ಬಿಜೆಪಿಯವರಿಗೆ ಕ್ಯಾಂಡಿ ಕ್ರಶ್ ರಿಕ್ವೆಸ್ಟ್ ಕಳಿಸಿದ್ದು ಕಾಂಗ್ರೆಸಿಗರು!
ಬೆಂಗಳೂರು, ಡಿ.11 : ವಿಧಾನಸೌಧದಲ್ಲಿ ಬಿಜೆಪಿ ಶಾಸಕರು ಮೊಬೈಲ್ನಲ್ಲಿ ನೋಡಬಾರದ್ದು ನೋಡಿ ಸಿಕ್ಕಿ ಬೀಳುವುದರ ಹಿಂದೆ ಕುತಂತ್ರ ಅಡಗಿದೆ. ಸುವರ್ಣ ವಿಧಾನಸೌಧದಲ್ಲಿ ಶಾಸಕರು ಕ್ಯಾಂಡಿ ಕ್ರಶ್ ಆಡಲು ಆಹ್ವಾನ ನೀಡಿದ್ದು ಆಡಳಿತ ಪಕ್ಷವಾದ ಕಾಂಗ್ರೆಸ್ನವರು ಎಂಬುದು ಬಹಿರಂಗಗೊಂಡಿದೆ.
ಬಿಜೆಪಿ ಶಾಸಕರು ವಿಧಾನಸಭೆ ಕಲಾಪ ನಡೆಯುವಾಗ ಮೊಬೈಲ್ ಫೋನ್ ಬಳಕೆ ಮಾಡಿ ಸಿಕ್ಕಿಬಿದ್ದು, ಪಕ್ಷಕ್ಕೆ ಮುಜುಗರ ಉಂಟುಮಾಡುತ್ತಿದ್ದಾರೆ. ಆದರೆ, ಇದರಲ್ಲಿ ನಮ್ಮ ತಪ್ಪಿಲ್ಲ ಸದನದಲ್ಲಿರುವ ಅಗೋಚರ ಶಕ್ತಿಯೊಂದು ಇದನ್ನು ಮಾಡಿಸುತ್ತಿದೆ ಎಂದು ಮೊಬೈಲ್ ನೋಡಿ ಸಿಕ್ಕಿಬಿದ್ದ ಶಾಸಕರು ಸ್ಪಷ್ಟನೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಅಗೋಚರ ಶಕ್ತಿಯೊಂದಿದಿದ್ದು, ಅದು ಕಲಾಪ ನಡೆಯುವಾಗ ನಮ್ಮ ದೇಹದಲ್ಲಿ ಸೇರಿಕೊಳ್ಳುತ್ತದೆ. ನಮ್ಮ ಚಟುವಟಿಕೆ ನಿಯಂತ್ರಿಸುವ ಜೊತೆಗೆ, ಸದನದಲ್ಲಿ ಚರ್ಚೆ ನಡೆಯುತ್ತಿರುವ ವಿಷಯಕ್ಕೆ ಸಂಬಂಧವಿಲ್ಲದ ಕೆಲಸ ಮಾಡಿಸುತ್ತದೆ ಎಂದು ಶಾಸಕರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. [ಚೌವಾಣ್ ಸದನದಲ್ಲಿ ಏನು ಮಾಡಿದ್ರು?]
ಬೆಂಗಳೂರಿನ ವಿಧಾನಸೌಧದಲ್ಲಿದ್ದ ಈ ಶಕ್ತಿ ಈಗ ಬೆಳಗಾವಿಯ ಸುವರ್ಣ ಸೌಧಕ್ಕೂ ಬಂದಿದೆ. ಇದನ್ನು ಹೋಗಲಾಡಿಸಲು ನಾಡಿನ ಪ್ರಸಿದ್ಧ ಜ್ಯೋತಿಷಿಗಳನ್ನು ಕರೆತಂದು ಹೋಮ, ಹವನ ಮಾಡಿಸಿ, ಅದಕ್ಕೆ ಅಷ್ಠ ದಿಗ್ಭಂಧನ ಮಾಡಿಸಬೇಕು ಎಂದು ಶಾಸಕರು ಸ್ಪೀಕರ್ಗೆ ಪತ್ರ ಬರೆಯಲಿದ್ದಾರಂತೆ.
ಗೇಮ್ ರಿಕ್ವೆಸ್ಟ್ ಕಳಿಸಿದ್ದು ಕಾಂಗ್ರೆಸಿಗರು : ಇನ್ನು ಸುವರ್ಣ ವಿಧಾನಸೌಧದಲ್ಲಿ ಹಿರೇಕೆರೂರು ಶಾಸಕ ಯು.ಬಿ.ಬಣಕಾರ್ ಕ್ಯಾಂಡಿ ಕ್ರಶ್ ಗೇಮ್ ಆಡಲು ಕಾಂಗ್ರೆಸ್ ಶಾಸಕರೇ ಕಾರಣ ಎಂದು ಉನ್ನತ ಮೂಲದ ಮಾಹಿತಿಗಳು ತಿಳಿಸಿವೆ.
ಯು.ಬಿ.ಬಣಕಾರ್ ಅವರಿಗೆ ಕಾಂಗ್ರೆಸ್ ಪಕ್ಷದ ಹಲವು ಶಾಸಕರು ಸ್ನೇಹಿತರಾಗಿದ್ದು, ಅವರು ಕ್ಯಾಂಡಿ ಕ್ರಶ್ ಆಡಿ ನಂತರ ಗೇಮ್ ಆಡುವಂತೆ ಉದ್ದೇಶಪೂರ್ವಕವಾಗಿ ಬಣಕಾರ್ ಅವರಿಗೆ ಕಳಿಸಿದ್ದಾರೆ. ಇದನ್ನು ನೋಡಿದ ಅವರು ಒಮ್ಮೆ ಆಡಲು ಪ್ರಯತ್ನಿಸಿದಾಗ ಕ್ಯಾಮರಾ ಕಣ್ಣಿಗೆ ಸಿಕ್ಕಿಬಿದ್ದಾರೆ.
ಕ್ಯಾಂಡಿ ಕ್ರಶ್ ಪ್ರಕರಣದಿಂದ ನೊಂದಿರುವ ಶಾಸಕರು ಗೇಮ್ ರಿಕ್ವೆಸ್ಟ್ ಕಳಿಸುವ ಶಾಸಕರನ್ನು ಸ್ನೇಹಿತರ ಪಟ್ಟಿಯಿಂದಲೇ ತೆಗೆದುಹಾಕಲು ಮುಂದಾಗಿದ್ದಾರಂತೆ. ಅಲ್ಲದೇ ಇನ್ನು ಮುಂದೆ ಕ್ಯಾಂಡಿ ಕ್ರಶ್ ಆಡಬಾರದು ಎಂದು ಪ್ರಮಾಣ ಮಾಡಲು ನಿರ್ಧರಿಸಿದ್ದಾರಂತೆ.
ಇನ್ನು ಸದನದಲ್ಲಿ ಮೊಬೈಲ್ ಬಳಕೆಯನ್ನು ತಗ್ಗಿಸಲು ಸ್ಪೀಕರ್ ನಿರ್ಧರಿಸಿದ್ದು, ಇದಕ್ಕಾಗಿ ಲಕ್ಷ್ಮಣ ಸವದಿ, ಸಿಸಿ ಪಾಟೀಲ್, ಕೃಷ್ಣ ಪಾಲೆಮಾರ್, ಪ್ರಭು ಚೌವಾಣ್, ಬಣಕಾರ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ, ವರದಿ ನೀಡಲು ಸೂಚಿಸಿದ್ದಾರಂತೆ ಎಂಬ ಮಾತು ಸುವರ್ಣ ಸೌಧದ ಸುತ್ತ-ಮುತ್ತ ಹಬ್ಬಿದೆ.
ಕಾಲ್ಪನಿಕ ಲೇಖನ












Click it and Unblock the Notifications