ಸುನಂದಾಳ ‘ಹರಿಕಥಾ’ ಪ್ರಸಂಗ

ನರಸಿಂಗರಾಯನ ಮನೆಯಲ್ಲಿ ಮುಂದಿನ ನಾಟಕದ ಬಗ್ಗೆ ಮಾತುಕತೆಗೆ ಕುಳಿತಿದ್ದರು. ಪಾತ್ರ ವಹಿಸಿಲು ಬಯಸಿದವರಲ್ಲಿ ಬಿಡುವಿದ್ದ ಕೆಲವರು ಬಂದಿದ್ದರು. ಅನುಕೂಲವಂದಿಗರೂ ನೆರವುದಾರರೂ ಆದ ಗೌಡರ ಸೊಣ್ಣಪ್ಪ, ಭಜಂತ್ರಿ ರಾಮಾಂಜಲಮ್ಮ, ಬೋವಿ ವೆಂಕಟೇಸುಲು, ಊರಿಗೆ ಹಿರಿಯ ದುಗ್ಗಪ್ಪ ಬಂದು ಕುಳಿತಿದ್ದರು. ಅವರೆಲ್ಲರ ಮಾತಿನಲ್ಲಿ ಸದಾರಮೆ, ಕಾಂಭೋಜಿರಾಜುಕಥಾ, ಶಶಿರೇಖಾ ಪರಿಣಯಮು, ಸೀತಾ ಪರಿತ್ಯಾಗ, ಲಂಕಾದಹನಮು, ಚಂಚುಲಕ್ಷ್ಮಿ, ಮಯಸಭಾ, ಶ್ರೀಕೃಷ್ಣ ರಾಯಭಾರಮು ಕೇಳಿಕೆ, ನಾಟಕಗಳ ಹೆಸರುಗಳು ಹರಿದಾಡುತ್ತಿದ್ದವು.

ಪದ್ಯಶ್ರಾವಣ ಪ್ರಿಯರು ಶ್ರೀಕೃಷ್ಣ ರಾಯಭಾರಮು, ಶಶಿರೇಖಾ ಪರಿಣಯಮು ಕೇಳಿಕೆಗಳಾದರೆ ಚೆನ್ನವೆನ್ನುತ್ತಿದ್ದರು. ಕಥೆ ಮತ್ತು ಸಂಭಾಷಣೆ ಇಚ್ಛಿಸುವವರ ಬಾಯಲ್ಲಿ ಸದಾರಮೆ ನಾಟಕವಾಗಲಿ ಅನ್ನುವ ಮಾತಿತ್ತು. ಇವರ ನಡುವೆ ಯಾವುದಾದರೂ ಸರಿಯೇ ಎಂಬ ಅಭಿಪ್ರಾಯದವರಿದ್ದರು. ಅಮ್ಮ, ಮುನೆಕ್ಕ ಅಡುಗೆಮನೆ ಬಾಗಿಲಲ್ಲಿ ನಿಂತಿದ್ದರು. ನಾಟಕ ಕನ್ನಡದ್ದೆ, ತೆಲುಗಿನದೆ ಎಂಬುದು ಮೊದಲಿಗೆ ಇತ್ಯರ್ಥವಾಗಲೆಂಬುದು ನರಸಿಂಗರಾಯನ ಮಾತು. ಆ ಕ್ಷಣ ಅದೇ ಚರ್ಚೆಗೆ ಬಂದಿತು.

ಶ್ರೀಕೃಷ್ಣ ತುಲಾಭಾರ ತೆಲುಗಿನದಾಗಿತ್ತು. ಆಡಲಿರುವುದು ಕನ್ನಡದ್ದಾಗಲಿ ಎಂಬ ಅಪ್ಪನ ಮಾತಿಗೆ ಎಲ್ಲರೂ ಕಟ್ಟುಬಿದ್ದರು. ಸಂಪೂರ್ಣರಾಮಾಯಣ, ಸದಾರಮೆ ಆಯ್ಕೆಗೆ ನಿಂತವು. ಸದಾರಮೆ ಸರ್ವಸಮ್ಮತವಾಯಿತು. ಪಾತ್ರಗಳ ಆಯ್ಕೆಗೆ ಇನ್ನೊಮ್ಮೆ ಕೂರುವ ಎಂದು ಎಲ್ಲರೂ ಟೀ ಕುಡಿದು ಹೊರಟರು. ಊಟಕ್ಕೆ ಎಲೆ ಹಾಕಿರೆಂದು ಹೇಳಿ ಅಪ್ಪ ಮೇಲೆದ್ದ. ಬಾಗಿಲಲ್ಲಿ ನೆರಳು ಬಿತ್ತು. ಅವರ ಮುಂದೆ ಸುನಂದ! ಅಮ್ಮ ಸುನಂದಳಿಗೂ ಎಲೆ ಹಾಕಲು ಮುನೆಕ್ಕನಿಗೆ ಸೂಚಿಸಿದಳು. ಇವಳೇಕೆ ಬಂದಳಪ್ಪ ಅಂದುಕೊಳ್ಳುತ್ತ ಮುನೆಕ್ಕ ಎಲ್ಲರಿಗೂ ಎಲೆ ಹಾಕಿದಳು.

ಊಟ ಮಾಡುತ್ತಲೇ ನರಸಿಂಗರಾಯ, ಸದಾರಮೆ ಬಂದಾಯ್ತು ಅಂದುಕೊಂಡ. ಎಲ್ಲಿಂದ ಬಂದಿದ್ದು? ಅಮ್ಮ ಕೇಳಿದಳು. ಮಾಲೂರಿನಿಂದ ಎಂಬ ಉತ್ತರ ಬಂತು. ನಾಟಕವಿತ್ತೆ? ಮುನೆಕ್ಕನ ಪ್ರಶ್ನೆ. ಇಲ್ಲ, ರಾತ್ರಿ ಹರಿಕಥೆಯಿತ್ತು. ಹಿಂದಿರುಗುತ್ತ ನಿಮ್ಮನ್ನೆಲ್ಲ ನೋಡಿ ಹೋಗುವ ಎಂದು ಬಂದೆ ಎಂದಳು.

Short Story Of Sunanda Learning Harikatha

ಹರಿಕಥೆಯಾ? ಅಂದ ಅಪ್ಪ. ಈಗ ನಾಟಕಗಳಿಗೆ ಹೋಗೋದನ್ನು ಬಿಟ್ಟಿದ್ದೇನೆ. ಭದ್ರಾಚಲಂನಲ್ಲಿ ಗುರುತಿನವರ ಮನೆಯಲ್ಲಿ ಎರಡು ತಿಂಗಳಿದ್ದು ಮೂರು ಹರಿಕಥೆಗಳನ್ನು ಕಲಿತು ಬಂದೆ. ನಾಟಕಗಳಿಗೆಂದು ಕರೆದಲ್ಲಿಗೆ ಹೋಗಿ ಆಡಿ ಬರುವುದರಲ್ಲಿ ಸುಖವಿರಲಿ, ಮರ್ಯಾದೆಯೇ ಇರದು. ನರ್ತಕಿಯೆಂದು ಕರೆಸುತ್ತಾರೆ. ಸಂಬಂಧವಿರದ ಸಿನೆಮಾ ಹಾಡುಗಳನ್ನು ಹಾಕಿ ಕುಣಿಸುತ್ತಾರೆ. ಅದರಲ್ಲಿ ಹೆಜ್ಜೆ ಹಾಕಲು ಬರುವವರು, ಬರದವರು ತಬ್ಬಿಕೊಳ್ಳುವುದೇ ಹೆಚ್ಚು. ಬಾಣಸಿಗನಾದ ಭೀಮ, ಸೊಂಟ ಸವರುತ್ತ, ಗಲ್ಲ ಹಿಡಿದು ಕೀಚಕನನ್ನು ಕೊಲ್ಲುವ ಡೈಲಾಗು ಹೇಳುತ್ತಾನೆ. ಮಾಯಾ ಜಿಂಕೆಯ ಬೆನ್ನಟ್ಟಿ ಹೋಗಬೇಕಾದ ರಾಮ ಎಳೆದು ತೊಡೆಯ ಮೇಲೆ ಕೂರಿಸಿಕೊಂಡು, ಬೇಟೆಯಾಡಿ ಬರುವುದಾಗಿ ಹೇಳುತ್ತಾನೆ.

ವಾದ್ಯಗಳೋ ಹಾಡುಗಾರಿಕೆಯನ್ನೇ ನುಂಗಿಬಿಡುತ್ತವೆ. ಸಂಭಾವನೆ ಕೊಡಲು ಸತಾಯಿಸುವುದುಂಟು. ರಾತ್ರಿ ಇದ್ದು ಖುಷಿಪಡಿಸು ಎಂದು ಕೇಳುವವರಿಗೇನು ಕಡಿಮೆಯಿಲ್ಲ. ಇದೆಲ್ಲ ಅಸಹ್ಯ. ಇದ್ದುದರಲ್ಲಿ ಮೇಲು ಅನ್ನಿಸಿ ಹರಿಕಥೆ ಮಾಡಲು ಮನಸ್ಸು ಮಾಡಿದೆ. ಆದರೆ ನಿಮ್ಮಂತೆ ನಡೆಸಿಕೊಳ್ಳುವವರು ಸಿಕ್ಕರಷ್ಟೇ ನಾಟಕ ಎಂದು ದೀರ್ಘ ವಿವರಣೆ ಕೊಟ್ಟಳು. ಸರಿ, ನೋಡಲಷ್ಟಕ್ಕೇ ಬಂದುದಾ? ಕೇಳಿದ ಅಪ್ಪ. ಹೌದಾದರೂ ಇನ್ನೊಂದು ಉದ್ದೇಶವಿದೆ. ನಾನು ಕಲಿತದ್ದು ತೆಲುಗು ಕಥೆಗಳು. ಗಡಿಯಲ್ಲಿರುವುದರಿಂದ ಕನ್ನಡದಲ್ಲಿಯೂ ಕಥೆ ಮಾಡಿದರೆ ಅನುಕೂಲ ಅನ್ನಿಸಿತು. ಅದಕ್ಕೆ ನಿಮ್ಮ ಸಹಾಯ ಕೋರಿ ಬಂದೆ ಎಂದಳು.

ಎಂಥ ಸಹಾಯ ಎಂದಳು ಅಮ್ಮ. ದಾಸರ ಪದಗಳನ್ನು ಸೇರಿಸಿ ಒಂದು ಕಥೆ ಆದರೆ ಚೆನ್ನ. ಪುರಂದರರನ್ನು ಕುರಿತದ್ದೋ ಕನಕರನ್ನು ಕುರಿತದ್ದೋ ಆದರೆ ಮತ್ತೂ ಒಳ್ಳೆಯದು ಎಂದಳು. 'ಕಲಿಯಲೋ ಇನ್ನೇನಾದರು ಇದೆಯೋ?' ಎಂದುಕೊಂಡಳು ಮುನೆಕ್ಕ.

ಕಲಿಸಲು ಒಪ್ಪಿಗೆ ಇದೆ ಅನ್ನುವಂತೆ ಅಪ್ಪ ತಲೆಯಾಡಿದರು. 'ಕಲಿಯುವಾಗ ಇಲ್ಲಿರಬೇಕಾಗುತ್ತದಲ್ಲ, ಎಲ್ಲಿರುತ್ತಿ? ಎಂದು ಕೇಳಿದಳು ಮುನೆಕ್ಕ, ಇವರೆಲ್ಲಿ ಜಾಗ ಕೊಟ್ಟರೆ ಅಲ್ಲಿರುತ್ತೇನೆ. ಇಲ್ಲವೆಂದರೆ ಅಪ್ಪ ಬಾ ಅಂದ ದಿನ ಬಂದು ಹೋಗುತ್ತೇನೆಂದು ಸುನಂದ ಉತ್ತರಿಸಿದಳು.

'ಹಾಗೆ ಓಡಾಡಿ ಕಲಿಯುವುದಾಗದು. ನಿನ್ನ ಮನೆಯಲ್ಲಾಗದೊ? ಕೇಳಿದಳು ಅಮ್ಮ. ನನ್ನ ಮನೇಲಾ? ರಾಗ ತೆಗೆದ ಮುನೆಕ್ಕ ನರಸಿಂಗರಾಯನತ್ತ ನೋಡಿದಳು. ಅವನು ಅವಳನ್ನು ಕೆಣಕಲು ಕಣ್ಣು ಹೊಡೆದ. ಮುನೆಕ್ಕ ಹಲ್ಲು ಕಡಿದಳು. 'ಸುನಂದ ಮುನೆಕ್ಕನ ಮನೆಯಲ್ಲಿರುತ್ತಾಳೆ' ಎಂದು ತೀರ್ಪುಕೊಟ್ಟಳು ಅಮ್ಮ. ವಿಜಯದಶಮಿಗೆ ಇನ್ನು ಹತ್ತು ದಿನಗಳಿವೆ. ಬಂದುಬಿಡು. ಅಂದಿನಿಂದಲೇ ಆರಂಭವಾಗಲಿ ಅಂದ ಅಪ್ಪ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+