ಪಂಚೆ ಅಥವಾ ಲುಂಗಿ ಬಗ್ಗೆ ನಿಮಗೆಷ್ಟು ಗೊತ್ತು?
ದೇವಸ್ಥಾನಗಳಲ್ಲಿ, ಮದುವೆ ಮುಂಜಿ ಮುಂತಾದ ಸಮಾರಂಭಗಳಲ್ಲಿ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶಿಸ್ತಿನಿಂದ ಧೋತಿ ಅಥವಾ ಪಂಚೆ ಉಟ್ಟು ಬಂದ ಪುರುಷರಿಗೆ ಅಗ್ರ ಪ್ರಾಶಸ್ತ್ಯ ಮತ್ತು ಹೆಚ್ಚಿನ ಗೌರವ. ಸಂಪ್ರದಾಯಬದ್ಧವಾಗಿರುವ, ಭಾರತೀಯ ಸಂಸ್ಕೃತಿಯ ದ್ಯೋತಕದಂತಿರುವ ಪಂಚೆ ಧರಿಸಿ ಬರದಿದ್ದರೆ ಕೆಲವೆಡೆ ಕನಿಷ್ಠ ಮರ್ಯಾದೆ ಕೂಡ ಸಿಗುವುದಿಲ್ಲ.
ಅಂಥದ್ದರಲ್ಲಿ ಠಾಕೂಠೀಕಾಗಿ ಶುಭ್ರವಾದ ಪಂಚೆ ಧರಿಸಿ ಬಂದವರನ್ನು 'ಗೆಟ್ ಔಟ್' ಅಂತ ಹೇಳಿದರೆ ಅವರಿಗೆ ಹೇಗಾಗಿರಬೇಡ? ತಮಿಳುನಾಡಿನಲ್ಲಿ ನಡೆದಿರುವ ಇಂಥದೊಂದು ಘಟನೆ ಪಂಚೆ ಉಟ್ಟುಬಂದವರಿಗೆ ಮಾತ್ರವಲ್ಲ, ಪಂಚೆಗೆ ಮಾಡಿರುವ ಅವಮಾನವಾಗಿದೆ. ಅಂತಿಂಥವರಲ್ಲ, ತಮಿಳುನಾಡಿನ ಹೈಕೋರ್ಟ್ ನ್ಯಾಯಮೂರ್ತಿಯೇ ಇಂಥ ಅವಮಾನಕ್ಕೆ ಒಳಗಾಗಿರುವುದು ಪಂಚೆ ಕುರಿತು ಸಾಮಾಜಿಕ ತಾಣಗಳಲ್ಲಿ ಚರ್ಚೆಗೆ ನಾಂದಿ ಹಾಡಿದೆ.
ದಕ್ಷಿಣ ಭಾರತದಲ್ಲಿ ಮಾತ್ರವಲ್ಲ ದೇಶದ ಹಲವಾರು ರಾಜ್ಯಗಳಲ್ಲಿ ಸರ್ವಮಾನ್ಯವಾದ ದಿರಿಸು ಪಂಚೆ. ದಕ್ಷಿಣ ಭಾರತದ ಎಲ್ಲಾ ರಾಜ್ಯಗಳು, ಗುಜರಾತ್, ಬಿಹಾರ, ಪಂಜಾಬ್, ಪಶ್ಚಿಮ ಬಂಗಾಳ, ಉತ್ತರಪ್ರದೇಶ ಮುಂತಾದೆಡೆ ದಿನನಿತ್ಯ ಪಂಚೆಯನ್ನು ಬಳಸುವವರಿದ್ದಾರೆ. ಹಳೆ ಮುಖ್ಯಮಂತ್ರಿಗಳನ್ನು ಬಿಡಿ, ಈಗಿನ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಜೆಎಚ್ ಪಟೇಲ್, ತಮಿಳುನಾಡು, ಆಂಧ್ರಪ್ರದೇಶ, ಕೇರಳದ ಹೆಚ್ಚುಕಮ್ಮಿ ಎಲ್ಲಾ ಮುಖ್ಯಮಂತ್ರಿಗಳು ಪ್ಯಾಂಟ್ ಧರಿಸಿದ್ದನ್ನು ಕಂಡವರು ತುಂಬ ಕಮ್ಮಿ.

ಭಾರತದ ರಾಜ್ಯಗಳಲ್ಲಿ ಆಯಾ ಭಾಷೆಗೆ ತಕ್ಕಂತೆ ವಿಭಿನ್ನ ಹೆಸರುಗಳಿಂದ ಪಂಚೆಯನ್ನು ಕರೆಯುತ್ತಾರೆ. ಕನ್ನಡದಲ್ಲಿ ಧೋತ್ರ, ತೆಲುಗಿನಲ್ಲಿ ಪಂಚ, ತಮಿಳಿನಲ್ಲಿ ವೇಷ್ಟಿ, ಪಂಜಾಬ್ ನಲ್ಲಿ ಲಾಚಾ, ಬಿಹಾರದಲ್ಲಿ ಮರ್ದಾನಿ, ಮರಾಠಿಯಲ್ಲಿ ಧೋತರ್, ಮಲಯಾಳಿಯಲ್ಲಿ ಮುಂಡು, ಕೊಂಕಣಿಯಲ್ಲಿ ಅಂಗೋಸ್ತರ್, ಬಂಗಾಳಿಯಲ್ಲಿ ಧುತಿ, ಆಸ್ಸಾಮಿಯಲ್ಲಿ ಸುರಿಯಾ, ಗುಜರಾತಿಯಲ್ಲಿ ಧೋತಿಯು, ಓರಿಯಾದಲ್ಲಿ ಧೋತಿ! ಆಹಾ, ಒಂದಕ್ಕಿಂತ ಒಂದು ಸೂಪರ್ ಹೆಸರುಗಳು. ಹೆಸರು ವೈವಿಧ್ಯಮಯವಾಗಿದ್ದರೂ ಧೋತಿ ಉಟ್ಟಕಡೆಯೆಲ್ಲ ಒಂದೇ ಮರ್ಯಾದೆ. ಇದು ಭಾರತ!
ಸೊಂಟಕ್ಕೆ ಬಿಗಿಯಾಗಿ ಕಟ್ಟಿದರೆ ಪಂಚೆ, ಕಚ್ಚೆ ಹಾಕಿದರೆ ಧೋತಿ. ಇಂತಿಪ್ಪ ಪಂಚೆಗೆ ಭಾರತವೇ ಉಗಮ ಸ್ಥಾನ ಎಂದು ಬೇರೆಯಾಗಿ ವಿವರಿಸಿ ಹೇಳಬೇಕಾಗಿಲ್ಲ. ಅನಾದಿ ಕಾಲದಿಂದಲೂ ಧೋತಿ ಬಳಕೆಯಲ್ಲಿದೆ. ಕ್ರಿಸ್ತಪೂರ್ವದಲ್ಲಿ ಪಂಚೆ ಉಟ್ಟ ಬಗ್ಗೆ ಶಿಲಾಶಾಸನಗಳಲ್ಲಿ ಕೆತ್ತಲಾಗಿದೆ. ಕೆಲ ದಶಕಗಳ ಹಿಂದೆ ಧೋತಿ ಅಥವಾ ಪಂಚೆ ಕಳಚಿ ಬೀಳಬಾರದೆಂದು ಬೆಲ್ಟ್ ಅಥವಾ ಪಟ್ಟಾ ಸೊಂಟಕ್ಕೆ ಬಿಗಿದುಕೊಳ್ಳುತ್ತಿದ್ದರು. ಮೇಲೊಂದು ಕುರ್ತಾ ಅಥವಾ ಜುಬ್ಬಾ ಅಥವಾ ಅಂಗಿ ಧರಿಸಿ, ಮೇಲೆ ಮತ್ತೊಂದು ಶಲ್ಯ ಧರಿಸಿ ಹೊರಟರೆ ಪ್ಯಾಂಟು ಕೂಡ ನಾಚಿಕೊಂಡು ಕಳಚಿಬೀಳಬೇಕು.
ಸಂಸ್ಕೃತದಲ್ಲಿ ಪಂಚ ಅಂದ್ರೆ ಐದು ಎಂಬ ಪದದಿಂದ ಪಂಚೆ ಎಂಬ ಪದ ಹುಟ್ಟಿಕೊಂಡಿದೆ. ಸಾಮಾನ್ಯವಾಗಿ ಪಂಚೆ ಐದು ಯಾರ್ಡಿನದಾಗಿದ್ದರಿಂದ ಇದಕ್ಕೆ ಪಂಚೆ ಎಂದು ಕರೆಯಲಾಗುತ್ತದೆ. ಅದಲ್ಲದೆ ಹೊಟ್ಟೆಯ ಬಳಿ ಸಿಕ್ಕಿಸುವಾಗ ಐದು ಮಡಿಕೆಗಳನ್ನು ಮಾಡುವುದರಿಂದ ಕೂಡ ಈ ಹೆಸರು ಬಂದಿದೆ. ಪಂಚೆ ಹೆಚ್ಚಾಗಿ ಬಿಳಿ ಅಥವಾ ಕ್ರೀಂ ಬಣ್ಣದಿದ್ದರೂ ಧಾರ್ಮಿಕ ಮುಖಂಡರು ಕೇಸರಿ ಬಣ್ಣಕ್ಕೆ ಮೊರೆಹೋಗಿದ್ದಾರೆ. ಮದುವೆ, ಮುಂಜಿಯಂಥ ವಿಶೇಷ ಸಂದರ್ಭದಲ್ಲಿ ರೇಷ್ಮೆಯ ಪಂಚೆ ಉಟ್ಟಕೊಳ್ಳುತ್ತಾರೆ.

