ಆಟದ ಜೊತೆ ಪಾಠವನ್ನೂ ಕಲಿಸಿದ ಮುಳ್ಳಯ್ಯನಗಿರಿ ಟ್ರೆಕ್ಕಿಂಗ್!
ಚಿಕ್ಕಮಗಳೂರು ಜಿಲ್ಲೆಯೆಂದರೆ ನೆನಪಿಗೆ ಬರೋದು ಪೂರ್ಣ ಚಂದ್ರ ತೇಜಸ್ವಿ. ಅವರು ಬರೆದ ಶಿಕಾರಿ ಕಥೆಗಳು ಅಲ್ಲಿದ್ದ ಕಾಡುಗಳು, ಕಿರು ದಾರಿಗಳು, ನಿರುತ್ತರ ಮೌನಗಳು. ಛಳಿ, ಮಳೆಗಾಲದಲ್ಲಿ ನಮಗೆ ಒಂದು ತರಹ ಝುಮ್ಮೆನ್ನಿಸುತ್ತಿತ್ತು. ಬೆಂಗಳೂರಿಗಿಂತ ಭಿನ್ನವಾದ ಒಂದು ಊರು ಎಂದು ನಾನೂ ಸಹ ಭಾವಿಸಿದ್ದೆ. ಇವೆಲ್ಲವನ್ನ ನೋಡಲಿಕ್ಕೆಂದೇ ಹೋದದ್ದು ಕರ್ನಾಟಕದ ಅತಿ ಎತ್ತರದ ಬೆಟ್ಟ ಮುಳ್ಳಯ್ಯನಗಿರಿಗೆ.
ಗುಂಪಿನಲ್ಲಿ ಬೆಟ್ಟ ಹತ್ತೋದು ಒಂದು ಮಜವಾದ ಸಂಗತಿ. ನಾವು ಗೆಳೆಯರ ಗುಂಪು ಹೋಗಿದ್ದು ಮುಳ್ಳಯ್ಯನಗಿರಿ ಟ್ರೆಕ್ಗೆ. ನಾವಿದ್ದ ಗುಂಪಲ್ಲಿ ಇಂಜಿನಿಯರ್ಗಳು, ಡಾಕ್ಟರ್, ಲಾಯರ್ ಸಹ ಇದ್ದೆವು. ಒಂದು ರೀತಿಯಲ್ಲಿ ಮಿಕ್ಸ್ ತಂಡ. ಮಾತುಕತೆ, ಆಲೋಚನೆ ಭಿನ್ನವಿದ್ದರೂ ನಮ್ಮ ಆಸೆ ಬೆಟ್ಟವನ್ನ ಹತ್ತುವುದೊಂದೆ. ಹೊಸದಾಗಿ ಮದುವೆಯಾದವರು, ಗಂಡ ಹೆಂಡತಿಯರ ಸಮ್ಮಿಲನವೂ ಅಲ್ಲಿ ತುಂಬಿತ್ತು.

ಪೃಥ್ವಿಯ ಮಡಿಲಲ್ಲಿ ನಾವು ಅತ್ಯಂತ ಹರ್ಷದಿಂದ ಹಾಡಿನ ಪಲ್ಲವಿ ಹಾಡಿಕೊಂಡು ರಂಜಿತವಾಗಿ ಕುಣಿದುಕೊಂಡು ಬೆಟ್ಟ ಹತ್ತಿ ಪುನೀತವಾಗುತ್ತೇವೆ ಅಂದುಕೊಂಡ್ವಿ. ಆದರೆ ಇದನ್ನ ಅಕ್ಷರ ರೂಪದಲ್ಲಿ ಇಳಿಸುವಾಗ ನೆನಪಿಸಿಕೊಂಡಾಗ ನಾವು ಪಟ್ಟ ಕಷ್ಟ, ಅದನ್ನ ಈ ರೂಪದಲ್ಲಿ ಇಳಿಸೋದೆ ಕಷ್ಟ ಎಂದು ಅರಿವಾಯ್ತು. ಮೇಘಗಳ ಮಧ್ಯೆ, ಗಾಳಿಯೊಡನೆ ಗುದ್ದಾಡಿ ಬೆಟ್ಟ ಹತ್ತಿದ ಅನುಭವ ನಿಮ್ಮ ಮುಂದೆ.
ಒಂದಷ್ಟು ತಿಂಗಳ ಹಿಂದೆ ದಪ್ಪವಾಗಿ, ಅದಾದ ಮೇಲೆ ಒಂದಷ್ಟು ಓಡು, ನಡಿಗೆಯನ್ನ ಮಾಡಿದಕ್ಕೆ ಬೆಟ್ಟ ಹತ್ತಿ ಬಂದು ನಮ್ಮ ಶಕ್ತಿಯನ್ನ ಪ್ರದರ್ಶಿಸಿಕೊಳ್ಳೋಣ ಎಂದೆನಿಸಿ ಅಂತೂ ಹೊರಟ್ವಿ. ಬೆಟ್ಟ ಹತ್ತುವಾಗ ಒಂದಷ್ಟು ವಿಷಯಗಳು ನೆನಪಿಡಬೇಕು. ಮಳೆ, ಥಂಡಿ ಇರುವ ಜಾಗಕ್ಕೆ ಟ್ರೆಕ್ ಹೋಗುವಾಗ ಕಾಲು ಪೂರ್ತಿ ಮುಚ್ಚುವಹಾಗೆ ಪ್ಯಾಂಟ್, ಒಂದು ಚೆಂದದ ಶೂಸ್, ಮತ್ತು ನೀರು ಬಹು ಅವಶ್ಯಕವಾದ ವಸ್ತುಗಳು. ಮಿಕ್ಕಿದ್ದೆಲ್ಲವೂ ನಗಣ್ಯ. ಯುರೋಪಿನಲ್ಲಿ ಹಿಮದ ಟ್ರೆಕ್, ಕಾಡಿನ ಟ್ರೆಕ್, ಗ್ಲೇಶಿಯರ್ ಟ್ರೆಕ್ ಮಾಡಿದವಳಿಗೆ ಮಾನ್ಸೂನ್ ಟ್ರೆಕ್ ಮಾಡುವ ಆಸೆಯಿಂದ ಶುರು ಮಾಡಿದ್ದು.

ಮುಳ್ಳಯ್ಯನಗಿರಿ ಕರ್ನಾಟಕದ ಅತಿ ಎತ್ತರದ ಶಿಖರ. ತಪಸ್ವಿ ಮುಳ್ಳಯ್ಯಪ್ಪ ಸ್ವಾಮಿ ಬೆಟ್ಟದ ಮೇಲಿನ ಗುಹೆಯಲ್ಲಿ ತಪಸ್ಸು ಮಾಡಿದ್ದರಿಂದ ಈ ಶಿಖರಕ್ಕೆ ಮುಳ್ಳಯ್ಯನಗಿರಿ ಎಂಬ ಹೆಸರು ಬಂದಿದೆ. ಈ ಶಿಖರವನ್ನ ಹತ್ತೋದಕ್ಕೆ ಎರಡು ದಾರಿ ಇದೆ. ಒಂದು ಸರ್ಪದಾರಿ, ಮತ್ತೊಂದು ಮಾಮೂಲಿ ಮೆಟ್ಟಲಿನದಾರಿ. ನಮ್ಮ ದೇಹದ ಸ್ಥಿತಿ, ವಾತಾವರಣವನ್ನ ನೋಡಿಕೊಂಡು ಹತ್ತಬಹುದು. ನಾವು ಹತ್ತುವಾಗ ಮಂಜು ಮುಸುಕಿದ ವಾತಾವರಣ, ಜೋರು ಆಷಾಢದ ಗಾಳಿ, ಸಣ್ಣಗೆ ಮಳೆ. ಸೂರ್ಯನ ಕಿರಣಗಳು ನಮ್ಮ ಮೈಯನ್ನ ತಾಕುತ್ತಿರಲಿಲ್ಲ. ಎಲ್ಲಿ ಜಾರಿ ಬಿದ್ದೇವೋ ಎಂದು ಆ ಹೆಜ್ಜೆ ಈ ಹೆಜ್ಜೆ ಅಂತ ತಿಣುಕಾಡುತ್ತಿದ್ದೆವು.
ಹಾಗೆ ಹೋಗುತ್ತಿದ್ದಾಗಲೇ ಒಬ್ಬಳ ಮಂಡಿಯೆಲ್ಲಾ ರಕ್ತ. ಏನಾಯಿತು ಎಂದು ನೋಡುವ ಮೊದಲೇ ಒಂದು ಜಿಗಣೆ ತನ್ನ ಹೊಟ್ಟೆಗಾಗುವಷ್ಟು ರಕ್ತ ಕುಡಿದು ಎಲ್ಲೋ ಬಿದ್ದಿತು. ಇನ್ನಿದೆ ನಮಗೆ ಮಾರಿಹಬ್ಬ ಎಂದು ಜಾರದಂತೆ, ಜಿಗಣೆ ಕಚ್ಚದಂತೆ ಹತ್ತಲು ಶುರುಮಾಡಿದೆವು. ಒಮ್ಮೆ ಗಾಳಿಗೆ ಟೋಪಿ ಹಾರೋದು, ಮತ್ತೊಮ್ಮೆ ಕಿವಿಗೆ ಕಾದ ಸೀಸ ಹಾಕಿದಂತೆ ತಣ್ಣನೆ ಗಾಳಿ ಹೊಕ್ಕೋದು, ಮಳೆ ಎಂದು ರೇನ್ ಕೋಟ್, ಜ್ಯಾಕೆಟ್ ಎಲ್ಲಾ ಹಾಕಿಕೊಂಡರೆ ವಿಪರೀತ ಶೆಖೆಯಾಗೋದು, ಒಳ್ಳೆ ಜಾರುಬಂಡೆಯನ್ನ ಕೆಳಗಿಂದ ಹತ್ತುವ ಹಾಗೆ ವಿಪರೀತ ಸ್ಟೀಪ್ ಆಗಿದ್ದ ಜಾಗವನ್ನ ಹತ್ತೋದು. ಎಲ್ಲಾ ಮಾಡುವ ಸಮಯಕ್ಕೆ ಹೈರಾಣವಾಗಿದ್ದ ನಾನು ಇನ್ನು ಈ ಯಕಶ್ಚಿತ್ ಜಿಗಣೆಯ ಸಹವಾಸವನ್ನ ಮರೆತು ನಡೆಯಬೇಕೆಂಬ ಮನಸ್ಸು ಮಾಡಿದೆ. ಬೇಗ ಬೇಗ ನಡೆಯಬೇಕು ಹೆಜ್ಜೆ ಅಲ್ಲೇ ಇಟ್ಟರೆ ಜಿಗಣೆಗಳು ನಮ್ಮ ಮೈಯನ್ನ ಹೊಕ್ಕುತ್ತವೆ ಎಂಬ ಸತ್ಯ ನಮಗೆ ಅರಿವಾಗತೊಡಗಿತು. ಅಷ್ಟು ಚಿಕ್ಕ ಕೀಟ ನಮ್ಮನ್ನ ಹೇಗೆಲ್ಲಾ ಆಟವಾಡಿಸಬಹುದಲ್ಲಾ ಎಂದು ಹೌಹಾರಿದೆವು.

ನೀರು ಕುಡಿದು ಕುಡಿದು ಬೆಟ್ಟ ಹತ್ತಿದೆವು. ಇನ್ನು ಒಳಗೆ ಹೋದದ್ದೆಲ್ಲಾ ಹೊರಗೆ ಬರಬೇಕಲ್ಲ. ಬಂದ್ರೂ ಜಾಗ ಇರಬೇಕಲ್ಲ. ಈ ಸಮಸ್ಯೆ ಹೆಣ್ಣು ಮಕ್ಕಳಿಗೆ ಜಾಸ್ತಿ ಬರೋದು. ಗಂಡಸರ ಹಾಗೆ ಬಿಡುಬೀಸಾಗಿ ಜೀವನ ನಡೆಸೋದು ಕಷ್ಟ. ಈ ಕಷ್ಟ ನನಗೂ ಅನುಭವವಾಯ್ತು. ಆರ್ಡೆನಸ್ ಕಾಡಲ್ಲಿ ಟ್ರೆಕ್ ಮಾಡುತ್ತಿರುವಾಗ ಅಲ್ಲಲ್ಲಿ ಮೇಕ್ ಶಿಫ್ಟ್ ಶೌಚಾಲಯವನ್ನ ಇಟ್ಟಿದ್ದರು. ಅದೊಂದು ನಮ್ಮ ದೇಶದಲ್ಲಿಯೂ ಬಂದರೆ ಸುಮಾರು ಹೆಣ್ಣುಮಕ್ಕಳು ಆರಾಮಾಗಿ ಬೆಟ್ಟ ಹತ್ತಬಹುದು. ಅಂತೂ ಇವೆಲ್ಲಾ ಕಷ್ಟಗಳನ್ನ ತಡೆದುಕೊಂಡು ಶಿಖರ ತಲುಪಿದವು. ಆ ಶಿಖರದ ಮೇಲೆ 400 ಮೆಟ್ಟಿಲುಗಳು, ಅಲ್ಲಿ ಒಂದು ದೇವಸ್ಥಾನ. ಅಲ್ಲೊಂದು ಬೋರ್ಡ್ 6300.17 ಫೀಟ್ ಸಮುದ್ರ ಮಟ್ಟದಿಂದ ಮೇಲಿದ್ದೀರ ಎಂದು. ಅಬ್ಬ ಅಲ್ಲಿಗೆ ನಮ್ಮ ಪಯಣ ಮುಗಿಯಿತು. ಅಂತೂ ಒಂದು ಜಿಗಣೆ ಹಿಡಿಯಲ್ಲಿಲ್ಲ ಕಾಲಿಗೆ ಅಂದುಕೊಂಡಾಗ ಟಪ್ ಎಂದು ಕತ್ತಿನ ಹತ್ತಿರ ಏನೋ ಕಿರಿಕಿರಿಯಾಯ್ತು. ಅಲ್ಲಿಗೆ ಸೀದಾ ಕತ್ತಿಗೆ ಜಿಗಣೆ. ಒಟ್ಟು ಕಾಲಿಗಲ್ಲದ್ದು ಕತ್ತಿಗೆ.

ಜೀವನವೂ ಸಹ ಟ್ರೆಕ್ ಇದ್ದಂಗೆ, ಅಲ್ಲೂ ಕೊಂಚ ನಾವು ತಯಾರಿ ಮಾಡಬೇಕು, ಎಷ್ಟು ಸಾಧ್ಯವೋ ಅಷ್ಟು ಜಾಕೆಟ್ಗಳನ್ನ ಹಾಕಿಕೊಂಡು ನಮ್ಮನ್ನ ನಾವು ಕಾಪಾಡಿಕೊಳ್ಳಬೇಕು, ಅಲ್ಲಲ್ಲಿ ಸುಗಮ ದಾರಿಯಿರುತ್ತದೆ, ಮತ್ತೊಂದಷ್ಟ್ ಸಿಕ್ಕಾಪಟ್ಟೆ ಕಷ್ಟದ ದಾರಿಗಳು. ಹತ್ತೋದು ಎಷ್ಟು ಕಷ್ಟವೋ ಇಳಿಯೋದು ಅಷ್ಟೇ ಕಷ್ಟ, ಬಿದ್ದರೆ ಏನಾದರೂ ಆಗಬಹುದು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನ ಅನುಸರಿಸಿ ಕಾಲನ್ನ ಜಿಗಣೆಯಿಂದ ರಕ್ಷಿಸಿಕೊಂಡರೆ ಸೀದಾ ಕತ್ತಿಗೆ ಹತ್ತುವ ಸಂದರ್ಭಗಳು ಬಂದೇ ಇರುತ್ತದೆ. ಜೀವನಾನುಭವ ಕಲಿಯೋದಕ್ಕಾದರೂ ಒಮ್ಮೆ ಬೆಟ್ಟ ಹತ್ತಿ, ಸ್ವಲ್ಪ ಊಟ ತಿಂಡಿ, ಕಡಿಮೆ ಬಟ್ಟೆ, ನೀರು ಹಾಗೂ ಜೀವನದ ಅತ್ಯಂತ ದೊಡ್ಡ ಮೌಲ್ಯಗಳು ನಿಮಗೆ ಅರ್ಥವಾಗುತ್ತದೆ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications