ಮನೆ ಮುಂದೆಯೇ ಮಾತಂಗಿ ಮದುವೆ, ಓಬಲೇಸುವಿನ ಮನದಾಸೆ
ಮಾತಂಗಿಗೆ ಓದಿಸಲು ಅಮ್ಮ ಕೊಟ್ಟ ಸೀರೆ, ರವಿಕೆ ಕಣದೊಂದಿಗೆ ಓಬಲೇಸುವಿಗೆ ಓದಿಸಲು ಮಲ್ ಪಂಚೆ, ಷರಟು ಪೀಸುಗಳನ್ನು ಬ್ಯಾಗಿನಲ್ಲಿಟ್ಟ ನರಸಿಂಗರಾಯ, ಮರೆಯದೆ ಓಬಲೇಸನ ಪ್ರೇಮಪತ್ರವನ್ನು ಬ್ಯಾಗಿಗೆ ಸೇರಿಸಿದ. ಎತ್ತಿನಗಾಡಿ ಕಟ್ಟುವುದಾಗಿ ಹೇಳಿದಾಗ ಅಮ್ಮ ಬೇಡವೆಂದಳು. ತಾಯಿ- ಮಗ ಕಾಲ್ನಡಿಗೆಯಲ್ಲಿ ಮೂರು ಮೈಲಿ ದೂರದ ಬಾವನಳ್ಳಿಗೆ ನಡೆದರು.
ಮನೆ ಮುಂದೆಯೇ ಮದುವೆ. ಚಿಕ್ಕ ಅಂಗಳದಲ್ಲಿ ಚಪ್ಪರ ಹಾಕಿದ್ದರು. ಹೆಣ್ಣು- ಗಂಡು ಇನ್ನೂ ಹಸೆಗೆ ಬಂದಿರಲಿಲ್ಲ. ಲಚ್ಚಿ ಎದುರಾಗಿ, ಅದ್ಯಾಕೆ ನಡಕಂಡು ಬಂದ್ರಿ ಎಂದು ಒಳಗೆ ಕರೆದುಕೊಂಡು ಹೋದಳು. ಎರಡು ಲೋಟ ಪಾನಕ ತರುವಂತೆ ಮಾತಂಗಿಗೇ ಹೇಳಿದಳು. ಅವಳು ಅಮ್ಮನಿಗೆ ಕೊಟ್ಟು, ನಂತರ 'ತಕ್ಕಳಿ' ಎಂದು ನರಸಿಂಗರಾಯನಿಗೆ ಹೇಳಿದಳು.
ಅವಳು ಅವನೊಡನಾಡಿದ ಮೊದಲ ಮೊಟಕು ಮಾತು ಮಾಂದಳಿರ ಮರೆಯಿಂದ ಹೊರಬಂದ ಕೋಗಿಲೆಯ ಧ್ವನಿಯಂತೆ ಕೇಳಿಸಿತು. ಇನ್ನೊಂದು ಮಾತು ಕೇಳಿಸಿಕೊಳ್ಳುವ ಆಸೆಯಿಂದ 'ನೀನು ಕುಡಿ' ಎಂದ. ಆ ವಿಚಿತ್ರಕ್ಕೆ ಅಮ್ಮನೂ ಸೇರಿ ಅಲ್ಲಿದ್ದವರು ಕಿಸಕ್ಕೆಂದು ನಕ್ಕರು. ನಾಚಿ 'ನಂದಾಗದೆ' ಎಂದಳು. ಏನೋ ಹಿತದ ಸಮಾಧಾನ ಅನ್ನಿಸಿ, ಅವಳು ಕೊಟ್ಟ ಬೆಲ್ಲದ ಪಾನಕ ಕುಡಿದ. ನಿಂಬೆಹುಳಿ ಹೆಚ್ಚೆನಿಸಿದರೂ ರುಚಿಯಾಗಿತ್ತು.

