ಪ್ರತಿ ವಾರ ಬನ್ನಿ, ಕಾಡಿನ ಕಥೆಗಳ ಕೇಳಿ: ಇಂತಿ ನಿಮ್ಮ ಗಗನ್
ಎಲ್ಲರಿಗೂ ಹಾಯ್, ನಮಸ್ಕಾರ. ನನ್ನ ಹೆಸರು ಗಗನ್ ಪ್ರೀತ್. ಇನ್ನೂ ಹಲವು ವಾರ ನಾವು ಜೊತೆಯಾಗಿ ಸಾಗಬೇಕಾದ ಪ್ರಯಾಣ ತುಂಬ ದೊಡ್ಡದಿದೆ. ಅದರ ಆರಂಭದಲ್ಲೇ ನನ್ನ ಪರಿಚಯ ಹೇಳಿಕೊಳ್ಳೋಣ ಅನ್ನೋ ಕಾರಣಕ್ಕೆ ಈ ದಿನದ ನಿಮ್ಮ ಸಮಯವನ್ನು ಕೇಳ್ತಿದೀನಿ.
ನನ್ನ ಬಾಲ್ಯ ಕಳೆದದ್ದು ತಾಯಿಯ ಊರಾದ ತುಮಕೂರಿನಲ್ಲಿ. ಆಗಿಂದ ನನಗೆ ಮಣ್ಣಿನಲ್ಲೇ ಆಡುವ ಹುಚ್ಚು. ಆ ಕಾರಣಕ್ಕೆ ಅಮ್ಮನಿಂದ ಸಿಕ್ಕಾಪಟ್ಟೆ ಏಟುಗಳು ಸಹ ಬೀಳ್ತಿದ್ದವು. ರಜಾ ದಿವಸಗಳಲ್ಲಿ ತಾಯಿಯ ಊರಿಗೆ ಹೋಗುತ್ತಿದ್ದ ನನಗೆ ಪ್ರಕೃತಿಯೊಡನೆ ಒಂದು ನಂಟು ಬೆಳೆದಿತ್ತು.[ಬಂಡೀಪುರದ 'ರಾಜಾ ಹುಲಿ' ಬಂದರೆ ಎಂಥ ಗಾಡಿಯೂ ಸೈಡಿಗೆ]

ಅಲ್ಲಿನ ತೋಟ, ಬಾವಿಯಲ್ಲಿ ಈಜು, ಎಮ್ಮೆ ಸವಾರಿ, ಸೂರ್ಯನ ಜೊತೆಗೊಂದು ಸಂಭಾಷಣೆ..ಓಹ್, ಅವೆಲ್ಲ ಅದ್ಭುತ ದಿನಗಳ ಆರಂಭ. ನನ್ನ ಹಾಗೆಯೇ ತಮ್ಮನಿಗೂ ಪ್ರಾಣಿ- ಪಕ್ಷಿಗಳ ಮೇಲೆ ಪ್ರೀತಿ. ಮನೆಯಲ್ಲಿ ಕಾರ್ಟೂನ್ ನೆಟ್ ವರ್ಖ್ ಗಿಂತ ಡಿಸ್ಕವರಿ ಹಾಗೂ ಅನಿಮಲ್ ಪ್ಲಾನೆಟ್ ನೋಡುತ್ತಿದ್ದೆವು.
ಆಗ ಮೊಳಕೆಯೊಡೆದ ಅಸೆಯೇ ನನ್ನ ಜೀವನ ಶೈಲಿಯಾಗುತ್ತದೆ ಎಂಬ ಯಾವ ಸುಳಿವು ಕೂಡ ನನಗಿರಲಿಲ್ಲ. ತಂದೆ- ತಾಯಿ ವಿದ್ಯೆಗೇ ಹೆಚ್ಚಿನ ಪ್ರಾಮುಖ್ಯ ಕೊಟ್ಟರೂ ಆಟದ ಬಗ್ಗೆಯೇ ಸದಾ ನನ್ನ ಗಮನ. ಸಾಂಸ್ಕೃತಿಕ ಹಿನ್ನೆಲೆ ಇರುವ ಕುಟುಂಬದಿಂದ ಬಂದಿರುವ ನನಗೆ ಬರವಣಿಗೆ ಅಚ್ಚುಮೆಚ್ಚು.['ಜಂಗಲ್ ಡೈರಿ'-ಇದು ಗಗನ್ ನ ಕನಸಿಗೆ ದಾರಿ]

ಪಿಇಎಸ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಓದಲು ಸೇರಿಕೊಂಡ ನನ್ನ 'ವೈಲ್ಡ್ ಲೈಫ್ ಜರ್ನಿ' ಪ್ರಾರಂಭವಾಗಿದ್ದೇ ಅಲ್ಲಿ. ಬಂಡೀಪುರದಲ್ಲಿ ವನ್ಯಜೀವಿ ಛಾಯಾಗ್ರಹಣ ಶಿಬಿರದಲ್ಲಿ ಭಾಗವಹಿಸಿದ್ದೆ. ಆಗ ನನ್ನ ಹತ್ತಿರ ಕ್ಯಾಮೆರಾ ಇರಲಿಲ್ಲ. ಅದರ ಮೇಲೆ ಒಲವು ಕೂಡ ಇರಲಿಲ್ಲ. ಸಫಾರಿಯಲ್ಲಿ ಎಲ್ಲರೂ ಪೋಟೋ ತೆಗೆಯುತ್ತಿದ್ದರು. ನಾನು ಸುಮ್ಮನೆ ಆ ವನ್ಯಜೀವಿಗಳನ್ನು ಕಣ್ಣಾರೆ ಕಂಡು ಆನಂದಿಸಿದೆ.
ಆ ಕಾಡುಗಳಲ್ಲಿ ನನ್ನ ಗುರಿ-ಉದ್ದೇಶ ಕಂಡುಕೊಳ್ಳಲು ಆರಂಭಿಸಿದೆ. ಅಲ್ಲಿಂದ ನಾನು ಮನಸಾರೆ ಮನೆಗೆ ಬಂದಿದ್ದೇ ಇಲ್ಲ. ವನ್ಯಜೀವಿಗಳ ಬಗ್ಗೆ ಒಂದೊಂದೇ ವಿಚಾರ ತಿಳಿದುಕೊಳ್ಳಲಾರಂಭಿಸಿದೆ. ರಜಾ ಸಿಕ್ಕಾಗ ಕಾಡಿಗೆ ಓಡುತ್ತಿದ್ದೆ. ಅದ್ಭುತವಾದ ಅನುಭವಗಳು ಜತೆಯಾದವು.

ಮೊದಲ ಸಲ ಕ್ಯಾಮೆರಾ ಸೆಳೆಯಲು ಆರಂಭಿಸಿತು. ಅನುಭವವನ್ನು ಹಂಚಿಕೊಳ್ಳುವುದಕ್ಕೆ ಫೋಟೋಗಳು ಬೇಕು ಅನ್ನಿಸಿತು. ಸ್ನೇಹಿತರ ಕ್ಯಾಮೆರಾ ತೆಗೆದುಕೊಂಡು ಹೋಗೋಕೆ ಶುರು ಮಾಡಿದೆ. ಪ್ರಾಣಿಗಳ ಚಟುವಟಿಕೆ, ನಡವಳಿಕೆ ಸೂಕ್ಷ್ಮವಾಗಿ ತಿಳಿಯುತ್ತಾ ಹೋಯಿತು. ಪದೇ ಪದೇ ಸಫಾರಿಗಳಿಗೆ ಹೋಗ್ತಾ ಇದ್ದಿದ್ದರಿಂದ ಅವುಗಳ ಹೆಜ್ಜೆ ಗುರುತು ನೋಡಿದರೆ ಇಂಥದ್ದೇ ಪ್ರಾಣಿ ಎಂದು ಹೇಳುವ ಮಟ್ಟಿಗಿನ ತಿಳಿವಳಿಕೆ, ನಂಬಿಕೆ ಮೂಡಿತು.
ಸಫಾರಿಯಲ್ಲಿ ಪ್ರಾಣಿಗಳನ್ನು ನೋಡುವ ಸಾಧ್ಯತೆ ಹೆಚ್ಚು ಮಾಡಿಕೊಳ್ಳೋದು ಹೇಗೆ ಅನ್ನೋದೆ ಒಂದು ದೊಡ್ಡ ಜ್ಞಾನ. ಅಂದರೆ ಕೆಲ ಸೂಚನೆಗಳಿಂದ ಅದು ಗೊತ್ತಾಗುತ್ತದೆ ಈ ವಿಚಾರದ ಬಗ್ಗೆ ನಾನು ನಿಮ್ಮೊಡನೆ ಮುಂದಿನ ಭಾಗಗಳಲ್ಲಿ ಹಂಚಿಕೊಳ್ಳುತ್ತೇನೆ.
ನಾನು ಫೋಟೋಗ್ರಫಿ ಕಲಿತದ್ದು ಕೂಡ ಹೊಸ ಹೊಸ ತಪ್ಪುಗಳಿಂದ.[ಬದುಕಿನ ಮತ್ತೊಂದು 'ಮುಖ'ದ ಹೆಸರು ಮಧು]
ಪ್ರತಿ ಬಾರಿಯ ತಪ್ಪು ಒಂದು ಹೊಸ ಸರಿಯಾದ ಪಾಠ ಕಲಿಸಿತು. ಕಾಡು ಹಾಗೂ ವನ್ಯಪ್ರಾಣಿಗಳ ಬಗ್ಗೆ ಎಲ್ಲರಿಗೂ ತಿಳಿಸಬೇಕು. ನನಗಾದ ಒಳ್ಳೆ ಅನುಭವಗಳು ಇತರರಿಗೂ ಅಗಬೇಕು ಎಂಬ ಕಾರಣಕ್ಕೆ ಜಂಗಲ್ ಡೈರಿ ಎಂಬ ಹೆಸರಿನಲ್ಲಿ ಫೇಸ್ ಬುಕ್ ಪೇಜ್ ಶುರು ಮಾಡಿದೆ. ಸ್ನೇಹಿತರ ಸಹಕಾರದೊಂದಿಗೆ ವನ್ಯಜೀವಿ ಆಸಕ್ತರು ಹಾಗೂ ವನ್ಯಜೀವಿ ಛಾಯಾಗ್ರಾಹಕರನ್ನು ಕರೆದೊಯ್ಯಲು ಆರಂಭಿಸಿದೆ.

ನಾನು ನನ್ನ ತಂಡ ಕಾಡಿನ ಮೌಲ್ಯವನ್ನು ಮನದಟ್ಟುವಾಗುವಂತೆ ಪ್ರಯತ್ನ ಮಾಡುತ್ತಿದ್ದೇವೆ. ಅಮೂಲ್ಯವಾದ ಅನುಭವದಿಂದ ಮಾತ್ರ ಸಂರಕ್ಷಣೆ ಬಗ್ಗೆ ಚಿಂತನೆ ಸಾಧ್ಯ ಎಂಬುದು ನನ್ನ ಬಲವಾದ ನಂಬಿಕೆ. ನನ್ನ ಫೇಸ್ ಬುಕ್ ಪೇಜ್ ನೋಡುವುದಕ್ಕೆ ಗಗನ್ ಪ್ರೀತ್ ಎಂದು ಸರ್ಚ್ ಮಾಡಿ. ಮೊಬೈಲ್ ಸಂಖ್ಯೆ : 9036862030. ಫೇಸ್ ಬುಕ್ ಪೇಜ್ ಲಿಂಕ್: https://www.facebook.com/gagan.preeth619?fref=ts
ಈಗ ಒನ್ಇಂಡಿಯಾ ಮೂಲಕ ನಿಮ್ಮನ್ನು ತಲುಪುವ ಅವಕಾಶ ಸಿಕ್ಕಿದೆ. ಪ್ರತಿ ಶುಕ್ರವಾರ ನಿಮ್ಮೊಡನೆ ನನ್ನ ಅನುಭವ ಹಂಚಿಕೊಳ್ಳುತ್ತಾ ಹೋಗುತ್ತೇನೆ. ನನ್ನ ಅಂಕಣದ ಹೆಸರು 'ಜಂಗಲ್ ಡೈರಿ'. ಹೋದ ವಾರ ಆನೆ ಬಗ್ಗೆ ಆಸಕ್ತಿಕರ ಸಂಗತಿಗಳನ್ನು ತಿಳಿಸ್ತೀನಿ ಎಂದಿದ್ದೆ. ಆದರೆ ನನ್ನ ಪರಿಚಯವೇ ನಿಮಗಾಗದೆ ಮುಂದುವರಿಯುವುದು ಹೇಗೆ? ಮುಂದಿನ ವಾರ ಭೇಟಿಯಾಗೋಣ. ಆನೆ ಅನೆ ಅನೆ ಬಗ್ಗೆ ಮಾಹಿತಿ ಜೊತೆಗೆ.
ನನ್ನ ಬಗ್ಗೆ ಇನ್ನೊಂದಿಷ್ಟು ಮಾಹಿತಿ
ತಂದೆ: ಜಿ.ಪಿ. ಮಂಜುನಾಥ್ ( ಅಂಬೇಡ್ಕರ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪ್ರೊಫೆಸರ್)
ತಾಯಿ : ಡಾ.ಎಲ್.ಸುಧಾ
ಹುಟ್ಟೂರು: ತುಮಕೂರು
ಶಾಲೆ: ವಿದ್ಯಾನಿಕೇತನ ಪಬ್ಲಿಕ್ ಶಾಲೆ
ಪಿಯು : ಸಂತ ಜೋಸೆಫ್ ಪಿಯು ಕಾಲೇಜು
ಪದವಿ: ಬಿ.ಇ. (ಸಿವಿಲ್) ಪಿಇಎಸ್ ವಿಶ್ವವಿದ್ಯಾಲಯ












Click it and Unblock the Notifications