ಮೈನವಿರೇಳಿಸುವ ಝೆರ್ಮಾಟ್ ಹಿಮನದಿಗಳ ಮೇಲೆ ಚಾರಣ
ನಾನು ಸ್ನಾತಕೋತ್ತರ ಪದವಿ ಮುಗಿಸಿದ ಖುಶಿಗೆ ಸ್ವಿಸ್ ದೇಶ ನೋಡಲು ಬಯಸಿದ್ದೆ. ಸಿಕ್ಕಾಪಟ್ಟೆ ಕನ್ನಡ ಸಿನೆಮಾ ನೋಡಿದ್ದರಿಂದಲೋ ಏನೋ ಪ್ರತಿ ಸಿನೆಮಾದಲ್ಲೂ ಸ್ವಿಸ್ ನ ಪರ್ವತಗಳು, ಮಂಜಿನ ಗಡ್ಡೆಗಳು, ಹಸಿರು ರಾಶಿ ಇವುಗಳನ್ನೆಲ್ಲಾ ನೋಡಲು ಒಮ್ಮೆ ಯುರೋಪಿಗೆ ಹೋಗಬೇಕೆಂಬ ಆಸೆ ಇತ್ತು. ಅದಕ್ಕಿಂತ ಜಾಸ್ತಿ ನನಗೆ ಬಹು ಇಷ್ಟವಾದ ಟಾಬ್ಲಾರಿನೋ ಚಾಕೋಲೇಟಿನ ಸಿಪ್ಪೆಯಲ್ಲಿ ಕಾಣುವ ಬೆಟ್ಟ ಸ್ವಿಸ್ನಲ್ಲಿದೆ ಎಂದು ಯಾರೋ ತಿಳಿಸಿದ್ದರು.
ಛಳಿ, ಶೀತ, ನೆಗಡಿ, ಕೆಮ್ಮು ನನ್ನ ಗಾಢ ಸ್ನೇಹಿತರಾದ ಕಾರಣ ನಾನು ಬೇಸಿಗೆಯಲ್ಲಿ ಸ್ವಿಸ್ ನ ನೋಡಲು ಹೋದೆ. ಅಲ್ಲಿನ ಬಿರುಬೇಸಿಗೆಯೂ ಸಹ ನನಗೆ ಗಡ ಗಡ ನಡುಗುವ ಛಳಿಯ ವಾತಾವರಣದ ಹಾಗೆ ಕಾಣಿಸಿತ್ತು. ಇದ್ದ ನಾಲ್ಕೂ ದಿವಸವೂ ಒಂದೆ ಸ್ವೆಟರ್!
ನಾನು ವಾಸವಿದ್ದದ್ದು ಬರ್ನ್ ಎಂಬ ನಗರದಲ್ಲಿ. ಬರ್ನ್ ವಿಶ್ವವಿದ್ಯಾಲಯದಲ್ಲಿ ಆಗ ತಾನೆ ಪಿ ಎಚ್ ಡಿ ಮುಗಿಸಿದ್ದ ಕನ್ನಡಿಗ ಹಾಗೂ ಅವರ ಇಟಲಿಯ ಪತ್ನಿಯೊಂದಿಗೆ ನನ್ನ ವಾಸ. ಸ್ವಲ್ಪ ಸ್ವಲ್ಪ ಕನ್ನಡ ಮಾತಾಡುತ್ತಲೇ ನಾವು ಸ್ವಿಸ್ ಸುತ್ತುವ ಕಾಯಕ ಶುರು ಮಾಡಿದ್ವಿ. ಅಪ್ಪ ಸಹ ಬರ್ಲಿನ್ ನಿಂದ ಬಂದಿದ್ದರಿಂದ, ಇಬ್ಬರಿಗೂ ಪ್ರವಾಸವನ್ನ ಪ್ರಯಾಸ ಮಾಡದೇ ಇರುವ ಆಸೆಯಿದ್ದುದರಿಂದ ನಾವು ಆರಾಮಾಗಿ ಊರು ಸುತ್ತುವುದು ಎಂದು ನಿರ್ಧರಿಸಿದೆವು.
ಮೊದಲ ದಿವಸ ಬರ್ನ್ ನಗರ, ಅಲ್ಲಿನ ಗೋಡೆ ಗಡಿಯಾರವನ್ನ ತೋರಿಸದ್ದಿದ್ದ ರವಿಚಂದ್ರನ್ ಚಿತ್ರವೇ ಇಲ್ಲ, ಎರಡನೆಯ ದಿವಸ ವಿಶ್ವ ಕಂಡ ಅತಿ ದೊಡ್ಡ ಮೇಧಾವಿ ಐನ್ಸ್ಟೈನ್ ನ ಜೀವನ ಚರಿತ್ರೆಯ ವಸ್ತು ಸಂಗ್ರಹಾಲಯ ಇವೆಲ್ಲವೂ ಮುಗಿಸಿದ ನಂತರ ನನಗೆ ಚಾರಣ ಹುಚ್ಚು ಹತ್ತಿತ್ತು. ಅಷ್ಟೊಂದು ಚೀಸ್, ಚಾಕೋಲೇಟ್ ತಿಂದ ಮೇಲೆ ಮೈ ಕರಗಿಸಲೇಬೇಕೆಂದು ನನ್ನ ಹುಚ್ಚು ಕನಸಾಗಿದ್ದ ಮಾತೆರ್ಹಾರನ್ ಬೆಟ್ಟವನ್ನು ಹತ್ತುವ ಬಯಕೆ ಹೇಳಿದೆ. ಅದಕ್ಕೆ ಪೂರಕವಾಗಿ ಅದನ್ನು ಹತ್ತಿ ಬಿದ್ದವರ, ಸತ್ತವರ ಸಂಖ್ಯೆಯ ಅಂಕಿ ಅಂಶಗಳನ್ನ ನನ್ನ ಮುಂದೆ ಬಿಚ್ಚಿಟ್ಟಾಗ ನನಗೆ ವಿಪರೀತ ಭಯವಾಯಿತು.