ಹಸೆಯೇರಲು ಸಮಯವಾದುದರಿಂದ ಓಬಲೇಸು ಕೋಣೆಯಿಂದ ಬಂದ. ಲಚ್ಚಿ ಅಮ್ಮ ಮಗನನ್ನು ಹೊಗಳುತ್ತಲೇ ಪರಿಚಯಿಸಿದಳು. ಅವನು ಅಮ್ಮನಿಗೆ ಕೈ ಮುಗಿದು ನರಸಿಂಗರಾಯನ ಕೈ ಕುಲುಕಿದ. ಗನ್ನು ಹಿಡಿದು ಒರಟಾದ ಗಟ್ಟಿ ಕೈ. ಮಿಲಿಟರಿ ಕೋರೆಮೀಸೆ ಅಡಿಯ ಕಪ್ಪು ತುಟಿಯಲ್ಲಿ ಸ್ನೇಹದ ನಗೆ ಅರಳಿಸಿದ. ಹೆಗಲನ್ನು ಬಳಸಿ ಬನ್ನಿ ಎಂದು ಜೊತೆಯಲ್ಲಿಯೇ ಚಪ್ಪರದಡಿಗೆ ನಡೆದ.
ಮಾತಂಗಿ ಕೈ- ಪಾದಗಳಿಗೆ ಅರಿಸಿನ ಹಚ್ಚಿದ್ದರು. ಅದು ಹೆಚ್ಚೇ ಅನ್ನಿಸುತ್ತಿತ್ತು. ಮುಖಕ್ಕೂ ಅಷ್ಟೇ. ನಡುಹಣೆಯಲ್ಲಿ ಕಾಸಿನಗಲದ ಕುಂಕುಮ. ಕೆನ್ನೆಗೆ ದೃಷ್ಟಿಬೊಟ್ಟು. ಒಂದೊಂದು ಕೈಗೆ ಡಜನ್ನಿಗೆ ಕಡಿಮೆ ಇಲ್ಲದಂತೆ ಹಸಿರು ಸಾಣೆಬಳೆ. ಮೂಗಿನಲ್ಲಿ ಅಂದು ಮನೆಗೆ ಬಂದಾಗ ಇದ್ದ ನತ್ತೇ ಇತ್ತು. ಕಿವಿಯಲ್ಲಿ ಪಾರಿಜಾತದ ಹೂ ಆಕಾರದ ಹೊಸ ಓಲೆ. ನರಸಿಂಗರಾಯನಿಗೆ ಒಮ್ಮೆ ಮಾರಮ್ಮನಂತಿದ್ದಾಳೆ ಅನ್ನಿಸಿತು. ನಂತರ ಅರಿಸಿನಗೌರಿಯಂತಿದ್ದಾಳೆ ಅನ್ನಿಸಿತು. ಆ ಸರಳ ಸಿಂಗಾರ ಮಾತಂಗಿಯ ಚೆಲುವಿಗೆ ಸೌಂದರ್ಯವನ್ನು ಮುಡಿಸಿದಂತಿದೆ ಅಂದುಕೊಂಡ.
ಅವರ ಕುಲಾಚಾರದಂತೆ 'ಅರಿವೆಳ್ಳ' (ಸುಣ್ಣ, ಕೆಮ್ಮಣ್ಣು ಪಟ್ಟೆ ಬಳಿದು, ಹೂವಿಂದ ಅಲಂಕರಿಸಿ ನೀರು ತುಂಬಿ ಒಂದರ ಮೇಲೊಂದು ಜೋಡಿಸಿ ಮಣ್ಣಿನ ಹೊಸ ಹರವಿಗಳು). ಅದರ ಮೇಲೆ ಚಟ್ನ (ಮಣ್ಣಿನ ಮುಚ್ಚಳ)ದಲ್ಲಿ ನಿಂತ ಅರಿವೆಳ್ಳ ಜ್ಯೋತೆಮ್ಮನಿಗೆ ಮದುಮಕ್ಕಳು ಪೂಜೆ ಮಾಡಿದರು. ನಂತರದ ಶಾಸ್ತ್ರಗಳೊಂದಿಗೆ ಮಾಂಗಲ್ಯ ಧಾರಣೆಯಾಯಿತು. ಮುಯ್ಯಟ್ಟುವಾಗ (ಉಡುಗೊರೆ) ನರಸಿಂಗರಾಯ ಕಾಗದವನ್ನು ತೆಗೆದು ಕಿಸೆಗಿಟ್ಟು ಸೀರೆ, ರವಿಕೆ ಕಣ, ಪಂಚೆ, ಷರಟಿನ ಬಟ್ಟೆಗಳನ್ನು ಚೀಲದಿಂದ ತೆಗೆದು ಅಮ್ಮನ ಕೈಗೆ ಕೊಟ್ಟ.
ಊಟಗಳಾದ ಮೇಲೆ ನರಸಿಂಗರಾಯ ಚಪ್ಪರದಡಿ ಒಂಟಿಯಾಗಿ ಕುಳಿತಿದ್ದುದನ್ನು ಕಂಡು ಓಬಲೇಸು ಜೊತೆಗೂಡಿದ. ಅವನ ಆತ್ಮೀಯ ಮಾತುಗಳಲ್ಲಿ ಸಲಿಗೆಯೂ ಇತ್ತು. ನರಸಿಂಗರಾಯ ಜೇಬಿನಿಂದ ಕಾಗದವನ್ನು ತೆಗೆದು ಅವನ ಕೈಗಿತ್ತು, ಆದುದನ್ನು ತಿಳಿಸಿದ. 'ಅಯ್ಯೋ ಮಾರಾಯ ಅವಳಿಗೆ ಓದಲು ಬರೋದಿಲ್ಲ ಅಂತ ತಿಳಿದಿದ್ದರೂ ಬರೆದೆ. ಮದುವೆ ಮುಂಚೆ ಪ್ರೇಮಪತ್ರ ಬರೀದಿದ್ದರೆ ಹೇಗೆ ಅನ್ನಿಸಿತು. ಬರೆದೆ.' ಅಂದ.
ನರಸಿಂಗರಾಯನಿಗೆ ಓಬಲೇಸುವಿನದು ವಿಚಿತ್ರ ಖುಷಿ ಅನ್ನಿಸಿತು. ಮೊದಲ ರಾತ್ರಿ ಅವಳ ಮುಂದೆ ಓದಿಬಿಡು ಅಂದ. 'ಎಲ್ಲಾದರು ಉಂಟೆ? ಹೇಗೂ ಜೊತೇಲಿ ಕರಕೊಂಡು ಹೋಗ್ತೀನಲ್ಲ. ಅಲ್ಲಿ ಅವಳಿಗೆ ಓದಲು ಕಲಿಸಿ, ಕಾಶ್ಮೀರದ ಚಳಿಯಲ್ಲಿ ಅವಳ ಮುಂದೆ ಕೂತು, ಅವಳಿಂದಲೇ ಓದಿಸಿ, ಆ ಸುಖದಲ್ಲಿ ಮನಸ್ಸನ್ನು ಬೆಚ್ಚಗೆ ಮಾಡಿಕೊಳ್ಳುವ ಆಸೆ. ಆ ದಿನದವರೆಗೆ ಇವು ಭದ್ರವಾಗಿರುತ್ತವೆ. ಈ ಕಾಗದ ತಂದು ಕೊಟ್ಟಿದ್ದಕ್ಕೆ ತುಂಬಾ ಥ್ಯಾಂಕ್ಸ್' ಎಂದು ಬೆನ್ನು ತಟ್ಟಿದ.
ಬಂದೂಕು ಹಿಡಿವ ಕೈಯಲ್ಲಿ ಆ ಪ್ರೇಮಪತ್ರ ಗಮಗುಡುವ ಮುಂಜಾವಿನ ಪಾರಿಜಾತದಂತೆ ಕಂಡಿತು. ಮನೆಗೆ ಬರುವಾಗ ನರಸಿಂಗರಾಯ ದಾರಿಯಲ್ಲಿ, 'ಓಬಲೇಸು ಮಾತಂಗಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಅನ್ನಿಸುತ್ತೆ' ಅಂದ. 'ಒಂದು ರೀತಿಯಲ್ಲಿ ಎರಡೂ ತಬ್ಬಲಿ ಜೀವಗಳೇ. ಸುಖವಾಗಿರಲಿ' ಅಂದಳು ಅಮ್ಮ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications