ನಂದಿ ಬೆಟ್ಟದ ತಪ್ಪಲ್ಲಿನಲ್ಲಿರುವ ಭೋಗ ನಂದೀಶ್ವರ ದೇವಸ್ಥಾನ
ಬೆಂಗಳೂರಿಗೆ ಹೊಸದಾಗಿ ಬಂದವರಿಗೆ ಪ್ರತಿಯೊಬ್ಬರೂ ಹೇಳುವ ಮಾತು, ಲಾಲ್ ಬಾಗ್ ಹೋಗಿ, ಕಬ್ಬನ್ ಪಾರ್ಕ್ ಹೋಗಿ, ಟಿಪ್ಪೂ ಅರಮನೆ, ಗವಿ ಗಂಗಾಧರೇಶ್ವರ ದೇವಸ್ಥಾನ ನೋಡಿ.
ಬೆಂಗಳೂರಿನ ಇತಿಹಾಸ ಅನ್ನುವ ಮಾತಿಗೆ ಅರ್ಥಪೂರ್ಣವಾಗಿ ಇರುವ ಸುಮಾರು ಸ್ಥಳಗಳನ್ನ ನಾವು ಮೂಲ ಬೆಂಗಳೂರಿಗರೂ ಮರೆತಿದ್ದೇವೆ. ನಮ್ಮ ಅದೃಷ್ಟವೋ ದುರಾದೃಷ್ಟವೋ ನಮ್ಮ ಇತಿಹಾಸ, ಚರಿತ್ರೆಯೆಲ್ಲವೂ ದೇವಸ್ಥಾನಗಳಲ್ಲಿಯೆ ಅಡಗಿರುವುದರಿಂದ ಅದನ್ನ ನಂಬದಿರುವ ಪೀಳಿಗೆಗೆ/ಜನಕ್ಕೆ ಅದರ ಬಗ್ಗೆ ಸ್ವಲ್ಪವೂ ನಿಗಾ ಇರುವುದಿಲ್ಲ. ಇಂತಹ ಒಂದು ಜಾಗ ಬೆಂಗಳೂರಿನ ಹೊರ ಭಾಗದಲ್ಲಿರುವ ನಂದಿ ಬೆಟ್ಟದ ತಪ್ಪಲ್ಲಿನಲ್ಲಿರುವ ಭೋಗ ನಂದೀಶ್ವರ ದೇವಸ್ಥಾನ.
ಕನ್ನಡ ಸಿನೆಮಾವನ್ನ ಹೊಸ ಜಾಗಗಳಿಗಾಗಿ ನೋಡುವವರಿಗೆ 'ಸಿಂಪಲ್ಲಾಗೊಂದು ಲವ್ ಸ್ಟೋರಿ'ಯ ದುಃಖದ, ಖುಷ್ ಖುಷಿಯ ಸನ್ನಿವೇಶ ನಡೆಯುವ ಕಲ್ಯಾಣಿ ಜಾಗ ನೆನಪಿರಬಹುದು. ಅದು ಈ ದೇವಸ್ಥಾನದಲ್ಲಿಯೇ ಚಿತ್ರಣ ಮಾಡಿರುವುದು.
ಇತ್ತೀಚೆಗೆ ಬ ನ ಸುಂದರರಾವ್ ಅವರು ಬರೆದಿರುವ ದೊಡ್ಡ ಗ್ರಂಥ 'ಬೆಂಗಳೂರಿನ ಇತಿಹಾಸ'ವನ್ನು ಓದುತ್ತಿದ್ದೆ. ಗಂಗರ ಕಾಲದಲ್ಲಿಯೂ 'ವೆಂಗಳೂರು', 'ಬೆಂಗಳೂರಿ' ಎಂಬ ಹೆಸರಿತ್ತು ಎಂಬ ವಿಷಯ ಓದಿ ಒಂದು ನಿಮಿಷ ಅವಕ್ಕಾದೆ. ಚರಿತ್ರೆ ಪಾಠದಲ್ಲಿ ಓದಿದ್ದಂತೆ ಗಂಗರ ಕಾಲ ಸುಮಾರು 1300 ವರ್ಷಗಳಷ್ಟು ಹಳೆಯದು. ಹಾಗಿದ್ದಲ್ಲಿ ನಮ್ಮ ಭಾಷೆಯಷ್ಟೆ ನಮ್ಮ ಊರೂ ಹಳೆಯದಾ ಎಂಬ ಸಂದೇಹ ನನಗೆ ಬಂದಿತ್ತು.

ಕಂಡು ಕೇಳರಿಯದ ಜಾಗಗಳಿಗೆ ಹೋಗುವ ಗಮ್ಮತ್ತು
ಸ್ಪೂರ್ತಿವನಕ್ಕೆ ಹೋಗಿ ಗಿಡ ನೆಡುವ ಆಸೆ ವಾರ್ಷಿಕೋತ್ಸವಕ್ಕೆ ಇದ್ದರೂ ಸಹ ಆ ವನದವರಿಗೆ ಸ್ಪೂರ್ತಿ ಇರಲ್ಲಿಲ್ಲ. ಸರಿ ಎಂದುಕೊಂಡು ಈ ಜಾಗಕ್ಕೆ ಹೋಗೋಹಾಗಾಯ್ತು. ನಂದಿ ಬೆಟ್ಟ, ಚುಮುಚುಮು ಛಳಿಗೆ ಬೆಟ್ಟದ ಮೇಲೆ ಹೋಗುವ ವಾಡಿಕೆಯಿದ್ದರೂ ನನ್ನಂಥವಳಿಗೆ ಯಾರೂ ಹೋಗದ ಜಾಗಕ್ಕೆ ಹೋಗುವ ಆಸೆಯೇ. ಯುರೋಪಿನ ಸುಮಾರಷ್ಟು ಜಾಗಗಳನ್ನ ನಾನು ಹಾಗೆಯೇ ನೋಡಿದ್ದು, ಯಾರೂ ಕಂಡು ಕೇಳರಿಯದ ಜಾಗಗಳಿಗೆ ಹೋಗುವ ಗಮ್ಮತ್ತು ಬೇರೆಯ ಥರದ್ದೇ.

ಇತಿಹಾಸದ ಪುಟಗಳಲ್ಲಿ ಕಳೆದುಹೋಗಿದ್ದ ಗಂಗರು
ಅಕ್ಷರನಿಗೆ ಮತ್ತು ನನಗೆ ಚರಿತ್ರೆಯ ಹುಚ್ಚು ಸಿಕ್ಕಾಪಟ್ಟೆ ಇರುವ ಕಾರಣ ಇದು ಇಬ್ಬರಿಗೂ ಹೇಳಿಮಾಡಿಸಿದ್ದಂಗಿತ್ತು. ನಾನು ಓದಿದ ಅಪ್ಪಟ ಸ್ಟೇಟ್ ಸಿಲೆಬಸ್ ಚರಿತ್ರೆಗೂ ಅವನ ಸಿ ಬಿ ಎಸ್ ಸಿ ಚರಿತ್ರೆಗೂ ಬಹಳ ವ್ಯತ್ಯಾಸ ಇದೆ ಎಂದು ಆಗ ತಿಳಿಯಿತು. ದಿಲ್ಲಿಯ ದರ್ಬಾರಿಗೇ ಸೀಮಿತವಾಗಿದ್ದ ಅವನ ಚರಿತ್ರೆಯ ಪಾಠಗಳು ಬರೀ ಕರ್ನಾಟಕದ ವಿಜಯನಗರ ಅರಸರು, ಒಡೆಯರ್, ಬಹಮನಿ ಸುಲ್ತಾನರು ಮತ್ತು ಕದಂಬರಿಗೆ ಸೀಮಿತವಾಗಿದ್ದ ನಮ್ಮ ಸ್ಟೇಟ್ ಸಿಲೆಬಸ್ಸಿನ ಪಾಠದಲ್ಲಿ ಗಂಗರು ಎಲ್ಲೋ ಕಳೆದುಹೋಗಿದ್ದರು. ಇದ್ದರೂ ಗೊಮ್ಮಟೇಶ್ವರನ ಬಗ್ಗೆಯಷ್ಟೆ ಇತ್ತು, ಬೆಂಗಳೂರನ್ನ ಆಳಿದರು ಎಂಬ ಯಾವ ಕುರುಹೂ ಅಲ್ಲಿರಲ್ಲಿಲ್ಲ. ನಮ್ಮೂರು ಏನೋ ಇತ್ತೀಚೆಗೆ ಬಂದಂತೆ ನಮ್ಮ ತಿಳುವಳಿಕೆ ಇತ್ತು.

ಗಂಗರ ಅಧೀನದಲ್ಲಿದ್ದ ನೊಳಂಬರು ಕಟ್ಟಿಸಿದ್ದಾ?
ಈ ದೇವಸ್ಥಾನವಂತೂ 891ರಲ್ಲಿ ಕಟ್ಟಿದ್ದು. 9ನೇ ಶತಮಾನದಲ್ಲಿ ನೊಳಂಬ ಸಂಸ್ಥಾನದವರು ದೇವಾಲಯಕ್ಕೆ ಸುಮಾರಷ್ಟು ಕಾಣಿಕೆಗಳನ್ನ ಕೊಟ್ಟಿದ್ದರಂತೆ. ನೊಳಂಬರು ಗಂಗರ ಅಧೀನದಲ್ಲಿದ್ದ ಸಂಸ್ಥಾನದ ರಾಜರು. ರಾಷ್ಟ್ರಕೂಟ ರಾಜ ಮುಮ್ಮಡಿ ಗೋವಿಂದ, ಮತ್ತು ಬಾಣ ಅರಸರೂ ಈ ದೇವಾಲಯಕ್ಕೆ ದತ್ತಿ ಕೊಟ್ಟಿದ್ದರೆಂದು ಅಲ್ಲೊಂದಷ್ಟು ಶಾಸನಗಳು ಹೇಳುತ್ತವೆ. ಆ ಶಾಸನಗಳೂ ಎಲ್ಲೋ ಮೂಲೆಯಲ್ಲಿ ಪಾಳು ಬಿದ್ದಿದ್ದೆ. ಸಂಬಂಧವಿಲ್ಲದಂತೆ ಅದನ್ನ ಸಿಮೆಂಟಿನಲ್ಲಿ ತೇಪೆ ಹಾಕಿ ನಿಲ್ಲಿಸಿದ್ದಾರೆ. ಅಲ್ಲಿನ ಶಾಸನದಲ್ಲಿ ಕನ್ನಡವಿದೆಯೋ ಅಥವಾ ಅದಕ್ಕಿಂತ ಹಳತಾದ ಭಾಷೆ ಇದೆಯೋ ಎಂಬ ಯಾವ ಮಾಹಿತಿಯೂ ಇಲ್ಲ. ವಡ್ಡಾರಾಧನೆಯಲ್ಲಿ ಗಂಗರ ಅರಸಿಯರ ಬಗ್ಗೆ ಉಲ್ಲೇಖವಿದೆ. ಅಷ್ಟು ಹಳತಾದ ವಂಶದ ಬಗ್ಗೆ, ಅಥವಾ ಕೆಲಸಗಳ ಬಗ್ಗೆ ಒಂದಷ್ಟಾದರೂ ಮಾಹಿತಿ ಇದೆಯಾ ಎಂದು ಹುಡುಕಿ ಹುಡುಕಿ ಕಾಲು ಬಿದ್ದುಹೋಯಿತು. ಭಾರತೀಯ ಪುರಾತತ್ತ್ವ ಇಲಾಖೆಯ ವಿಕಾರವಾದ ಬೋರ್ಡುಗಳಲ್ಲಿ ಕೆಲವೊಂದು ಮಾಹಿತಿ ಶೇಖರಣೆಯಾಗಿತ್ತು. ದೇವಸ್ಥಾನದ ಅಂದವನ್ನ ಹಾಳು ಮಾಡಲಿಕ್ಕೆಂದೇ ಈ ಬೋರ್ಡುಗಳು ಇದ್ದವೇನೋ ಅನ್ನುವ ಹಾಗಿತ್ತು.

ಹೊಸದಾಗಿ ಮದುವೆಯಾದವರು ದರ್ಶನ ಪಡೆಯುವ ದೇವರು
ಎರಡು ದೇವರುಗಳ ಆವಾಸ ಸ್ಥಾನ ಇದು. ಒಂದು ಅರುಣಾಚಲೇಶ್ವರ ಮತ್ತು ಭೋಗ ನಂದೀಶ್ವರ. ಶಿವನ ಬಾಲ್ಯ ಮತ್ತು ಯೌವನದ ಸಂಕೇತವಾಗಿದೆ. ಎಂದಿನಂತೆ ಗರ್ಭಗೃಹ, ಸುಖನಾಸಿ ಮತ್ತು ಮಂಟಪದ ವಿನ್ಯಾಸದಂತಿದೆ. ಭೋಗ ನಂದೀಶ್ವರ ಆಗಿನ ಕಾಲದಲ್ಲಿ ಹೊಸದಾಗಿ ಮದುವೆಯಾದವರು ಬಹಳ ದರ್ಶನ ಪಡೆಯುವ ದೇವರಾಗಿದ್ದ. ಕಾಕತಾಳೀಯವೆಂಬಂತೆ ನಾವೂ ಅಲ್ಲಿ ಹೋಗಿದ್ದೆವು. ನಂದಿಯ ಬೆಟ್ಟದ ಮೇಲಿರುವ ಯೋಗ ನಂದೀಶ್ವರ ಶಿವ ಎಲ್ಲವನ್ನ ಬಿಟ್ಟಿದ್ದರ ಸಂಕೇತವಾಗಿರುತ್ತದಂತೆ. ಇಡೀ ನಂದಿ ಶಿವನ ಬಾಲ್ಯ, ಯೌವನ ಮತ್ತು ತ್ಯಾಗದ ಹಂತಗಳನ್ನ ತೋರಿಸುವ ರೀತಿ. ಈ ದೇವಸ್ಥಾನ ಗಂಗರು, ರಾಷ್ಟ್ರಕೂಟರು, ನೊಳಂಬರು, ಚೋಳರು ಕಡೆಗೆ ವಿಜಯನಗರದ ಅರಸರೂ 16ನೇ ಶತಮಾನದವರೆಗೂ ಒಂದೊಂದು ಕೊಡುಗೆ ಕೊಟ್ಟರೆಂಬ ವಿಷಯ ಬಹಳ ಆಶ್ಚರ್ಯ ಪಡುವಂಥದ್ದು.

ವಾರಾಂತ್ಯ ಅಲ್ಲಿ ಹೋಗಿ ಬರುತ್ತೀರಲ್ವಾ?
ಕಲ್ಯಾಣಿಯನ್ನ ಶೃಂಗೇರಿ ತೀರ್ಥ ಎಂದು ಕರೆಯಲ್ಪಡುತ್ತಿದ್ದರಂತೆ. ಬೆಂಗಳೂರಿನ ನಿಗೂಢ ಪಿನಾಕಿನಿ ನದಿಯ ಉಗಮ ಸ್ಥಾನವೆಂದೂ ನಂಬುತ್ತಾರೆ. ಕಾರ್ತಿಕ ಮಾಸದಲ್ಲಿ ದೀಪೋತ್ಸವವೂ ಆಗುತ್ತದೆ. ನಾವು ಹೋಗಿದ್ದ ದಿವಸ ದೀಪೋತ್ಸವವಾಗಿ ಅದೆಷ್ಟು ಸಾಧ್ಯವೋ ಅಷ್ಟು ಗಲೀಜು ಮಾಡಲಾಗಿತ್ತು. ಆ ಊರಿನವರಿಗೂ ಪ್ರಾಯಶಃ ಈ ದೇವಸ್ಥಾನ ಅಷ್ಟು ಹಳೆಯತೆಂದು ಗೊತ್ತಿರಲ್ಲಿಲ್ಲವೇನೋ. ಆ ಊರಿನಲ್ಲಿ ಹೇಗೆ ವೈನ್ ಟೂರಿಸಂ ಪ್ರಮೋಟ್ ಮಾಡುತ್ತಿದ್ದಾರೋ ಅಷ್ಟೆ ಆಸ್ಥೆಯಿಂದ ನಮ್ಮ ಚರಿತ್ರೆಯ ಜಾಗಗಳನ್ನ ಜನಕ್ಕೆ ಸ್ವಚ್ಛವಾಗಿ ತಿಳಿಸಿದ್ದರೆ ಪ್ರಾಯಶಃ ನಮ್ಮ ಚರಿತ್ರೆ ನಮಗೆ ಇನ್ನೂ ಸಹ್ಯವಾಗುತ್ತಿತ್ತೇನೋ. ಆಸ್ತಿಕ ನಾಸ್ತಿಕರಿಬ್ಬರಿಗೂ ಇಲ್ಲಿ ಸುಮಾರು ಪಾಠಗಳು ಸಿಗುತ್ತದೆ. ಈ ವಾರಾಂತ್ಯ ಅಲ್ಲಿ ಹೋಗಿ ಬರುತ್ತೀರಲ್ವಾ?
-
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ವಲಸೆ ಕಾರ್ಮಿಕರಿಂದಾಗಿ ಉದ್ಯೋಗ ನಷ್ಟವಾಗುತ್ತಿರುವ ಬಗ್ಗೆ ಅಧಿಕೃತ ದೂರು ಸಲ್ಲಿಕೆಯಾಗಿಲ್ಲ: ಕಾರ್ಮಿಕ ಇಲಾಖೆ ಸ್ಪಷ್ಟನೆ -
ಯುಗಾದಿ, ರಂಜಾನ್ ಹಬ್ಬಕ್ಕೆ 2000 ವಿಶೇಷ ಬಸ್: ಮುಂಗಡ ಟಿಕೆಟ್ ಗೆ ರಿಯಾಯ್ತಿ ಘೋಷಿಸಿದ KSRTC -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ












Click it and Unblock the Notifications