ಒಳ್ಳೆಯ ಪದಾರ್ಥ ಕೊಡ್ತೀನಿ ತೊಗೋಳಿ ಅಂದ್ರೆ ಯಾರ್ರೀ ಬೇಡಾ ಅಂತಾರೆ !
- ಮಣಿಯಾಣಿಗೆ ದುಡ್ಡು ಕೊಟ್ಟೋ ಯಾರ ಹತ್ತಿರವಾದರೂ ಹೇಳಿಸಿಯೋ ಈ ಧರ್ಮಲಂಡರಿಗೆಲ್ಲ ಬುದ್ಧಿ ಕಲಿಸಬೇಕು ಅನ್ನಿಸಿತು. ದರಿದ್ರದವನು, ಇವನೂ ಹೋಗಿ ಅವರ ಜೊತೆ ಸೇರಿಕೊಂಡಿದ್ದಾನೆ. ಪೋಲಿಸರು ಹಿಡೀತಾರೇಂತ ಹೆದರಿ ಕಾರಿನಲ್ಲಿ ಹೋಗುವಾಗ ಬೆಲ್ಟು ಹಾಕಿಕೊಂಡು ಓಡಾಡ್ತಾನೆ. ಆದರೆ ಅಪ್ಪನಿಗೆ ಬೇಜಾರಾಗುತ್ತೆ ಅಂತ ಜನಿವಾರ ಹಾಕೋಕೆ ಮನಸ್ಸು ಬರೋಲ್ಲ ಮುಂಡೇದಕ್ಕೆ. ಧರ್ಮೋ ರಕ್ಷತಿ ರಕ್ಷಿತಃ ಅಂತ ಬಿಟ್ಟುಬಿಟ್ಟರೆ ಆಗೋಲ್ಲ. ಅದನ್ನೂ ಕಾನೂನು ಮಾಡಬೇಕು. ಬೆಳಗ್ಗೆ ಎದ್ದು ಸಂಧ್ಯಾವಂದನೆ ಮಾಡದವನಿಗೆ ದಿನಕ್ಕೆ ನೂರು ರುಪಾಯಿ ದಂಡ, ಕಳ್ಳು ಕುಡಿದ ಬ್ರಾಹ್ಮಣನಿಗೆ ಮೂರು ತಿಂಗಳು ಸಜಾ, ಹಾದರ ಮಾಡಿದರೆ ಹತ್ತು ವರ್ಷ ಕಠಿಣ ಶಿಕ್ಷೆ.
ಹಾಗಿದ್ದರೆ ವ್ಯಕ್ತಿ ಸ್ವಾತಂತ್ರಕ್ಕೆ ಅರ್ಥವೇ ಇಲ್ಲವಾ ಅಂತ ಮಗ ಕೇಳುತ್ತಾನೆ. ಅವನ ಹತಾಶೆಯೂ ತನಗೆ ಅರ್ಥವಾಗುತ್ತದೆ. ಸರ್ಕಾರ ಮಾಡಿದ್ದು ಸರಿಯಾ ? ಮಗ ಮಾಡುತ್ತಿರೋದು ಸರಿಯಾ?
ಅಥವಾ ತಾನೇ ತಪ್ಪಿದ್ದೇನಾ? ಈ ಜಗತ್ತಿನಲ್ಲಿ ಬದುಕುವುದಕ್ಕೆ ತನಗೆ ಅರ್ಹತೆಯೇ ಇಲ್ಲವೋ ಏನೋ?
ಶ್ರೀಪತಿರಾಯರು ತಲೆಯೆತ್ತಿ ನೋಡಿದರೆ ದೂರದಲ್ಲಿ ರಂಗನಾಥ ಬರುವುದು ಕಾಣಿಸಿತು. ಎಂಥ ಸದ್ಭ್ರಾಹ್ಮಣ. ಈಗ ನೋಡಿದರೆ ಕಂಡೋರ ಮನೆಗೆ ಪೋಸ್ಟು ಹಂಚುತ್ತಿದ್ದಾನೆ. ಸಾವಿನ ಸುದ್ದಿ ಕೇಳಿದರೆ ಸ್ನಾನ ಮಾಡುತ್ತಿದ್ದವರ ಮಗನಾಗಿ ಹುಟ್ಟಿ ಇವನೇ ಅವರಿವರ ಸಾವಿನ ಸುದ್ದಿ ಹಂಚುತ್ತಾನೆ.ರಾಯರು ನಿರ್ವಿಣ್ಣರಾದರು.-
* *
- ಮಬ್ಬುಗತ್ತಲಿನ ದೇವಸ್ಥಾನದೊಳಗೆ ಕಾಲಿಡುತ್ತಿದ್ದಂತೆ ಕಾಲಿಗೇನೋ ತಣ್ಣಗೆ ಮೆಟ್ಟಿತು. ಶ್ರೀಪತಿರಾಯರಿಗೆ ಒಂದು ಕ್ಷಣ ಜೀವ ಝಲ್ಲೆಂದಿತು. ದೈವ ಸನ್ನಿಧಿಯಲ್ಲಿ ಎಂಥ ಭಯ, ಹಾವೋ ಗೀವೋ ಇರಬೇಕು ಅಂದುಕೊಂಡು ಕತ್ತಲಲ್ಲಿ ಕಣ್ಣು ಕೀಲಿಸಿ ನೋಡಿದರು.
ರಾಯರ ಮಗ ಸುಧಾಮ ಅಂಗಾತ ಬಿದ್ದುಕೊಂಡಿದ್ದ. ಕೈಲಿದ್ದ ಅಭಿಷೇಕಕ್ಕೆ ತಂದ ನೀರಿನ ಕೊಡ, ಬಲಗೈಲಿದ್ದ ಹೂವಿನ ತಟ್ಟೆ ಪಕ್ಕಕ್ಕಿಟ್ಟು ಮುಟ್ಟಿ ನೋಡಿದರು. ಉಸಿರು ನಿಂತುಹೋಗಿತ್ತು.
ಥತ್.. ಎಂದುಕೊಂಡರು. ಆದರೂ ಅಪ್ಪನಾಗಿ ಅಳಬೇಕು ಅನ್ನಿಸಲಿಲ್ಲ. ಗರ್ಭಗುಡಿಯಲ್ಲಿ ಹೆಣ ಬಿದ್ದದ್ದು ಗೊತ್ತಾದರೆ ಪೂಜೆ ನಿಂತುಹೋಗುತ್ತದೆ. ಬ್ರಹ್ಮಕಲಶವಾಗದೆ ಪೂಜೆ ಶುರುಮಾಡುವಂತಿಲ್ಲ. ಬ್ರಹ್ಮಕಲಶ ಮಾಡಿಸುವುದಕ್ಕೆ ಸಾವಿರಾರು ರುಪಾಯಿ ಬೇಕು. ಅಲ್ಲಿಯ ತನಕ ಹೊಟ್ಟೆಗೇನು ತಿನ್ನುವುದು. ಈಗಾಗಲೇ ಭಕ್ತರ ಸಂಖ್ಯೆ ಕಮ್ಮಿಯಾಗಿದೆ.
ಶ್ರೀಪತಿರಾಯರು ತಿರುಗಿ ನೋಡಿದರು. ಬಾಗಿಲ ಹತ್ತಿರ ನಾಲ್ಕಾರು ಭಕ್ತಾದಿಗಳು ಸಹಸ್ರಲಿಂಗೇಶ್ವರನ ಕೃಪೆಗೆ ಕಾದಿದ್ದುದು ಮಂಜುಮಂಜಾಗಿ ಕಾಣಿಸಿತು. ಏನೂ ಆಗಿಲ್ಲವೆಂಬಂತೆ ಸುಧಾಮನ ಹೆಣವನ್ನು ದಾಟಿ ಹೋಗಿ ಶ್ರೀಪತಿರಾಯರು ಪೂಜೆ ಶುರುಮಾಡಿದರು. ದೇವರ ಮೈತೊಳೆಯುವ ಹೊತ್ತಿಗೆ ಯಾಕೋ ಮಗನ ಹೆಣದ ಮೈತೊಳೆಯುತ್ತಿದ್ದೇನೆ ಅನ್ನಿಸಿ ಒಳಗೊಳಗೆ ಮೈಲಿಗೆ ಅನ್ನಿಸಿತು.-
|












Click it and Unblock the Notifications