ಝೆರ್ಮಾಟ್ ಹಿಮನದಿಗಳ ಮೇಲೆ ಚಾರಣ
ಸರಿ ಇನ್ನೇನು ಬಂದ ದಾರಿಗೆ ಸುಂಕವಿಲ್ಲ ಎಂದುಕೊಂಡು ಅದೇ ಸ್ವಿಸ್ ನಗರಗಳಲ್ಲಿ ಶಾಪಿಂಗ್ ಹೋಗೋದು ಎಂದು ಕೊಂಡಾಗ ಹೊಳೆದಿದ್ದೆ ಝೆರ್ಮಾಟ್ ಹಿಮನದಿಗಳ ಮೇಲೆ ಚಾರಣ ಮಾಡಿಕೊಂಡು ಅದರ ಎದುರಿನ ಮಾತೆರ್ಹಾರನ್ ಬೆಟ್ಟವನ್ನ ನೋಡುವುದು ಎಂದು. ಹಿಮನದಿಗಳ ಮೇಲೆ ನಡೆಯಬಹುದು ಎಂಬ ಕಲ್ಪನೆಯೆ ನನ್ನಲ್ಲಿರಲ್ಲಿಲ್ಲ. ನಮ್ಮ ಗಂಗೋತ್ರಿ, ಯಮುನೋತ್ರಿಯನ್ನ ಸಹ ನಾ ನೋಡಿರಲ್ಲಿಲ್ಲ. ಪುಣ್ಯಕ್ಕೆ ಬದರಿ ಕೇದಾರ ಯಾತ್ರೆಯನ್ನ ಚಿಕ್ಕವಳ್ಳಿದ್ದಾಗ ಮುಗಿಸಿದ್ದ ನೆನಪಷ್ಟೆ.

ಸ್ವಿಸ್ನಲ್ಲಿ ರೈಲುಗಳೆ ಜೀವನದಿ
ಬರ್ನ್ ನಗರದಿಂದ ಮಾತೆರ್ಹಾರನ್ ಗೊತ್ಥಾರ್ಡ್ ಬಾಹನ್ (ನಿಲ್ದಾಣಕ್ಕೆ) ರೈಲು ಸೌಕರ್ಯ ಇದೆ. ವಿಸ್ಪ್ ಅನ್ನೋ ಜಾಗದಲ್ಲಿ ರೈಲು ಬದಲಾವಣೆಯನ್ನ ಮಾಡಿಕೊಳ್ಳಬಹುದು. ನಂತರ ಗ್ಲೆಶಿಯರ್ ಎಕ್ಸ್ಪ್ರೆಸ್ ಎಂಬ ರೈಲಿನಲ್ಲಿ ನಾವು ಝೆರ್ಮಾಟ್ ಗೆ ತಲುಪಿದ್ವಿ. ಸುಮಾರು ಎರಡು ಘಂಟೆಗಳ ಸುದೀರ್ಘ ಪಯಣವಿದು. ಸ್ವಿಸ್ನಲ್ಲಿ ರೈಲುಗಳೆ ಜೀವನದಿ. ಅಲ್ಲಿ ಅದು ಇಲ್ಲ ಅಂದರೆ ಜೀವನವೇ ಇರುವುದಿಲ್ಲ. ಸಮಯ ಪರಿಪಾಲನೆಗೆ ಅವರು ಹೆಸರುವಾಸಿ.

