎಂದು ಹಾಡಿ ನಲಿದ ದೃಶ್ಯ ಪ್ರಬಂಧಗಳಿರುತ್ತವೆ ಎಂದು ಆಕೆಯೇ ಹೇಳಿಕೊಂಡಿದ್ದಾಳೆ.

ಮುತ್ತುಲಕ್ಷ್ಮೀ ಬರೆವ ಗಂಡನಪುರಾಣದ ಕನ್ನಡಾನುವಾದವನ್ನು ನಾವೂ ಚಪ್ಪರಿಸಿಕೊಂಡು ಓದೋಣಂತೆ. ನನಗಂತೂ ಓದಕ್ಕೆ ಇಷ್ಟಯಿದೆ. ಆ ತಮಿಳು ಕತೆಯ ಅನುವಾದವನ್ನು ರವಿಬೆಳಗೆರೆನೇ ಮಾಡುವುದಾದರೆ ತಿಂಗಳಬೆಳಕಿನಲ್ಲಿ ಕುಳಿತು ಓದಲು ಚೆನ್ನಾಗಿರತ್ತೆ ಅಲ್ವಾ?

ಕತೆ ಬರಿತಾಳಂತೆ ಕತೆ. ಎಲ್ಲೋ ನೆಡುಮಾರನ್‌ ಹಾಕಿಕೊಟ್ಟಿರುವ ಪ್ಲಾನ್‌ ಇರಬೇಕು ಮಚಾ. ವೀರಪ್ಪನ್‌ ಕತೆ ಇಟ್ಕೊಂಡು ಸಿನಿಮಾ ಮಾಡಿ ದುಡ್ಡುಮಾಡೋಕೆ ಜನ ತುದಿಗಾಲಲ್ಲಿ ನಿಂತಿದ್ದಾರೆ. ನಿನ್ನ ಗಂಡನ ಕತೆ ಮೇಲೆ ಸಿನಿಮಾ ಮಾಡಿ ಬೇರೆಯವರು ಯಾಕೆ ದುಡ್ಡು ಮಾಡ್ಕೊಬೇಕು?‘ಊಂಗಳೇ ಪಣಂ ಪಣ್ಣಿಕೊ ಲಕ್ಷ್ಮೀ ’ ಎಂದಿರಬೇಕು ಮಾರನ್‌ಮಾಮ. ಆಯಮ್ಮ ಪೆನ್ನು ಪೇಪರ್‌ ಹುಡುಕುತ್ತಿದ್ದಾಳೆ!

ಅದು ಬಿಡಿ, ಆಕೆ ನಮ್ಮ ‘ಸಯನೈಡ್‌’ ರಮೇಶ್‌ ವಿರುದ್ಧ ಏನಂದರದೇ ಮಾತಾಡಿದಾಳೆ . ನಾನು ರಾಜ್‌ಕುಮಾರ್‌ ಅಪಹರಣ ಕತೆನಾ ಸಿನಿಮಾ ಮಾಡ್ತೀನಿ ನೀನು ಅದರಲ್ಲಿ ಮುತ್ತುಲಕ್ಷ್ಮೀ ಪಾತ್ರ ಮಾಡ್ತೀಯಾ ಅಂತ ರಮೇಶ್‌ ಆಕೇನ ಕರೆದಿದ್ದರು. ರಾಜ್‌ಕುಮಾರ್‌ ಪಾತ್ರಕ್ಕೆ ಅಕ್ಕಿನೇನಿ ನಾಗೇಶ್ವರಾವ್‌ ಇದ್ರು, ಎಸ್‌ಟಿಎಫ್‌ ಚೀಫ್‌ ಪಾತ್ರಕ್ಕೆ ವಿಜಯಕುಮಾರ್‌ ಒಪ್ಪಿದ್ರು, ಮುತ್ತು ಪಾತ್ರಕ್ಕೆ ನೀನು ಬಾರಮ್ಮ ಅಂತ ಆಯಮ್ಮನಿಗೆ ರಮೇಶ್‌ ಕಾಲ್‌ಶೀಟ್‌ ಕೊಟ್ರು. ‘ವೀರಪ್ಪನ್‌ ಸಿನಿಮಾ ರೈಟ್ಸ್‌ ಮಡಕ್ಕೊಂಡ್ರೆ ಕೋಟಿ ಕೋಟಿ ಮಾಡಬಹುದು ಬಿಕನಾಸಿ... 50.000 ಸಾವಿರ ರೂಪಾಯಿ ಯಾವಳಿಗೆ ಬೇಕು ಪೋಡಡೇ ಪೋಡಾ’ ಅಂತ ರಮೇಶ್‌ ಮುಖಕ್ಕೆ ಹೊಡೆದಹಾಗೆ ಹೇಳ್ಬಿಟ್ಳು ಲಕ್ಷ್ಮೀ.

ಆಕೆಗೂ ಗೊತ್ತಿದೆ. ತಮಿಳು ಕತೆಗಳನ್ನು ಚಿತ್ರದಲ್ಲಿ ನಾಟಿಮಾಡಿ ಮೂಟೆಗಟ್ಟಳೆ ದುಡ್ಡು ಮಾಡಕ್ಕೆ ತಮಿಳರಿಗೆ ಗೊತ್ತಿದೆ. ಕನಸುಗಳ ಮಾರಿ ಕುರುಡು ಕಾಂಚಾಣ ಹೆಕ್ಕುವುದು ಅವರಿಗೆ ಗೊತ್ತಿದೆ. ಅದಕ್ಕೊಸ್ಕರನೇ ಅವಳು ಚೆನ್ನೈ ಹೈಕೋರ್ಟ್‌ನಲ್ಲಿ ಇಂಜೆಕ್ಷನ್‌ ತಂದಿದ್ದಾಳೆ. ವೀರಪ್ಪನ್‌ ಚಿತ್ರ ಮಾಡುವುದಕ್ಕೆ ತನಗೊಬ್ಬಳಿಗೆ ಹಕ್ಕು ಮತ್ತು ಬಾಧ್ಯತೆ ಇರುವುದು ಎನ್ನುವುದು ಅವಳು ಹಾಕಿರುವ ಪಾಯಿಂಟು.

ನಮ್ಮವರಿಗೆ ಹಾಗೆಲ್ಲ ಬುದ್ದಿನೇ ಓಡಲ್ಲ ನೋಡಿ. ರಾಜ್‌ಕುಮಾರ್‌ ಅಪಹರಣ ಅಂದ್ರೂ ಒಂದೇನೇ, ವೀರಪ್ಪನ್‌ ದುರ್ಮರಣಾಂತ ಮುತ್ತು ಕರೆದ್ರೂ ಒಂದೇನೆ. ವೀರಪ್ಪನ್‌ ಬಗ್ಗೆ ಅವಳಿಗೆ ಹಕ್ಕಿರುವಂತೆ ಅಣ್ಣಾವ್ರ ಬಗ್ಗೆ ಪಾರ್ವತಮ್ಮನ್ರೋರಿಗೆ ಹಕ್ಕಿಲ್ವಾ? ‘ಅಣ್ಣಾವ್ರ ಅಪಹರಣ’ ಅಂತ ಒಂದು ಚಿತ್ರ ತೆಗೀಲಿ ನೋಡಾಣ. ತೆಗೆದ್ರೆ ಕನ್ನಡ ಇಂಡಸ್ಟ್ರಿಯಲ್ಲಿ ಅಣ್ಣಾವ್ರ ವಂಶ ಇನ್ನಾ 25 ವರ್ಷ ಕೂತ್ಕೊಂಡ್‌ ತಿನ್ನಬಹುದು. ಹೋಟೆಲು ಬೇಡ, ಲಾಡ್ಜಿಂಗು ಬೇಡ.

ಒಳ್ಳೊಳ್ಳೆ ಕತೆಗಳು ಬೇಕಾದಷ್ಟು ಬಿದ್ದಿರತ್ವೆರಿ. ಕಾಲು ಕೆಳಗೆ. ನಮ್ಮ ನಿರ್ದೇಶಕರ ಕಣ್ಣಿಗೆ ಅವು ಕಾಣೋದೇ ಇಲ್ಲ.‘ಅಣ್ಣಾವ್ರ ಅಪಹರಣ’ ಅಪ್ಪಟ ಕನ್ನಡ ಚಿತ್ರ ತೆಗೆಯೋಕೆ ಅದ್ಯಾರು ಅಡ್ಡ ಬರ್ತಾರೆ ನೋಡೋಣಂತೆ. ಮುತ್ತು ಲಕ್ಷಿ ಸೀರೆ ಎತ್ತಿ ಸೊಂಟಕ್ಕೆ ಸಿಗಿಸಿಕೊಂಡು ಜಗಳಕ್ಕೆ ಬರ್ತಾಳಾ? ಬರ್ಲಿ. ಮುತ್ತು ಮತ್ತು ಪಾರ್ವತಮ್ಮ ಕಥೆಯ ಹಕ್ಕುಗಳಿಗಾಗಿ ಜಡೆ ಎಳೆದುಕೊಂಡು ಕಿತ್ತಾಡ್ತಾರಾ? ಆಡ್ಲಿ. ಅದಕ್ಕೇನಂತೆ. ನಾವು ಕನ್ನಡಿಗರು ಸುಮ್ಮನೆ ಇರೋರಲ್ಲ. ಆ ಕಥೆನೇ ಇಟ್ಟುಕೊಂಡು ಧಾರಾವಾಹಿ ಮಾಡಕ್ಕೆ ನಮ್ಮ ಈಟೀವಿನೇ ಇಲ್ವಾ? ನಮಗೇನು ದುಡ್ಡು ಮಾಡಕ್ಕೆ ಬರಲ್ವಾ?

ನಾವಿಲ್ಲಿ ಕುರುಡು ಕಾಂಚಣದ ಬಗ್ಗೆ ಮಾತಾಡುವಾಗಲೇ, ಕಣ್ಣಿಲ್ಲದ ಈ ಮಕ್ಕಳು ನೆನಪಾಗುತ್ತಿದ್ದಾರೆ...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X