ಆಯುಧ ಪೂಜೆ ಕುಂಬ್ಳಕಾಯಿ ತಲೆ ಮೇಲೆ ಒಡೆದಂಗಾಯ್ತು!
ಅಯ್ಯಪ್ಪಾ...ಈ ಹಬ್ಬಗಳು ಯಾಕಾದ್ರೂ ಬರ್ತವೋ ಅಂತ ಗೊಣಗುತ್ತಲೇ ನಾಗರಾಜ ಬೆಳಗ್ಗೆ ಹಾಸಿಗೆಯಿಂದ ಎದ್ದ. ಹೆಂಡತಿ ನೋಡಿದ್ರೇ ಆನ್ ಲೈನ್ ಶಾಪಿಂಗ್ ಅಂತ ಲ್ಯಾಪ್ ಟ್ಯಾಪ್ ಮುಂದೆ ಕೂತಿದ್ದಾಳೆ. ಒಂದು ಗಂಟೆ ರಶ್ ಅವರ್ ಇದೆ ಆಮೇಲೆ ನಿಮ್ಗೆ ತಿಂಡಿ ಅಂಥ ಸ್ವಲ್ಪ ಏರು ಸ್ವರದಲ್ಲೇ ಹೇಳಿದ್ಲು.
ಥತ್ತೇರಿಕೆ...ಅಂಥ ಟಿವಿ ಹಾಕಿದ್ರೇ ಅದ್ಯಾವುದೋ ಕೊಲೆ ಪ್ರಕರಣದ ತೀರ್ಪು ಕೊಡ್ತಾ ಇದ್ರು. ಇನ್ನೇನು ಮಾಡಣ ಅಂಥ ಅತ್ತಿತ್ತ ಹೊರಳಾಡೋದ್ರಲ್ಲಿ ಮೊಬೈಲ್ ಗಳು ಹೊಡ್ಕೊಳ್ಳೋಕೆ ಶುರು ಮಾಡಿದ್ವು. "ಭಾವ ಈ ಬಾರಿ ನಿಮ್ಮನೇಲೇ ಹಬ್ಬ, ಊರಿಂದ ಹೊರಟಿದ್ದೀವಿ. ಹೆಂಡತಿನೂ ಕರ್ಕಂಡ್ ಬರ್ತಾ ಇದೀನಿ", ಅಂಥ ಹೇಳಿ ಸುರೇಶ ಫೋನ್ ಕಟ್ ಮಾಡಿದ್ದ. ಮನೇಲ್ಲಿ ಇದೀರೋ ಇಲ್ಲವೋ ಅಂತಾನೂ ಕೇಳ್ದೇನೇ ಪೋನ್ ಇಟ್ಟಿದ್ದ.[ಏನ್ ಸುಬ್ಬು ಸಾರ್ ಹಬ್ಬ ಜೋರಾ?]
ಈಗ ನಾಗರಾಜನಿಗೆ ಒಂದೊಂದೇ ಸಂಗತಿ ಮನದಟ್ಟಾಯಿತು. ನವರಾತ್ರಿ ಅದು ಮುಗಿದ ಮೇಲೆ ದೀಪಾವಳಿ. ಕತ್ತಲೇ ಕರ್ನಾಟಕದಲ್ಲಿ ಗಣೇಶ ಹಬ್ಬ ಅಂತೂ ಇಂತೂ ಮಾಡಿ ಆಗಿದೆ. ಖರೀದಿ ಮಾಡುವಾಗಲೂ ಕಣ್ಣೀರು ತರಿಸುತ್ತಿದ್ದ ಈರುಳ್ಳಿ ತಿನ್ನುವ ಹಾಗೆ ಆಗಿತ್ತು. ಆದರೆ ಇದೀಗ ಏರಿರುವ ಬೇಳೆ ಕಾಳು ದರ ಪಿವಿಆರ್ ನಲ್ಲಿ ಸಿನಿಮಾ ನೋಡಿ ಮಂತ್ರಿ ಮಾಲ್ ನಲ್ಲಿ ಶಾಪಿಂಗ್ ಮಾಡಿದಂತಾಗಿದೆ!
ನಾಳೆ ಬೆಳಗ್ಗೆಯಾದರೆ ಸುರೇಶನ ಜತೆ ಆತನ ಮಕ್ಕಳು ಮನೆಗೆ ಬರ್ತಾ ಇದಾರೆ. ಇತ್ತ ಹೆಂಡತಿಯ ಅಮ್ಮ(ಅತ್ತೆ) ಬಂದು ವಾರಗಳೇ ಆಗಿದೆ. ಹಬ್ಬಕ್ಕೆ ಮನೆ ನಂಟರಿಂದ ತುಂಬಿಕೊಳ್ಳೋದು ಗ್ಯಾರಂಟಿ. ಸಂಬಂಧಿಕರ ಸಂಭ್ರಮದಲ್ಲಿ ನನ್ನ ಕಿಸೆ ಸುಟ್ಟುಹೋಗುತ್ತಿರುವುದನ್ನು ಯಾರ ಹತ್ರ ಹೇಳಿಕೊಳ್ಳಲಿ ಎಂದು ತನ್ನಷ್ಟಕ್ಕೆ ತನಗೆ ಬೈದುಕೊಂಡ.[ತೊಗರಿ ಬೇಳೆಗೆ ಬಂಗಾರದ ಬೆಲೆ ಬರಲು ಕಾರಣವೇನು?]
ಕಂಪನಿ ದೀಪಾವಳಿ ಬೋನಸ್ ಕೋಡ್ತಿನಿ ಅಂತ ಕಾಗೆ ಹಾರಿಸಿದೆ, ಚೀಲದಲ್ಲಿ ಹಣ ತೆಗೆದುಕೊಂಡು ಹೋಗಿ ಕಿಸೆಯಲ್ಲಿ ಸಾಮಗ್ರಿ ತರುವಂಥ ಸ್ಥಿತಿ ಬಂದೋಗಿದೆ. ತಿಂಗಳ ಅಂತ್ಯ ಬೇರೆ, ನೂರಾರು ಯೋಚನೆಗಳು ನಾಗರಾಜನ ತಲೆಯೊಳಗೆ ನೃತ್ಯ ಮಾಡ್ತಾ ಇದ್ವು.
ಸಂಜೆ ಮನೆಯಿಂದ ಹೊರಟವನ ಕೈ ಕಾಲು ನಡುಗುತ್ತಿತ್ತು. ಕೈ ಯಲ್ಲಿ ಹಿಡಿದ ಚೀಲವನ್ನು ಮತ್ತಷ್ಟು ಭದ್ರವಾಗಿ ಹಿಡಿದುಕೊಳ್ಳುತ್ತ. ತಡ ಬಡಿಸುತ್ತಲೇ ಚಪ್ಪಲಿ ಹಾಕಿಕೊಂಡ. ಸಂಬಂಧಿಕರು ಮನೆಗೆ ಬರಲಿದ್ದಾರೆ. ಬಂದವರು ಒಂದೆರಡು ದಿನ ಇಲ್ಲೇ ಠಿಕಾಣಿ ಹೂಡೋದು ಪಕ್ಕಾ.[ತೊಗರಿ ಬೇಳೆ ಪ್ರತಿ ಕೆ.ಜಿಗೆ 110 ರು ಮಾತ್ರ]
ತಡವರಿಸುತ್ತಲೇ ಕಿರಾಣಿ ಅಂಗಡಿಗೆ ಹೋದ ನಾಗರಾಜ 'ಒಂದು ಕೆಜಿ ತೊಗರಿ ಬೆಳೆ ಕೊಡಿ ಅಂದ "ಸಾರ್ ಯಾವುದು ಅಡ್ಡಿಲ್ಲ, ಶಿವಲಿಂಗ ಆದರೆ ಕೆಜಿಗೆ 240, ಮಾಮೂಲಿ ಆದ್ರೆ 210" ಅಂಥ ಶೆಟ್ರು ಸ್ಪಲ್ಪ ಹಮ್ಮಿನಿಂದಲೇ ಹೇಳಿದ್ರು. ರೇಟು ಕೇಳಿದ ನಾಗರಾಜನಿಗೆ ಆಯುಧ ಪೂಜೆಗೆ ತಂದಿದ್ದ ಕುಂಬಳಕಾಯಿಯನ್ನು ತನ್ನ ತಲೆ ಮೇಲೆ ಒಡೆದ ಅನುಭವವಾಗಿದ್ದು ಸುಳ್ಳಲ್ಲ.
ನಿಮಗೂ ಇಂಥದ್ದೇ ತಲೆಬಿಸಿ ಆರಂಭವಾಗಿರಬೇಕಲ್ವೇ? ಈ ನಂಟರ ಕಾಟದಿಂದ, ಹೆಂಡತಿಯರ ಖರೀದಿಬಾಕತನದಿಂದ ಬಚಾವಾಗಲು ಯಾವೂದಾದರೂ ಒಂದು ಸೂಪರ್ ಐಡಿಯಾ ಕೊಡಿ, ನೋಡುವಾ!