ಹಿಮನದಿಗಳ ಮೇಲೆ ನಡೆಯಲು ಅವಕಾಶ
ಎರಡು ಘಂಟೆಗಳ ರೈಲು ಪ್ರಯಾಣದಲ್ಲಿ ಬಲಕ್ಕೆ ಯುರೋಪಿನ ಅತಿ ಎತ್ತರದ ಪ್ರದೇಶ ಯುಂಗ್ ಫ್ರೋ ಕಾಣಿಸುತ್ತೆ ಮತ್ತೆ ಇಂಟರ್ ಲೇಕನ್ ಸಹ ದಾರಿಯಲ್ಲಿ ಕಾಣಬಹುದು. ಅದನ್ನೇ ನೋಡಲು ಆಸಕ್ತಿ ಇದ್ದವರು ಅಲ್ಲಲ್ಲಿ ಇಳಿದು ಹೋಗಬಹುದು. ಇನ್ನು ಬಾಹನ್ ತಲುಪಿದ ಮೇಲೆ ಹಿಮನದಿಗಳ ಮೇಲೆ ನಡೆಯಲು ಅವಕಾಶವಿದೆ. ಇಲ್ಲ ಕೈಲಾಗುವುದಿಲ್ಲ ಎಂದು ಹಿಂದೇಟು ಹಾಕುವವರಿಗಾಗಿ ಕೇಬಲ್ ಕಾರಿನ ವ್ಯವಸ್ಥೆಯೂ ಇದೆ. ಜೇಬಿಗೆ ಕತ್ತರಿ ತಪ್ಪಿಸಬೇಕಾದವರು ನಡೆಯಲು ಪ್ರಯತ್ನ ಮಾಡಬಹುದು.

ಸಾಹಸಕ್ಕೆ ಇಳಿಯುವ ಮುನ್ನ ಸಿದ್ಧತೆ ಇರಬೇಕು
ಛಳಿ ಗಾಳಿಯಲ್ಲಿ ಉಸಿರುಗಟ್ಟುವ ಸಂಭವವಿರುವುದರಿಂದ ಸರಿಯಾದ ತರಬೇತಿ ಅಥವಾ ಪೂರ್ವ ತಯಾರಿ ಇಲ್ಲದಿದ್ದರೆ ಅಥವಾ ಮಂಡಿ, ಬೆನ್ನಿನ ಮೂಳೆ ಸರಿಯಿಲ್ಲದಿದ್ದರೆ ಈ ಸಾಹಸವನ್ನ ಮಾಡದಿರುವುದು ಒಳಿತು. ಜಾರುವ ಸಂಭವ ತುಂಬಾ ಇರುತ್ತದೆ. ನಮ್ಮ ಥರಹ ಶಾಖಾಹಾರಿಗಳಾಗಿದ್ದರೆ ತಿಂಡಿ ಕಟ್ಟಿಕೊಂಡು ಹೋಗುವುದು ಒಳಿತು. ಇಲ್ಲದಿದ್ದರೆ ಅಲ್ಲಿ ಸಿಗುವ ಐಸ್ಕ್ರೀಮ್ ಹಾಗೂ ಪಾನೀಯಗಳೇ ಗತಿ.

