ಸ ರಘುನಾಥ ಅಂಕಣ; ಸೂರ್ಯ ಹುಟ್ಟಿದ, ಆದರೆ ಸೋಮೇಶ ಏಳಲೇ ಇಲ್ಲ...
ಮುನೆಕ್ಕನ ಹಿಂದೆ ಸುನಂದಾ ಬಂದಳು. ಸೋಮೇಶನ ಮುಖ ನೋಡಿ ಅಯ್ಯೋ ಅನ್ನಿಸಿತು. ಅವನು ಪ್ರಯಾಸದಿಂದ ತುಟಿಗೆ ನಗೆ ತಂದುಕೊಂಡ. ಅವನ ಬಳಿ ಹೋಗಿ ಕೈ ಮುಟ್ಟಿದಳು. ಅದು ತಣ್ಣಗಿದೆ ಅನ್ನಿಸಿತು. ಆಸ್ಪತ್ರೆಗೆ ಸಾಗಿಸಿದರೆ ಒಳ್ಳೆಯದೇನೊ ಅಂದಳು. ಅಲ್ಲಿಯೇ ಇದ್ದ ಸುಬ್ಬಣ್ಣನಿಗೆ ರೇಗಿತು.
Recommended Video
ದೊಡ್ಡ ಪಂಡಿತಳು ಹೇಳಿಬಿಟ್ಟಳು. ನನ್ನ ವೈದ್ಯ ನಿನ್ನಂಥ ದಾರೀಲಿ ಹೋಗೋರಿಗೆ ಗೊತ್ತಾಗಲ್ಲ. ನನ್ನ ಏನಂದುಕೊಂಡಿದ್ದಿ? ಹುಣ್ಣಿಮೆ ಆಗಿದ್ರೆ ಆ ನಾಗಪ್ಪನ್ನೇ ಕರೆದು ವಿಷ ಹೀರಿಸ್ತಿದ್ದೆ. ಅದೇನೊ ಒದರಾಕೆ ಕರೆಸಿದ್ದಾರೆ ಒದರಿ ಹೋಗು ಅಂದ. ಸುನಂದಾ ಅವಮಾನದಿಂದ ತಲೆ ತಗ್ಗಿಸಿ ನಿಂತಳು. ಬೀರಣ್ಣ, ಚೌಡಮ್ಮ ಇಕ್ಕಟ್ಟಿಗೆ ಸಿಕ್ಕಿದರು. ಮುನೆಕ್ಕ, ಸುಬ್ಬಣ್ಣ ಮಾತು ನೆಟ್ಟಗೆ ಬರಲಿ. ನಿನ್ನ ವೈದ್ಯ ನಿಂದು. ಆ ಹುಡುಗಿ ಅನ್ನಿಸಿದ್ದನ್ನು ಹೇಳಿದ್ದು ತಪ್ಪ? ಎಂದು ಗದರಿಸಿದಳು.
ಇನ್ನಾರಾದರು ಆಗಿದ್ದರೆ ಏನಾದರೂ ಹೇಳುತ್ತಿದ್ದ. ಅವಳು ಮುನೆಕ್ಕ. ಮಿಗಿಲಾಗಿ ಅವಳ ಅಂಗಡಿಯ ಸಾಲ ತೀರಿಸಿರಲಿಲ್ಲ. ಅವನ ಮಾತೇನು ನೀನು ಹಾಡು ಅಂದಳು. ಅವನಿಗೆ ಹಾಡೋ ನಿನ್ನ ಮುಖ ಕಾಣೊ ಹಾಗೆ ಕುಳಿತು ಹಾಡು ಎಂದು ಅಪ್ಪಯ್ಯ ಹೇಳಿದ. ಚೌಡಮ್ಮ ಅದರಂತೆ ಚಾಪೆ ಹಾಸಿದಳು.
ಸುನಂದಾ ಕನಕದಾಸರ 'ನಮ್ಮಮ್ಮ ಶಾರದೆ ಉಮಾಮಹೇಶ್ವರಿ' ಪದವನ್ನು ಹಾಡಿ, ಶಿವನ ಕೃಪೆಯಿಂದ ಮರಣವನ್ನು ಗೆದ್ದ ಮಾರ್ಕಂಡೇಯನ ಕಥೆ ಮಾಡಲು ಅಳವಡಿಸಿಕೊಂಡಿದ್ದ ಹಾಡು, ಪದ್ಯಗಳನ್ನು ಹಾಡತೊಗಿದಳು.

ನಾಗಾಭರಣನ ಕರುಣಾ ಕಟಾಕ್ಷ
ಇರ ದಾರಿಗೆ ಸಾಹಸಹಸವೈ ಈರೇಳು ಭುವನದೊಳ್
ಮರಣದ ಪೆಸರೊಳ್ ಪಿಡಿಯಲ್ಕೆ
ಹರ ಬಕುತ ಶಿಶುವ ಪಿಡಿವುದೆಂತು ನೀ ಯಮರಾಜಾ
ಎಂಬ ಪದ್ಯವನ್ನು ಹಾಡಿದಾಗ ಅವಳ ಸಮಯ ಪ್ರಜ್ಞೆಗೆ ಅಪ್ಪಯ್ಯ, ನರಸಿಂಗರಾಯ, ಮೋಟಪ್ಪ ಒಟ್ಟಿಗೆ ಭೇಷ್ ಎಂದರು. ಜನ ಚಪ್ಪಾಳೆ ತಟ್ಟಿದರು. ಸೋಮೇಶನ ಮುಖದಲ್ಲಿ ಧೈರ್ಯದ ನಗೆ ಮಿಂಚಿತು. ಚೌಡಮ್ಮ ಕೈ ಮುಗಿದಳು.
ನೆರೆದವರಲ್ಲಿ ಕೆಲವರು ಮನೆಗಳಿಗೆ ಹೋಗಿ ಊಟ ಮಾಡಿ ಬಂದರು. ಕೆಲವರು ಹಸಿವೆಯನ್ನೇ ಮರೆತು ಕುಳಿತಿದ್ದರು. ಮನೆಗಳಿದ್ವರು ಬಂದು ಕುಳಿತರು. ಊರಿಗೆ ಊರೇ ಸುನಂದಾಳ ಗಾಯನಕ್ಕೆ ಮರುಳಾಗಿತ್ತು. ಸುಬ್ಬಣ್ಣನಿಗೂ ಒಮ್ಮೆ ಭೇಷ್ ಅನ್ನಲಾಗದಿರಲಾಗಲಿಲ್ಲ. ಸುನಂದಾ ತನ್ನ ಪಾಡಿಗೆ ತಾನು ಹಾಡುತ್ತಿದ್ದಳು. ಮೋಟಪ್ಪ ತಬಲ ತಂದು ಕುಳಿತ. ಪಿಲ್ಲಣ್ಣ ಹಾರ್ಮೋನಿಯಂ ತಂದು ನರಸಿಂಗರಾಯನ ಮುಂದಿಟ್ಟ.
ಸುನಂದಾ ಆಯಾಸವಿಲ್ಲದೆ ಹಾಡುತ್ತಿದ್ದಳು. ಸೋಮೇಶ ತೂಕಡಿಸಿದ ಕೂಡಲೇ ಎಚ್ಚೆತ್ತು ಸುನಂದಾಳ ಮುಖದಲ್ಲಿ ಕಣ್ಣುನೆಟ್ಟು ನೋಡುತ್ತಿದ್ದ. ಸುನಂದಾಳ ಕಂಠದಿಂದ ಸಿನೆಮಾ, ನಾಟಕದ ಹಾಡುಗಳು ಸಾಲು ಸಾಲಾಗಿ ಹರಿದು ಬರುತ್ತಿದ್ದವು.
ಕೋಳಿ ಕೋ ಎಂದಿತು. ಇನ್ನೇನು ಸೂರ್ಯ ಹುಟ್ಟಲು ಹೆಚ್ಚು ಹೊತ್ತಿಲ್ಲ. ಮಗ ಎಚ್ಚರವಾಗಿಯೇ ಇದ್ದಾನೆ. ಸಾವನ್ನು ಗೆದ್ದಂತೆಯೇ ಎಂದು ಬೀರಣ್ಣ ಅಪ್ಪಯ್ಯನಿಗೆ ಹೇಳಿದ. ಅಪ್ಪಯ್ಯ ದೇವರು ದೊಡ್ಡವನು ಅಂದ. ಸುನಂದಾ ಮತ್ತೆ ಮಾರ್ಕಂಡೇಯನ ಕಥೆಯ ಇನ್ನೊಂದು ಪದ್ಯ ಎತ್ತಿಕೊಂಡಳು.
ಹರನೊಲಿದವ ನೀನೆಲೆ ಮಾರ್ಕಂಡ
ಚಿರಂಜೀವಿಯಲ್ತೆ ಭುವನತ್ರಯದೊಳು ಮಿಗಿಲಾಗಿ
ಪರಮಪದ ಪಡೆವೆ ಕಾಲಾಂತರದಿ
ಪರಮೇಶನ ಪದತಲ ನಿನಗೆ ಪ್ರಾಪ್ತಿಪುದು ಕೇಳಾ
ಸೋಮೇಶನ ಮುಖ ನೋಡುತ್ತಲೇ ಹಾಡುತ್ತಿದ್ದ ಸುನಂದಾ ಅಯ್ಯೋ ಎಂದಳು. ನರಸಿಂಗರಾಯ ಏನೆಂದು ಕೇಳಿದ. ಮಾತಿಲ್ಲದೆ ಸೋಮೇಶನತ್ತ ಬೆರಳು ಚಾಚಿದಳು. ಎಲ್ಲರ ನೋಟ ಅತ್ತ ಹರಿಯಿತು. ಸೋಮೇಶ ಕಣ್ಣು ಮುಚ್ಚಿದ್ದ. ಚೌಡಮ್ಮ ಮಗನ ಕೆನ್ನೆ ತಟ್ಟಿತಟ್ಟಿ ಸೋಮ ಏಳೋ ಮಗನೆ, ಸೂರ್ಯ ಹುಟ್ಟೊ ಹೊತ್ತಾಯ್ತು ಎನ್ನುತ್ತಿದ್ದಳು. ಸೂರ್ಯ ಹುಟ್ಟಿದ. ಸೋಮೇಶ ಏಳಲಿಲ್ಲ...












Click it and Unblock the Notifications