ಆದರೆ, ಅದೇ ಪಂಚೆಯನ್ನು ಹೋಲುವ ಲುಂಗಿಯ ಕಥೆ ಮತ್ತು ನೋಡುವ ರೀತಿ ಸ್ವಲ್ಪ ವಿಭಿನ್ನವಾಗಿದೆ. ಧೋತಿ ಬಿಳಿ ಬಣ್ಣದ್ದಾದರೆ, ಲುಂಗಿ ರಂಗುರಂಗಿನದು. ಪಂಚೆ ಓಪನ್ ಆಗಿದ್ರೆ, ಲುಂಗಿ ಕ್ಲೋಸ್ಡ್. ಪಂಚೆಯ ಮೂಲ ಭಾರತವಾದರೆ, ಲುಂಗಿಯ ಮೂಲ ಬರ್ಮಾ. ಭಾರತದಲ್ಲಿ ಲುಂಗಿಯ ಬಳಕೆ ಹೆಚ್ಚಾನುಹೆಚ್ಚು ಮನೆಗೆ ಸೀಮಿತವಾದರೆ, ಬರ್ಮಾ, ಇಂಡೋನೇಷ್ಯಾ, ಮಲೇಷ್ಯಾ, ದುಬೈ, ಸೌದಿ ಅರೇಬಿಯಾ, ಸೋಮಾಲಿಯಾ, ಶ್ರೀಲಂಕಾ, ಪಾಕಿಸ್ತಾನ, ನೇಪಾಳ, ಸಿಂಗಪುರ ಮುಂತಾದ ದೇಶಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿಯೂ ವ್ಯಾಪಕವಾಗಿ ಬಳಸಲಾಗುತ್ತದೆ.
ಬರ್ಮಾ ಭಾಷೆಯಲ್ಲಿ ಪಂಚೆಗೆ ಲುಂಗಿ ಅಂತ ಕರೆಯುತ್ತಾರೆ. ಲುಂಗಿ ಬರ್ಮಾ ದೇಶದ ರಾಷ್ಟ್ರೀಯ ದಿರಿಸು ಕೂಡ. ಉಷ್ಣದಿಂದ ಕೂಡಿರುವ ಹಲವಾರು ರಾಷ್ಟ್ರಗಳಲ್ಲಿ ಪ್ಯಾಂಟ್ ಧರಿಸುವುದು ಹಿತ ನೀಡದ್ದರಿಂದ ಸ್ವಾಭಾವಿಕ ಏರ್ ಕಂಡಿಷನ್ ನಂತಿರುವ ಲುಂಗಿಯನ್ನೇ ಹೆಚ್ಚಾಗಿ ಧರಿಸುತ್ತಾರೆ. ಕೇರಳ ಸೇರಿದಂತೆ ಹಲವಾರು ಕಡೆಗಳಲ್ಲಿ ಮಹಿಳೆಯರು ಕೂಡ ಲುಂಗಿ ಧರಿಸುತ್ತಾರೆ. ಲುಂಗಿ ಧರಿಸಿಯೇ ತೆಂಗಿನ ಮರವನ್ನೂ ಏರುತ್ತಾರೆ. ಬಾಂಗ್ಲಾದೇಶದಲ್ಲಿ ಮದುವೆ ಗಂಡಿಗೆ ಹೆಚ್ಚಾಗಿ ಲುಂಗಿಯನ್ನೇ ಬಳುವಳಿಯಾಗಿ ನೀಡುವ ಪರಿಪಾಠವಿತ್ತು.
ಸರಾಗವಾಗಿ ನಡೆದಾಡಲು ಅನುಕೂಲವಾಗಲೆಂದು ಪಂಚೆಯನ್ನು ಮೊಳಕಾಲವರೆಗೂ ಎತ್ತಿ ಅಡ್ಡಾಡುವುದು ಸರ್ವೇಸಾಮಾನ್ಯವಾದರೂ, ಹೆಂಗಸರು ಎದುರಾದಾಗ ಕೆಳಗಿಳಿಸಿ ಗೌರವ ಸೂಚಿಸುತ್ತಾರೆ. ಆದರೆ, ದುಬೈ, ಸೌದಿ ಅರೇಬಿಯಾದಂಥ ದೇಶದಲ್ಲಿ ಸಾರ್ವಜನಿಕವಾಗಿ ಲುಂಗಿಯನ್ನು ಎತ್ತಿಕಟ್ಟುವಂತಿಲ್ಲ. ಕಟ್ಟಿ ಓಡಾಡಿದರೆ ಜೈಲೇ ಗತಿ. ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ಲುಂಗಿಯನ್ನು ನಿಷೇಧಿಸಿದ್ದರಿಂದ ಭಾರೀ ಪ್ರತಿಭಟನೆಗಳಾಗಿದ್ದವು.
ಮಲಯಾಳಿ ಚಿತ್ರಗಳಲ್ಲಿ ಪಂಚೆ ಧರಿಸಿದ ಹೀರೋ ಎತ್ತಿಕಟ್ಟಿ ಫೈಟಿಂಗ್ ಮಾಡುವುದನ್ನು ನೀವು ನೋಡಿರಬಹುದು. ಸೂಪರ್ ಸ್ಟಾರ್ ರಜನಿಕಾಂತ್ ಪಂಚೆ ಧರಿಸಿ, ಕಾಲು ಬೀಸುತ್ತ, ಶಲ್ಯ ತಿರುಗಿಸುತ್ತ ಬರುತ್ತಿದ್ದರೆ ಥಿಯೇಟರಲ್ಲಿ ಚಿಲ್ಲರೆ ಸುರಿಮಳೆಯಾಗಿರುತ್ತದೆ. ಇನ್ನು ಕನ್ನಡದ ನಟಸೌರ್ವಭೌಮ ಡಾ. ರಾಜ್ ಕುಮಾರ್ ಅವರು ಪಂಚೆಯನ್ನೇ ಕಚ್ಚೆಯಾಗಿಸಿಕೊಂಡು ದುರುಳರಿಗೆ ಬಿಸಿಬಿಸಿ ಕಜ್ಜಾಯ ಕೊಟ್ಟಿದ್ದನ್ನೂ ಜನ ಮರೆತಿರುವುದಿಲ್ಲ.

ಲುಂಗಿ ಕಾಲಕ್ರಮೇಣ ತನ್ನ ಐಡೆಂಟಿಟಿಯನ್ನು ಬದಲಿಸಿಕೊಳ್ಳುತ್ತಾ ಸಾಗಿದೆ. ಫ್ಯಾಷನ್ ಪರೇಡುಗಳಲ್ಲಿ ಲುಂಗಿ ರಾರಾಜಿಸಿದೆ. ರಘು ದೀಕ್ಷಿತ್ ರಂಥ ಪಾಶ್ಚಾತ್ಯ ಸಂಗೀತಗಾರರು ಕಲರ್ ಕಲರ್ ಲುಂಗಿಯನ್ನು ಹೆಗ್ಗುರುತನ್ನಾಗಿ ಮಾಡಿಕೊಂಡಿದ್ದಾರೆ. ಈಗಿನ ಜಮಾನಾದ ಹುಡುಗರಿಗೆ ಲುಂಗಿ ಅಂದ್ರೆ ಗೊತ್ತಾ? ಅಂತ ಕೇಳಿ ನೋಡಿ. ಲುಂಗಿ ಡ್ಯಾನ್ಸ್ ಲುಂಗಿ ಡ್ಯಾನ್ಸ್ ಅಂತ ಹುಚ್ಚುಚ್ಚಾಗಿ, ಅಸಂಬದ್ಧವಾಗಿ ಕುಣಿಯಲು ಪ್ರಾರಂಭಿಸುತ್ತಾರೆ. ಕಾಲಾಯತಸ್ಮೈನಮಃ.
ಇತ್ತೀಚಿನ ಪೀಳಿಗೆಯಲ್ಲಿ ಪಂಚೆಯ ಬಳಕೆ ಕಡಿಮೆಯಾಗುತ್ತಿದ್ದು, ಬರ್ಮುಡಾ ಚಡ್ಡಿಗಳು ಸೊಂಟಕ್ಕೇರುತ್ತಿವೆ. ಈಗಿನ ಪೀಳಿಗೆಯ ಹುಡುಗರಿಗೆ ಪಂಚೆ ಉಟ್ಟುಕೊಳ್ಳಲು ಹೇಳಿ, ಒದ್ದಾಡಿಬಿಡುತ್ತಾರೆ. ಪಂಚೆ ಉಟ್ಟುಕೊಳ್ಳುವುದು ಅವಮರ್ಯಾದೆ ಎಂಬಂತೆ ಆಡುತ್ತಾರೆ. ಪಂಚೆಗೆ ರಾಷ್ಟ್ರೀಯ ದಿರಿಸಿನ ಸ್ಥಾನಮಾನ ನೀಡದಿದ್ದರೆ ಮುಂದೊಂದು ದಿನ ಅಳಿವಿನಂಚಿಗೆ ಬಂದರೂ ಅಚ್ಚರಿಯಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಈ ಬಗ್ಗೆ ಚಿಂತನೆ ನಡೆಸುತ್ತಾರೆಂದು ಭಾವಿಸೋಣ.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications