ಫೇಕ್‌ ನ್ಯೂಸ್‌: ಫೇಸ್‌ಬುಕ್‌ ನಿಷೇಧಿಸಿ - ರಾಹುಲ್‌ ಗಾಂಧಿ

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಹೀನಾಯ ಸೋಲು ಕಂಡಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಟ್ವೀಟರ್‌ ಮತ್ತು ಫೇಸ್‌ಬುಕ್‌ ಮೇಲೆ ನಿಷೇಧ ಹೇರಬೇಕೆಂದು ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಆಗ್ರಹಿಸಿದ್ದಾರೆ.

ಒಂದು ಪುಟ್ಟ ರಾಜ್ಯದ ಸಾಮಾನ್ಯ ಮುಖ್ಯಮಂತ್ರಿ ಸುನಾಮಿಯಂತೆ ಪ್ರತ್ಯಕ್ಷವಾಗಿ ಕಾಂಗ್ರೆಸ್‌ ಭದ್ರಕೋಟೆಗಳನ್ನೇ ಕೊಚ್ಚಿಕೊಂಡು ಹೋಗಲು ಸೋಶಿಯಲ್‌ ಮೀಡಿಯಾವೇ ಕಾರಣ ಎಂಬುದನ್ನು ಕೊನೆಗೆ ರಾಹುಲ್‌ ಗಾಂಧಿ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ತಮ್ಮ ಸೋಲಿಗೆ ಮೋದಿ ಭಾಷಣಕ್ಕಿಂತಲೂ ಇದರ ಪ್ರಭಾವವೇ ದೊಡ್ಡದು. ಹೀಗಾಗಿ ಈ ಕಂಪೆನಿಗಳನ್ನು ಭಾರತದಿಂದಲೇ ಓಡಿಸಬೇಕೆಂಬ ನಿರ್ಧಾರವನ್ನು ಕಾಂಗ್ರೆಸ್‌ ಸಭೆಯಲ್ಲಿ ಹೇಳಿದ್ದಾರೆ ಎಂಬ ಸುದ್ದಿ ಸೋಶಿಯಲ್‌‌ ಮೀಡಿಯಾದಲ್ಲಿ ಹರಿದಾಡಲಾರಂಭಿಸಿದೆ.

ಮೋದಿ ಫಾಲೋವರ್‌ಗಳಿಂದಾಗಿ ನಮಗೆ ಈ ದುರ್ಗತಿ ಬಂದಿದೆ ಎಂಬುದನ್ನು ಒಪ್ಪಿಕೊಂಡಿರುವ ರಾಹುಲ್‌ ಗಾಂಧಿ 2019 ಲೋಕಸಭಾ ಚುನಾವಣೆಗೆ ಇಂದಿನಿಂದಲೇ ಕಾರ್ಯಯೋಜನೆ ಆರಂಭಿಸಿದ್ದು ಇದರ ಮೊದಲ ಹಂತವಾಗಿ ಭಾರತದಲ್ಲಿ ಇವುಗಳ ಮೇಲೆ ನಿಷೇಧ ಹೇರಬೇಕೆಂದು ಸಭೆಯಲ್ಲಿ ಹೇಳಿದ್ದಾರೆ.

ರಾಹುಲ್‌ ಗಾಂಧಿಯ ಹಠಾತ್‌ ನಿರ್ಧಾರಕ್ಕೆ ದಿಗ್ವಿಜಯ್‌ ಸಿಂಗ್‌, ಸಂಜಯ್‌ ಜಾ, ಸುಶೀಲ್‌ ಕುಮಾರ್‌ ಶಿಂಧೆ, ಸಲ್ಮಾನ್‌ ಖುರ್ಷಿದ್‌ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ ಸೋಶಿಯಲ್‌ ಮೀಡಿಯಾದಲ್ಲಿ ಸಕ್ರೀಯವಾಗಿರುವ ಶಶಿ ತರೂರ್‌ ಮತ್ತು ಮನೀಶ್‌ ತಿವಾರಿ ಪ್ರಥಮ ಬಾರಿಗೆ ರಾಹುಲ್‌ ಗಾಂಧಿ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಸಭೆಯಲ್ಲಿ ಶಶಿ ತರೂರ್‌ ಮಾತನಾಡಿ ಬಿಜೆಪಿ ನನ್ನ ವೈಯಕ್ತಿಕ ಸಮಸ್ಯೆ ಮತ್ತು ನಾನು ಪ್ರತಿನಿಧಿಸಿರುವ ಕ್ಷೇತ್ರದ ಬಗ್ಗೆ ಟೀಕೆ ಮಾಡುತ್ತಿದ್ದಾರೂ ನಾನು ಜಯಗಳಿಸಲು ಸೋಶಿಯಲ್‌ ಮೀಡಿಯಾವೇ ಮುಖ್ಯ ಕಾರಣ. ನೀವು ಟ್ವೀಟರ್‌ನ್ನು ಸಕ್ರೀಯವಾಗಿ ಬಳಸದ ಕಾರಣ ನಾವು ಈ ರೀತಿ ಹೀನಾಯವಾಗಿ ಸೋಲನ್ನು ಕಂಡಿದ್ದೇವೆ. ನೀವು ಕೊನೆಯ ಬಾರಿಗೆ ಟ್ವೀಟ್ ಮಾಡಿದ್ದು ಪ್ರೇಮಿಗಳ ದಿನಾಚರಣೆ ಫೆ. 14ರಂದು. ಅದೇ ಮೋದಿಯನ್ನು ನೋಡಿ ಪ್ರತಿದಿನ ಟ್ವೀಟರ್‌ನಲ್ಲಿ ಇರುತ್ತಾರೆ. ದೇಶದ ಕಾರ್ಯಕರ್ತರೊಂದಿಗೆ ಮಾತನಾಡುತ್ತಾರೆ. ಆ ಫೇಕ್‌ ಫಾಲೋವರ್‌‌ಗಳು ಮೋದಿ ಟ್ವೀಟ್‌ನ್ನು ರಿಟ್ವೀಟ್‌ ಮಾಡಿದ್ದರೆ, ಫೇಸ್‌‌ಬುಕ್‌ನಲ್ಲಿ ಶೇ‌ರ್‌ ಲೈಕ್‌ ಮಾಡುತ್ತಾರೆ. ನೀವು ಏನು ಮಾಡಿದ್ದೀರಿ ಎಂದು ರಾಹುಲ್‌ ಗಾಂಧಿಯನ್ನು ಪ್ರಶ್ನಿಸಿದ್ದಾರೆ.

ಅಷ್ಟೇ ಅಲ್ಲದೇ ಸಂಖ್ಯಾ ಮಾಹಿತಿಯೊಂದಿಗೆ ವಿವರಿಸಿದ ಶಶಿ ತರೂರ್‌ 2013 ಸೆಪ್ಟೆಂಬರ್‌ನಲ್ಲಿ ಮೋದಿಗೆ 18,31,991 ಫಾಲೋವರ್‌‌ಗಳಿದ್ದರೆ, ನಿಮಗೆ 28,285 ಜನ ಫಾಲೋವರ್‌ಗಳಿದ್ದರು. ಆದರೆ 2014 ಮೇ ತಿಂಗಳಿನಲ್ಲಿ ಮೋದಿ ಫಾಲೋವಾರ್‌ಗಳ ಸಂಖ್ಯೆ 40 ಲಕ್ಷಕ್ಕೆ ಏರಿಕೆಯಾಗಿದ್ದರೆ ನಿಮ್ಮ ಫಾಲೋವರ್‌‌ಗಳ ಸಂಖ್ಯೆ 56 ಸಾವಿರಕ್ಕೆ ಏರಿಕೆಯಾಗಿದೆ ಎಂದು ಸಭೆಯಲ್ಲಿ ರಾಹುಲ್ ಗಾಂಧಿಯನ್ನು ವ್ಯಂಗ್ಯ ಮಾಡಿದ್ದಾರೆ ಎನ್ನಲಾಗಿದೆ.[ಟ್ವೀಟರ್‌ನಲ್ಲಿ ರಾಜಕೀಯ ನಾಯಕರು. ಯಾರಿಗೆ ಎಷ್ಟು ಹಿಂಬಾಲಕರಿದ್ದಾರೆ?]

Rahul Gandhi

ವಕ್ತಾರ ಮನೀಷ್‌ ತಿವಾರಿ ಕಾಂಗ್ರೆಸ್‌ ಸಭೆಯಲ್ಲಿ ಪ್ರಥಮ ಬಾರಿಗೆ ರಾಹುಲ್‌ ಗಾಂಧಿಯವರನ್ನು ತರಾಟೆಗೆ ತೆಗೆದುಕೊಂಡಿದ್ದು ನಿಮ್ಮ ಅಧಿಕೃತ ವೆಬ್‌ಸೈಟ್‌ ಸರಿಯಾಗಿ ಕೆಲಸ ಮಾಡದೇ ಎಷ್ಟೋ ಸಮಯವಾಗಿದೆ. ಮೋದಿ ವೆಬ್‌ಸೈಟ್ ಭಾರತದ 10 ಭಾಷೆಯಲ್ಲಿ ಬಿಡುಗಡೆಯಾಗಿದೆ. ಅಷ್ಟೇ ಅಲ್ಲದೇ ನಾಲ್ಕು ವಿದೇಶಿ ಭಾಷೆಯಲ್ಲಿ ಸಹ ಬಿಡುಗಡೆಯಾಗಿದೆ. ನೀವು ಯಾವಾಗ ನ್ಯೂ ಮೀಡಿಯಾ ಪ್ರಪಂಚಕ್ಕೆ ತೆರದುಕೊಳ್ಳುವುದು ಎಂದು ರಾಹುಲ್‌ ಗಾಂಧಿಯನ್ನು ಪ್ರಶ್ನಿಸಿದ್ದಾರೆ.

ಸಭೆಯಲ್ಲಿ ಗರಂ ಆದಂತೆ ಕಂಡ ಮನೀಷ್‌ ತಿವಾರಿ ಟ್ವೀಟರ್‌, ಫೇಸ್‌ಬುಕ್‌, ವಾಟ್ಸಾಪ್‌ ಬಳಸುವ ಯುವಜನತೆ ಓಲೈಕೆ ರಾಜಕೀಯ, ಮೀಸಲಾತಿಯನ್ನು ನಂಬುವುದಿಲ್ಲ. ನಾವು ಧರ್ಮಗಳನ್ನು ಓಲೈಕೆ ಮಾಡಿ ಜಯಗಳಿಸುತ್ತೇವೆ ಎಂದು ಭಾವಿಸಿ ಮುಂದಿನ ಬಾರಿ ಚುನಾವಣೆ ಹೋದರೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ಈ ಬಾರಿಯ ಚುನಾವಣೆಯಲ್ಲಿ ಮೋದಿ ರಾಷ್ಟ್ರವ್ಯಾಪಿ ವಿವಿಧ ರೀತಿಯಲ್ಲಿ ''ಕ್ಯಾನ್‌ವಾಸ್‌'' ಮಾಡುತ್ತಿದ್ದರೆ ನಾವು ಮೋದಿ ವಿರುದ್ಧ ಸಿಲ್ಲಿ ಸಿಲ್ಲಿ ವಿಚಾರಗಳನ್ನು ಹಿಡಿದುಕೊಂಡು ''ಕಂಪ್ಲೈಟ್‌'' ಮಾಡುವ ಮೂಲಕ ಒಂದು ರೀತಿಯಲ್ಲಿ ಮೋದಿಗೆ ಪ್ರಚಾರ ನೀಡಿದ್ದು ಸೋಲಿಗೆ ಕಾರಣ ಎಂದು ವಕ್ತಾರ ಅಭಿಷೇಕ್‌ ಮನು ಸಿಂಗ್ವಿ ಹೇಳಿದ್ದಾರೆ.

ಅಂತಿಮವಾಗಿ ಸಭೆಯಲ್ಲಿ ಕೆಲವೊಂದು ನಿರ್ಣ‌ಯಗಳನ್ನು ಕೈಗೊಂಡಿದ್ದು, ರಾಹುಲ್‌‌ ಗಾಂಧಿ ಮೊದಲ ಬಾರಿಗೆ ಸೋಶಿಯಲ್‌ ಮೀಡಿಯಾವನ್ನು ಸಕ್ರೀಯವಾಗಿ ಬಳಸುವುದಾಗಿ ಪಕ್ಷದ ನಾಯಕರಿಗೆ ಅಶ್ವಾಸನೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಅತ್ಯುತ್ತಮ ಭಾಷಣ ಹೇಳಿಕೊಡುವ ಮತ್ತು ವ್ಯಕ್ತಿತ್ವ ವಿಕಸನ ಮಾರ್ಗದರ್ಶಕರಿಂದ ಮಾತನಾಡುವ ಕಲೆ ಮತ್ತು ವ್ಯಕ್ತಿತ್ವ ವಿಕಸನ ತರಗತಿ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಜೊತೆಗೆ ಚುನಾವಣೆಯ ಸೋಲಿನ ನೋವಿನಿಂದ ಹೊರಬರಲು ಮಾನಸಿಕ ನೆಮ್ಮದಿಗಾಗಿ ಅರುಣಾಚಲ ಪ್ರದೇಶಕ್ಕೆ ತೆರಳುವುದಾಗಿ ಪ್ರಕಟಿಸಿದ್ದಾರೆ.

ಕಾಂಗ್ರೆಸ್‌ ಸೋಲಿನ ಸಭೆ ಮುಗಿದ ಬಳಿಕ ರಾಹುಲ್‌ ಗಾಂಧಿ ಹೊರಬರುತ್ತಿದ್ದಂತೆ ಮಾಧ್ಯಮಗಳು ಸಭೆಯಲ್ಲಿ ಚರ್ಚೆಯಾಗಿ ಸೋಶಿಯಲ್‌ ಮೀಡಿಯದಲ್ಲಿ ಸೋರಿಕೆಯಾದ ಒಂದೊಂದೆ ವಿಚಾರಗಳನ್ನು ಪ್ರಶ್ನಿಸಿದ್ದಕ್ಕೆ ರಾಹುಲ್‌ ಗಾಂಧಿ ಯಾವುದೇ ಪ್ರತಿಕ್ರಿಯೆ ಸಿಟ್ದಿನಿಂದ ಹೊರ ನಡೆದ್ದಿದ್ದಾರೆ.

ಇತ್ತೀಚಿಗೆ ಫೇಕ್‌ ನ್ಯೂಸ್‌ಗೆ ಬಂದಿರುವ ಮಾಹಿತಿ ಪ್ರಕಾರ ನನ್ನ ಅನುಮತಿಯಿಲ್ಲದೇ ಸಭೆಯ ವಿಚಾರಗಳು ಸೋಶಿಯಲ್‌ ಮೀಡಿಯಾದಲ್ಲಿ ಬಹಿರಂಗ ಗೊಂಡದ್ದಕ್ಕೆ ಕೆಂಡಮಂಡಲವಾಗಿರುವ ರಾಹುಲ್‌ ಗಾಂಧಿ ಸಭೆಯಲ್ಲಿ ಭಾಗವಹಿಸಿದ ಆಪ್ತರ ಮೊಬೈಲ್‌ನ್ನು ಕದ್ದಾಲಿಸಿ ವರದಿ ನೀಡುವಂತೆ ಮೊಬೈಲ್‌ ಸೇವಾ ಕಂಪೆನಿಗಳಲ್ಲಿ ''ವಿನಂತಿ'' ಸಿಕೊಂಡಿದ್ದಾರೆ.

ಈ ಮಧ್ಯೆ ನರೇಂದ್ರ ಮೋದಿ ಮತ್ತು ಮೋದಿ ಅಭಿಮಾನಿಗಳು ಸೋಶಿಯಲ್‌ ಮೀಡಿಯಾದಲ್ಲಿ ಸಕ್ರೀಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರಿಂದ ಈ ರೀತಿ ಭರ್ಜರಿಯಾಗಿ ಜಯಗಳಿಸಿದ್ದೇವೆ ಎನ್ನುವುದನ್ನು ಬಿಜೆಪಿ ನಾಯಕರು ಒಪ್ಪಿಕೊಂಡಿದ್ದಾರೆ. ಸೋಶಿಯಲ್‌ ಮೀಡಿಯಾವನ್ನು ದೇಶದ ಎಲ್ಲರೂ ಬಳಸಬೇಕು. ಅಧಿಕಾರದಲ್ಲಿರುವವರು ಜನರನ್ನು ಸಂಪರ್ಕಿಸಲು ಇವುಗಳು ಸೇತುವೆಯಾಗಿ ಕೆಲಸ ಮಾಡುತ್ತದೆ ಎಂದು ಮೋದಿ ಈಗಾಗಲೇ ಸೋಶಿಯಲ್‌ ಮೀಡಿಯಾವನ್ನು ಹೊಗಳಿದ್ದಾರೆ. ಮೋದಿಯ ಈ ಹೊಗಳಿಕೆಯಿಂದ ಕೆಲ ಬಿಜೆಪಿ ಸಂಸತ್‌ ಸದಸ್ಯರಿಗೆ ಮತ್ತು ಕಾರ್ಯಕರ್ತರಿಗೆ ತಲೆ ನೋವಾಗಿದೆ.

ಇಲ್ಲಿಯವರೆಗೆ ಬರೀ ಫೋಟೋ ಶೇರ್‌, ಲೈಕ್‌ ಮಾಡುತ್ತಿದ್ದ ಬಿಜೆಪಿ ಕರ್ನಾಟಕದ ಕಾರ್ಯಕರ್ತರು,ಮೋದಿ ಆದೇಶವನ್ನು ಪಾಲಿಸಲು ಸೋಶಿಯಲ್‌ ಮೀಡಿಯಾದಲ್ಲಿ ಕನ್ನಡ ಟೈಪ್‌ ಮಾಡುವುದು ಹೇಗೆ ಎನ್ನುವುದರ ಬಗ್ಗೆ ಸ್ನೇಹಿತರಲ್ಲಿ ಕೇಳಿ ಕಲಿಯುತ್ತಿದ್ದಾರೆ ಎನ್ನುವ ಸುದ್ದಿ ಬಿಜೆಪಿ ಆಂತರಿಕ ವಲಯದಿಂದ ಕೇಳಿ ಬರುತ್ತಿದೆ.[ಚಿತ್ರ - ಪಿಟಿಐ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+