ಗುರುಬಲ : ತುಲಾ ರಾಶಿಗೆ ಸೂಪರ್, ಆಲ್ ದಿ ಬೆಸ್ಟ್!
ಈಗಾಗಲೇ ಕಾಯುತ್ತಿರುವಂತೆ ತುಲಾ ರಾಶಿಯವರಿಗೆ ರಜತ ಚರಣದಿಂದ ಬಂದಿರುವ ಗುರುವು 11ನೇಯವನಾಗಿದ್ದಾನೆ. ಗೋಚಾರದಲ್ಲಿ ಲಾಭದ ಸ್ಥಾನದಲ್ಲಿ ಬಂದಿರುವುದರಿಂದ ಕೌಟುಂಬಿಕವಾಗಿ ನೆಮ್ಮದಿ ಹೆಚ್ಚುತ್ತದೆ ಈ ಸಮಯದಲ್ಲಿ. ದೇಹಾರೋಗ್ಯದಲ್ಲಿಯೂ ಹುರುಪು ಹೆಚ್ಚುತ್ತದೆ. ಜೊತೆಗೆ ಇನ್ನಷ್ಟು ಸದೃಢವಾಗಬೇಕು ಎಂಬ ಮನೋಭಾವ ಕೂಡ ಬರುತ್ತದೆ ತುಲಾ ರಾಶಿಯವರಿಗೆ.
ಬಹು ದಿನಗಳ ಕನಸು ಕಂಡಂತೆ ಹೊಸ ಹೊಸ ಯೋಜನೆಗಳನ್ನು ಹಾಕಿಕೊಂಡು ಯಶಸ್ಸು ಹೊಂದಬಹುದು. ಆದರೆ ಆರಂಭಿಸುವ ಸಮಯವನ್ನು ಮಾತ್ರ ಕರೆಕ್ಟಾಗಿ ನೋಡಿಕೊಂಡೇ ಆರಂಭಿಸಿಕೊಳ್ಳಬೇಕು. ದೈವದೆಡೆಗೆ ಮನಸ್ಸು ಈ ಸಮಯದಲ್ಲಿ ಹೆಚ್ಚು ವಾಲಲಾರಂಭಿಸುತ್ತದೆ. ಆದ್ದರಿಂದ ಜೀವನಮಾನವಿಡಿ ನೋಡದೇ ಇರುವ ಪುಣ್ಯಸ್ಥಳಗಳಿಗೆ ಭೇಟಿ ಕೊಟ್ಟರೊಳ್ಳೆಯದು. ದೈವಬಲದೊಂದಿಗೆ ದೈವಕೃಪೆಯೂ ಬೇಕಾಗುತ್ತದೆ. ಹೀಗಾಗಿ ಇಚ್ಛಿತರೊಂದಿಗೆ ಪುರಾಣ ಪ್ರಸಿದ್ಧ ದೇವಾಲಯಗಳಲ್ಲಿ ದೇವರ ದರ್ಶನ ಪಡೆದುಕೊಳ್ಳಬೇಕು. [ಗುರುಬಲವಿಲ್ಲದ ಸಿಂಹ ಮತ್ತು ಕನ್ಯಾ]
ಆಸ್ತಿಯಿಲ್ಲವೆಂದುಕೊಂಡಿರುವವರು ಸ್ವಂತಕ್ಕೆಂದು ಮನೆ ಮಾಡಿಕೊಳ್ಳುವ ಸುಯೋಗ ಒಂದೆಡೆಯಾದರೆ, ಸಮಾಜದಲ್ಲಿನ ದೊಡ್ಡ ದೊಡ್ಡ ಜನರು ಅನಾನುಕೂಲತೆಯ ಸಮಯದಲ್ಲಿ ಸಹಾಯ ಮಾಡುತ್ತಾರೆ. ಅಥವಾ ನಿಮ್ಮ ಕುಟುಂಬದಲ್ಲಿರುವ ಹಿರಿಯರು ಜೀವನದಲ್ಲಿ ಮುನ್ನುಗ್ಗಲು ಪ್ರೇರೇಪಿಸುತ್ತಾರೆ. ಆದರೆ ಸಾಡೇಸಾತಿ ಶನಿಕಾಟಕ್ಕಾಗಿ ಏನಾದರೂ ಪರಿಹಾರ ಮಾಡಿಕೊಂಡಿದ್ದರೆ ಒಳ್ಳೆಯದು. ಇಲ್ಲವಾದಲ್ಲಿ ಗುರುಬಲವಿದ್ದರೂ ಶನಿಯ ಕಿರಿಕಿರಿಯಿಂದ ಕೈಗೆ ಬಂದಿದ್ದು ಬಾಯಿಗೆ ಬರಲಿಲ್ಲವಲ್ಲ ಎಂದೆನ್ನುಕೊಳ್ಳಬೇಕಾಗುತ್ತದೆ.
ಇನ್ನು ಕೆಲಸಕ್ಕಾಗಿ ಪರದಾಡುತ್ತಿರುವವರಿಗೆ ಕೆಲಸದ ಯೋಗ ಕೂಡಿ ಬಂದರೆ, ಸಂತಾನಕ್ಕಾಗಿ ಪರಿತಪಿಸುತ್ತಿರುವವರಿಗೆ ಶುಭಕರವಿದೆ. ಇದೇ ರೀತಿ ಕಂಕಣ ಭಾಗ್ಯಕ್ಕಾಗಿ ಕಾಯ್ದಿರುವವರಿಗೂ ಸರಿಯಾದ ಸಮಯ ಬಂದಿದೆ. ಆದರೆ ಯೋಗ್ಯರನ್ನು ನೋಡಿ ಮುಂದುವರಿಯಬೇಕು. ಕೆಲಸದಲ್ಲಿದ್ದವರು ಸ್ವಲ್ಪ ನೆಮ್ಮದಿ ಕಾಣಬಹುದೀಗ. [2015 ವರ್ಷ ಭವಿಷ್ಯ : ತುಲಾ ರಾಶಿಗೆ ಇನ್ನೂ ಬಾಕಿಯಿದೆ!]
ಜೊತೆ ಜೊತೆಗೆ ಹೊಸ ಜವಾಬ್ದಾರಿಯನ್ನೂ ಧೈರ್ಯದಿಂದ ಹೆಗಲಿಗೇರಿಸಿಕೊಳ್ಳಬಹುದು ನಿರ್ಭಿಡೆಯಿಂದ. ಮುಂಬಡ್ತಿಯ ಯೋಗವೂ ಬಂದಿರುವುದರಿಂದ ಸ್ವಲ್ಪ ಹೆಚ್ಚಿನ ಶ್ರಮ ವಹಿಸಿ ಕೆಲಸದಲ್ಲಿ ತೊಡಗಿಕೊಳ್ಳಬೇಕು. ಜೊತೆಗೆ ಕೆಲಸದಲ್ಲಿದ್ದಾಗಲೇ ಪರಸ್ಥಳಕ್ಕೆ ಹೋಗಬೇಕೆನ್ನುವವರು ಈ ಸಮಯದಲ್ಲಿ ಪ್ರಯತ್ನ ಮುಂದುವರೆಸಬಹುದು. ಹಣಕಾಸಿನ ವಿಷಯದಲ್ಲಿ ಹೂಡಿಕೆ ಮಾಡುವಷ್ಟು ಹಣ ಉಳಿಕೆಯಾಗುತ್ತದೆ.
ಕೌಟುಂಬಿಕವಾಗಿಯೂ ನೆಮ್ಮದಿಯ ದಿನಗಳ ಆರಂಭದ ಮುನ್ಸೂಚನೆ ಸಿಗುವುದರಿಂದ ಸಂಸಾರ ಸುಖವನ್ನು ಅನುಭವಿಸುವ ಸಮಯವಿದು. ಸಂಸಾರದ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಜೀವನ ಹಾಳಾಗುವುದು ಸ್ವಲ್ಪ ಎಚ್ಚರಿಕೆ ಇರಲಿ.