ಒಂದೊಂದು ಹೆಜ್ಜೆ ಇಡುವಾಗಲೂ ದೇವರ ನೆನಪಾಗ್ತಾರೆ
ಒಂದೊಂದು ಹೆಜ್ಜೆ ಇಡುವಾಗಲೂ ಮುಕ್ಕೋಟಿ ದೇವರ ಹೆಸರುಗಳು ಮನದಲ್ಲಿ ಬಂದಿದ್ವು. ಅಲ್ಲಲ್ಲಿ ಜಾರುವಿಕೆ, ಕಾಲು ಮರುಗಟ್ಟೋದು ಇವೆಲ್ಲ ಬೇಸಿಗೆ ಎಂದು ಕರೆಯುವ ಸ್ವಿಸ್ನಲ್ಲಿ ಆದ್ದದ್ದು. ಕತ್ತಲಾಗುವ ಮುನ್ನ ವಾಪಸ್ಸು ಹೋಗಬೇಕಾದ ಕಾರಣ ಬೇಗ ಬೇಗ ನಡೆಯಲು ಶುರುಮಾಡಿದ್ದೆವು. ಆವಗಾವಾಗ ಅಪ್ಪ ಅಥವಾ ಒಮ್ಮೊಮ್ಮೆ ನಾನೇ ಮಧ್ಯದಲ್ಲಿ ನಡೆಯದೇ ಕೇಬಲ್ ಕಾರ್ ತಗೊಂಡುಬಿಡೋಣ ಅನ್ನಿಸಿದ್ದಾದರೂ ನಮಗೆ ನಾವೇ ಹುಮ್ಮಸ್ಸು ತುಂಬಿಕೊಂಡು ಮತ್ತೆ ನಡೆಯಲು ಶುರು ಮಾಡಿದೆವು.

ಟಾಬ್ಲಾರಿನೋ ಚಾಕೋಲೇಟಿನ ಸಿಪ್ಪೆಯಲ್ಲಿ ಕಂಡಹಾಗೆ
ಅಂತೂ ತುತ್ತ ತುದಿಯನ್ನ 3 ಘಂಟೆಗಳ ಕಾಲ ಸತತವಾಗಿ ಹತ್ತಿ ಬೆವರೊರೆಸಿಕೊಂಡರೆ ನಾವು ಕಷ್ಟ ಪಟ್ಟು ಹತ್ತಿದ್ದಕ್ಕೆ ಒಂದು ಡಿಪ್ಲೋಮಾವನ್ನ ಸಹ ಕೊಡಬಹುದು. ಅಷ್ಟು ಕಷ್ಟಪಟ್ಟು ಹತ್ತಿದ್ದೂ ಸಾರ್ಥಕ ಏಕೆಂದರೆ, ನಂತರ ಕಣ್ಣು ಬಿಟ್ಟು ನೋಡಿದರೆ ಮುಂದೆ ಮಾತೆರ್ಹಾರನ್ ಎಂಬ ಅದ್ಭುತ. ನಾ ಪದೆ ಪದೆ ತಿನ್ನುತ್ತಿದ್ದ ಟಾಬ್ಲಾರಿನೋ ಚಾಕೋಲೇಟಿನ ಸಿಪ್ಪೆಯಲ್ಲಿ ಕಂಡಹಾಗೆ ಥೇಟ್ ಹಾಗೆ ಇದೆ.

ದೇವರೆದಿರು ತುಪ್ಪದ ದೀಪ ಹಚ್ಚಿದಷ್ಟು ಸಂತೋಷ
ಅಡಿಗರ 'ಸಂತೋಷವಾಗುತ್ತದೆ' ಪದ್ಯದಲ್ಲಿ ಬಂದ ಸಾಲುಗಳ ಹಾಗೆ 'ಮನಸ್ಸು ರವಷ್ಟು ಕಂಪಿಸುತ್ತದೆ ಕಾವೇರುವುದಿಲ್ಲ, ದೇವರ ಮುಂದೆ ತುಪ್ಪದ ದೀಪ ಹಚ್ಚಿಟ್ಟ ಹಾಗೆ ಸಂತೋಷವಾಗುತ್ತದೆ' ಎಂದು ಮನಸಿನಲ್ಲಿಯೇ ಅಂದುಕೊಂಡು ಆ ಬೆಟ್ಟವನ್ನೇ ಸುಮಾರು ಹೊತ್ತು ದಿಟ್ಟಿಸುತ್ತಾ ಕೂತೆ. ಮಂದಹಾಸನದ ಮೇಲೆ ನಮ್ಮಾದಿ ಅಪ್ಪಂದೋ ಅಮ್ಮಂದೋ ವಿಗ್ರಹವಿಟ್ಟ ಬೆಳ್ಳಿಯ ಕರಂಡವಾಗೆ ಕಾಣಿಸಿದ್ದು ಆ ಮಾತೆರ್ಹಾರನ್. ಸೂರ್ಯ ಇಳಿದಾಗ ಹೋಗಲೇಬೇಕೆಂದು ಮನೆಗೆ ಹೋದ ದಿವಸ ಅವತ್ತು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications