ಕತೆ ಜತೆ ಗೆಳೆತನ, ಓಡುತ್ತದೆ ಒಂಟಿತನ (ಭಾಗ 4)
ತರುಣಿಯೊಬ್ಬಳು ವಿಪರೀತ ತೆಳುವಾಗಿದ್ದಾಳೆಂಬುದನ್ನು ವರ್ಣಿಸಿ' ಎಂದು ಕನ್ನಡ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಹೇಳಿದರು. ವಿದ್ಯಾರ್ಥಿಗಳ ವರ್ಣನೆ ಶುರುವಾಯಿತು. ಆಕೆ ಕಡ್ಡಿಯಷ್ಟು ತೆಳುವಾಗಿದ್ದಾಳೆ, ಕಾಷ್ಠದಂತಿದ್ದಾಳೆ, ಹೊಟ್ಟೆ ಬೆನ್ನಿಗೆ ಅಂಟಿಕೊಂಡಿದೆ, ಕಿರುಬೆರಳಿನಂತಿದ್ದಾಳೆ, ಮಿಡತೆಯಂತಿದ್ದಾಳೆ..." ಹೀಗೇ ಮುಂದುವರಿದಿತ್ತು. ಇದನ್ನೆಲ್ಲ ಕೇಳುತ್ತಿದ್ದ ಕಲಾವಿದನೊಬ್ಬ ಬೋರ್ಡ್ ಮೇಲೆ ಒಂದು ಸರಳರೇಖೆಯ ಗೀಟು ಎಳೆದು ಹೊರ ನಡೆಯುತ್ತಿದ್ದಾಗ ವಿದ್ಯಾರ್ಥಿಗಳೆಲ್ಲ ಅದೇನೆಂದು ಕೇಳಿದರು. ಅದಕ್ಕೆ ಕಲಾವಿದ ಹೇಳಿದ - ನಿಮಗೆ ಆ ತೆಳುವಾದ ಹುಡುಗಿ ಕಾಣುವುದಿಲ್ಲ. ಆಕೆ ಆ ಗೀಟಿನ ಹಿಂದಿ ಅವಿತುಕೊಂಡಿದ್ದಾಳೆ." ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಮುಖಮುಖ ನೋಡಿಕೊಂಡರು.
***
ಒಂದು ದಿನ ಜೈಲಿಗೆ ರಾಜ ಹೋದ. ಕೈದಿಗಳನ್ನು ಮಾತಾಡಿಸಿದ. ಕೊಲೆ ಆರೋಪ ಎದುರಿಸುತ್ತಿರುವ ಕೈದಿ ಬುದ್ದಿ ತಪ್ಪು ಮಾಡಿಲ್ಲ. ಹೆಂಡತಿಯನ್ನು ಹೆದರಿಸಲು ಖಡ್ಗ ತೆಗೆದೆ. ಆಕೆ ಓಡಿಬಂದು ತಬ್ಬಿಕೊಂಡಳು. ಖಡ್ಗ ಚುಚ್ಚಿ ಸತ್ತಳು. ನನ್ನ ತಪ್ಪಿಲ್ಲ" ಎಂದ. ಹಣ ತಿಂದ ಆರೋಪಿ ಕೈದಿ, ರಾಜ, ನನ್ನದೇನೂ ತಪ್ಪಿಲ್ಲ. ಬೇರೆಯವರ ಹಣ ಇಟ್ಟುಕೊಳ್ಳುವಾಗ ನನ್ನನ್ನು ಬಂಧಿಸಿದರು. ನನ್ನ ತಪ್ಪಿಲ್ಲ" ಎಂದು ಬೇಡಿಕೊಂಡ. ರಾಜ ಎಲ್ಲರ ಅಹವಾಲನ್ನು ಕೇಳಿದ. ಯಾರೂ ತಪ್ಪು ಮಾಡಿಲ್ಲವೆಂದು ಹೇಳಿದರು. ಕೊನೆಗೆ ಯುವಕನೊಬ್ಬ, ರಾಜ, ನಾನು ತಪ್ಪು ಮಾಡಿದ್ದೇನೆ. ನನ್ನ ತಮ್ಮನ ಜತೆ ಆಡುವಾಗ ಅವನನ್ನು ಗಾಯಗೊಳಿಸಿದೆ. ನನಗೆ ಶಿಕ್ಷೆಯಾಗಲಿ" ಎಂದ. ರಾಜ ಕೊನೆಯಲ್ಲಿ ಹೇಳಿದ - ತಕ್ಷಣವೇ ಈ ಯುವಕೈದಿಯನ್ನು ಬಿಟ್ಟುಬಿಡಿ. ಇಲ್ಲದಿದ್ದರೆ ಈತ ಉಳಿದ ನಿರಪರಾಧಿ ಕೈದಿಗಳನ್ನು ಹಾಳು ಮಾಡುತ್ತಾನೆ."
***
ಇಬ್ಬರು ಕವಿಗಳು ನಡೆಯುತ್ತಾ ನಡೆಯುತ್ತಾ ರಾತ್ರಿ ಒಂದು ಸರೋವರದ ಬಳಿ ಬಂದರು. ಇಡೀ ಪರಿಸರ ಎಷ್ಟೊಂದು ಶಾಂತವಾಗಿದೆ ಅಲ್ಲವಾ?" ಎಂದು ಒಬ್ಬ ಹೇಳಿದ. ಮತ್ತೊಬ್ಬ ಕವಿ ಹೇಳಿದ - ಎಷ್ಟೊಂದು ಶಾಂತವಾಗಿದೆಯೆಂದು ಹೇಳಬೇಡ. ಈ ಪರಿಸರದಿಂದ ಏನೇನೂ ಕೇಳುವುದೇ ಇಲ್ಲವಲ್ಲ ಎಂದು ಹೇಳು."
***
ಒಂದೂರಿನಲ್ಲಿ ಒಬ್ಬ ಬ್ರೆಡ್ ತಿನ್ನುತ್ತಿದ್ದ. ಬೆಣ್ಣೆಯನ್ನು ಸವರಿದ ಬ್ರೆಡ್ ತಿನ್ನುವಾಗ ನೆಲಕ್ಕೆ ಬಿದ್ದಿತು. ಆಶ್ಚರ್ಯ! ಬೆಣ್ಣೆ ಸವರಿದ ಭಾಗ ಮೇಲ್ಮುಖವಾಗಿ ಬಿದ್ದಿತ್ತು. ಈ ಸಂಗತಿಯನ್ನು ತನ್ನ ಸ್ನೇಹಿತರೆಲ್ಲರಿಗೂ ಹೇಳಿದ. ಇದರಲ್ಲೇನೋ ಪವಾಡವಿರಬೇಕೆಂದು ಅವರಿಗನ್ನಿಸಿತು. ಯಾರೇ ಬ್ರೆಡ್ಡನ್ನು ಕೆಳಕ್ಕೆ ಬೀಳಿಸಿದರೂ ಬೆಣ್ಣೆ ಸವರಿದ ಭಾಗ ಮೇಲ್ಮುಖವಾಗಿ ಬೀಳುತ್ತಿತ್ತು. ಈ ಪವಾಡ ಊರಿನಲ್ಲೆಲ್ಲ ಹಬ್ಬಿತು. ಯಾರಿಗೂ ಕಾರಣ ಗೊತ್ತಾಗಲಿಲ್ಲ. ಅವರೆಲ್ಲ ಗುರುವಿನ ಬಳಿ ಹೋಗಿ ಈ ವಿಸ್ಮಯಕ್ಕೆ ಕಾರಣ ಕೇಳಿದಾಗ ನಾಳೆ ಬನ್ನಿ ಹೇಳ್ತೇನೆ ಅಂದ. ಎಲ್ಲರೂ ನಾಳೆಗೆ ಹೋದಾಗ ಗುರು ಹೇಳಿದ - ಬ್ರೆಡ್ ಹೇಗೆ ಬೀಳಬೇಕೋ ಹಾಗೇ ಬೀಳುತ್ತದೆ. ಆದರೆ ಬೆಣ್ಣೆಯನ್ನು ಮಾತ್ರ ವಿರುದ್ಧ ಭಾಗಕ್ಕೆ ಸವರುತ್ತಿದ್ದೀರಿ."
***
ಹುಚ್ಚಾಸ್ಪತ್ರೆಯಲ್ಲೊಬ್ಬ ತತ್ತ್ವಶಾಸ್ತ್ರ ಪುಸ್ತಕ ಓದುತ್ತಿದ್ದ. ಅದನ್ನು ಕಂಡು ಅಲ್ಲಿಗೆ ಆಗಮಿಸಿದವನಿಗೆ ಅಚ್ಚರಿ. ಅದಕ್ಕೆ ಕಾರಣ ಕೇಳಿದ. ಆತ ಹೇಳಿದ - ನನ್ನ ತಂದೆ ವಕೀಲ. ಯಾವತ್ತೂ ವಕೀಲನಾಗು ಅಂತ ಪೀಡಿಸ್ತಾನೆ. ತಾಯಿ ವೈದ್ಯೆ. ವೈದ್ಯನಾಗು ಅಂತ ಪೀಡಿಸ್ತಾಳೆ. ನನ್ನ ಭಾವ ಮೇಷ್ಟ್ರು. ನಾನೂ ಮೇಷ್ಟ್ರೇ ಆಗಬೇಕಂತೆ. ನನ್ನ ಸಂಗೀತ ಗುರು ಸದಾ ಪಿಯಾನೋ ಕಲಿ ಅಂತ ಒತ್ತಾಯಿಸುತ್ತಾರೆ. ಎಲ್ಲರೂ ತಮ್ಮ ಉದ್ಯೋಗ, ಹವ್ಯಾಸವನ್ನೇ ಹೇರುತ್ತಾರೆ. ಬೇರೆ ದಾರಿ ಕಾಣದೇ ಇಲ್ಲಿಗೆ ಬಂದೆ. ಇಲ್ಲಿ ನನಗನಿಸಿದಂತೆ ಇದ್ದೇನೆ."
***
ಒಂದೊಂದು ಕತೆಯದೂ ಒಂದೊಂದು ರೀತಿಯ ಕತೆ. ಕತೆಮಾತ್ರ ಸಾಗುತ್ತಿರುತ್ತದೆ ಕತ್ತಲೆಯಂತೆ, ಕನಸಿನಂತೆ, ಕನವರಿಕೆಯಂತೆ.












Click it and Unblock the Notifications